ಇಷ್ಟು ವರ್ಷಗಳಲ್ಲಿ ಅದೆಷ್ಟು ಜನ ಬೆನ್ನುಬಿದ್ದಿದ್ದರೋ? ಕಡೆಗೂ ಅದು ದಕ್ಕಬೇದಾದವರಿಗೇ ದಕ್ಕಿದೆ…!
ಹೌದು, ಪತ್ರಕರ್ತ, ಬರಹಗಾರ ರವಿಬೆಳಗೆರೆ ಅವರ ಕೃತಿಯನ್ನು ಸಿನಿಮಾಗೆ ತರಲು ಸಾಕಷ್ಟು ಜನ ಪ್ರಯತ್ನಿಸಿದ್ದರು. ಇನ್ನೇನು ಈ ಪುಸ್ತಕದ ರೈಟ್ಸು ಸಿಕ್ಕೇಬಿಡ್ತು ಅಂತಾ ಹೇಳಿಕೊಂಡು ಓಡಾಡಿದ ಡೈರೆಕ್ಟರುಗಳೂ ಇದ್ದಾರೆ. ಆದರೆ ಫೈನಲಿ ಈ ಕೃತಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲು ಗುಳ್ಟೂ ಚಿತ್ರದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಅವರಿಗೆ ಅನುಮತಿ ಸಿಕ್ಕಿದೆ.
ಅತ್ಯಂತ ಸಂತೋಷದ ವಿಚಾರವೆಂದರೆ ಒಮರ್ಟಾದ ನಾಯಕನ ಪಾತ್ರದಲ್ಲಿ ಅನೀಶ್ ತೇಜೇಶ್ವರ್ ನಟಿಸಲಿದ್ದಾರೆ. ಅನೀಶ್ ಕನ್ನಡ ಚಿತ್ರರಂಗ ಕಂಡ ಅಪ್ಪಟ ನಟ. ಕಮರ್ಷಿಯಲ್, ಆ್ಯಕ್ಷನ್ ಹೀರೋಗೆ ಬೇಕಿರುವ ಎಲ್ಲ ಅರ್ಹತೆ ಹೊಂದಿರುವವರು. ಈ ಹಿಂದಿನ ಸಿನಿಮಾಗಳಲ್ಲಿ ಋಜುವಾತೂ ಆಗಿದೆ. `ವಾಸು ನಾನ್ ಪಕ್ಕಾ ಕಮರ್ಷಿಯಲ್’ ಸಿನಿಮಾವನ್ನು ನೋಡಿದ ಯಾರಿಗೇ ಆದರೂ ಅನೀಶ್ ಮೇಲೆ ಅಭಿಮಾನ ಮೂಡದೇ ಇರಲು ಸಾಧ್ಯವಿಲ್ಲ.
ಇಂಥಾ ಅನೀಶ್ ಒಮರ್ಟಾದ ಹೀರೋ ಆಗುವ ಅವಕಾಶ ಒದಗಿಬಂದಿರುವುದು ತಯಾರಾಗಲಿರುವ ಸಿನಿಮಾಗೂ ಕಳೆಕಟ್ಟಿದಂತಾಗಿದೆ. ಜನಾರ್ಧನ ಚಿಕ್ಕಣ್ಣರಂಥಾ ಸಿನಿಮಾದ ಬಗ್ಗೆ ಕರಾರುವಕ್ಕಾದ ದೃಷ್ಟಿಕೋನವಿರುವ ನಿರ್ದೇಶಕ, ಅನೀಶ್ ತೇಜೇಶ್ವರ್ ಥರದ ಪರ್ಫೆಕ್ಟ್ ಹೀರೋ ಜೊತೆಗೆ ಗುಲ್ಟೂ ಚಿತ್ರವನ್ನು ನಿರ್ಮಿಸಿದ್ದ ಪ್ರಶಾಂತ್ ರೆಡ್ಡಿ ಅವರ ನಿರ್ಮಾಣ. ಹೀಗೆ ಬೆಳಗೆರೆಯವರ ಒಮರ್ಟಾವನ್ನು ಸಮರ್ಥವಾಗಿ ತೆರೆಗೆ ತಂದು ನಿಲ್ಲಿಸಬಹುದಾದ ಶಕ್ತಿಗಳೆಲ್ಲಾ ಒಂದಾಗಿವೆ. ಅಂದಹಾಗೆ ಸಿನಿಮಾದ ಹೆಸರು ಬೇರೆಯಾಗಲಿದ್ದು, ಅದಿನ್ನೂ ಅಂತಿಮವಾಗಿಲ್ಲ. ಆದಷ್ಟು ಬೇಗ ಈ ಚಿತ್ರ ನಿರ್ಮಾಣ ಕಾರ್ಯ ಮುಗಿಸಿ ಕನ್ನಡದ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಲಿ…
No Comment! Be the first one.