ಬಹುಶಃ ಕನ್ನಡ ಕಿರುತೆರೆ ಲೋಕದಲ್ಲಿ ಪರಿಪೂರ್ಣವಾಗಿ ಜನಮೆಚ್ಚುಗೆಗೆ ಪಾತ್ರವಾಗಿದ್ದ, ಪ್ರತಿಯೊಬ್ಬರೂ ಪ್ರೀತಿಯಿಂದ ಅಪ್ಪಿಕೊಂಡಿದ್ದ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್. ಆರಂಭದ ಎರಡು ಸೀಜನ್ನುಗಳು ನಿಜಕ್ಕೂ ಕನ್ನಡಿಗರ ಹೆಮ್ಮೆಯ ಪ್ರೋಗ್ರಾಮಿನಂತೆ ಮೂಡಿಬಂದಿದ್ದು ನಿಜ. ಡಾ. ರಾಜ್ ಕುಮಾರ್, ಉದಯ್ ಕುಮಾರ್, ನರಸಿಂಹರಾಜು, ಬಾಲಣ್ಣ, ವಿಷ್ಣುವರ್ಧನ್ ರಂಥಾ ಮೇರು ನಟರೇನಾದರೂ ಬದುಕಿದ್ದಿದ್ದರೆ ಅವರು ಬಂದು ಕೂರಲೇಬೇಕಾದ ಕುರ್ಚಿಯಂತೆ ಕಂಗೊಳಿಸುತ್ತಿದ್ದ ಸೀಟಲ್ಲೀಗ ಕಾಮಿಡಿ ಪೀಸುಗಳೆಲ್ಲಾ ಬಂದು ಕೂರುವಂತಾಗಿರುವುದು ದುರಂತ!
ಯಾವಾಗ ಮೂರನೇ ಸೀಜನ್ನಿನಲ್ಲಿ ರಕ್ಷಿತ್ ಶೆಟ್ಟಿ, ರಾಧಿಕಾ, ರಕ್ಷಿತಾ, ಪ್ರೇಮ್ ಥರದ ಗಿಮಿಕ್ ಪಾರ್ಟಿಗಳೆಲ್ಲಾ ಬಂದು ಕೆಂಪು ಸೀಟಿನಲ್ಲಿ ಕುಂತರೋ ಆವತ್ತೇ ಅದರ ಮೌಲ್ಯಗಳೆಲ್ಲಾ ಮಣ್ಣುಪಾಲಾಯಿತು. ಅನುಭವೀ ನಟ, ನಿಜವಾದ ಸಾಧಕ ರಮೇಶ್ ಅರವಿಂದ್ ಚಿಳ್ಳೆಪಿಳ್ಳೆಗಳನ್ನೆಲ್ಲಾ ಕೂರಿಸಿಕೊಂಡು ಸಂದರ್ಶಿಸುವ ಸಂದಿಗ್ಧ ಎದುರಾಗಿತ್ತು. ಈಗ ನಾಲ್ಕನೇ ಸೀಜನ್ನಂತೂ ಅಕ್ಷರಶಃ ನಗೆಪಾಟಲಿಗೀಡಾಗಿದೆ. ಶ್ರೀಮುರಳಿಯ ನಾಟಕೀಯ ಎಪಿಸೋಡನ್ನು ಕಂಡು ಜನ ನಗಬಾರದ ಜಾಗದಲ್ಲಿ ನಕ್ಕಿದ್ದಾರೆ. ಈಗ ನಟ ಶರಣ್ ಬಂದು ಕೂರುತ್ತಾರೆನ್ನುವ ವಿಚಾರವನ್ನು ಜನ ಅರಗಿಸಿಕೊಳ್ಳಲೂ ಆಗುತ್ತಿಲ್ಲ!
ಶರಣನ ಸಾಧನೆಯೇನು?
ಹಾಸ್ಯ ನಟನಾಗಿ ಎಂಟ್ರಿ ಕೊಟ್ಟು ಇವತ್ತಿಗೆ ಕಾಮಿಡಿ ಹೀರೋ ಆಗಿರೋದು ಶರಣ್ ಮಟ್ಟಿಗೆ ಸಾಧನೆಯಿರಬಹುದು. ಆದರೆ ಈತನ ಪೂರ್ವಾಪರವನ್ನೊಮ್ಮೆ ತಿರುವಿಹಾಕಿದರೆ ಭಯಾನಕ ಅಂಶಗಳೆಲ್ಲಾ ಬೆಳಕಿಗೆ ಬರುತ್ತವೆ.
ಅವಳು ಶಬಾನಾ ಭಾನು ಅನ್ನೋ ಹೆಣ್ಣುಮಗಳು. ಶರಣ್ ಅನ್ನೋ ವ್ಯಕ್ತಿ ಏನೇನೂ ಅಲ್ಲದಿದ್ದಾಗ ಕೈ ಹಿಡಿದು ನಡೆಸಿದವಳು. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಆಕೆಯೊಂದಿಗೀತ ಸಂಸಾರವನ್ನೇ ಶುರುವಿಟ್ಟುಕೊಂಡಿದ್ದ. ಶಬಾನಾ ಶರಣನಿಗೆ ಜೆನ್ ಕಾರೊಂದನ್ನು ಕೊಡಿಸಿದ್ದಳು. ಈತನೇ ತನ್ನ ಗಂಡ ಅಂತಾ ಆಕೆ ನಂಬಿದ್ದಳು. ಯಾವಾಗ ಸಿನಿಮಾದಿಂದ ಸಿನಿಮಾಗೆ ಜನಪ್ರಿಯತೆ, ದುಡ್ಡು ಸೇರುತ್ತಾ ಹೋಯಿತೋ ಶರಣ್ ಶಬಾನಾಳನ್ನು ಸೈಡ್ ಲೈನ್ ಮಾಡಲು ಶುರು ಮಾಡಿದ. ಎಷ್ಟೋ ಸಾರಿ ಚಿತ್ರೀಕರಣದ ಸ್ಪಾಟಿಗೇ ಹೋಗೀ ಕೊರಳಪಟ್ಟಿ ಹಿಡಿದು ಗೂಸಾ ಕೊಟ್ಟು ಬಂದಿದ್ದಳು. ಯಾವುದಕ್ಕೂ ಶರಣ್ ಕ್ಯಾರೇ ಅನ್ನದಿದ್ದಾಗ ಬೇಸತ್ತ ಆಕೆ ಆತ್ಮಹತ್ಯೆ ಪ್ರಯತ್ನ ಮಾಡಿಬಿಟ್ಟಿದ್ದಳು. ತಕ್ಷಣ ಎಚ್ಚೆತ್ತುಕೊಂಡ ಶರಣ್ ನಿರ್ಮಾಪಕ, ಫೈನಾನ್ಷಿಯರ್ ಕೆ.ಪಿ. ನಂಜುಂಡಿ ಬಳಿ ಹೋಗಿ ಹನ್ನೊಂದು ಲಕ್ಷ ರುಪಾಯಿ ಸಾಲ ತಂದು ಶಬಾನಾಳಿಗೆ ಸೆಟಲ್ಮೆಂಟ್ ಮಾಡಿದ. ಶರಣ್ ಏನೇ ದುಡ್ಡು ಕೊಟ್ಟು ಬಾಯಿ ಮುಚ್ಚಿಸಿದರೂ ಖಿನ್ನತೆಗೆ ಒಳಗಾಗಿದ್ದ ಆಕೆ ತೀರಾ ಇತ್ತೀಚೆಗೆ ಪ್ರಾಣಬಿಟ್ಟಳು ಅನ್ನೋ ಸುದ್ದಿಯಿದೆ.
ಇನ್ನು ನೂರು ಸಿನಿಮಾಗಳಲ್ಲಿ ಕಾಮಿಡಿ ಕ್ಯಾರೆಕ್ಟರ್ ಮಾಡಿಕೊಂಡಿದ್ದ ಶರಣ್ ಹೀರೋ ಆಗುತ್ತಿದ್ದಂತೇ ತಲೆ ನಿಲ್ಲದಂತಾಗಿತ್ತು. ಆರಂಭದ ದಿನಗಳಲ್ಲಿ ತನಗೆ ಸಿನಿಮಾಗಳಲ್ಲಿ ಅವಕಾಶ ಕೊಟ್ಟ ಯಾವ ನಿರ್ದೇಶಕರಿಗೂ ಈವರೆಗೂ ಶರಣ್ ಕಾಲ್ ಶೀಟ್ ಕೊಟ್ಟಿಲ್ಲ. ಬಾಯಿಬಿಟ್ಟು ಕೇಳಿದಾಗಲೂ `ನಾನು ಇನ್ನೂ ಮೂರ್ನಾಲ್ಕು ವರ್ಷ ಬ್ಯುಸಿ ಇದ್ದೀನಿ’ ಅಂತಾ ಹೇಳಿ ಕೈತೊಳೆದುಕೊಂಡ ಉದಾಹರಣೆಗಳಿವೆ. ಎಲ್ಲಿ ಹಳೇ ನಿರ್ದೇಶಕರಿಗೆ ಕಾಲ್ ಶೀಟ್ ಕೊಟ್ಟರೆ ತನ್ನ ಹೊಸಾ ವರಸೆಗಳಿಗೆ ಬ್ರೇಕ್ ಬೀಳುತ್ತದೋ ಅನ್ನೋ ಭಯ ಶರಣ್ಗೆ. ಕಾಮಿಡಿ ಕ್ಯಾರೆಕ್ಟರ್ ಮಾಡುತ್ತಿದ್ದಾಗಲೂ ಅಷ್ಟೇ ಒಂದಿಷ್ಟು ಪೇಮೆಂಟ್ ಪೆಂಡಿಂಗ್ ಇದ್ದರೂ ಸಹ ಡಬ್ಬಿಂಗ್ ಗೆ ಬರದೇ ಆಟಾಡಿಸಿಬಿಡುತ್ತಿದ್ದ. ಒಮ್ಮೆ ಉಮೇಶ್ ಬಣಕಾರ್ ತಮ್ಮ ನಿರ್ಮಾಣದ ಸಿನಿಮಾವೊಂದರ ಡಬ್ಬಿಂಗ್ ಗಾಗಿ ಸ್ಟುಡಿಯೋ ಬುಕ್ ಮಾಡಿಕೊಂಡು ಕಾಯುತ್ತಾ ಕೂತಿದ್ದರೆ ಉಳಿದ ಕಾಸು ಕೊಡೋ ತನಕ ನಾನು ಬರೋದಿಲ್ಲ ಅಂತಾ ಹೆಣಗಾಡಿಸಿಬಿಟ್ಟಿದ್ದ.
ಸಿನಿಮಾರಂಗದಲ್ಲಿ ಶರಣ್ಗೆ `ಡೌ ಮಾಸ್ಟರ್’ ಅನ್ನೋ ಬಿರುದೂ ಇದೆ. ಮಾತಿಗೆ ನಿಂತರೆ ಥೇಟು ರಾಜಕಾರಣಿಗಳಂತೆ `ಮಾಡುವಂಥದ್ದು, ಹೋಗುವಂಥದ್ದು’ ಅಂತಾ ಅಧ್ಯಕ್ಷ ಭಾಷಣ ಶುರುವಿಟ್ಟುಕೊಳ್ಳೋ ಈತ ಕಷ್ಟಕಾಲದಲ್ಲಿ ಸಹಾಯ ಮಾಡಿದ ಯಾರನ್ನೂ ಕೈಹಿಡಿದ ಉದಾಹರಣೆಗಳಿಲ್ಲ.
ಇಂಥಾ ಶರಣ್ನನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತಂದು ಕೂರಿಸುತ್ತಿದ್ದಾರಲ್ಲಾ? ಅಂಬರೀಶ್, ಹಿರಣ್ಣಯ್ಯರಂತೆ ಈತ ತನ್ನ ಹಳೆಯ ಸತ್ಯಗಳನ್ನೆಲ್ಲಾ ಬಿಚ್ಚಿಡುತ್ತಾನಾ? ಪ್ರಕಾಶ್ ರೈ `ಹೌದು ನನಗೆ ಇಬ್ಬರು ಹೆಂಡತೀರು, ಇಷ್ಟು ಜನ ಮಕ್ಕಳು’ ಎಂದು ಓಪನ್ನಾಗಿ ಹೇಳಿಕೊಂಡಿದ್ದರು. ಹಾಗೆ ಶರಣ್ ಕೂಡಾ ಶಬಾನಾಳ ಬಗ್ಗೆ ಮಾತಾಡುತ್ತಾನಾ? `ನನಗೆ ಇಬ್ಬರು ಅಮ್ಮಂದಿರು ನಾನು ಯಾರ ಹೊಟ್ಟೇಲಿ ಹುಟ್ಟಿದೆ ಅಂತಾನೇ ಗೊತ್ತಿಲ್ಲ’ ಅಂತಾ ಬೂಸಿ ಬಿಡುವುದು, ನಾಟಕೀಯ ಮಾತುಗಳನ್ನಾಡೋದು ಶರಣ್ ಮತ್ತಾತನ ಸಹೋದರಿ ಶೃತಿಯ ಹಳೇ ಚಾಳಿ. ಅದನ್ನೇ ಈ ಪ್ರೋಗ್ರಾಮಿನಲ್ಲೂ ಮುಂದುವರೆಸಿರುತ್ತಾರಷ್ಟೇ!
ಎಲ್ಲ ವರ್ಗಗಳ ಸಾಧಕರನ್ನು ತಂದು ಕೂರಿಸಬೇಕಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕೇವಲ ಹಣ, ಅಂತಸ್ತು ಹೊಂದಿರುವ ಶ್ರೀಮಂತ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಾಗಿರೋದು ವಿಪರ್ಯಾಸ. ಶನಿಮಹದೇವಪ್ಪ, ಡಿಂಗ್ರಿ ನಾಗರಾಜ್, ಉಮೇಶ್, ನಿರ್ದೇಶಕ ಎ.ಟಿ. ರಘು, ಶ್ರೀನಿವಾಸ ಮೂರ್ತಿ ಹೀಗೆ ಹಣದ ಕಡೆ ಪ್ರಾಮುಖ್ಯತೆ ಕೊಡದೆ ಕಲೆಯನ್ನೇ ಬದುಕಾಗಿಸಿಕೊಂಡ ಎಷ್ಟು ಜನ ಸಾಧಕರು ಕನ್ನಡ ಚಿತ್ರರಂಗದಲ್ಲಿಲ್ಲ? ಕರ್ನಾಟಕದ ಸಾಕ್ಷೀಪ್ರಜ್ಞೆಯಂತಿರುವ ಹಿರಿಯ ಸ್ವಾತಂತ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ, ದೇವನೂರು ಮಹಾದೇವ, ಸಾಲುಮರದ ತಿಮ್ಮಕ್ಕ, ಸಾರಾ ಅಬೂಬಕ್ಕರ್ರಂಥಾ ಚಿಂತಕರು, ಬರಹಗಾರರು, ಹೋರಾಟಗಾರರಿಲ್ಲವೆ?
ದುಡ್ಡು ಮಾಡಿರುವ ಪ್ರತಿಭಾವಂತರು, ಜನಪ್ರಿಯ ವ್ಯಕ್ತಿಗಳು ಮಾತ್ರ ಸಾಧಕರೆನ್ನುವುದು ಈ ಕಾರ್ಯಕ್ರಮದ ಮಾನದಂಡವಾದರೆ ಇಲ್ಲಿಗೇ ಪ್ರೋಗ್ರಾಮಿಗೊಂದು ಪೂರ್ಣವಿರಾಮ ಹಾಕೋದೊಳ್ಳೇದು. ಜೀ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ತಾವು ಹೋದಲ್ಲೆಲ್ಲಾ ಮಲಗಿದ್ದ ಚಾನೆಲ್ಲುಗಳನ್ನು ಎಬ್ಬಿಸಿ ಕೂರಿಸಿದವರು. ವೀಕೆಂಡ್ ವಿತ್ ರಮೇಶ್ ಮೊದಲೆರಡು ಸೀಜನ್ ಸೇರಿದಂತೆ ಡ್ರಾಮಾ ಜೂನಿಯರ್ಸ್ ಥರದ ಅದ್ಭುತ ಕಾರ್ಯಕ್ರಮಗಳನ್ನು ಜನರೆದುರು ತಂದು ಗೆದ್ದವರು. ಈಗ ತಮ್ಮದೇ ಕಲಾಕೃತಿಯನ್ನು ತಾವೇ ಯಾಕೆ ಮುಕ್ಕು ಮಾಡಹೊರಟಿದ್ದಾರೋ ಗೊತ್ತಿಲ್ಲ!?
No Comment! Be the first one.