ಅಗ್ನಿ ಮತ್ತು ಮಳೆ ಅಗ್ನಿ ಮತ್ತು ಮಳೆ ಕಾರ್ನಾಡರು ಇದುವರೆಗೆ ಬರೆದ ನಾಟಕಗಳಲ್ಲಿಯೇ ಅತ್ಯಂತ ಮಹತ್ವಾಕಾಂಕ್ಷೆಯದು. ಈ ಮಾತು ನಾಟಕದ ವಸ್ತುವಿಗೆ ಅನ್ವಯಿಸಿದಂತೆ ಅದರ ತಂತ್ರಕ್ಕೂ ಅನ್ವಯಿಸುತ್ತದೆ. ಮಹಾಭಾರತದ ವನಪರ್ವದಲ್ಲಿ ಬರುವ ಲೋಮಶರು ಯುಧಿಷ್ಠರನಿಗೆ ಹೇಳಿದ ಯವಕ್ರೀತನ ಕಥೆ ನಾಟಕಕ್ಕೆ ಮುಖ್ಯ ವಸ್ತುವನ್ನು ಒದಗಿಸಿದೆ. ಆದರೆ ಇದರೊಡನೆ ಹಾಸುಹೊಕ್ಕಾಗಿ ನಾಟಕದೊಳಗಿನ ನಾಟಕವಾಗಿ ಬರುವ ಇಂದ್ರವಿಜಯದ ಕಥೆ ಹಾಗೂ ಮಹಾಭಾರತದೊಡನೆ ಯಾವ ಸಂಬಂಧವೂ ಇಲ್ಲದ ನಿಷಾದಕನ್ಯೆ ನಿತ್ತಿಲೆಯ ಕಥೆ ಹಾಗೂ ‘ಇಂದ್ರವಿಜಯ’ ನಾಟಕವನ್ನು ಆಡಿ ತೋರಿಸುವ ನಟರ ಕಥೆಗಳೂ ಸೇರಿವೆ. ಬ್ರಾಹ್ಮಣ-ಶೂದ್ರ ಈ ಪದಗಳ ಬಳಕೆ ನಮ್ಮ ಸಾಹಿತ್ಯದಲ್ಲಿ ಮತ್ತು ರಾಜಕೀಯದಲ್ಲಿ ಇತ್ತೀಚೆಗೆ ನಾನಾ ಬಗೆಯಿಂದ ಆಗುತ್ತಿದೆ. ಇಂಥ ಒಂದು ಸಂದರ್ಭದಲ್ಲಿ ಇತಿಹಾಸ ಪೂರ್ವಕಾಲದ ಕತೆಯೊಂದನ್ನೆತ್ತಿಕೊಂಡು ಮನುಷ್ಯನ ಮೂಲಭೂತ ಪ್ರವೃತ್ತಿಗಳು ಎಲ್ಲಾ ಕಾಲದಲ್ಲೂ ಒಂದೇ ಎಂಬುದನ್ನು ಮೇಲ್ನೋಟಕ್ಕೆ ನಾಟಕ ತೋರಿಸುತ್ತದೆ. ಆದರೆ ನಾಟಕದ ಆಳವಾದ ಅಭ್ಯಾಸ ನಮ್ಮನ್ನು ಇನ್ನಿತರ ಎಷ್ಟೋ ವಿಷಯಗಳನ್ನು ಕುರಿತು ಯೋಚಿಸುವಂತೆ ಮಾಡುತ್ತದೆ. ಪರಾವಸು ಯಜ್ಞದ ಅಧ್ವರ್ಯ. ಆತನೇ ಘಟನೆಗಳ ಕೇಂದ್ರ. ಆದರೆ ಆತ ನಾಟಕದ ನಾಯಕನಲ್ಲ. ಅರವಸು ಬ್ರಾಹ್ಮಣ್ಯವನ್ನು ತೊರೆದವನು. ನಾಟಕ ಬೆಳೆದಂತೆಲ್ಲ ಅರವಸು ನಾಟಕದ ನಾಯಕನಾಗಿ ಮಾರ್ಪಾಡಾಗುತ್ತಾ ಹೋಗುತ್ತಾನೆ. ಬ್ರಾಹ್ಮಣ್ಯವನ್ನು ಬಿಡುವುದರಿಂದ ಅರವಸು ಜೀವನದ ಮಾರ್ಪಾಡುಗಳಿಗೆ ತನ್ನನ್ನೇ ತೆರೆದುಕೊಳ್ಳತ್ತಾ ಹೋಗುತ್ತಾನೆ. ಇವರಿಬ್ಬರ ಮಧ್ಯೆ ಪರಾವಸುವಿನ ಚಿಕ್ಕಪ್ಪನ ಮಗ ಯುವಕ್ರೀತನ ಪಾತ್ರ ನಮಗೆ ಪರಾವಸು ಮತ್ತು ಅರವಸು ಇವರಿಬ್ಬರನ್ನು ತೂಗಿನೋಡುವ ದೃಷ್ಟಿ ಕೋನವನ್ನು ಒದಗಿಸುತ್ತದೆ. ಹತ್ತು ವರ್ಷಗಳಿಂದ ಮಳೆಬಾರದೆ ಜನರು ಪರಿತಪಿಸುತ್ತಿದ್ದಾರೆ. ಅದಕ್ಕಾಗಿ ಇಂದ್ರನನ್ನು ಒಲಿಸಿಕೊಂಡು ಮಳೆ ಬರಿಸಲು ಯಜ್ಞವೊಂದು ಸಾಗಿದೆ. ಆ ಯಜ್ಞದ ಅಧ್ಯರ್ಯು ಪರಾವಸು. ಆದರೆ ಪರಾವಸುವಿನ ಸಾಂಸಾರಿಕ ಜೀವನದಲ್ಲಿಯೇ ಕೆಲವೊಂದು ತೊಡಕುಗಳಿವೆ. ತನ್ನ ಚಿಕ್ಕಪ್ಪನ ಮಗ ಯುವಕ್ರೀತನೇ ತಪಸ್ಸಿಗೆ ಹೋದಾಗ ಪರಾವಸು ವಿಶಾಖಳನ್ನು ಮದುವೆಯಾಗಿದ್ದಾನೆ. ಆದರೆ ಮೊದಲು ವಿಶಾಖಾ ಮತ್ತು ಯವಕ್ರೀತ ಒಬ್ಬರನ್ನೊಬ್ಬರು ಪ್ರೀತಿಸಿದ್ದಾರೆ. ಆದರೆ ಯವಕ್ರೀತ ಬರುವುದರೊಳಗಾಗಿ ಪರಾವಸು ಮತ್ತು ವಿಶಾಖರ ಮದುವೆ ನಡೆದು ಹೋಗಿದೆ. ಯವಕ್ರೀತ ತಪಸ್ಸಿಗೆ ಹೋಗಿ ಏನನ್ನಾದರೂ ಸಾಧಿಸಿ ಬರಲು ಮುಖ್ಯ ಪ್ರೇರಣೆ ತನ್ನ ತಂದೆಗಾದ ಅವಮಾನ. ಆತನ ತಂದೆ ಕೂಡ ತಪಸ್ವಿಯಾಗಿದ್ದರೂ ಯಾವುದೇ ಮನ್ನಣೆ ಇಲ್ಲದೆ ತುಳಿತಕ್ಕೊಳಗಾಗಿ ಮರಣ ಹೊಂದಿದ್ದಾನೆ. ಈ ಅನ್ಯಾಯವನ್ನು ಸರಿಪಡಿಸುವುದಕ್ಕೋಸ್ಕರ ಅವನು ತಪಸ್ವಿಯಾಗಿದ್ದಾನೆ. ಅಂಥ ತಪಸ್ಸಿನಿಂದ ಪಡೆದದ್ದೇನು ಎಂಬುದರ ಬಗ್ಗೆ ಅವನಿಗೆ ಖಚಿತವಾದ ಅರಿವಿಲ್ಲ. ದೇವರನ್ನು ಅಥವಾ ಇಂದ್ರನನ್ನು ಕಂಡ ಬಗೆಗೆ ಅವನಿಗೆ ಗುಮಾನಿಗಳಿವೆ. ಒಟ್ಟಿನಲ್ಲಿ ನಾಟಕದೊಳಗಿನ ನೈತಿಕ ಮಾನದಂಡಗಳು ನಮ್ಮ ಕಾಲಕ್ಕಿಂತ ಭಿನ್ನವಾದುವುಗಳಂತೆ ಚಿತ್ರಿಸಿರುವುದರಿಂದ ನಾಟಕವನ್ನು ಕುರಿತು ಓದುಗ ಕುತೂಹಲಿಯಾಗುತ್ತಾನೆ. ನಾಟಕದ ಶೀರ್ಷಿಕೆಯು ಒಂದಕ್ಕೊಂದು ತದ್ವಿರುದ್ಧ ಎರಡು ಶಬ್ದಗಳನ್ನು ಸೂಚಿಸುತ್ತದೆ. ಯಜ್ಞ ಎಂಬ ಕ್ರಿಯೆ ಜೀವವಿರೋಧಿಯಾದುದು, ಅರ್ಥಹೀನವಾದುದು. ಇದಕ್ಕೆ ವಿರುದ್ಧವಾದುದು ಕರುಣೆ, ಪ್ರೀತಿ ಮತ್ತು ತ್ಯಾಗ. ಯಜ್ಞ ಮಾಡುವವರ ಜೀವ ವಿರೋಧಿ ನಿಲುವಿನಿಂದ, ಅವರ ಕ್ರಿಯೆಗಳಿಂದ ಮಳೆಬಾರದೆ, ಸಾಮಾನ್ಯರು ಎನಿಸಿಕೊಂಡವರ ಪ್ರಾಮಾಣಿಕತೆ, ಬಲಿದಾನಗಳಿಂದ ಮಳೆ ಸುರಿಯುತ್ತದೆ. ನಾಟಕದೊಳಗೆ ತಮ್ಮ ಅತಿಮಾನುಷ ಶಕ್ತಿ ಸಾಮಾಥ್ರ್ಯಗಳನ್ನು ದೇವ-ದಾನವರಿಬ್ಬರೂ ಈರ್ಷೆ ಸ್ವಾರ್ಥಗಳಿಗೆ ಉಪಯೋಗಿಸಿಕೊಳ್ಳುವರು. ಋಷಿಗಳು, ವೈದಿಕರು ಅರ್ಥಹೀನ ಕ್ರಿಯೆಗಳಲ್ಲಿ ತಪಸ್ಸಿನ ಹೆಸರಿನಲ್ಲಿ ನಿಷ್ಕ್ರಿಯರಾಗುವಂಥವರು. ಯಾವುದೇ ಜ್ಞಾನ, ಸಿದ್ಧಿ, ಅತಿಮಾನುಷ ಶಕ್ತಿಗಳಿಲ್ಲದ ಬೇಡರು, ಜಾತಿಗಾರರು ತಮ್ಮ ಮುಗ್ಧತೆಯಿಂದಲೇ ಜೀವಪರವಾದ ಮೌಲ್ಯಗಳನ್ನು ಪ್ರತಿನಿಧಿಸುತ್ತಾರೆ. ಮೇಲು ವರ್ಗ ಮತ್ತು ಕೆಳವರ್ಗಗಳನ್ನು ಕುರಿತು ಗಂಭೀರವಾದ ಚರ್ಚೆ ನಡೆಯುತ್ತಿರುವ ಈ ಕಾಲದಲ್ಲಿ ‘ಅಗ್ನಿ ಮತ್ತು ಮಳೆ’ ನಾಟಕವು ಸಾಂಕೇತಿಕ ಅರ್ಥಗಳನ್ನು ಧ್ವನಿಸುತ್ತ ಸರಳ ಸಮೀಕರಣಗಳನ್ನು ನಿರಾಕರಿಸುತ್ತದೆ. ನಮ್ಮ ಹೆಚ್ಚಿನ ಲೇಖಕರು ಈ ವಿಷಯದಲ್ಲಿ ತೋರಿದ ಸರಳತೆಯನ್ನು ಈ ನಾಟಕ ಮೀರುತ್ತ ನಮ್ಮ ಬದುಕಿನ ಮೂಲ ಐತಿಹಾಸಿಕ ಸೆಲೆಗಳ ನಾಡಿ ಬಡಿತವನ್ನು ನಮ್ಮ ಗಮನಕ್ಕೆ ಯಶಸ್ವಿಯಾಗಿ ತರುತ್ತದೆ. ಸಿನಿಬಜ್ ಮುಖ್ಯಸ್ಥರ ಅನುಮತಿ ಇಲ್ಲದೇ ಯಾವುದೇ ಜಾಲಾತಾಣಗಳು ಗಿರೀಶ್ ಕಾರ್ನಾಡರ ಲೇಖನಗಳನ್ನು ಬಳಸಿಕೊಳ್ಳುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. – ಸಂ |
No Comment! Be the first one.