ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಬಯಲಾಟದ ಭೀಮಣ್ಣ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಶ್ರೀಮತಿ ಕೃಷ್ಣವೇಣಿ ನಂಜಪ್ಪ ಕಾಳೇಗೌಡ, ಶ್ರೀಮತಿ ಧನಲಕ್ಷ್ಮಿ ಕೃಷ್ಣಪ್ಪ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರದ ಹಾಡುಗಳಿಗೆ ಡಾ. ಶಮಿತಾ ಮಲ್ನಾಡ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕರಾವಳಿ ಪ್ರದೇಶದಲ್ಲಿ ಹೆಸರಾಗಿರುವ ಯಕ್ಷಗಾನ ಮತ್ತು ಬಯಲಾಟ ಮಾಡುವಂಥ ಕಲಾವಿದರ ತೆರೆಯ ಹಿಂದಿನ ಜೀವನದ ಹಲವು ಆಯಾಮಗಳನ್ನು ನಿರ್ದೇಶಕ ಬರಗೂರರು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ರಂಜಿತ್, ಸುಂದರರಾಜ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಮಾರಂಭದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚಿತ್ರದ ಆಡಿಯೋ ಸಿಡಿಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಂತರ ಅವರು ಮಾತನಾಡುತ್ತ ನಾನು ಇದುವರೆಗೆ ಏನು ಮಾಡಬೇಕು ಅಂತ ತಿಳಿಯದೆ ಏನೇನೋ ಮಾಡಿದೆ. ಹಣದ ಚಿಂತೆ ಬಿಟ್ಟು, ಶ್ರದ್ಧೆಯಿಂದ ಹಲವಾರು ಚಿತ್ರಗಳನ್ನು ನಿರ್ಮಿಸಿದೆ. ಆದರೆ ನನ್ನ ಮಗಳ ಮದುವೆಯ ಸಂದರ್ಭದಲ್ಲಿ ನನಗೆ ಜೀವನದಲ್ಲಿ ಹಣದ ಮಹತ್ವ ಏನೆಂಬುದು ಗೊತ್ತಾಯಿತು. ಅದರಿಂದ ನಾನು ಒಂದು ಪಾಠವನ್ನಂತೂ ಕಲಿತಂತಾಯಿತು. ಹಾಗಾಗಿ ಇನ್ನು ಮುಂದೆ ನಾನು ದುಡ್ಡು ಮಾಡಿ ತೋರಿಸ್ತೀನಿ. ತುಂಬಾ ಇಷ್ಟಪಟ್ಟು, ಸಾಲ ಮಾಡಿ ಪ್ರೀತಿಯಿಂದ ಏಕಾಂಗಿ ಚಿತ್ರವನ್ನು ನಿರ್ಮಿಸಿದೆ. ಆದರೆ ಆ ಚಿತ್ರವನ್ನು ಜನ ಸ್ವೀಕರಿಸಲಿಲ್ಲ, ನಿರೀಕ್ಷಿತ ಯಶಸ್ಸು ಚಿತ್ರಕ್ಕೆ ಸಿಗಲಿಲ್ಲ. ಆದರೂ ಎದೆಗುಂದದೆ ಎಲ್ಲವನ್ನೂ ಎದುರಿಸಿಯಾಯಿತು. ಮೊನ್ನೆ ನನ್ನ ಮಗಳ ಮದುವೆಯ ಸಂದರ್ಭದಲ್ಲಿ ನನಗೆ ಒಂದೊಂದು ಪೈಸೆಯ ಮಹತ್ವದ ಬಗ್ಗೆ ಅರಿವಾಯಿತು. ಹೀಗಾಗಿ ಇನ್ನು ಮೇಲೆ ನಾನು ದುಡ್ಡು ಮಾಡುವುದರ ಕಡೆಗೇ ಹೆಚ್ಚು ಗಮನ ನೀಡುತ್ತೇನೆ ಎಂದು ಹೇಳಿದ್ದಾರೆ.
ತನ್ನ ಮಾತನ್ನು ಮುಂದುವರೆಸಿದ ಕ್ರೇಜಿಸ್ಟಾರ್ ರವಿಚಂದ್ರನ್, ಕನಸು ಯಾರೊಬ್ಬರ ಸ್ವತ್ತೂ ಅಲ್ಲ, ಹಾಗೆ ನೋಡಿದರೆ ಕನಸು ಕಾಣುವವರೇ ನಿಜವಾದ ಶ್ರೀಮಂತರು. ನಾವು ಕಂಡ ಕನಸು ಪರದೆಯ ಮೇಲೆ ಮೂಡಿದಾಗ ನಾವು ಸೋತರೂ ಗೆದ್ದಂತೆಯೇ. ಹಿಂದೆ ಜನಪದ ಎನ್ನುವ ಹೆಸರಿನ ಸಿನಿಮಾ ಮಾಡುವುದಾಗಿ ಬರಗೂರರು ನನ್ನನ್ನು ಸಂಪರ್ಕಿಸಿದ್ದರು. ಆದರೆ ಆಗ ನನ್ನ ಕನಸು ಬೇರೆಯದೇ ಆಗಿತ್ತು ಎಂದು ಹೇಳಿದರು.
ಕನ್ನಡ ಚಿತ್ರರಂಗದಲ್ಲಿ ಸಾಲ ಮಾಡಿ ಚಿತ್ರ ನಿರ್ಮಿಸಿ ಸಂಭ್ರಮಿಸುವಂಥ ಅಪರೂಪದ ವ್ಯಕ್ತಿ ರವಿಚಂದ್ರನ್ ಎಂದು ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹೇಳಿದರು. ಹಾಡುಗಳಲ್ಲಿ ಭಾವ ತೀವ್ರತೆಯನ್ನು ಸಹಜವಾಗಿ ಮೂಡಿಸುವ ನಿರ್ದೇಶಕರಲ್ಲಿ ಥಟ್ಟನೆ ನೆನಪಾಗುವುದು ಎಂದರೆ ರವಿಚಂದ್ರನ್ ಹಾಗೂ ರಾಜ್ ಕಪೂರ್ ಇಬ್ಬರೇ. ಇವರಿಬ್ಬರ ಚಿತ್ರದ ಹಾಡುಗಳಲ್ಲಿ ಸೌಂದರ್ಯ, ಭಾವ ತೀವ್ರತೆ ಎನ್ನುವುದು ಎದ್ದುಕಾಣುತ್ತದೆ ಎಂದು ರವಿಚಂದ್ರನ್ ಹಾಗೂ ಬಾಲಿವುಡ್ನ ರಾಜ್ಕಪೂರ್ ಅವರ ಚಿತ್ರಗಳನ್ನು ಶ್ಲಾಘಿಸಿ ಮಾತನಾಡಿದರು.
No Comment! Be the first one.