ಹಂಪಿಯ ಪ್ರವಾಸಕ್ಕೆಂದು ಶಾಲೆಯ ಶಿಕ್ಷಕರ ಜತೆಗೆ ನಾಲ್ಕು ಜನ ವಿದ್ಯಾರ್ಥಿಗಳು ಹೊರಡುತ್ತಾರೆ. ಹಂಪಿಯ ಕುರಿತಾದ ಕೌತುಕ ಸಂಗತಿಗಳನ್ನು ಮಕ್ಕಳಿಗೆ ತಿಳಿಸಿದ ಶಿಕ್ಷಕರು ಅವರನ್ನು ಕುತೂಹಲಭರಿತರಾಗುವಂತೆ ಮಾಡುತ್ತಾರೆ. ಮುಂದೆ ಹಂಪಿಯ ಪ್ರವಾಸದ ಸಂದರ್ಭದಲ್ಲಿ ಅವರಿಗೆ ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದ ಸೈನಿಕನ ಪರಿಚಯವಾಗುತ್ತದೆ. ಆತನು ಮಕ್ಕಳಿಗೆ ವಿಜಯನಗರ ಸಾಮ್ರಾಜ್ಯದ ಕುರಿತಾಗಿ ತನಗೆ ತಿಳಿದ ವಿಚಾರಗಳನ್ನು ಹಂಚಿಕೊಳ್ಳುತ್ತಾನೆ. ಮಕ್ಕಳು ಶಿಕ್ಷಕರು ಹೇಳಿದ ವಿಚಾರಗಳು, ಸೈನಿಕ ಹೇಳಿದ ಸಂಗತಿಗಳು, ಹಂಪಿಯಲ್ಲಿರುವ ವಾಸ್ತವದ ಪರಿಸ್ಥಿತಿಯನ್ನು ತಾಳೆ ಹಾಕಿನೋಡುತ್ತಾರೆ. ಅಲ್ಲದೇ ಭವಿಷ್ಯದಲ್ಲಿ ತಮ್ಮ ಹಾಗೂ ರಾಷ್ಟ್ರದ ಅಭ್ಯುದಯಕ್ಕಾಗಿ, ಪರಕೀಯರ ಆಕ್ರಮಣದಿಂದ ರಾಷ್ಟ್ರ ರಕ್ಷಣೆಗಾಗಿ ಪಣ ತೊಡಬೇಕೆಂದು ನಿರ್ಧರಿಸಿ ಪ್ರಮಾಣ ಮಾಡುತ್ತಾರೆ. ಇದು ವಿಜಯ ಧ್ವಜ ಚಿತ್ರದ ಕಥಾ ಸಾರಾಂಶ. ಇಂಥ ದೇಶಭಕ್ತಿ, ನಾಡನ್ನು ಉಳಿಸಿಕೊಳ್ಳುವ ಬಗೆಗಿನ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ.
ವಿಜಯ ಧ್ವಜ ಮಕ್ಕಳ ಸಿನಿಮಾವಾಗಿದ್ದು, ನಮ್ಮ ಭವ್ಯ ಭಾರತದ ಇತಿಹಾಸವನ್ನು ಸಂದೇಶಾತ್ಮಕವಾಗಿ ತಿಳಿಸುವ ಪ್ರಯತ್ನವನ್ನು ನಿರ್ದೇಶಕರಾದ ಶ್ರೀನಾಥ್ ವಸಿಷ್ಠ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಶಾಲಾ ವಿದ್ಯಾರ್ಥಿಗಳಾಗಿ ತನ್ಮಯಿ ಎಸ್. ವಸಿಷ್ಠ ಸೈನಿಕ ವಿಜಯ ಭಾಸ್ಕರ್, ಮಾಸ್ಟರ್ ಲೋಕೇಶ್, ಮಾಸ್ಟರ್ ಭುವನ್, ಮಾಸ್ಟರ್ ರಕ್ಷನ್ ಅಭಿನಯಿಸಿದ್ದು, ಉಪಾಧ್ಯಾಯರಾಗಿ ನಾಗೇಶ್ ಯಾದವ್, ಕಾರ್ಗಿಲ್ ಸೈನಿಕನಾಗಿ ಕ್ಯಾಪ್ಟನ್ ನವೀನ್ ನಾಗಪ್ಪ ಅಭಿನಯಿಸಿದ್ದಾರೆ. ಜೆ.ಎಂ. ಪ್ರಹ್ಲಾದ್ ಕಥೆ, ಚಿತ್ರಕತೆ, ಪವನ್ ಕುಮಾರ್ ಛಾಯಾಗ್ರಹಣ, ಪ್ರವೀಣ್ ಡಿ ರಾವ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ವಿಜಯಧ್ವಜವನ್ನು ದರ್ಶನ್ ನಿರ್ಮಾಣ ಮಾಡಿದ್ದಾರೆ.
No Comment! Be the first one.