ರೆಬಲ್ ಸ್ಟಾರ್ ಅಂಬರೀಶ್ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಚಿತ್ರಸಂತೆ ಫಿಲ್ಮ್ ಅವಾರ್ಡ್ ಸಮಾರಂಭ ಇತ್ತೀಚೆಗೆ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಯಶಸ್ವಿಯಾಗಿ ನೆರವೇರಿತು. 2018-19ನೇ ಸಾಲಿನ ಸಿನೆಮಾಗಳಿಗೆ ಪ್ರಶಸ್ತಿ ನೀಡುವುದರ ಜೊತೆಗೆ ಚಿತ್ರರಂಗದಲ್ಲಿ ಇಪ್ಪತ್ತೈದು ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಜೀವಮಾನದ ಸಾಧನೆಗಾಗಿ ವಿಶೇಷ ಗೌರವ ಪ್ರಶಸ್ತಿ ನೀಡಲಾಯಿತು.
ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರಿಗೆ ಅಂಬರೀಶ್ ಹೆಸರಿನ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಐವತ್ತು ವರ್ಷಗಳಿಂದ ಚಿತ್ರರಂಗಕ್ಕಾಗಿ ದುಡಿದ ಹಿರಿಯ ಜೀವಗಳಾದ ಆರ್.ಟಿ. ರಮಾ, ಜಯಮ್ಮ ಮತ್ತು ಲಕ್ಷ್ಮಿದೇವಿ ಅವರಿಗೆ ವಿಶೇಷ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಚಿನ್ನೇಗೌಡ, ಹಿರಿಯ ನಟಿ ತಾರಾ ಅನುರಾಧ, ಪ್ರಿಯಾಂಕಾ ಉಪೇಂದ್ರ, ಸಿಹಿ ಕಹಿ ಚಂದ್ರು, ಮುರಳುಧರ ಹಾಲಪ್ಪ, ಸುಧೀಂದ್ರ ವೆಂಕಟೇಶ್, ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 2018ರ ಸಾಲಿನಲ್ಲಿ ತೆರೆಕಂಡ ಟಗರು, ಅಯೋಗ್ಯ, ಕೆ ಜಿ ಎಫ್ ಮೊದಲಾದ ಹತ್ತಾರು ಚಿತ್ರಗಳಿಗೆ ದುಡಿದ ಕಲಾವಿದರು, ತಂತ್ರಜ್ಞರಿಗೆ ವಿಶೇಷ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಟರಾದ ನೆನಪಿರಲಿ ಪ್ರೇಮ್, ನೀನಾಸಂ ಸತೀಶ್, ಚಂದನ್ ಶೆಟ್ಟಿ, ಬಿಗ್ ಬಾಸ್ ಪ್ರಥಮ್, ರಚಿತಾ ರಾಮ್, ರಾಗಿಣಿ, ಮಾನ್ವಿತಾ ಹರೀಶ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಸೇರಿ ಕಾರ್ಯಕ್ರಮಕ್ಕೆ ಇನ್ನಷ್ಟು ರಂಗು ಬಂದಿತ್ತು. ಅಂಬರೀಶ್ ಹೆಸರಿನಲ್ಲಿ ನಡೆದ ಇಡೀ ಸಮಾರಂಭ ಸಾರ್ಥಕ ಸಂಜೆಯಾಗಿತ್ತು.
No Comment! Be the first one.