ಗಿರೀಶ್ ಕಾರ್ನಾಡರು ಕನ್ನಡ ಸಾಹಿತ್ಯದ ಬಹುದೊಡ್ಡ ಲೇಖಕರು. ಕನ್ನಡ ನಾಟಕಗಳನ್ನು ಬರೆದು ಅವುಗಳಿಂದಾಗಿಯೇ ನಮ್ಮ ರಾಷ್ಟ್ರೀಯ ರಂಗಭೂಮಿಯಲ್ಲಿ ಅತ್ಯಂತ ಪ್ರಭಾವಶಾಲಿ ನಾಟಕಕಾರರೆಂದು ಮನ್ನಣೆ ಪಡೆದಿರುವರು. ಕನ್ನಡ ನಾಟಕಗಳಿಗೆ ಜಾಗತಿಕ ನಾಟಕ ಕ್ಷೇತ್ರದಲ್ಲಿ ಉನ್ನತ ಸ್ಥಾನ ದೊರಕಿಸಿ ಕೊಟ್ಟವರು ಅವರು. ಇಂಥ ಮೇರು ವ್ಯಕ್ತಿ ಇಂದು ಎಲ್ಲರನ್ನೂ ಅಗಲಿದ್ದಾರೆ.
ಕಾರ್ನಾಡರ ನಾಟಕಗಳು ಭಾರತದ ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ. ಅಷ್ಟಲ್ಲದೇ ಇಂಗ್ಲೀಷ್ ಮಾತ್ರವಲ್ಲದೆ ಕೆಲವು ವಿದೇಶಿ ಭಾಷೆಗಳಿಗೂ ಅನುವಾದಗೊಂಡಿವೆ. ನಾಟಕ ರಚನೆಯಲ್ಲಿ ಕಾರ್ನಾಡರ ವ್ಯಾಪ್ತಿ, ತಜ್ಞತೆ ಪರಿಣತಿ ಮತ್ತು ಶ್ರೇಷ್ಠತೆಗಳನ್ನು ಎಲ್ಲಾ ಕಡೆ ಪ್ರಚುರಗೊಳಿಸಿವೆ. ಅಂತೆಯೇ ಸ್ವದೇಶ-ವಿದೇಶಗಳಲ್ಲಿಯೂ ಇದು ಯಶಸ್ವಿ ರಂಗ ಪ್ರಯೋಗಗಳ ಮೂಲಕ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪಿವೆ. ರಂಗಭೂಮಿಯಲ್ಲಿ ತಾವು ಅತ್ಯಂತ ಪ್ರಭಾವಶಾಲಿ ನಟರೆಂದೂ, ನಿರ್ದೇಶಕರೆಂದೂ ಕೂಡ ಕಾರ್ನಾಡರು ತೋರಿಸಿಕೊಟ್ಟಿದ್ದಾರೆ. ನಾಟಕ ಕ್ಷೇತ್ರದ ಸಾಧನೆಗಳಿಗೆ ಸರಿಸಮಾನವಾಗಿ ಇವರು ಚಲನಚಿತ್ರ ಕ್ಷೇತ್ರದಲ್ಲಿಯೂ ಯಶಸ್ಸು ಹಾಗೂ ಪ್ರಖ್ಯಾತಿಯನ್ನು ಗಳಿಸಿದ್ದಾರೆ. ಸೃಜನಶೀಲ ಮತ್ತು ಪ್ರಯೋಗಶೀಲ ಚಿತ್ರಗಳಲ್ಲಿ ನಟ-ನಿರ್ದೇಶಕರಾಗಿ ಅವರು ಗಣನೀಯ ಯಶಸ್ಸು ಸಾಧಿಸಿದ್ದಾರೆ. ಚಿತ್ರಕಥೆ-ಸಂಭಾಷಣೆಗಳ ರಚನೆಯಲ್ಲೂ ಅವರಿಗೆ ಒಳ್ಳೆಯ ಪರಿಶ್ರಮವಿದೆ ಎಂಬುದು ಅವರು ನಿರ್ಮಿಸಿರುವ ಸಾಕ್ಷ್ಯ ಚಿತ್ರಗಳನ್ನು ನೋಡಿದರೆ ಅರಿವಾಗುತ್ತದೆ.
ಗಿರೀಶ್ ಕಾರ್ನಾಡರ ವೈಯಕ್ತಿಕ ಪರಿಶ್ರಮ ಸಾಧನೆಗಳಷ್ಟೇ ಗಮನಾರ್ಹವಾದುದು ಕಲೆ ಮತ್ತು ಸಂಸ್ಕೃತಿಗಳ ಮುನ್ನಡೆಯಲ್ಲಿ ಅವರು ವಹಿಸುತ್ತ್ತಾ ಬಂದಿರುವ ಪಾತ್ರ, ನಾಟಕ ರಂಗಭೂಮಿಗೆ ಸಂಬಂಧಿಸಿದಂತೆ ವಿಚಾರ-ವಿಮರ್ಶೆಯ ಕೆಲವು ಲೇಖನಗಳನ್ನು ಕಾರ್ನಾಡರು ಬರೆದಿದ್ದು ಅವು ಅಪರೂಪದ ಒಳನೋಟಗಳನ್ನು ಬಿಂಬಿಸುತ್ತವೆ.
ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಗಿರೀಶ್ ಕಾರ್ನಾಡರಿಗೆ 1998 ರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರ ದೊರೆತಾಗ ಕನ್ನಡದಂತೆ ಉಳಿದ ಕೆಲ ಭಾಷೆಗಳ ರಂಗಭೂಮಿಯ ಆಸಕ್ತರಿಗೆ ಅತ್ಯಂತ ಹೆಮ್ಮೆಯ ಅನುಭವವಾಯಿತು. ಭಾರತದ ಹಲವಾರು ಭಾಷೆಗಳ ರಂಗಭೂಮಿಯ ಮೇಲೆ ಯಶಸ್ವಿ ಪ್ರಯೋಗ ಕಂಡ ಅವರ ನಾಟಕಗಳು ಪ್ರೇಕ್ಷಕರನ್ನು ಗೆಲ್ಲುವುದರಲ್ಲಿ ಯಶಸ್ವಿಯಾದವು. ಆಧುನಿಕ ರಂಗಭೂಮಿಯ ವಿಚಾರ ಚರ್ಚೆಗೆ ಕಾರ್ನಾಡರ ಕೃತಿಗಳನ್ನು ಸ್ವೀಕರಿಸದಿದ್ದರೆ ಅಪೂರ್ಣವು, ಅರ್ಥಹೀನವೂ ಆಗುತ್ತದೆ. ಅಷ್ಟೊಂದು ಪ್ರಮುಖ ಸ್ಥಾನವನ್ನು ಅವರ ನಾಟಕಗಳು ಪಡೆದುಕೊಂಡಿವೆ. ಇಷ್ಟಲ್ಲದೆ ಗಿರೀಶ್ ಕಾರ್ನಾಡರು ಭಾರತದ ಪ್ರಮುಖ ಸಾಂಸ್ಕೃತಿಕ ರಾಯಭಾರಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಹಲವು ವಿದೇಶ ವಿಶ್ವವಿದ್ಯಾನಿಲಯಗಳಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ನಾಟಕ ರಂಗಭೂಮಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಉತ್ಸವಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಸರ್ಕಾರದ ಮತ್ತು ಅರೆ ಸರ್ಕಾರಿ ಸ್ವರೂಪದ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಪುಣೆಯ ಫಿಲ್ಮ್ ಇನ್ಸಿಸ್ಟ್ಯೂಟ್ಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ, ವಿವಿಧ ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ದೊರೆಯಲು ಕಾರಣರಾಗಿದ್ದಾರೆ.
ಸಮಕಾಲೀನ ಭಾರತೀಯ ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರಗಳ ಅತ್ಯಂತ ಪ್ರತಿಭಾವಂತ ವ್ಯಕ್ತಿಗಳಲ್ಲಿ ಒಬ್ಬರಾದ ಕಾರ್ನಾಡರು ತಮ್ಮ ಅಭಿರುಚಿ, ಸೂಕ್ಷ್ಮ ಸಂವೇದನಾಶೀಲತೆಯಿಂದ ಗುರುತಿಸಿಕೊಂಡವರು. ಯಾವುದೇ ಅತಿರೇಕಗಳಿಗೆ ಎಡೆಗೊಡದ ಔಚಿತ್ಯ ಪ್ರಜ್ಞೆಯಿಂದಾಗಿ ತಾವು ನಿರ್ವಹಿಸುವ ಕ್ಷೇತ್ರಕ್ಕೆ ಗಂಭೀರತೆ ಮತ್ತು ಹಿರಿಮೆಗಳನ್ನು ಒದಗಿಸಿದ್ದಾರೆ. ನಾಡು ಕಂಡ ಇಂತಹ ಶ್ರೇಷ್ಠ ಬರಹಗಾರನಿಗೆ ಅಂತಿಮ ನಮನ ಸಲ್ಲಿಸೋಣ…
ಸಿನಿಬಜ್ ಮುಖ್ಯಸ್ಥರ ಅನುಮತಿ ಇಲ್ಲದೇ ಯಾವುದೇ ಜಾಲಾತಾಣಗಳು ಗಿರೀಶ್ ಕಾರ್ನಾಡರ ಲೇಖನಗಳನ್ನು ಬಳಸಿಕೊಳ್ಳುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.
No Comment! Be the first one.