ಯುವ ನಿರ್ದೇಶಕ ರಾಮ್. ಜೆ. ಚಂದ್ರ ವೃತ್ತಿಯಲ್ಲಿ ಐಟಿ ಉದ್ಯೋಗಿ, ಸಿನಿಮಾ ನಿರ್ದೇಶನವನ್ನು ಪ್ರವೃತ್ತಿಯಾಗಿಸಿಕೊಂಡು ತಮ್ಮ ಬಿಡುವಿನ ಸಮಯದಲ್ಲಿ ನಿರ್ದೇಶಿಸಿದ ಚಿತ್ರವೇ ’ಆಟಕ್ಕುಂಟು ಲೆಕ್ಕಕ್ಕಿಲ್ಲ’. ಈ ಚಿತ್ರಕ್ಕೆ ಕತೆ. ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುವುದರ ಜೊತೆಗೆ ವಸುಂಧರ ಕ್ರಿತಿಕ್ ಫಿಲಂಸ್ ಮೂಲಕ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಈ ಚಿತ್ರದ ಟೀಸರ್ ಮತ್ತು ಆಡಿಯೋ ಬಿಡುಗಡೆ ಸಮಾರಂಭ ಕಲಾವಿದರ ಸಂಘದ ಆವರಣದಲ್ಲಿ ನಡೆಯಿತು. ನಟ ವಸಿಷ್ಟಸಿಂಹ, ಹಾಗೂ ರೆಹಮಾನ್ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ನಟ ಸಂಚಾರಿ ವಿಜಯ್ ಮಾತನಾಡಿ ಯಾವುದೇ ಸಿನಿಮಾದ ಲಕ್ಷಣಗಳು, ಅದರಲ್ಲಿರುವ ಪದರಗಳನ್ನು ತಿಳಿದುಕೊಳ್ಳಬೇಕಾದರೆ ಚಿತ್ರಮಂದಿರಕ್ಕೆ ಬರಬೇಕು. ಚಿತ್ರದ ಪ್ರತಿಯೊಂದು ದೃಶ್ಯ ಪ್ರೇಕ್ಷಕನಿಗೆ ಹೊಂದಿಕೊಳ್ಳುವಂತೆ ಭಾಸವಾಗುತ್ತದೆ. ಈ ಚಿತ್ರದಲ್ಲಿ ಎರಡು ಪ್ರತ್ಯೇಕ ಕತೆಗಳನ್ನು ಹೇಳುವ ಪ್ರಯತ್ನ ಮಾಡಲಾಗಿದ್ದು, ಎರಡೂ ಕಥೆಗಳಿಗೆ ಕ್ಲೈಮ್ಯಾಕ್ಸ್ನಲ್ಲಿ ಮೆಸೇಜ್ ಇದೆ, ಚಿತ್ರದ ಶೀರ್ಷಿಕೆ ಈ ರೀತಿ ಇದ್ದರೂ, ಚಿತ್ರ ಮಾತ್ರ ಆಟಕ್ಕೂ ಇದೆ, ಲೆಕ್ಕಕ್ಕೂ ಇದೆ ಎಂದು ಹೇಳಿದರು.
ಟೀಸರ್ನಲ್ಲಿ ತೋರಿಸಿರುವ ದೃಶ್ಯಗಳು ಕೇವಲ ಚಿತ್ರದ ಸ್ಯಾಂಪಲ್ ಅಷ್ಟೇ. ಬಾಕಿ ತೊಂಬತ್ತೂಂಬತ್ತರಷ್ಟು ಸನ್ನಿವೇಶಗಳು ಅರ್ಥವಾಗಬೇಕಾದರೆ ಚಿತ್ರ ನೋಡಬೇಕು. ಈ ಚಿತ್ರ ನೋಡುಗರಿಗೆ ಹೊಸ ಅನುಭವ ನೀಡುತ್ತದೆ ಎಂದು ನಾಯಕಿ ದುನಿಯಾ ರಶ್ಮಿ ಹೇಳಿದರು. ಮತ್ತೊಬ್ಬ ನಾಯಕಿ ಮಯೂರಿ ಮಾತನಾಡಿ ನಾನೇ ಪುಟ್ಟ ಹುಡುಗಿ, ನನಗೊಂದು ಮುದ್ದಿನ ಮಗಳನ್ನು ಕೊಟ್ಟು ಗೃಹಿಣಿಯಾಗಿ ತೋರಿಸಿದ್ದಾರೆ ಎಂದು ಹೇಳಿಕೊಂಡರು. ಚಿತ್ರದ ಎರಡು ಗೀತೆಗಳಿಗೆ ಸಾಹಿತ್ಯ ರಚಿಸಿ ಒಂದು ಹಾಡನ್ನು ಹಾಡಿರುವ ವಾಸುಕಿ ವೈಭವ್, ಸಂಗೀತ ನಿರ್ದೇಶಕ ನೋಬಿನ್ ಪೌಲ್ ಹಾಡುಗಳ ಕುರಿತಂತೆ ಮಾಹಿತಿ ಹಂಚಿಕೊಂಡರು.
No Comment! Be the first one.