‘ಆರ್ಟಿಕಲ್ 15’ ಸಿನಿಮಾ ಕುರಿತು ಸಾಮಾಜಿಕ ಕಾರ್ಯಕರ್ತ, ದಲಿತ ಪರ ಹೋರಾಟಗಾರ ಯುವ ಬರಹಗಾರ ವಿಕಾಸ್ ಮೌರ್ಯ ಅವರು ತಮ್ಮ ಅನಿಸಿಕೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಭಾರತದ ವಿದ್ಯಾವಂತ ಜನಸಮೂಹ ಕ್ರಿಕೆಟ್ ವಿಶ್ವಕಪ್ ಸಂಭ್ರಮದಲ್ಲಿ ಮುಳುಗೇಳುತ್ತಿರುವಾಗ, ಭಾರತ ಸಂವಿಧಾನದ ‘ವಿಧಿ 15’ ರ ತಲೆಬರಹ ಹೊತ್ತ ಹಿಂದಿ ಭಾಷೆಯ ಸಿನಿಮಾ ಸದ್ದು ಮಾಡುತ್ತಿದೆ. ಈ ಸಿನಿಮಾ ನೋಡಿದವರೆಲ್ಲರೂ ಬಹುಶಃ ಸಂವಿಧಾನದ ‘ವಿಧಿ 15’ ಏನು ಹೇಳಬಹುದೆಂದು ಹುಡುಕಾಡಬಹುದು. ಆದ್ದರಿಂದ ವಿಧಿ 15 ನ್ನು ಉದ್ಧರಿಸುತ್ತಲೇ ಲೇಖನ ಆರಂಭಿಸುತ್ತೇನೆ. ‘ಯಾವುದೇ ವ್ಯಕ್ತಿಗೂ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮ ಸ್ಥಳಗಳ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ’
2014 ರಲ್ಲಿ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಕಥ್ರಾ ಹಳ್ಳಿಯಲ್ಲಿ ಇಬ್ಬರು ದಲಿತ ಸಹೋದರಿಯರನ್ನು ಗ್ಯಾಂಗ್ರೇಪ್ ಮಾಡಿ ಇಬ್ಬರನ್ನೂ ಮರಕ್ಕೆ ನೇಣು ಹಾಕಿದ್ದ ಘಟನೆಯನ್ನು ಆಧರಿಸಿ ಚಿತ್ರಿಸಿರುವ ಚಿತ್ರ ‘ಆರ್ಟಿಕಲ್ 15’. ನಿರ್ದೇಶಕ ಅನುಭವ್ ಸಿನ್ಹಾರ ಗುಂಡಿಗೆಯನ್ನು, ಕಳೆದ ಎರಡು ದಶಕಗಳಲ್ಲಿ ಭಾರತದ ತಳವರ್ಗಗಳನ್ನು ಬೆಚ್ಚಿಬೀಳಿಸಿದ ಸಾಲು ಸಾಲು ಘಟನೆಗಳನ್ನು ಮುಖ್ಯ ಕಥೆಗೆ ಜೋಡಿಸಿ ಹೆಣೆದಿರುವ ಕುಸುರಿತನವನ್ನು ಮೆಚ್ಚಲೇಬೇಕು.
ಚಿತ್ರಕಥೆಗೆ ಮತ್ತಷ್ಟು ಶಕ್ತಿ ತುಂಬಿರುವುದು ನಿರ್ದೇಶಕ ಮತ್ತು ಗೌರವ್ ಸೋಲಂಕಿ ಜೋಡಿಯ ಸಂಭಾಷಣೆಗಳು. ಒಂದೊಂದು ಸಂಭಾಷಣೆಯೂ ಎದೆಗಿಳಿಯುತ್ತದೆ ಇಲ್ಲವೇ ಎದೆಗಿರಿಯುತ್ತದೆ ಇಲ್ಲವೇ ಎದೆಗೊದೆಯುತ್ತದೆ. ಇದರ ಜೊತೆಗೆ ಹೇಳಿ ಮಾಡಿಸಿದ ನಟರು. ಒಬ್ಬೊಬ್ಬರ ಮುಖದಲ್ಲೂ ನೈಜ ಪಾತ್ರದ ನಟನೆಯನ್ನು ಕಾಣಬಹುದು.
ಇಡೀ ಸಿನಿಮಾ ನಿಮಗೆಲ್ಲೂ ಅತಿರೇಕವೆಂದೆನಿಸುವುದೇ ಇಲ್ಲ. ದಿನಪತ್ರಿಕೆ ಓದುವ ಹವ್ಯಾಸವಿರುವ, ಅದರಲ್ಲೂ ತಳವರ್ಗ ಪ್ರಜ್ಞೆಯುಳ್ಳ ಪ್ರತಿಯೊಬ್ಬರಿಗೂ ಈ ಎರಡು ದಶಕಗಳ ಭಾರತದ ಚಿತ್ರಣ ಕಣ್ಣ ಮುಂದೆ ಬರದೇ ಇರದು. ತಾವು ಮಾಡುವ ಕೂಲಿ ಕೆಲಸಕ್ಕೆ 25 ರೂಪಾಯಿಯಿಂದ 28 ರೂಪಾಯಿಗೆ ಅಂದರೆ 3 ರೂಪಾಯಿಯನ್ನು ಹೆಚ್ಚಿಗೆ ಕೇಳಿ, ಕೊಡದಿದ್ದರೆ ಕೆಲಸಕ್ಕೆ ಬರುವುದಿಲ್ಲವೆಂದು ಪ್ರತಿಭಟಿಸುವ ಮೂವರು ಹೆಣ್ಣು ಮಕ್ಕಳ ವಿರುದ್ಧ ದ್ವೇಷ ಕಾರಿ ಅವರಿಗೆ ಬುದ್ಧಿ ಕಲಿಸಬೇಕೆಂದು ಗುತ್ತಿಗೆದಾರ ನಿರ್ಧರಿಸುತ್ತಾನೆ. ಆ ಅಪ್ರಾಪ್ತ ಹೆಣ್ಣು ಮಕ್ಕಳನ್ನು ತನ್ನದೇ ಶಾಲಾ ಬಸ್ಸಿನಲ್ಲಿ ಮೂರು ದಿನಗಳವರೆಗೆ ಅತ್ಯಾಚಾರವೆಸಗಿ ನಾಲ್ಕನೇ ದಿನದ ಮುಂಜಾನೆ ದೊಡ್ಡ ಮರಕ್ಕೆ ಇಬ್ಬರನ್ನು ನೇಣುಹಾಕಿರುತ್ತಾನೆ.
ಆ ಮೂವರಲ್ಲಿ ಒಂದು ಹುಡುಗಿ ‘ಪೂಜಾ’ ಕಾಣೆಯಾಗಿರುತ್ತಾಳೆ. ಅವಳು ಏನಾದಳು? ಅವಳನ್ನು ಹುಡುಕಿ ಹೊರಡುವುದೇ ಸಿನೆಮಾ ‘ಆರ್ಟಿಕಲ್ 15’. ಆದರೆ ಈ ಪಯಣದಲ್ಲಿ ಸಿನೆಮಾ ಏನೆಲ್ಲಾ ಹೇಳುತ್ತದೆ ಎಂಬುದೇ ವಾಸ್ತವ. ಆ ಅತ್ಯಾಚಾರ ಒಂದು ಗ್ಯಾಂಗ್ ರೇಪ್ ಎಂದು ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಂದ ಮೇಲೆ ಗುತ್ತಿಗೆದಾರನ ಜೊತೆ ಇನ್ನಾರು ಸೇರಿದ್ದಾರೆ ಎಂದು ನೀವು ತಿಳಿಯುವಷ್ಟರಲ್ಲಿ ನಿಮ್ಮೆರಡು ಕೈಗಳು ಹಿಸುಕಿಕೊಳ್ಳುತ್ತಿರುತ್ತವೆ. ಹಲ್ಲು ಸದ್ದು ಮಾಡುತ್ತಿರುತ್ತದೆ. ಅಷ್ಟು ಪರಿಣಾಮಕಾರಿಯಾಗಿ ಆ ಗುಟ್ಟನ್ನು ನಿರ್ದೇಶಕ ರಟ್ಟು ಮಾಡುತ್ತಾನೆ. ಅಷ್ಟೊತ್ತಿಗೆ ನಿರ್ದೇಶಕ ಗೆದ್ದಿರುತ್ತಾನೆ. ಭಾರತ ಸೋತಿರುತ್ತದೆ.
ನಾನಾಗಲೇ ಹೇಳಿದಂತೆ ಈ ಸಿನೆಮಾದ ವಿಶೇಷತೆಯೇ ಸಂಭಾಷಣೆ. ನಾಯಕನ ಪ್ರೇಯಸಿ ‘ಕನಿಷ್ಟ ನಾಯಕನಿಗಾಗಿ ಕಾಯದ ಜನ ಬೇಕಾಗಿದ್ದಾರೆ’ ಎನ್ನುವ ಮಾತು. ಪದೇ ಪದೇ ನಾಯಕನಿಗೆ ಇಡೀ ಪೊಲೀಸ್ ವ್ಯವಸ್ಥೆ ‘ಈ ಕೇಸ್ ಮುಂದುವರೆಸಿ ಸಮಾಜದಲ್ಲಿನ ಸಾಮರಸ್ಯವನ್ನು ಹಾಳು ಮಾಡಬೇಡಿ’ ಎನ್ನುವುದು. ‘ಎಲ್ಲಾ ಸಮಾನ ಆಗಿಬಿಟ್ರೆ ರಾಜ ಯಾರಾಗ್ತಾರೆ ಸಾರ್’ ಎಂಬ ಪ್ರಶ್ನೆಗೆ ‘ರಾಜ ಯಾರಿಗೆ ಬೇಕು?’ ಎಂಬ ಉತ್ತರ. ದಲಿತ ನಾಯಕ ನಿಶಾದ್ ‘ಜನ ಗಣ ಮನ ದಲ್ಲಿನ ಜನರಾಗುವುದು ಯಾವಾಗ’ ಎಂಬ ಪ್ರಶ್ನೆ. ಎಲ್ಲವೂ ಚಿಂತೆಗೀಡುಮಾಡುತ್ತವೆ.
ಮಧ್ಯಂತರದಲ್ಲಿ ನಾಯಕನಾಡುವ ‘ಈ ಕೊಳಕು ಬಹಳ ಪ್ರಾಚೀನ ಕೊಳಕು. ಇದನ್ನು ಹೇಗಾದರೂ ನಾವು ತೊಳೆಯಲೇ ಬೇಕಿದೆ’ಎಂಬ ಮಾತು ಭಾರತದ ಜಾತಿ ಪದ್ಧತಿಯನ್ನು ಹೀಯಾಳಿಸುತ್ತದೆ. ಪೊಲೀಸರ ನಡುವೆ ನಡೆಯುವ ಜಾತಿ ಸಂಭಾಷಣೆಯಂತು ನಿಮ್ಮ ಹೊಟ್ಟೆ ಹುಣ್ಣಾಗಿಸುವ ಜೊತೆಗೆ ಜಾತಿ ಪದ್ಧತಿಯ ಬಗ್ಗೆ ಅಸಹ್ಯ ಹುಟ್ಟಿಸುತ್ತದೆ.
ಈ ನಡುವೆ ಕಥೆಯಲ್ಲಿ ಬ್ರಾಹ್ಮಣ-ದಲಿತ ರಾಜಕೀಯ ಜುಗಲ್ ಬಂಧಿ ಮಹಾರಾಷ್ಟ್ರದ ಶಿವಶಕ್ತಿ-ಭೀಮಶಕ್ತಿಯನ್ನು ನೆನಪಿಸುತ್ತದೆ. ನಮ್ಮ ರಾಜ್ಯದಲ್ಲಿಯೇ ದಲಿತರ ಮನೆಗಳಲ್ಲಿ ರಾಜಕೀಯ ಪಕ್ಷವೊಂದರ ನಾಯಕರು ಭೋಜನ ಮಾಡಲು ಹೋಗಿ ಹೋಟೆಲ್ ಊಟ ತರಿಸಿ ತಿಂದ ಘಟನೆಯನ್ನು ನೆನಪಿಸುವ ಪ್ರಸಂಗವೂ ಬರುತ್ತದೆ. ‘ಹಿಂದೂ ದಲಿತ’ ಎಂದು ಸ್ವಾಮೀಜಿಯೊಬ್ಬ ಬಳಸುವ ಪದ, ದಲಿತ ನಾಯಕ ನಿಶಾದ್ ಪೊಲೀಸ್ ಅಧಿಕಾರಿಗೆ ‘ಸಂವಿಧಾನವನ್ನೇ ನಡೆಯಲು ಬಿಡದವರು ನಿಮ್ಮನ್ನು ಬಿಡುತ್ತಾರಾ ಸಾರ್’ ಎಂಬ ವಾಕ್ಯ ಹೀಗೆ ವಾಸ್ತವದ ಚಿತ್ರಣವನ್ನು ನಿರ್ದೇಶಕ ಹೆಜ್ಜೆ ಹೆಜ್ಜೆಗೂ ನೆನಪಿಸುತ್ತಾರೆ. ಊನಾ ಘಟನೆಯೂ ಸಹ ಬಂದು ಹೋಗುತ್ತದೆ. ಕಡೆಯಲ್ಲಿ ನಿಶಾದ್ ಪಾತ್ರದಿಂದ ರೋಹಿತ್ ವೇಮುಲನ ‘ಸೂಸೈಡ್ ನೋಟ್’ ನೆನಪಿಸಿದಾಗಂತು ಕಣ್ತೇವವಾಗದೇ ಇರದು.
ಸಾಮಾಜಿಕ ಜಾಲತಾಣದಲ್ಲಿ ಸದಾ ಮುಳುಗಿರುವ ನಮ್ಮಂತಹವರಿಗೂ ಒಂದು ಮಾರ್ಮಿಕ ಸಂದೇಶವನ್ನು ನಿರ್ದೇಶಕ ಕೊಡುತ್ತಾರೆ. ಆ ಸನ್ನಿವೇಶ ಹೀಗಿದೆ. ಗ್ಯಾಂಗ್ ರೇಪ್ ಮಾಡಿದ ಅಪರಾಧಿಗಳ ಪರವಿರುವ ಪೊಲೀಸ್ ಪೋಸ್ಟ್ ಮಾರ್ಟಮ್ ವರದಿ ತಯಾರಿಸುವ ವೈದ್ಯೆಯ ಬಳಿ ಬಂದು ವರದಿ ತಿರುಚಲು ಹೇಳುತ್ತಾನೆ. ಆಗ ವೈದ್ಯೆ ಭಾವುಕಳಾಗಿ ನಿರಾಕರಿಸುತ್ತಾಳೆ. ಆಗವಳಿಗೆ ಪೊಲೀಸ್ ಹೇಳುವ ಮಾತು ‘ನೀವು ತುಂಬಾ ಎಮೋಷನಲ್ ಆಗಿದ್ದೀರ ಅನ್ಸತ್ತೆ. ಫೆಸ್ ಬುಕ್ಕಲ್ಲೋ, ಟ್ವಿಟ್ಟರಲ್ಲೋ ಒಂದು ಕವಿತೆ ಗಿವಿತೆ ಬರೆದು ಹಾಕಿ ಮೇಡಂ. ಎಮೋಷನ್ ಕಡಿಮೆ ಆಗತ್ತೆ. ಆಮೇಲೆ ಪೋಸ್ಟ್ ಮಾರ್ಟಂ ರಿಪೋರ್ಟ್ ತಿರುಚಿ ಬರೆಯಿರಿ’.
ಒಟ್ಟಾರೆ ಸಿನೆಮಾ ದಲಿತ ಮತ್ತು ದಲಿತೇತರ ಭಾರತದ ಇಂದಿನ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. ನಾಯಕನ ಬರುವಿಕೆಗೆ ಕಾಯಬಾರದು ಎನ್ನುವ ನಿರ್ದೇಶಕನೇ ನಾಯಕನ ಮೇಲೆ ಅವಲಂಬನೆಯಾಗಿರುವುದು ಸಿನೆಮಾ ಮತ್ತು ಬದುಕು ಎರಡೂ ಬೇರೆ ಬೇರೆ ಎಂದೇ ಹೇಳಿದಂತಿದೆ. ಜೊತೆಗೆ ಬ್ರಾಹ್ಮಣನೇ ನಾಯಕನಾಗಿರಬೇಕು ಎಂಬ ಪೂರ್ವಾಗ್ರಹ ಹೊಂದಿರುವಂತಿದೆ. ಆದರೂ ‘ಆರ್ಟಿಕಲ್ 15’ ಎಲ್ಲರೂ ಖಂಡಿತವಾಗಿಯೂ ನೋಡಬೇಕಾದ ಸಿನೆಮಾ.
ಕಡೆಯದಾಗಿ ಈ ಸಿನೆಮಾದ ಆರಂಭದಲ್ಲಿ ಪೊಲೀಸ್ ಡ್ರೈವರ್ ನಾಯಕನಿಗೆ ಹೇಳುವ ರಾಮನ ಕತೆ ಹೇಳಿ ಮುಗಿಸುತ್ತೇನೆ. ‘ರಾಮ ಕಾಡಿನಿಂದ ಅಯೋಧ್ಯೆಗೆ ಮರಳುವಾಗ ದಾರಿಯುದ್ದಕ್ಕೂ ಇದ್ದ ಹಳ್ಳಿಗಳು ಅವನಿಗಾಗಿ ಊರ ತುಂಬಾ ದೀಪ ಹಚ್ಚಿ ಸ್ವಾಗತಿಸುತ್ತಿದ್ದವಂತೆ. ಆದರೆ ಅಲ್ಲೊಂದು ಹಳ್ಳಿ ಜನ ಮಾತ್ರ ದೀಪ ಹಚ್ಚದೇ ಕತ್ತಲಿನಲ್ಲಿಯೇ ನಿಂತು ರಾಮನನ್ನು ಸ್ವಾಗತಿಸಿದರಂತೆ. ಆ ಹಳ್ಳಿ ದಲಿತರ ಹಳ್ಳಿ. ಇದನ್ನು ಗಮನಿಸಿದ ರಾಮ ಅವರ ಬಳಿ ತೆರಳಿ ವಿಚಾರಿಸಿದಾಗ ದಲಿತರು ‘ನಿನ್ನ ಅರಮನೆ ನಮ್ಮ ಮನೆ ದೀಪಗಳನ್ನು ಹಚ್ಚಿದಾಗ ಕಂಗೊಳಿಸಿದ್ದಕ್ಕಿಂತ, ಆರಿಸಿದಾಗ ಹೆಚ್ಚು ಕಂಗೊಳಿಸುತ್ತಿತ್ತು. ಅದಕ್ಕೆ ನಿನ್ನ ಅರಮನೆ ಅಂದವಾಗಿ ಕಾಣಲೆಂದು ನಮ್ಮ ಮನೆ ದೀಪಗಳನ್ನು ಆರಿಸಿದ್ದೇವೆ’ ಎಂದರಂತೆ!
ವಿಕಾಸ್ ಆರ್ ಮೌರ್ಯ
ಕೃಪೆ: ಟ್ರೂಥ್ ಇಂಡಿಯಾ ಕನ್ನಡ
No Comment! Be the first one.