ನಾವು ಅಡ್ಡದಾರಿ ಹಿಡಿದಾಗ, ಬದುಕಿನ ವಾಸ್ತವತೆಯನ್ನು ತಿಳಿಯಲು ಎಡವಿದಾಗ ನಮ್ಮನ್ನು ಹೆಚ್ಚು ತಿದ್ದುವವರು ನಮ್ಮ ಪಾಲಕರು. ಅದರಲ್ಲೂ ತಾಯಿಗೆ ಮಕ್ಕಳು ಏನು ಮಾಡಿದರೂ ಚೆಂದದಂತೆ ಕಂಡರೂ, ಬದುಕಿನ ಆಳ ಅಗಲವನ್ನು ಅರಿತ ತಂದೆಗದು ಪ್ರಮಾದವೇ. ಸಾಕಷ್ಟು ಬಾರಿ ನಮಗಿಡಿಸದ ಕೆಲಸಗಳನ್ನು ಮಾಡುತ್ತಲೇ, ತಿದ್ದುವ, ತೀಡುವ ಧಾವಂತದಲ್ಲಿ ಎಲ್ಲ ಮಕ್ಕಳಿಗೂ ಹಳೆ ಫಿಲಮ್ಮಿನ ವಿಲನ್ ಗಳಂತೆ ಕಾಣುತ್ತಿರುತ್ತಾರೆ. ನಮ್ಮ ತಂದೆ ಮಾಡಿದ್ದೆಲ್ಲವೂ ಸತ್ಯ.. ಅವರು ನಮ್ಮ ಒಳಿತಿಗಾಗಿ ಆಡಿದ ಶ್ರೇಷ್ಟ ನುಡಿಗಳವು ಎಂಬರಿವು ನಮಗಾಗುವಷ್ಟರಲ್ಲಿ ದುರದೃಷ್ಟವಶಾತ್ ಅವರು ನಮ್ಮಿಂದ ದೂರವಾಗಿರುತ್ತಾರೆ. ಅಲ್ವಾ… ಪ್ರತಿಯೊಬ್ಬರ ಜೀವನದಲ್ಲಿಯೂ ಘಟಿಸಿ ಹೋದ ದುರಂತಗಳಿವು. ಅಂತಹುದೇ ದುರಂತ ಅನುಭವಗಳನ್ನು ನವರಸ ನಾಯಕ ಜಗ್ಗೇಶ್ ಮನದಾಳದಿಂದ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ.
“1979/80 ಅಪ್ಪ ನನಗೆ ನಿನ್ನ ಅನ್ನ ನೀನೆ ದುಡಿದು ತಿನ್ನು ಆಗ ಬದುಕಿನ ಅರ್ಥ ನಿನಗಾಗುವುದು ಎಂದಾಗ ಅಂದು ನನಗೆ ಮಯೂರ ಚಿತ್ರದ ಇಂಟರ್ ವೆಲ್ ದೃಶ್ಯದ ರಾಜಣ್ಣ ನಂತೆ ಶಪಥ ಮಾಡಿ ಮನೆಬಿಟ್ಟು ಹೋಗಿ ಮೈಸೂರಿನಲ್ಲಿ ಆಟೋ ಡ್ರೈವರ್ ಆಗಿದ್ದೆ.! ಆಗ ನನಗೆ ಇದ್ದ ಆಸೆ ಒಂದೇ. ಜೀವನದಲ್ಲಿ ಒಂದು ಆಟೋ ಸ್ವಂತ ಪಡೆದು ದಿನ 100 ರೂ ದುಡಿಯುವ ಮನುಷ್ಯನಾಗಿ ಅಪಮಾನಿಸಿದ ಅಪ್ಪನ ಮುಂದೆ ಮೀಸೆ ತಿರುವಿ ಬದುಕಬೇಕು ಎಂದು! ಬದುಕಿಗೆ ಬುದ್ಧಿ ಹೇಳುವ ಅಪ್ಪ ಅಂದು ಶತೃವಂತೆ ಕಂಡ.! ಇಂದು ಆಕಸ್ಮಿಕ ಒಬ್ಬ ಆಟೋರಿಕ್ಷಾ ಸಹೋದರ ಸಿಕ್ಕಾಗ ಅವನ ಅನುಮತಿ ಪಡೆದು ಆಟೋ ಓಡಿಸಿದೆ! ಅಪ್ಪ ಹಾಗೂ ನನ್ನ ಮನಸ್ತಾಪದ ದಿನಗಳು ನೆನಪಾಗಿ #ಅಪ್ಪ ಎಂಥ ಶ್ರೇಷ್ಟ.. ಮಗ ನಾನು ಎಂಥ ಅಧಮ.! ವ್ಯತ್ಯಾಸ ನನ್ನ ತಲೆತಗ್ಗಿಸುವಂತೆ ನಾಚಿಕೆಯಾಯಿತು..! ಮಗ ಬದುಕು ಕಲಿಯಲಿ ಎಂದು ಅಪ್ಪ ಆಡಿದ ಮಾತೆಲ್ಲಾ ಅಣಕ ಅಪಮಾನದಂತೆ ಕೇಳುತ್ತಿತ್ತು ರಕ್ತ ಬಿಸಿಯಿದ್ದಾಗ..! ಅದರೆ ಈಗ? ನೀವು ಬೈದು ಬುದ್ಧಿ ಹೇಳುತ್ತಿದ್ದ ಮಗ ಇಂದು ತಾತನಾಗಿ ಬದುಕಿನ ಪುಟಗಳ ಮೆಲುಕು ಹಾಕಿದಾಗ ಅಪ್ಪ ಎಂಥ ಶ್ರೇಷ್ಟಮನುಜ ನೀನು ಅನ್ನಿಸಿತು..! ತಪ್ಪಾಯಿತು ಕ್ಷಮಿಸಿ ಅಂದರು ಕೇಳದಷ್ಟು ದೂರದ ಊರಿಗೆ ಹೋಗಿಬಿಟ್ಟೆ..! ಕ್ಷಮೆ ಕೇಳಲು ನಾನು ನೀನಿರುವ ಜಾಗಕ್ಕೆ ಬರಬೇಕು..! ಇನ್ನು ಅನೇಕ ಕಾರ್ಯವಿದೆ ಮುಗಿಸಿ ಮಾಗಿದಾಗ ದೇಹ ನಿನ್ನಲ್ಲಿಗೆ ಬರುವೆ! ಆಗಲಾದರು ಕ್ಷಮಿಸು.! ಎಷ್ಟೇ ಆದರು ನಾನು ನಿನ್ನ ಮಗನಲ್ಲವೆ..! ಒಂದಂತು ನಿನಗೆ ಸಮಾಧಾನ ಆಗುತ್ತದೆ! ಅಪ್ಪ ನಾನು ಶ್ರಮಿಸಿ ನಿನ್ನ ವಂಶದ ಹೆಸರು ಉಳಿಸಿರುವೆ! ನೀನು ಅಮ್ಮ ಗರ್ವಪಡುತ್ತೀರಿ ನನ್ನ ಸಾಧನೆ ಕಂಡು..!love you pa..ever loving son..ನಿಮ್ಮ ಈಶ..ಎನ್ನಬೇಕು ಅನ್ನಿಸಿತು ಜನ್ಮ..ತಂದೆತಾಯಿ ನಡೆದಾಡುವ ದೇವರು ಬದುಕಿದ್ದಾಗಲೆ ಗೌರವಿಸಿ! ಕಳೆದುಕೊಂಡ ಮೇಲೆ ಪರಿತಪಿಸಿದರು ಮತ್ತೆ ಸಿಗರು…“
ಎಂಥಾ ಅನುಭವಜನ್ಯ ಮಾತುಗಳಿವು. ಕೈಲಿದ್ದಾಗ ಮೌಲ್ಯಗಳ ಅರಿವಾಗದೇ ಬೇಕಾಬಿಟ್ಟಿ ಬಿಸಾಡುವ ಮಂದಿಗಿದು ತಿದ್ದುವ ಅಕ್ಕರೆಯ ನುಡಿಗಳಿವು. ಕೋಪದ ಕೈಗೆ ಬುದ್ದಿ ಕೊಟ್ಟು ಸದಾ ಸುಖವನ್ನೇ ಬಯಸುವ ನಮ್ಮ ಪಾಲಕರನ್ನು ಪರದಾಡುವಂತೆ ಮಾಡುವುದಾಗಲಿ, ಕೊರಗುವಂತೆ ಮಾಡುವುದಾಗಲಿ ಎಷ್ಟರಮಟ್ಟಿಗೆ ಸರಿ.. ಅವೆಲ್ಲವೂ ತಪ್ಪು.. ನಾನು ಮಾಡಿದ್ದು ತಪ್ಪು.. ನಾನು ನಮ್ಮ ಪಾಲಕರನ್ನು ಹಿಂಸಿಸಿದೆ ಇತ್ಯಾದಿ ಪಶ್ಚಾತಾಪಗಳೆಲ್ಲವೂ ಆ ಸ್ಥಾನಕ್ಕೆ ನಾವೆಲ್ಲರೂ ಹೋದಾಗ ಬಾರದೇ ಇರದು. ಬುದ್ದಿ ಬಂದರೂ ಕಾಲ ಬಾರದು ಎಂಬ ಮಾತಿನಂತೆ ಚಿಂತಿಸಿ ಏನು ಪ್ರಯೋಜನ. ಇನ್ನಾದರೂ ಪೋಷಕರೊಂದಿಗೆ ಮನುಷ್ಯತ್ವದಿಂದ ನಡೆದುಕೊಳ್ಳೋಣ. ಅವರ ಋಣ ತೀರಿಸಲಾದರೂ….
One Comment