ಕಳೆದ ವಾರ ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ ನೆರವೇರಿತಲ್ಲಾ? ಅದರ ಪ್ರಯುಕ್ತ ಅಭಿನಯ ಚತುರ ಸತೀಶ್ ನೀನಾಸಂ ಅಪರೂಪದ ಹಾಡೊಂದನ್ನು ಹಾಡಿದ್ದರು. ಸದ್ಯ ಅದು ವೈರಲ್ ಆಗಿದೆ. ಮಂಡ್ಯದ ಗಂಡು ಕಲಾ ಎಂದು ಶುರುವಾಗುವ ಈ ಗೀತೆ, ಪಕ್ಕಾ ಟಿಪಿಕಲ್ ಮಂಡ್ಯ ಭಾಷೆಯಲ್ಲಿ ಮೂಡಿಬಂದಿದ್ದು, ರೆಬಲ್ ಅಭಿಮಾನಿಗಳ ಪಾಲಿಗೆ ಹಬ್ಬದ ವಾತಾವರಣ ಸೃಷ್ಟಿ ಮಾಡಿದೆ. ಭರ್ಜರಿ ಖ್ಯಾತಿಯ ಚೇತನ್ ಈ ಹಾಡಿನ ಹಿಂದಿರುವ ಲೇಖನ ಶಕ್ತಿಯಾಗಿದ್ದರೆ, ಸಂತೋಷ್ ವೆಂಕಿ ಸಂಗೀತ ಇಡೀ ಹಾಡಿಗೆ ಇನ್ನಷ್ಟು ಶೋಭೆ ತಂದಿದೆ. ವಿನಾಯಕರಾಮ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿರುವ ಈ ಹಾಡಿನ ಗ್ರಾಫಿಕ್ಸ್ ಮತ್ತು ವಿ ಎಫ್ ಎಕ್ಸ್ ಮಾಡಿರುವುದು ದರ್ಶನ್ ದೊಡ್ಮನಿ. ಈಗಾಗಲೇ ಹಾಡು ಎ2 ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ತ್ರಿವಿಕ್ರಮ ಸಾಫಲ್ಯ ಅಂಬರೀಶ್ ಅಭಿಮಾನಕ್ಕಾಗಿ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ.
ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಈ ಹಾಡನ್ನು ವೀಕ್ಷಿಸಿ, ಪ್ರಶಂಸೆಯ ಮಾತುಗಳನ್ನಾಡಿದ್ದು, ಅಂಬರೀಶ್ ಅವರು ಹೇಗೆ ಇದ್ದರೋ ಹಾಗೆಯೇ ಹಾಡು ಮೂಡಿ ಬಂದಿದೆ ಎಂದಿದ್ದಾರೆ. ರಾಕ್ ಲೈನ್ ವೆಂಕಟೇಶ್ ಕೂಡ ಈ ಹಾಡಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಅಂಬರೀಶ್ ಅವರ ಹಿಟ್ ಡೈಲಾಗ್ ಗಳು ಹಾಡಿನ ಮಧ್ಯೆ ಬಂದು ಹೋಗುವುದು ಹಾಡಿನ ಕ್ವಾಲಿಟಿಯನ್ನು ಇನ್ನಷ್ಟು ಹೆಚ್ಚಿಸಿದೆ. ಎಲ್ಲಕ್ಕೂ ಮಿಗಿಲಾಗಿ ಈ ಹಾಡು ಹಾಡಿರುವ ಸತೀಶ್, ಅಂಬರೀಶ್ ಅವರ ಮೇಲಿನ ಅಪಾರ ಅಭಿಯಾನಕ್ಕೆ ಈ ಹಾಡನ್ನು ಅರ್ಪಿಸಿದ್ದಾರೆ. ಹುಟ್ಟುಹಬ್ಬದ ಸವಿನೆನಪಿಗಾಗಿ ಹೀಗೊಂದು ಅಮರ ನಮನ ಸಲ್ಲಿಸಿದ್ದಾರೆ!