ಸತತ ಪರಿಶ್ರಮ, ಕೆಲಸದ ಮೇಲಿನ ಪ್ರೀತಿ ಇದ್ದರೆ ಗೆಲುವು ಅನ್ನೊದು ಕಾಲು ಮುರ್ಕೊಂಡು ಕೂತಿರತ್ತೆ. ಅದಕ್ಕೆ ತಾಜಾ ಉದಾಹರಣೆ ನಾಲ್ಕು ಸಿನಿಮಾ ಕೊಟ್ಟು, ಐದನೇ ಸಿನಿಮಾ ಕಿಸ್ ಕೊಟ್ಟಿರುವ ಎ. ಪಿ. ಅರ್ಜುನ್ ಅಲಿಯಾಸ್ ಅಂಬಾರಿ ಅರ್ಜುನ್ ಲೈಫ್ ಜರ್ನಿ ಇಲ್ಲಿದೆ.
ಬಾಲ್ಯದಲ್ಲಿ ಮನೆಯಲ್ಲಿ ಟೀವಿ ಇಲ್ಲದ ಕಾರಣಕ್ಕೆ ಹೊರಗೆ ಹೋಗಿ ಸಿನಿಮಾಗಳನ್ನು ನೋಡಿ ತಾಯಿಯಿಂದ ಬೈಸಿಕೊಂಡು, ರಾತ್ರಿ ಎಲ್ಲಾ ಹಳ್ಳೀಲಿ ಪಿಕ್ಚರ್ ನೋಡಿ ಹಗಲಲ್ಲಿ ಮಲಗೊ ಅಭ್ಯಾಸ ಇದ್ದ ನನಗೆ, ಈಗ ಹಗಲು ರಾತ್ರಿ ಸಿನಿಮಾಕ್ಕೆ ಕೆಲಸ ಮಾಡೋದು ತುಂಬಾ ಖುಷಿ ಕೊಡ್ತಾ ಇದೆ ಅಂತಾರೆ. ಎಂಎ ಓದಿ ೨೫೦೦ ಸಂಬಳ ತಗೊಳೊ ಬದಲು ಬೇರೇ ಏನಾದ್ರು ಕಲಿಯೋಣ ಅಂತ ಬೆಂಗಳೂರು ಬಸ್ ಹತ್ತಿದ ಅರ್ಜುನ್ ಅವ್ರಿಗೆ ನಾನು ಸತತ ಸಿನಿಮಾ ಮಾಡ್ತೀನಿ ಅನ್ನೋ ಕನಸು ಕೂಡ ಇರಲಿಲ್ಲ.
ಪ್ರತಿ ಕೃತಿಯಲ್ಲು ಪ್ರೀತಿ ಇರತ್ತೆ ಅದನ್ನ ಪ್ರೀತಿ ಇಂದ ತೋರಿಸೋದಷ್ಟೆ ನಾನು ಮಾಡೊ ಕೆಲಸ ಎನ್ನುವ ಅರ್ಜುನ್ ಈಗ ಕಿಸ್ ಕೊಟ್ಟಿದ್ದಾರೆ. ೨ ಹೊಸ ಮುಖಗಳನ್ನ ಪರಿಚಯಿಸ್ತಾ ಇರೋ ಕಿಸ್ ತುಂಟ ತುಟಿಗಳ ಆಟೋಗ್ರಾಫ್ ಅಂತೆ . ಯುವಕರನ್ನ ಸೆಳಿಯೋದೆ ನನ್ನ ಚಿತ್ರಕಥೆಯ ಮೂಲ ಉದ್ದೇಶ ಅನ್ನೊದು ಇವರ ಸಿನಿಮಾದ ಗೆಲುವಿಗೆ ಕಾರಣ ಅಂತಾರೆ. ಎಲ್ಲಿವರೆಗೆ ನನ್ ಜೊತೆ ನನ್ನ ಗಾಡ್ ಮದರ್ (ಸರಸ್ವತಿ) ಇರ್ತಾಳೊ ಅಲ್ಲಿ ತನಕ ನಾನು ಸಿನಿಮಾ ಮಾಡ್ತಾನೆ ಇರ್ತೀನಿ. ನನಗೆ ಗಾಡ್ ಫಾದರ್ ಇಲ್ಲ. ನನ್ ಅಣ್ಣನಂತೆ ನನ್ನ ಪ್ರತಿ ಕೆಲಸದಲ್ಲು ಜೊತೆ ನಿಲ್ತಾ ಇದ್ದೋರು ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ. ಈಗ ಅವರೆ ನನ್ನ ಕಿಸ್ ಸಿನಿಮಾಗೂ ಸಂಗೀತ ನೀಡಿದ್ದಾರೆ. ಅಂಬಾರಿ ಅಂತ ಹಿಟ್ ಕೊಟ್ಟ ಮೇಲೆ ಅದ್ದೂರಿ ಸೂಪರ್ ಹಿಟ್ ಆಯ್ತು. ರಾಟೆ, ಐರಾವತ ಈಗ ಕಿಸ್ ಕೂಡಾ ಮುಗಿದಿದೆ. ಮುಂದೆ ರಾಯಲ್ ಇನ್ ಫೀಲ್ಡ್ ಶುರು ಮಾಡ್ತೀನಿ. ಆದರೂ ನಾನು ಅಂಬಾರಿ ಅರ್ಜುನ್ ಆಗೆ ಉಳಿಯೋಕೆ ಖುಷಿ ಪಡ್ತೀನಿ. ಕೊನೆವರೆಗು ನಾನು ಅಂಬಾರಿ ಅರ್ಜುನ್ ಆಗೆ ಉಳಿತೀನಿ ಅನ್ನೊದು ಅರ್ಜುನ್ ಉವಾಚ. ತಮಿಳು ತೆಲುಗು ಹಿಂದಿ ಜೊತೆ ಫೈಟ್ ಮಾಡೊ ಕನ್ನಡ ಸಿನಿಮಾ ಉಳಿಬೇಕಾದ್ರೆ ಕಷ್ಟ ಪಟ್ಟು ಸಿನಿಮಾ ಮಾಡ್ಲೆ ಬೇಕು, ಅದನ್ನೆ ನಾನು ಮಾಡೋದು.
ನಂದು ಮಂಡ್ಯ ಹತ್ರ ಕೆರಗೋಡು ಸರ್, ಅಪ್ಪ ಪುಟ್ಟಸ್ವಾಮಿಗೌಡ, ತಾಯಿ ವಸಂತ ಅಂತ. ನಾನು ನನ್ನ ತಮ್ಮ ವಸಂತ ಅಂತ ಇಬ್ರೇ ಮಕ್ಕಳು. ಅಪ್ ಟು ಎಂ.ಎವರೆಗೆ ನಾನು ಓದಿದ್ದು ಕನ್ನಡ ಮೀಡಿಯಂನಲ್ಲಿ. ಅದೇನೋ ಮೊದಲಿಂದ್ಲೂ ಕನ್ನಡ-ಸಾಹಿತ್ಯ ಅಂದ್ರೆ ಪ್ರೀತಿ ನನಗೆ. ಅದಕ್ಕೇ ಬಿಎನಲ್ಲೂ ಕನ್ನಡವನ್ನೇ ಆಪ್ಷನಲ್ ಆಗಿ ತಗೊಂಡು ಫಸ್ಟ್ಕ್ಲಾಸ್ನಲ್ಲಿ ಪಾಸ್ ಆಗಿದ್ದೆ. ಎಂ.ಎ ಕನ್ನಡಕ್ಕೆ ಸೇರಿದಾಗ ನಮಗೆ ಪಾಠ ಮಾಡೋಕೆ ಬರ್ತಿದ್ದ ಮೇಷ್ಟರುಗಳಿಗೇ ಎರಡೂವರೆ ಸಾವಿರ ಸಂಬಳ. ಬೇಜಾರಾಗೋಯ್ತು ಸಾರ್. ನಾಳೆ ನಾವೂ ಎಂ.ಎ ಮುಗಿಸಿಕೊಂಡು ಇದೇ ಎರಡೂವರೆ ಸಾವಿರಕ್ಕೆ ದುಡಿಬೇಕಾ ಅಂತ ಎಂ.ಎ ಅರ್ಧಕ್ಕೆ ಬಿಟ್ಟೆ. ಆವಾಗ ಸಿನಿಮಾದಲ್ಲಿ ಏನಾದ್ರೂ ಮಾಡೋಕಾಗತ್ತ ಅನ್ನೋ ಅರೆಬೆಂದ ಕನಸಷ್ಟೇ ಜೊತೆಗಿಟ್ಟುಕೊಂಡು ಹರಿಕೃಷ್ಣ ಸರ್ ನೆರವಿನಿಂದ ರವಿಚಂದ್ರನ್ ಅವರ ಈಶ್ವರಿ ಸ್ಟುಡಿಯೋದಲ್ಲಿ ಇನ್ಚಾರ್ಜರ್ ಕೆಲಸಕ್ಕೆ ಸೇರಿಕೊಂಡೆ. ಸಿನಿಮಾದವರು ಬರ್ತಾರೆ ಡೈರೆಕ್ಟರ್ಸ್ ಪರಿಚಯ ಆಗ್ತಾರೆ ಅನ್ನೋದೇ ನನ್ನ ನಿರೀಕ್ಷೆ ಆಗಿತ್ತು. ಅಲ್ಲಿಂದ ಡೈರೆಕ್ಟರ್ ಪಿ.ಎನ್. ಸತ್ಯ ಅವರ ಜೊತೆ ಅಸಿಸ್ಟೆಂಟಾಗಿ ಸೇರಿಕೊಂಡು ದರ್ಶನ್ ಅವರ ಶಾಸ್ತ್ರಿ, ತಂಗಿಗಾಗಿ, ಸ್ನೇಹನಾ ಪ್ರೀತಿನಾ ಚಿತ್ರಗಳಲ್ಲಿ ಕೆಲಸ ಮಾಡಿದೆ. ಅದೇ ಟೈಮಲ್ಲೇ ಆ ಚಪ್ಪಲಿ ಹೊಲೆಯೋ ಎಣ್ಣೆತಲೆಯ ಹುಡುಗ ಕಾಲೇಜು ಹುಡುಗಿಯನ್ನ ಬಸ್ ಸ್ಟಾಪಲ್ಲಿ ನೋಡಿದ್ದು. ಅದನ್ನೇ ಕಥೆ ಮಾಡಿ ಅಂಬಾರಿಗೆ ಪ್ರೊಡ್ಯೂಸರ್ಸ್ ಹುಡುಕಿ ಒಬ್ಬರು ಸಿಕ್ಕು, ಆಮೇಲೆ ಮತ್ತೆ ಫಿಲ್ಮ್ ಸಂಕಷ್ಟಕ್ಕೆ ಸಿಲುಕಿದಾಗ ಯೋಗೇಶ್ ತಂದೆ ಸಿದ್ದರಾಜು ಅವರೇ ಚಿತ್ರವನ್ನ ಕೈಗೆತ್ತಿಕೊಂಡು ಚಿತ್ರ ಯಶಸ್ವಿಯಾಗಿದ್ದು ನಿಮಗೆ ಗೊತ್ತೇ ಇದೆ.
ಅದ್ದೂರಿ ಆದ ಮೇಲೆ ಬ್ರೂಸ್ ಲೀ ಅಂತ ಒಂದು ಪ್ರಾಜೆಕ್ಟ್ ರೆಡಿ ಮಾಡ್ಕೊಂಡು ಅದಕ್ಕೋಸ್ಕರ ಒದ್ದಾಡಿಕೊಂಡು ಕಥೆ ರೆಡಿ ಮಾಡಿದ್ವಿ. ಆದರೆ ಅದನ್ನ ಟೇಕಾಫ್ ಮಾಡಲಿಕ್ಕೆ ಆಗಲಿಲ್ಲ. ಇದರ ನಡುವೆ ಅಣ್ಣ ಹರಿಕೃಷ್ಣರಿಗೋಸ್ಕರ ರಾಟೆ ಮಾಡಿಕೊಟ್ಟೆ. ದರ್ಶನ್ ಸರ್ಗಾಗಿ ಐರಾವತ ನಿರ್ದೇಶಿಸಿದೆ. ಈಗ ಕಿಸ್ ಕೊಟ್ಟಿದ್ದೀನಿ. ಇದು ಎಂದಿನಂತೆ ಲವ್ ಸ್ಟೋರಿ. ಹೊಸ ಕತೆ, ಹೊಸ ನಿರೂಪಣೆ, ಹೊಸ ರೀತಿಯ ಚಿತ್ರೀಕರಣ ಕಿಸ್ ವಿಶೇಷತೆ. ನನ್ನ ಹಿಂದಿನ ಚಿತ್ರಗಳಿಗಿಂತ ಕಿಸ್ ಬೇರೆಯದೇ ಆಂಗಲ್ ಚಿತ್ರ ಆಗಿದೆ. ಆ ಚಿತ್ರಗಳ ಕಥೆಯ ಯಾವ ಕುರುಹೂ ಈ ಚಿತ್ರದಲ್ಲಿರೋದಿಲ್ಲ. ಇದು ಬೇರೆಯದೇ ವಿಶೇಷ ಇರೋ ಚಿತ್ರ” ಎಂದು ಮಾತು ಮುಗಿಸಿದ ಅರ್ಜುನ್ ಕಣ್ಣೊಳಗೆ ಮತ್ತೊಂದು ಸೂಪರ್ ಹಿಟ್ ಚಿತ್ರ ಕೊಡುವ ಆತ್ಮವಿಶ್ವಾಸ ಎದ್ದು ಕಾಣುತ್ತಿದೆ.
No Comment! Be the first one.