ಕೊರೋನಾ ಕಂಟಕ ಇಡೀ ಜಗತ್ತನ್ನು ನಡುಗಿಸಿದೆ. ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಎಲ್ಲ ಕಷ್ಟಗಳನ್ನು ಅನುಭವಿಸಿಕೊಂಡು ಮನುಷ್ಯರು ಬದುಕಿದ್ದಾರೆ. ವೈರಸ್ ತಗುಲಿದ್ದವರಲ್ಲೂ ಎಷ್ಟೋ ಜನ ಜೀವ ಉಳಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ಕನ್ನಡದ ಕೆಲವು ಸಿನಿಮಾ ಮಂದಿಗೆ ಕೊರೋನಾ ವೈರಸ್ಸು ಅಂಟಿಕೊಳ್ಳದೆಯೇ ವ್ಯಾಧಿ ಉಲ್ಭಣಿಸಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘಗಳಲ್ಲಿ ಅಧಿಕಾರ ಹಿಡಿದು ಕೂತಿರುವ ಜನ ಅಕ್ಷರಶಃ ಬೀದಿನಾಯಿಗಳಂತೆ ಕಚ್ಚಾಡುತ್ತಿದ್ದಾರೆ. ಕೊರೋನಾ ಕಂಟಕ ಶುರುವಾದ ನಂತರ ವಾಣಿಜ್ಯ ಮಂಡಳಿ ಮತ್ತು ನಿರ್ದೇಶಕರ ಸಂಘದಲ್ಲಿ ಏನೆಲ್ಲಾ ಬೆಳವಣಿಗೆಗಳಾಗುತ್ತಿವೆ ಅನ್ನೋದರ ವಿಚಾರವಾಗಿ ಸಿನಿಬಜ಼್ ವರದಿ ಮಾಡುತ್ತಲೇ ಬಂದಿದೆ. ನಿರ್ಮಾಪಕರ ಸಂಘದ ಡಿ.ಕೆ.ರಾಮಕೃಷ್ಣ, ಎ. ಗಣೇಶ್, ದಿನೇಶ್ ಗಾಂಧಿ ನಿರ್ದೇಶಕರ ಸಂಘದ ಅಧ್ಯಕ್ಷ ಎಂದು ಹೇಳಿಕೊಳ್ಳುತ್ತಿರುವ ಟೇಶಿ ವೆಂಕಟೇಶ್ ಮುಂತಾದವರ ವರಸೆಗಳನ್ನು ಪರಿಚಯಿಸಿದ್ದೀವಿ!
ಈ ಸಂಘಗಳ ವಾಟ್ಸಾಪು ಗ್ರೂಪೆನ್ನುವುದೀಗ ರಣರಂಗವಾಗಿ ಮಾರ್ಪಟ್ಟಿದೆ. ಒಬ್ಬ ವಾಯ್ಸ್ ಮೆಸೇಜು ಬಿಟ್ಟು ಕದನ ಘೋಷಣೆ ಮಾಡುತ್ತಿದ್ದಂತೇ ಮತ್ತೊಬ್ಬ ಶುರುವಿಟ್ಟುಕೊಳ್ಳುತ್ತಾನೆ. ನಿರ್ಮಾಪಕರ ಸಂಘದ ಕಾರ್ಯದರ್ಶಿ ಎ. ಗಣೇಶ್ ಮತ್ತು ಟೇಶಿ ವೆಂಕಟೇಶ್ ‘ನೀನು ಪುಡಂಗಿ-ನಾನು ಪುಡಂಗಿ’ ಅಂತಾ ಅಧೋರೋಮ ಉದುರಿಸಿಕೊಂಡು ಕಿತ್ತಾಡಿದ್ದಾಯ್ತು, ಈಗ ದಿನೇಶ್ ಗಾಂಧಿ ಮತ್ತು ಬಿ.ಆರ್. ಕೇಶವ ವಾಯ್ಸ್ ಮೆಸೇಜುಗಳಲ್ಲೇ ಕನ್ನಡ ಚಿತ್ರರಂಗದ ಮಾನವನ್ನು ಹರಾಜಾಕುತ್ತಿದ್ದಾರೆ. “ನೀನು ಮಲೇಶಿಯಾಗೆ ಹೋಗಿ ಆಸ್ಪತ್ರೆಯಲ್ಲಿ ಮಲಗಿದ್ದಾಗ ನಾನು ಕಾಸು ಕೊಡಿಸಿ ಕಾಪಾಡಿದೆ ಕಣೋ ರಾಸ್ಕಲ್” ಅಂತಾ ಒಬ್ಬ ಅಂದರೆ, “ಸಾಕು ಸುಮ್ನಿರಲೇ ಮಿಸ್ಟರ್… ನೀನೆಂಥವನು ಅಂತಾ ಮೂವತ್ತು ವರ್ಷದಿಂದ ಕಂಡಿದೀನಿ. ನೀನು ಜೈಲಲ್ಲಿ ಕುಂತಿದ್ದಾಗ ನಾವು ಬಂದು ಹೆಲ್ಪ್ ಮಾಡ್ಲಿಲ್ವಾ?” ಅಂತಾ ಮತ್ತೊಬ್ಬ ಮೆಸೇಜು ಬಿಡುತ್ತಾನೆ.
ಇದೆಲ್ಲದರ ನಡುವೆ ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ಜೈಜಗದೀಶ್ ಕೂಡಾ ರೊಚ್ಚಿಗೆದ್ದಿದ್ದಾರೆ. ಸಾರಾ ಗೋವಿಂದು ಅವರನ್ನು “ನೀನು ಪವರ್ ಲೆಸ್ಸು, ಠುಸ್ ಪಟಾಕಿ, ಹೇಲು, ಹೆಮ್ಮಣ್ಣು” ಅಂತೆಲ್ಲಾ ಬೈಯಲು ಶುರುವಿಟ್ಟುಕೊಂಡಿದ್ದಾರೆ. ರೇಷನ್ ಕೊಡಿಸ್ತೀನಿ ಅಂತಾ ಕರೆಸಿ ಕ್ಯೂ ನಿಲ್ಲಿಸಿ ನಿರ್ಮಾಪಕರನ್ನು ಭಿಕ್ಷುಕರನ್ನಾಗಿಸಿದ್ದೀಯ. ನಿನಗೆ ದೇವರು ಒಳ್ಳೇದು ಮಾಡಲ್ಲ…” ಅಂತಾ ವಾಚಾಮಗೋಚರ ಬೈದು ಮೆಸೇಜು ಬಿಟ್ಟಿದ್ದಾರೆ. ಇವನ್ನೆಲ್ಲಾ ಕಂಡ ಹಾಲಿ ಅಧ್ಯಕ್ಷ ಜೈರಾಜ್ ’ನನ್ನ ಅಧಿಕಾರಾವಧಿಯಲ್ಲಿ ಈ ದರಿದ್ರ ಕೊರೋನಾ ವಕ್ಕರಿಸಿಕೊಳ್ಳಬೇಕಿತ್ತಾ?’ ಅಂತಾ ಕುಂತಲ್ಲೇ ತಮ್ಮ ಬುಡ್ಡಬುಡ್ಡು ಕೈಗಳನ್ನು ಹಿಸುಕಿಕೊಳ್ಳುತ್ತಿದ್ದಾರೆ.
ನಾವು ಮೊದಲೇ ತಿಳಿಸಿದಂತೆ, ಕಲ್ಯಾಣ ನಿಧಿಯನ್ನು ತಿಂದು ತೇಗಲು ಚಲನಚಿತ್ರ ವಾಣಿಜ್ಯಮಂಡಳಿಯ ಪಡಸಾಲೆಯಲ್ಲೇ ಕೆಲವರು ಪದ್ಮಾಸನ ಹಾಕಿ ಕುಳಿತುಬಿಟ್ಟಿದ್ದಾರೆ. ಆರಂಭದಲ್ಲಿ ತಲಾ ಸದಸ್ಯರಿಗೆ ಇಪ್ಪತ್ತೈದು ಸಾವಿರ ರುಪಾಯಿ ಕೊಡಿ ಅಂದವರು, ಈಗ ಹದಿನೈದು ಸಾವಿರ ರುಪಾಯಿಗಳನ್ನು ಬಡಿದು ಬಾಯಿಗೆ ಹಾಕಿಕೊಂಡಿದ್ದಾರೆ. ಒಂದು ಕಾಲಕ್ಕೆ ಡಾ. ರಾಜ್ ಕುಮಾರ್ ಅವರು ನಿರ್ಮಾಪಕರನ್ನು ಅನ್ನದಾತರು ಅಂದರು. ಡಾ. ರಾಜ್ ಅವರ ಹುಟ್ಟಿದ ಇದೇ ದಿನದಂದು ಅದೇ ನಿರ್ಮಾಪಕರ ಹೆಸರಿನಲ್ಲಿ ಕೆಲವರು ಅಂಗಲಾಚುವ ಸ್ಥಿತಿಗೆ ತಲುಪಿದ್ದಾರೆ. ಹತ್ತಿರತ್ತಿರ ನಾಲ್ಕು ಸಾವಿರ ಸದಸ್ಯರಲ್ಲಿ ಸದಸ್ಯತ್ವವನ್ನು ರಿನೀವಲ್ ಮಾಡಿಸಿಕೊಂಡವರು, ಮತದಾನದ ಹಕ್ಕು ಹೊಂದಿರುವವರು ಕೇವಲ ಸಾವಿರದ ಮುನ್ನೂರು ಜನ. ಅದರಲ್ಲಿ ಅರ್ಧದಷ್ಟು ಜನ, ಅಂದರೆ ಪ್ರೊಫೆಷನಲ್ ನಿರ್ಮಾಪಕರೆನಿಸಿಕೊಂಡವರು ಈ ತಂಟೆ ತಕರಾರುಗಳ ಕಡೆ ತಲೆ ಹಾಕಿ ಕೂಡಾ ಮಲಗುತ್ತಿಲ್ಲ. ನಿರ್ಮಾಪಕರು, ನಿರ್ದೇಶಕರೆನಿಸಿಕೊಂಡು ಜೀವಮಾನದಲ್ಲಿ ಬೆರಳೆಣಿಕೆಯ ಚಿತ್ರಗಳನ್ನು ಮಾತ್ರ ಮಾಡಿದ್ದಾರೋ ಅಂಥವರ ಹಾವಳಿ ಮಿತಿಮೀರಿದೆ. ಜನ ನೋಡುವ ಒಂದೇ ಒಂದು ಸಿನಿಮಾ ತೆಗೆಯುವ ಯೋಗ್ಯತೆ ಇಲ್ಲದವರು ಈಗ ಆಸ್ಕರ್ ಪ್ರಶಸ್ತಿ ಪಡೆದವರ ರೇಂಜಿಗೆ ಬಿಲ್ಡಪ್ಪು ಕೊಡುತ್ತಿದ್ದಾರೆ; ಸಿನಿಮಾರಂಗದ ಅಘೋಷಿತ ಲೀಡರುಗಳಾಗಿಬಿಟ್ಟಿದ್ದಾರೆ.
“ಏನೇ ಸುಬ್ಬಿ ತಾರಾಟ ಅಂದರೆ, ಶ್ಯಾನುಭೋಗರ ಮನೇಲಿ ದೇವ್ರೂಟ ಅಂದಳು” ಎನ್ನುವ ಮಾತಿನಂತೆ ಮುಖ್ಯವಾಹಿನಿಯ ಸಿನಿಮಾಗಳೊಂದಿಗೆ ಸಂಬಂಧವೇ ಇಲ್ಲದ, ನಾಲಾಯಕ್ಕುಗಳು ಫಿಲಂ ಛೇಂಬರು ಇವರಪ್ಪನ ಮನೆ ಅಂದುಕೊಂಡು ತಿರುಗುತ್ತಿದ್ದಾರೆ. ‘ನಾನೇ ಹೋರಾಟ ಮಾಡಿ ದುಡ್ಡು ಕೊಡಿಸ್ತಿರೋದು’ ಅಂತಾ ಸಿಕ್ಕಸಿಕ್ಕವರೆಲ್ಲಾ ಪುಂಗುತ್ತಿದ್ದಾರೆ. ಇವರೆಲ್ಲರ ಉದ್ದೇಶ ಒಂದೇ. ಅದು ಬರುವ ಚುನಾವಣೆ. ವಿಧಾನಸೌಧದಲ್ಲಿ ಕುಳಿತವರಿಗಿಂತಾ ಹೆಚ್ಚಾಗಿ ರಾಜಕೀಯ ಮಾಡುವ ಚಿತ್ರರಂಗದ ಕೆಲವು ಹುಳಗಳು ವಾಣಿಜ್ಯಮಂಡಳಿ ಎಲೆಕ್ಷನ್ನಿನಲ್ಲಿ ಗೆದ್ದು ಸೀಟು ಹಿಡಿಯಬೇಕು ಅನ್ನೋ ಕಾರಣಕ್ಕೆ ಕೊರೋನಾ ಸಂಕಷ್ಟವನ್ನು ಧಾರಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಸಾವಿನ ಮನೆಯಲ್ಲಿ ಗಳ ಹಿರಿಯೋದು ಅಂದರೆ ಇದೇ ಇರಬೇಕು!
No Comment! Be the first one.