ಮಾ ನಿಷಾದ : ಗಿರೀಶ್ ಕಾರ್ನಾಡರು 1963ರಲ್ಲಿಯೇ ಈ ಕಿರುನಾಟಕವನ್ನು ಬರೆದರು. ಆದರೆ ಪುಸ್ತಕ ರೂಪವಾಗಿ ಪ್ರಕಟಗೊಂಡಿದ್ದು 1986ರಲ್ಲಿ. ಇದನ್ನು ಮನೋಹರ ಗ್ರಂಥಮಾಲೆಯವರು 2004ರಲ್ಲಿ ಪ್ರಕಟಿಸಿದರು. ಮಾ ನಿಷಾದ ನಾಟಕದಲ್ಲಿ ಕಾರ್ನಾಡರ ಮುಂದಿನ ಬೆಳವಣೆಗೆಯ ಸೂಚನೆಯನ್ನು ಕಾಣಬಹುದು. ರಾಮನು ತನ್ನ ಮಡದಿಯನ್ನು ಅಗಸನ ಮಾತನ್ನು ಕೇಳಿ ತ್ಯಜಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಆದರೆ ಆ ಒಂದು ತ್ಯಾಗಕ್ಕೆ ಕಾರಣನಾದ ಅಗಸನ ‘ಗತಿ’ ಏನಾಯಿತೆಂಬುದನ್ನು ನಾಟಕವು ಬಿಂಬಿಸುತ್ತದೆ. ರಾಮಾಯಣದಲ್ಲಿ ಲಕ್ಷ್ಮಣನ ಮಡದಿಯ ಗತಿ ಏನಾಯಿತೆಂಬುದು ಹೆಚ್ಚು ವಿವರಣಾತ್ಮಕವಾಗಿ ಇಲ್ಲ. ಆಧುನಿಕ ಕಾಲದಲ್ಲಿ ಆ ಲಕ್ಷ್ಮಣನ ಹೆಂಡತಿಯ ವಿರಹವನ್ನು ಕೇಂದ್ರವಾಗಿಟ್ಟುಗೊಂಡು ಹಲವಾರು ಸಾಹಿತ್ಯ ಕೃತಿಗಳ ರಚನೆಯಾಯಿತು. ಅಂತೆಯೇ ಇಲ್ಲಿ ಸೀತೆಯು ಎರಡನೆಯ ಸಲ ವನವಾಸಕ್ಕೆ ಹೋಗಲು ಕಾರಣವಾದ ಅಗಸನ ಗತಿ ಏನಾಯಿತೆಂಬುದನ್ನು ಕುರಿತು ಈ ನಾಟಕವು ಚಿಂತಿಸುತ್ತದೆ. ನಾಟಕದಲ್ಲಿ ರಾಮ-ಸೀತೆಯರ ಪ್ರವೇಶವಿಲ್ಲ. ಭರತ ಕಾಣಿಸಿಕೊಳ್ಳುತ್ತಾನೆ. ಆತನಾಡುವ ಮಾತಿನ ಮೇಲೆಯೇ ನಾಟಕದ ಇಡೀ ವ್ಯಾಖ್ಯೆ ನಿಂತಿದೆ ಎನ್ನಿಸುತ್ತದೆ. ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಲು ರಾಮನಿಗೆ ಅಗಸನ ಮಾತಲ್ಲದಿದ್ದರೆ ಇನ್ನಾವುದಾದರೂ ಮಾತು ದೊರೆಯಬಹುದಿತ್ತೆಂಬ ಇಂಗಿತವನ್ನು ಭರತನ ಮಾತುಗಳು ವ್ಯಕ್ತಪಡಿಸುತ್ತವೆ. ಅಂದರೆ ತಾನು ಒಳ್ಳೆಯವನು ಮತ್ತು ನ್ಯಾಯ ನಿಷ್ಠುರನೆನ್ನಿಸಿಕೊಳ್ಳಲು ರಾಮನು ಪ್ರಸಂಗಗಳನ್ನು ಅರಸುತ್ತ ಹೋಗುವಂಥವನು ಮತ್ತು ಅಂಥ ಒಂದು ಪ್ರಸಂಗಕ್ಕೆ ಅಗಸನೊಬ್ಬ ‘ಬಲಿ’ಯಾಗಿದ್ದಾನೆಂಬಂತೆ ನಾಟಕವು ಚಿತ್ರಿತವಾಗಿದೆ. ನಿಜವಾಗಿಯೂ ಇದೊಂದು ಹೊಸ ದೃಷ್ಟಿಕೋನ. ಏಕೆಂದರೆ ನ್ಯಾಯ ನಿಷ್ಠುರತೆಯ ಹಾದಿಯಲ್ಲಿ ಹಲವರು ಅಮಾಯಕರಾಗಿ ಸಿಕ್ಕಿ ಹಾಕಿಕೊಂಡಾಗ ಅವರ ಸ್ಥಿತಿ ಏನಾಗುತ್ತದೆಂಬುದನ್ನು ರಾಮಾಯಣದ ಕಥಾ ಪ್ರಸಂಗವನ್ನು ಉಪಯೋಗಿಸಿಕೊಂಡು ನಾಟಕವನ್ನು ರಚಿಸಲಾಗಿದೆ. ಮಾ ನಿಷಾದ ಕಾರ್ನಾಡರ canonಗೆ ಸೇರಿಲ್ಲ. ಸ್ವತಃ ನಾಟಕಕಾರರಾಗಿದ್ದವರು ಅದನ್ನು ಅಲಕ್ಷಿಸಿದ್ದಾರೆ. ಆದರೆ, ಅದೊಂದು ಒಳ್ಳೆಯ ನಾಟಕ. ಅವರು ಅಗಸನ ಪಾತ್ರದಲ್ಲಿ ಜೀವ ತುಂಬಿದ್ದಾರಲ್ಲದೆ ಅವನನ್ನು ಆಧುನಿಕ ಸಂವೇದನೆಯ ವಾಹಕನನ್ನಾಗಿ ಪರಿವರ್ತಿಸಿದ್ದಾರೆ. ಅವನ ಸಮಸ್ಯೆಗೆ ಸಾರ್ವಕಾಲಿಕ ಆಯಾಮವೂ ಇದೆ. ಅವರು ಕಲ್ಪಿಸುವ ಅಗಸ-ವಾಲ್ಮೀಕಿ ಮುಖಾಮುಖಿ ಅವರ ಸ್ವಂತದ ಸೃಷ್ಟಿ. ರಾಮಾಯಣದತ್ತ ನೋಡುವ ಹೊಸ ದೃಷ್ಟಿಯೊಂದನ್ನು ಕಾರ್ನಾಡರು ಈ ನಾಟಕದಲ್ಲಿ ಸಾಂಕೇತಿಕವಾಗಿಯಾದರೂ ಸ್ಪಷ್ಟವಾಗಿ ಸೂಚಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಈ ಕೃತಿ ಸೂಕ್ಷ್ಮ ಪರಿಶೀಲನೆಗೆ ಯೋಗ್ಯವಾಗಿದೆ.
|
No Comment! Be the first one.