ಸಲ್ಮಾನ್ ಖಾನ್, ಕಿಚ್ಚ ಸುದೀಪ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ದಬಾಂಗ್-೩ ಸಿನಿಮಾ ಇನ್ನೇನು ತೆರೆಗೆ ಬರುತ್ತಿದೆ. ಪ್ರಭುದೇವ ನಿರ್ದೇಶನದ ಈ ಚಿತ್ರದ ಪತ್ರಿಕಾಗೋಷ್ಟಿ ವಿನೂತನ ಶೈಲಿಯಲ್ಲಿ ನೆರವೇರಿತು. ಮಾಧ್ಯಮ ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ವಿಡಿಯೋ ಲೈವ್ ಮುಖಾಂತರ ಚಿತ್ರತಂಡ ಎದುರಾಗಿತ್ತು. ಏಕಕಾಲದಲ್ಲಿ ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಚಿತ್ರತಂಡ ಮುಖಾಮುಖಿಯಾಗಿ ಮಾತಾಡಿ ಚಿತ್ರದ ಕುರಿತು ಸಾಕಷ್ಟು ವಿವರಗಳನ್ನು ಹಂಚಿಕೊಂಡಿತು. ಇದೇ ಸಂದರ್ಭದಲ್ಲಿ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳ ೩ ನಿಮಿಷದ ೨೨ ಸೆಕೆಂಡ್ ಅವಧಿಯ ಟ್ರೇಲರ್ ಕೂಡಾ ಅನಾವರಣಗೊಂಡಿದೆ. ಈ ಸಂರ್ದದಲ್ಲಿ ನಟ ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ, ಸಾಯಿ ಮಂಜ್ರೇಕರ್, ಅರ್ಬಾಜ್ ಖಾನ್, ಪ್ರಭುದೇವ ಮುಂತಾದವರು ಹಾಜರಿದ್ದರು. ಸುದೀಪ್ ಸದ್ಯ ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದರಿಂದ ಸದರಿ ಪತ್ರಿಕಾಗೋಷ್ಟಿಯಲ್ಲಿ ಹಾಜರಿರಲಿಲ್ಲ.
ಈ ಚಿತ್ರದಲ್ಲಿ ಸುದೀಪ ’ಬಲ್ಲಿ’ ಎಂಬ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಟಕ್ಕರ್ ಕೊಡುವ ಪಾತ್ರದಲ್ಲಿ ಸುದೀಪ್ ಅಬ್ಬರಿಸಿದ್ದಾರಂತೆ. ಸಲ್ಮಾನ್ ಖಾನ್ ಫಿಲ್ಮ್ಸ್ ಹಾಗೂ ಅರ್ಬಾಜ್ ಖಾನ್ ಪ್ರೊಡಕ್ಷನ್ ಅಡಿ ‘ದಬಾಂಗ್ ೩’ ಚಿತ್ರ ನಾಲ್ಕು ಭಾಷೆಗಳಲ್ಲಿ ತಯಾರಾಗಿದ್ದು. ಕನ್ನಡದ ‘ದಬಾಂಗ್ ೩’ ಹಾಡುಗಳನ್ನು ಅನೂಪ್ ಭಂಡಾರಿ ಬರೆದಿದ್ದಾರೆ, ಗುರುದತ್ತ ಗಾಣಿಗ ಚಿತ್ರದ ಸಂಭಾಷಣೆ ತರ್ಜುಮೆ ಮಾಡಿದ್ದಾರೆ. ಜೋಷಿ ಅವರು ಸಲ್ಮಾನ್ ಖಾನ್ ಅವರಿಂದ ಕನ್ನಡದಲ್ಲಿ ಡಬ್ಬಿಂಗ್ ಮಾಡಿಸಿದ್ದಾರೆ. ಈ ಚಿತ್ರವನ್ನು ಕರ್ನಾಟಕದಲ್ಲಿ ಜಾಕ್ ಮಂಜುನಾಥ್ ಅವರು ವಿತರಣೆ ಮಾಡುತ್ತಿದ್ದಾರೆ.
“ಕನ್ನಡ ಕಲಿತು ಮಾತನಾಡುವುದು ನನಗೆ ಕಷ್ಟ ಆಯಿತು. ಜೋಷಿ ಅವರು ನನ್ನ ತಪ್ಪುಗಳನ್ನು ತಿದ್ದಿ, ಕನ್ನಡ ಮಾತಾಡಿಸಿದ್ದಾರೆ. ಈ ಚಿತ್ರ ಮಾಸ್ ಹಾಗೂ ಕ್ಲಾಸ್ ವರ್ಗಕ್ಕೆ ಆಪ್ತವಾಗಲಿದೆ. ಸಂಪೂರ್ಣ ಮನರಂಜನೆಯಷ್ಟೇ ಈ ಚಿತ್ರದ ಮೂಲ ಗುರಿ. ಇಡೀ ಕುಟುಂಬ ಕುಳಿತು ನೋಡುವ ಸಿನಿಮಾ, ಬರೀ ನಾಯಕನ ಪೌರುಷ ಮಾತ್ರವಲ್ಲದೆ, ಅದರ ಜೊತೆಗೆ ಅನೇಕ ವಿಚಾರಗಳು ಈ ಚಿತ್ರದಲ್ಲಿವೆ. ನಾನು ಕಿಚ್ಚ ಸುದೀಪ್ ಜೊತೆ ಅಭಿನಯ ಮಾಡಿದ್ದು ಒಳ್ಳೆಯ ಅನುಭವ. ಸುದೀಪ್ ನನ್ನ ಸಹೋದರನ ಹಾಗೆ. ಅದ್ಭುತವಾಗಿ ಅಭಿನಯ ಮಾಡುತ್ತಾರೆ, ಅವರು ಹೃದಯವಂತ, ಕ್ಲೀನ್ ಅಂಡ್ ಕ್ಲಿಯರ್ ವ್ಯಕ್ತಿ. ನಮಗೆ ಸಿ.ಸಿ.ಎಲ್.ನಿಂದ ಪರಿಚಯವಾಗಿತ್ತು. ಈಗ ನಮ್ಮಿಬ್ಬರ ಸ್ನೇಹ ದೊಡ್ಡ ಮಟ್ಟದಲ್ಲಿ ಬೆಳದಿದೆ ಎಂದು ವಿವರಿಸಿದರು ಸಲ್ಮಾನ್ ಖಾನ್. ಈಗಂತೂ ಕೆ ಜಿ ಎಫ್, ಬಾಹುಬಲಿ ಚಿತ್ರಗಳು ಹಿಂದಿಯಲ್ಲೂ ಸಹ ಬಿಡುಗಡೆ ಆಗಿವೆ. ದಬಾಂಗ್ ೩ ಅಂತೂ ಹೆಚ್ಚು ದಕ್ಷಿಣ ಭಾರತೀಯ ಚಿತ್ರ ರಸಿಕರು ಇಷ್ಟ ಪಡುವಂತಾಗಿದೆ. ಈಗ ಟ್ರೈಲರಿನಲ್ಲಿ ಕೇವಲ ೩ ಪರ್ಸೆಂಟ್ ಅಷ್ಟೇ ನಾವು ಅಡಕ ಮಾಡಿರುವುದು. ಇನ್ನುಳಿದ ೯೭ ಪರ್ಸೆಂಟ್ ಮನರಂಜನೆ ಪಡೆಯಲು ಥಿಯೇಟರಿಗೆ ಬರಲೇಬೇಕು ಎಂದು ಸಲ್ಮಾನ್ ಖಾನ್ ಮನವಿ ಮಾಡಿದರು.
ಸಮಯಾವಕಾಶ ಕೂಡಿ ಬಂದಾಗ ನಾನು ಕನ್ನಡದಲ್ಲಿ ಸಿನಿಮಾ ಮಾಡುತ್ತೇನೆ ಎಂದು ಸಲ್ಮಾನ್ ಖಾನ್ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ನಾಯಕಿ ಸೋನಾಕ್ಷಿ ಸಿನ್ಹಾ ನಾವೆಲ್ಲರೂ ಭಾರತೀಯರು ಎಂಬ ಮನೋಭಾವ ಬೆಳಸಿಕೊಳ್ಳೋಣ ಎಂದರು. ಮತ್ತೊಬ್ಬ ನಾಯಕಿ ಸಾಯಿ ಮಂಜ್ರೇಕರ್ ಮೊದಲ ಅನುಭವದಲ್ಲಿ ದೊಡ್ಡ ಅವಕಾಶ ಸಿಕ್ಕಿದ್ದಕ್ಕೆ ಮನೆಯಲ್ಲಿ ಜೋರಾಗಿ ಕೂಗಿಕೊಂಡು ಸಂತೋಷ ಪಟ್ಟಿದ್ದನ್ನು ಹೇಳಿಕೊಂಡರು. ಕಿಚ್ಚ ಸುದೀಪ್ ಅವರಿಗೆ ವಿಲನ್ ಪಾತ್ರ ನೀಡಿದ್ದೇವೆ. ಆ ಪಾತ್ರಕ್ಕೆ ಅವರೇ ಬೇಕಾಗಿತ್ತು ಎಂದು ನಿರ್ದೇಶಕ ಪ್ರಭುದೇವ ಹೇಳಿಕೊಂಡರು. ಮುಂದಿನ ದಿನಗಳಲ್ಲಿ ತಾವು ಕನ್ನಡದಲ್ಲೂ ಸಿನಿಮಾ ನಿರ್ದೇಶನ ಮಾಡುವ ಆಶಯ ವ್ಯಕ್ತಪಡಿಸಿದರು.
No Comment! Be the first one.