ಆರಂಭದಲ್ಲಿ ಉಪೇಂದ್ರ ಅನ್ನೋ ಹೆಸರು ಫೇಮಸ್ಸಾಗಿದ್ದು ಅವರ ಹುಚ್ಚುತನದ ಸಿನಿಮಾಗಳ ಮೂಲಕ. ಹುಚ್ಚ ಅಂದವರನ್ನೇ ಹುಚ್ಚೆಬ್ಬಿಸಿದ ಬುದ್ಧಿವಂತ ಉಪೇಂದ್ರ. ಕಳೆದ ಎರಡೂವರೆ ದಶಕಗಳಿಂದ ಕನ್ನಡ ಚಿತ್ರರಸಿಕರನ್ನು ಬಗೆಬಗೆಯಲ್ಲಿ ರಂಜಿಸಿದವರು ಉಪ್ಪಿ. ಹಾಗಂತ ಉಪ್ಪಿ ಹವಾ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗವನ್ನು ಆವರಿಸಿಕೊಂಡಿದೆ. ಶಂಕರ್ ಇಂದ ಹಿಡಿದು ರಾಜಮೌಳಿತನಕ ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕರೆಲ್ಲಾ “ಉಪ್ಪಿ ಅಂದ್ರೆ ನಮಗೆ ಸ್ಪೂರ್ತಿ” ಎಂದುಬಿಟ್ಟಿದ್ದಾರೆ. ನಿರ್ದೇಶಕನಾಗಿ ಹೊಸ ಇತಿಹಾಸ ಸೃಷ್ಟಿಸಿದ ಉಪೇಂದ್ರ ಕನ್ನಡದ ಹೀರೋ ಆಗಿ ಕೂಡಾ ಸೂಪರ್ ಸ್ಟಾರ್ ಪಟ್ಟವನ್ನು ಅಲಂಕರಿಸಿದವರು.
ಇಂಥಾ ಉಪ್ಪಿ ನೆರೆಯ ಅಂಧ್ರದಲ್ಲೂ ಅಗಣಿತ ಅಭಿಮಾನಿಗಳನ್ನು ಹೊಂದಿದ್ದಾರೆ. ಥೇಟು ಕನ್ನಡದ ಸಿನಿ ಪ್ರೇಕ್ಷಕರಂತೇ ಅಲ್ಲೂ ಸಹ `ಉಪ್ಪಿ’ಯನ್ನು ಕಂಡೇಟಿಗೆ ಹುಚ್ಚೆದ್ದು ಕುಣಿಯುತ್ತಾರೆ. ಮೊನ್ನೆ ದಿನ ಐ ಲವ್ ಯು ಚಿತ್ರದ ಬಿಡುಗಡೆ ಪೂರ್ವ ಸಮಾರಂಭಕ್ಕಾಗಿ ಕರ್ನಾಟಕದ ಸಕಲ ಸಿನಿಮಾ ಪತ್ರಕರ್ತರನ್ನೂ ನಿರ್ದೇಶಕ ಆರ್. ಚಂದ್ರು ವಿಶಾಖಪಟ್ಟಣಕ್ಕೆ ಕರೆದೊಯ್ದಿದ್ದರು. ಆ ಸಂದರ್ಭದಲ್ಲಿ ಉಪೇಂದ್ರ ಅವರ ಕ್ರೇಜು ಆಂಧ್ರದಲ್ಲೂ ದೊಡ್ಡಮಟ್ಟದಲ್ಲಿದೆ ಅನ್ನೋ ಅಂಶ ಕಣ್ಣಾರೆ ಕಂಡು ಸ್ವತಃ ಪತ್ರಕರ್ತರೇ ಥ್ರಿಲ್ ಆಗುವಂತಾಗಿತ್ತು. ನಮ್ಮ ನೆಲದ ಪ್ರತಿಭೆಯೊಂದಕ್ಕೆ ಪಕ್ಕದೂರಿನವರು ಜೈಕಾರ ಹಾಕೋದನ್ನೂ ನೋಡೋದೇ ಚೆಂದ ಅಲ್ವಾ?
ಉಪ್ಪಿ ನಟಿಸಿದ ಸಾಕಷ್ಟು ಕನ್ನಡ ಸಿನಿಮಾಗಳು ತೆಲುಗು ಭಾಷೆಗೆ ಡಬ್ ಆಗಿ ಅಲ್ಲೂ ಹಿಟ್ ಆಗಿವೆ. ರಾ, ರಕ್ತಕಣ್ಣೀರು, ಒಕೇಮಾಟ, ಕನ್ಯಾದಾನಂನಂಥಾ ಸಿನಿಮಾಗಳು ಆಂಧ್ರದಲ್ಲಿ ಬಿಡುಗಡೆಗೊಂಡು ಸಂಚಲನ ಸೃಷ್ಟಿಸಿದ್ದವು. ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿನ ಉಪ್ಪಿಯ ಡಾನ್ ಅವತಾರಕ್ಕೆ ಅಲ್ಲಿನ ಜನ ಫಿದಾ ಆಗಿದ್ದಾರೆ. ಈಗ ಆರ್. ಚಂದ್ರು ನಿರ್ದೇಶನದ `ಐ ಲವ್ ಯು’ ತೆಲುಗು ರಾಜ್ಯಗಳಲ್ಲಿ ಅತಿಹೆಚ್ಚು ಥಿಯೇಟರುಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ನಂತರ ಉಪ್ಪಿ ಕ್ರೇಜು ಅಲ್ಲಿ ಮತ್ತಷ್ಟು ಹೆಚ್ಚೋದರಲ್ಲಿ ಡೌಟಿಲ್ಲ.
No Comment! Be the first one.