ಎರಡು ಕೆಜಿ ಅಕ್ಕಿ, ಬೆಲ್ಲ ಕೊಟ್ಟಿದ್ದನ್ನೂ ಫೋಟೋ ಸಮೇತ ಹಾಕಿಸಿಕೊಂಡು ಕ್ವಿಂಟಾಲುಗಟ್ಟಲೆ ಪಬ್ಲಿಸಿಟಿ ತೆಗೆದುಕೊಂಡವರು ಸಾಕಷ್ಟು ಜನ ಇದ್ದಾರೆ. ಆದರೆ, ದಿವಾಕರ್ ಅನುಸರಿಸುತ್ತಿರುವ ಶ್ರಮದ ಮಾರ್ಗ ಎಲ್ಲರಿಗೂ ಮಾದರಿಯಾಗುವಂಥದ್ದು.
ಸ್ವಾಭಿಮಾನದಿಂದ ದುಡಿಯುವವರಿಗೆ ಕೆಲಸ ಯಾವುದಾದರೇನು? ಮಾರ್ಗ ಒಳ್ಳೇದಾಗಿದ್ರೆ ಅಷ್ಟು ಸಾಕು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಮನ್ ಮ್ಯಾನ್ ಆಗಿ ಸ್ಪರ್ಧಿಸಿ ಎಲ್ಲರ ಪ್ರೀತಿ ಪಡೆದ ಹುಡುಗ ದಿವಾಕರ್. ಬಿಗ್ ಬಾಸ್ ಶೋ ಮುಗಿಸಿಕೊಂಡು ಬಂದ ಮೇಲೆ ಗುಲಾಲ್ ಡಾಟ್ ಕಾಮ್ ಎನ್ನುವ ಸಿನಿಮಾದ ಮೂಲಕ ದಿವಾಕರ್ ಹೀರೋ ಆಗಿಯೂ ಎಂಟ್ರಿ ಕೊಡುತ್ತಿದ್ದಾರೆ. ಯಾರೇ ಆಗಿದ್ದರೂ ಒಂದು ಸಲ ಬಣ್ಣದ ಜಗತ್ತಿನ ನಂಟಿಗೆ ಬಂದ ಮೇಲೆ ಬೇರೆ ಕೆಲಸಗಳತ್ತ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಬದುಕಿನುದ್ದಕ್ಕೂ ಕಷ್ಟವನ್ನೇ ಹೊದ್ದು, ಮಲಗಿದ್ದ ದಿವಾಕರ್’ಗೆ ಇಲ್ಲಿ ಯಾವ ಭ್ರಮೆಗಳೂ ಇಲ್ಲ. ಪ್ರತಿಯೊಂದರಲ್ಲೂ ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡುವ ದಿವಾಕರ್ ‘ದಿವಾಕರ್ ರೆಮಿಡೀಸ್’ ಹೆಸರಿನಲ್ಲಿ ಆಯುರ್ವೇದ ಪ್ರಾಡಕ್ಟುಗಳ ಮಾರ್ಕೆಟಿಂಗ್ ಕಂಪೆನಿ ಹೊಂದಿದ್ದಾರೆ.
ಅರೆಘಳಿಗೆಯೂ ಸುಮ್ಮನೇ ಕೂರದ, ಏನಾದರೊಂದು ಮಾಡುತ್ತಲೇ ಸಾಗುವ ಮನಸ್ಥಿತಿಯ ಹುಡುಗ ದಿವಾಕರ್. ಇಂಥವರನ್ನು ಲಾಕ್ ಡೌನ್ ಹೆಸರಿನಲ್ಲಿ ಮನೆಯೊಳಗೆ ಕೂರಿಸೋದು ಸಾಧ್ಯವೇ? ಕಾಲಿಗೆ ಚಕ್ರ ಸಿಕ್ಕಿಸಿಕೊಂಡವರಂತೆ ತಿರುಗಾಡುತ್ತಿದ್ದವರಿಗೆ ಲಾಕ್ ಡೌನ್ ಎದುರಾಗಿದ್ದೇ, ತಲೆಕೆಟ್ಟಂತಾಗಿ ಹೊರಬಂದಿದ್ದರು. ಹಾಗೆ ಹೊರಬಂದು ಏನು ತಾನೆ ಮಾಡಲು ಸಾಧ್ಯ ಅಂತಾ ನೋಡುತ್ತಿದ್ದವರನ್ನೇ ದಿವಾಕರ್ ಅಚ್ಚರಿಗೀಡುಮಾಡಿದ್ದರು. ಯಲಹಂಕದ ಮಾರುಕಟ್ಟೆಯಿಂದ ಥರಾವರಿ ಸೊಪ್ಪುಗಳನ್ನು ತಂದು ಮಾರಲು ಶುರು ಮಾಡಿದ್ದರು. ಬೆಳಗ್ಗೆ ಮೂರು ಗಂಟೆಗೆ ಎದ್ದುಹೋಗಿ ಸೊಪ್ಪು ತಂದು ಜೋಡಿಸಿದ್ದರು. ತಕ್ಷಣ ಖಾಲಿಯಾಗುತ್ತಿತ್ತು. ಅದರ ಜೊತೆಗೆ ತಮ್ಮದೇ ಪ್ರಾಡಕ್ಟುಗಳಾದ ಸ್ಯಾನಿಟೈಸರ್ ಮತ್ತು ಮಾಸ್ಕ್’ಗಳನ್ನು ವ್ಯಾಪಾರ ಮಾಡಿದ್ದಾರೆ. ಬಹುತೇಕರು ದುಡ್ಡು ಕೊಟ್ಟು ಖರೀದಿಸಿದರೆ, ಹಣವಿಲ್ಲದವರಿಗೆ ದಿವಾಕರ್ ಉಚಿತವಾಗಿ ಸೊಪ್ಪು,ತರಕಾರಿ ನೀಡಿದ್ದರು.
ಈ ಲಾಕ್ ಡೌನ್ ದಿನಗಳಲ್ಲೇ ದಿವಾಕರ್ ಮನೆಗೆ ಮಗಳ ಆಗಮನವೂ ಆಗಿದೆ. ಎರಡು ಕೆಜಿ ಅಕ್ಕಿ, ಬೆಲ್ಲ ಕೊಟ್ಟಿದ್ದನ್ನೂ ಫೋಟೋ ಸಮೇತ ಹಾಕಿಸಿಕೊಂಡು ಕ್ವಿಂಟಾಲುಗಟ್ಟಲೆ ಪಬ್ಲಿಸಿಟಿ ತೆಗೆದುಕೊಂಡವರು ಸಾಕಷ್ಟು ಜನ ಇದ್ದಾರೆ. ಆದರೆ, ದಿವಾಕರ್ ಅನುಸರಿಸುತ್ತಿರುವ ಶ್ರಮದ ಮಾರ್ಗ ಎಲ್ಲರಿಗೂ ಮಾದರಿಯಾಗುವಂಥದ್ದು. ಚಿತ್ರರಂಗದಲ್ಲಿ ಬೆಳೆಯಬೇಕು ಅನ್ನೋ ಕನಸಿನ ಜೊತೆಗೆ ಮೈ ಬಗ್ಗಿಸಿ ದುಡಿಯುವ ದಿವಾಕರ್ ಥರದವರು ಇಷ್ಟವಾಗೋದು ಇಂಥಾ ಕಾರಣಕ್ಕೇ…
No Comment! Be the first one.