ಇದೀಗ ಹಾಡುಗಳ ಮೂಲಕವೇ ಪ್ರೇಕ್ಷಕರ ಗಮನವನ್ನು ಸಂಪೂರ್ಣವಾಗಿ ತನ್ನತ್ತ ತಿರುಗಿಕೊಳ್ಳುವಂತೆ ಮಾಡಿರೋ ಚಿತ್ರ ಯಾರಿಗೆ ಯಾರುಂಟು. ಕಿರಣ್ ಗೋವಿ ನಿರ್ದೇಶನದ ಈ ಚಿತ್ರದಲ್ಲಿ ಲೇಖಾ ಚಂದ್ರ ಕೂಡಾ ನಾಯಕಿಯಾಗಿ ನಟಿಸಿದ್ದಾರೆ. ಅನಿರೀಕ್ಷಿತವಾಗಿ ಚಿತ್ರರಂಗಕ್ಕೆ ಬಂದು ಆ ಬಳಿಕ ಆಕಸ್ಮಿಕ ತಿರುವುಗಳ ಮೂಲಕ, ತನ್ನೊಳಗಿನ ನಟನೆಯ ತಾಕತ್ತಿನ ಮೂಲಕವೇ ನಾಯಕಿಯಾಗಿ ನೆಲೆ ಕಂಡುಕೊಂಡಿರೋ ಲೇಖಾಗೆ ಈ ಚಿತ್ರದಲ್ಲಿ ಚಾಲೆಂಜಿಂಗ್ ಆದೊಂದು ಪಾತ್ರ ಸಿಕ್ಕಿದೆ.
ಲೇಖಾ ಚಂದ್ರ ಈ ಚಿತ್ರವನ್ನು ಒಪ್ಪಿಕೊಂಡಿರುವುದೇ ಚೆಂದದ ಕಥೆಯ ಕಾರಣದಿಂದ. ನಿರ್ದೇಶಕ ಕಿರಣ್ ಗೋವಿಯವರು ಆರಂಭದಲ್ಲಿ ಇಡೀ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದರಂತೆ. ಇದರಲ್ಲಿ ಲೇಖಾ ನಿರ್ವಹಿಸೋ ಪಾತ್ರದ ಹಾವ ಭಾವ ಸೇರಿದಂತೆ ಎಲ್ಲವನ್ನೂ ಇಂಚಿಂಚಾಗಿ ಬಿಡಿಸಿಟ್ಟಿದ್ದರಂತೆ. ಈ ಕಥೆಯ ಸೊಗಸಿನ ಮನಸೋತ ಲೇಖಾ ಬೇರೇನೂ ಯೋಚಿಸದೇ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
ಯಾರಿಗೆ ಯಾರುಂಟು ಚಿತ್ರದಲ್ಲಿರುವ ಮೂವರು ನಾಯಕಿಯರಲ್ಲಿ ಲೇಖಾ ಚಂದ್ರ ಕೂಡಾ ಒಬ್ಬರು. ಇಲ್ಲಿ ಅವರ ಪಾತ್ರ ಮೇಚೂರ್ಡ್ ಶೇಡ್ ಹೊಂದಿರುವಂಥಾದ್ದು. ಈಗಿನ ಹುಡುಗೀರು ಪ್ರೀತಿ ಪ್ರೇಮವೂ ಸೇರಿದಂತೆ ಪ್ರತಿಯೊಂದನ್ನೂ ಲೈಟ್ ಆಗಿ ತೆಗೆದುಕೊಳ್ಳೋದು ಮಾಮೂಲು. ಆದರೆ ಈ ಚಿತ್ರದಲ್ಲಿ ಲೇಖಾರ ಪಾತ್ರ ಅದಕ್ಕೆ ತದ್ವಿರುದ್ಧವಾದದ್ದು. ಅದು ಇಡೀ ಚಿತ್ರಕ್ಕೇ ಒಂದು ಮಹತ್ವದ ತಿರುವು ನೀಡುವಂಥಾ ರೋಲು. ಇಂಥಾ ಕಾಡೋ ಕ್ಯಾರೆಕ್ಟರೊಂದನ್ನು ಆವಾಹಿಸಿಕೊಳ್ಳುವಂತೆ ಮಾಡಿದ ನಿರ್ದೇಶಕ ಕಿರಣ್ ಗೋವಿ, ಯಾವುದಕ್ಕೂ ಕೊರತೆಯಾಗದಂತೆ ಚಿತ್ರವನ್ನು ಸುಂದರವಾಗಿ ರೂಪಿಸಿರುವ ನಿರ್ಮಾಪಕರಾದ ರಘುನಾಥ್, ಕೋರಿಯೋಗ್ರಾಫರ್ ಮೋಹನ್, ಸಂಗೀತ ನಿರ್ದೇಶಕ ಬಿ.ಜೆ ಭರತ್, ಛಾಯಾಗ್ರಾಹಕ ರಾಕೇಶ್ ಸೇರಿದಂತೆ ಇಡೀ ಚಿತ್ರ ತಂಡದ ಮೇಲೆ ಲೇಖಾಗೆ ಅಕ್ಕರೆಯಿದೆ.
ಈಗಾಗಲೇ ಶ್ರೇಯಾ ಘೋಶಾಲ್ ಹಾಡಿರೋ ‘ಧ್ಯಾನಿಸಿ ಕಾಯುವೆನು ನಿನ್ನ. ಕೇಳದೆ ದೋಚಿ ಬಿಡು ನನ್ನ. ಭಾಷೆಯೇ ಸಾಲದು ಪ್ರೀತಿ ಮಾತಾಡಲು’ ಎಂಬ ಹಾಡೀಗ ಹಿಟ್ ಆಗಿದೆಯಲ್ಲಾ? ಅದರಲ್ಲಿ ಮೋಹಕವಾಗಿ ನಟಿಸಿದ ಖುಷಿ ಲೇಖಾರದ್ದು. ರಾಜಸ್ಥಾನದ ಸುಂದರ ವಾತಾವರಣದಲ್ಲಿ ಸೆರೆ ಹಿಡಿಯಲ್ಪಟ್ಟಿರೋ ಈ ಹಾಡಿನ ಬಗ್ಗೆ ಅವರಲ್ಲೊಂದು ಮೋಹವಿದೆ. ಈ ಚಿತ್ರ ತನ್ನ ಸಿನಿಮಾ ಯಾನಕ್ಕೊಂದು ಹೊಸಾ ಆಯಾಮ ತಂದುಕೊಡುತ್ತದೆ ಎಂಬ ಭರವಸೆ ಹೊಂದಿರೋ ಲೇಖಾ ಚಂದ್ರರ ಪ್ರಕಾರ ಒಂದು ಅಚ್ಚುಕಟ್ಟಾದ ಚಿತ್ರದಲ್ಲಿ ಏನೆಲ್ಲ ಇರಬೇಕೋ ಅದೆಲ್ಲವನ್ನೂ ಯಾರಿಗೆ ಯಾರುಂಟು ಚಿತ್ರ ಒಳಗೊಂಡಿದೆ.
ಹೀಗೆ ಈಗ ಯಾರಿಗೆ ಯಾರುಂಟು ಚಿತ್ರದಲ್ಲಿ ನಾಯಕಿಯಾಗಿರೋ ಲೇಖಾ ಚಂದ್ರ ಮೂಲತಃ ಹಾಸನದ ಹುಡುಗಿ. ಹಾಸನ ನಗರದ ವಿಜಯನಗರದಲ್ಲಿಯೇ ಹುಟ್ಟಿ ಬೆಳೆದ ಲೇಖಾ ವಿದ್ಯಾಭ್ಯಾಸ ಪೂರೈಸಿಕೊಂಡಿದ್ದೆಲ್ಲ ಅಲ್ಲಿಯೇ. ಇಲ್ಲಿನ ಎವಿಕೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿರೋ ಅವರಿಗೆ ನಟಿಯಾಗೋ ಕನಸೇನೂ ಇರಲಿಲ್ಲ. ಆದರೆ ಅವರೊಳಗೂ ಬಣ್ಣದ ಕನಸು ತುಂಬಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವಂತೆ ಪ್ರೇರೇಪಿಸಿದ್ದ ಅಕ್ಕ ಸೌಮ್ಯಾ ಚಂದ್ರ!
ಲೇಖಾರ ಅಕ್ಕ ಸೌಮ್ಯಾಗೆ ಆರಂಭದಿಂದಲೂ ಚಿತ್ರರಂಗದ ಮೇಲೆ ಮೋಹ. ಆ ಜಗತ್ತಿನದ್ದೇ ಕನಸು. ಆದರೆ ಸೌಮ್ಯಾ ತನ್ನ ಕನಸನ್ನೆಲ್ಲ ತಂಗಿಯ ಮೂಲಕ ನನಸು ಮಾಡಿಕೊಳ್ಳುವ ಇರಾದೆ ಹೊಂದಿದ್ದರು. ಲೇಖಾರೊಳಗೆ ನಟಿಯಾಗೋ ಕನಸು ಬಿತ್ತಿದ್ದಲ್ಲದೇ ಅದರತ್ತ ಪ್ರಯತ್ನ ಪಡುವಂತೆಯೂ ಸೌಮ್ಯಾ ಪ್ರೇರೇಪಿಸಿದ್ದರು. ಹೀಗೆ ಬಣ್ಣದ ಕನಸು ತುಂಬಿಕೊಂಡ ಲೇಖಾ ಚಂದ್ರ ಅಚ್ಚರಿದಾಯಕವಾಗಿ ಮೊದಲ ಪ್ರಯತ್ನದಲ್ಲಿಯೇ ನಾಯಕಿಯಾಗಿ ಹೊರ ಹೊಮ್ಮಿದ್ದರು. ಅವನು ಹೇಮಂತ್ ಅವಳು ಸೇವಂತಿ ಚಿತ್ರದ ನಾಯಕಿಯಾಗಿಯೂ ಆಯ್ಕೆಯಾಗಿದ್ದರು. ಯಾವುದೇ ನಟನಾ ತರಬೇತಿ ಪಡೆಯದಿದ್ದರೂ ನಂಬಿಕೆಯಿಟ್ಟು ನಾಯಕಿಯಾಗೋ ಅವಕಾಶ ಕಲ್ಪಿಸಿದವರು ಸುಧಾಕರ ಬನ್ನಂಜೆ.
ಮೊದಲ ಚಿತ್ರದಲ್ಲಿಯೇ ನಟನೆಯಲ್ಲಿ ಗಮನ ಸೆಳೆದ ಲೇಖಾ ಆ ಬಳಿಕ ಕೃಷ್ಣ ರುಕ್ಕು ಚಿತ್ರದಲ್ಲಿಯೂ ನಾಯಕಿಯಾಗಿದ್ದರು. ಆದರೆ ಅವರ ವೃತ್ತಿ ಜೀವನಕ್ಕೆ ಅನಿರೀಕ್ಷಿತ ಮೈಲೇಜು ಕೊಟ್ಟಿದ್ದು ವಜ್ರಕಾಯ ಚಿತ್ರ. ಇದರಲ್ಲಿ ಲೇಖಾ ಚಂದ್ರ ಶಿವಣ್ಣನ ತಂಗಿಯ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು. ಅದಾದ ನಂತರ ಸಾಲು ಸಾಲು ಅವಕಾಶ ಬಂದಿದ್ದು ನಿಜ. ಆದರೆ ಒಂದು ಕಥೆ ಬಂದರೆ ಅದರಲ್ಲಿ ಪಾತ್ರವಾಗೋದೇ ಪುಣ್ಯ ಅನ್ನಿಸದೇ ನಟಿಸಬಾರದೆಂಬ ನಿಲುವಿನ ಲೇಖಾ ಕಥೆಯ ಆಯ್ಕೆಯಲ್ಲಿ ಕಟ್ಟು ನಿಟ್ಟಾದರು. ಈ ನಡುವೆ ಕಿರೀಟ ಚಿತ್ರದಲ್ಲಿ ನಟಿಸಿರೋ ಅವರು ಫೈಟರ್ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರಿಗೂ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರವೂ ಬಿಡುಗಡೆಯ ಹೊಸ್ತಿಲಲ್ಲಿದೆ.
#
No Comment! Be the first one.