ಭಾನು ವೆಡ್ಸ್ ಭೂಮಿ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಎ ಸಿಂಪಲ್ ಮ್ಯಾರೇಜ್ ಎಂಬ ಅಡಿ ಬರಹ ಹೊಂದಿದ್ದರೂ ಈ ಮದುವೆಯ ಹಿಂದೆ ಏನೆಲ್ಲಾ ಕಷ್ಟಗಳು ಎದುರಾಗುತ್ತವೆ ಅನ್ನೋದು ಸಿನಿಮಾ ನೋಡಿದ ಮೇಲಷ್ಟೇ ಗೊತ್ತಾಗಲಿದೆ.
ಚನ್ನಪಟ್ಟಣದ ಜೆ.ಕೆ.ಆಧಿ ಚಿತ್ರರಂಗದಲ್ಲಿ ಹದಿನೈದು ವರ್ಷ ಹಲವು ನಿರ್ದೇಶಕರ ಬಳಿ ಸಹಾಯಕರಾಗಿ ದುಡಿದು, ಎಂಟು ಧಾರವಾಹಿಗಳಿಗೆ ನಿರ್ದೇಶಕನಾಗಿ ಕೆಲಸ ಮಾಡಿ, ಸದ್ಯ ಭಾನು ವೆಡ್ಸ್ ಭೂಮಿಗೆ ಕತೆ, ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನದ ಪಾರುಪಥ್ಯ ವಹಿಸಿಕೊಂಡಿದ್ದಾರೆ. ಕತೆಯ ಕುರಿತು ಹೇಳುವುದಾದರೆ ಆಕಾಶ-ಭೂಮಿ ಎದುರು ಬದುರು ಇದ್ದರೂ, ಒಂದಾಗುವುದಿಲ್ಲ. ಭೂಮಿ ಬಿಸಿಯಾದಾಗ ಭಾನು ನೀರು ಸುರಿಸಿ ತಂಪನ್ನು ಕೊಡುತ್ತದೆ. ಅದರಂತೆ ಮೈಸೂರು ಪಟ್ಟಣದಲ್ಲಿ ನಡೆಯುವ ಘಟನೆಯಲ್ಲಿ ಪ್ರೇಮಿಗಳು ಹೇಗೆ ಮದುವೆಯಾಗುತ್ತಾರೆ ಎಂಬುದನ್ನು ಈ ಸಿನಿಮಾದ ಅಂತ್ಯದಲ್ಲಿ ತೋರಿಸಲಾಗಿದೆಯಂತೆ.
ನರಗುಂದ ಕಡೆಯವರಾದ ಸೂರ್ಯಪ್ರಭ್ ಐಟಿ ಉದ್ಯೋಗಿಯಾಗಿದ್ದು, ಡಾ.ರಾಜ್ಕುಮಾರ್ ಪ್ರೇರಪಣೆಯಿಂದ ಇದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಶ್ರೀಮಂತ ಮನೆಯ ಹುಡುಗನಾಗಿ ಲವರ್ ಬಾಯ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ನಾಲ್ಕು ಚಿತ್ರಗಳಲ್ಲಿ ನಟಿಸಿರುವ ನಾಯಕಿ ರಶಿತಾ ಮಲ್ನಾಡ್ ಯಾವುದೋ ಕಾರಣಕ್ಕೆ ಮೈಸೂರಿಗೆ ಬಂದಾಗ ನಾಯಕನ ಪರಿಚಯ, ಪ್ರೇಮಾಂಕುರವಾಗಿ ನಂತರ ತಾಳಿ ಕಟ್ಟಿಸಿಕೊಳ್ಳುವ ಪಾತ್ರವಾಗಿದೆಯಂತೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಕೊಡಗು, ಸಕಲೇಶಪುರ ಮತ್ತು ಕಾರವಾರದ ಸುಂದರ ತಾಣಗಳಲ್ಲಿ ಚಿತ್ರೀಕರಣ ಈ ಚಿತ್ರಕ್ಕಾಗಿ ಶೂಟಿಂಗ್ ಮಾಡಲಾಗಿದೆ.
ಪೂರ್ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣದ ’ಭಾನು ವೆಡ್ಸ್ ಭೂಮಿ’ ಚಿತ್ರ ಯು/ಎ ಸರ್ಟಿಫಿಕೆಟ್ನೊಂದಿಗೆ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಜಿ.ಕೆ. ಆದಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಛಾಯಾಗ್ರಹಣ – ಗಣೇಶ್ ಹೆಗ್ಡೆ, ಸಂಗೀತ- ಎ.ಎಂ. ನೀಲ್, ಸಂಕಲನ- ಶ್ರೀನಿವಾಸ್ ಪಿ ಬಾಬು, ನಿರ್ವಹಣೆ – ಗಂಡಸಿ ರಾಜು, ತಾರಾಗಣದಲ್ಲಿ – ಸೂರ್ಯಪ್ರಭ್, ರಕ್ಷತಾ ಮಲ್ನಾಡ್. ಶೋಭರಾಜ್, ಗಿರೀಶ್, ಮೈಕೋ ಮಂಜು, ಸಿಲ್ವಾಮೂರ್ತಿ, ಹಂಸಾ, ಸೂರ್ಯಕಿರಣ್, ಪಲ್ಲವಿ ಶೆಟ್ಟಿ, ಹೆಚ್.ಎಂ.ಟಿ. ವಿಜಿ, ಪ್ರವೀಣ್, ಮಿಮಿಕ್ರಿ ರಾಜು, ಹಾಗೂ ವಿಶೇಷ ಪಾತ್ರದಲ್ಲಿ ರಂಗಾಯಣ ರಘು ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಕಥೆಯು ಒಂದು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಹೆಣೆಯಲಾಗಿದೆ. ತುಂಬಾ ತಿರುವುಗಳಿಲ್ಲದಿದ್ದರೂ, ನೈಜತೆಯಿಂದ ಕೂಡಿದ ಕಥೆ ’ಭಾನು ಮತ್ತು ಭೂಮಿ’ ಒಬ್ಬರನ್ನೊಬ್ಬರು ನೋಡುತ್ತಾ ಸನಿಹ ಸೇರಲೆಂದು ಹಪಹಪಿಸುತ್ತಿದ್ದರೂ ಸಾಧ್ಯವಾಗದೇ ತಮ್ಮಲ್ಲೇ ಇರುವ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆಂಬುದೇ ಈ ಚಿತ್ರದ ಪ್ರಧಾನ ಅಂಶ.
No Comment! Be the first one.