ಗುರುದೇಶಪಾಂಡೆ ನಿರ್ಮಾಣದಲ್ಲಿ, ಜಡೇಶ್ ನಿರ್ದೇಶಿಸಿರುವ, ಪ್ರಜ್ವಲ್ ದೇವರಾಜ್, ಸಂಚಾರಿ ವಿಜಯ್ ಮತ್ತು ನಿಶ್ವಿಕಾ ನಾಯ್ಡು ಮೊದಲಾದವರು ನಟಿಸಿರುವ ಸಿನಿಮಾ ಜಂಟಲ್ ಮನ್. ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಬಂದಿದ್ದರು. ಮನಸ್ಸಿಗಿಷ್ಟವಾಗದಿದ್ದರೆ ಆ ಚಿತ್ರದ ಬಗ್ಗೆ ಏನೇನೂ ಮಾತಾಡದ ದರ್ಶನ್ ಜಂಟಲ್ ಮನ್ ಚಿತ್ರತಂಡದ ಪ್ರಯತ್ನವನ್ನು ಅಪಾರವಾಗಿ ಮೆಚ್ಚಿದ್ದಾರೆ. ಈ ಕಾರಣಕ್ಕೇ ಹೃದಯದಿಂದ ಬಂದ ಮಾತುಗಳನ್ನು ನುಡಿದಿದ್ದಾರೆ. ಏನದು ಎನ್ನುವ ವಿವರ ಇಲ್ಲಿದೆ ಓದಿ…
ಎಲ್ಲಿಂದ ಶುರು ಮಾಡೋದು ಅಂದ್ರೆ, ಟೀಸರ್, ಸಾಂಗು ಎಲ್ಲವನ್ನೂ ನೋಡಿದ್ದೀವಿ. ಈ ಕಾರ್ಯಕ್ರಮವನ್ನು ಎಷ್ಟೋ ಜನ ನೋಡ್ತಿದ್ದೀರ ಅಂತಾ ನನಗೆ ಗೊತ್ತು, ಮೀಡಿಯಾದವರೂ ಇದ್ದೀರ… ಎಲ್ಲರಲ್ಲೂ ನನ್ನದೊಂದೇ ಮನವಿ ದಯವಿಟ್ಟು ಕನ್ನಡದ ಜನ ಎದ್ದೇಳಿ ಅನ್ನೋದು. ಯಾಕೆ ಈ ಮಾತು ಹೇಳ್ತಿದೀನಿ ಅಂದ್ರೆ, ಸಂಚಾರಿ ವಿಜಯ್ ಅವರು ಇಲ್ಲಿದ್ದಾರೆ. ಬಹಳಾ ದೊಡ್ಡ ನಟ ಅವರು. ನಾನು ಅವನಲ್ಲ ಅವಳು ನೋಡಿದೆ. ಅವರ ಮೇಲೆ ಫಿದಾ ಆಗಿಬಿಟ್ಟೆ. ಅಂತಾ ಒಳ್ಳೇ ಪ್ರಯತ್ನವಾಗಿತ್ತು. ಅಂಥಾ ಸಿನಿಮಾ ಪರಭಾಷೆಯಲ್ಲಿ ಬಂದಾಗ ಬೆನ್ನು ತಟ್ಟಿ, ಹೊಗಳಿ, ದುಡ್ಡೂ ಕೊಟ್ಟು ಕಳಿಸ್ತೀವಿ. ಆದರೆ ಬೇಸರ ಆಗುತ್ತೆ. ನಿಜವಾಗ್ಲೂ ಅಸಹ್ಯ ಆಗತ್ತೆ. ನಾವು ಕನ್ನಡಿಗರು ಅಂತಾ ಹಿರಿಮೆಯಿಂದ ಹೇಳಿಕೊಳ್ಳುತ್ತೇವೆ.
ಆದರೆ ಏನೂ ಮಾಡಕ್ಕಾಗಲ್ಲ. ಈ ಕಡೆ ಆ ಕಡೆಯವರನ್ನು ಚನ್ನಾಗಿ ನೋಡಿಕೊಂಡು ನಮ್ಮವರನ್ನು ನಾವು ಬಿಟ್ಟುಬಿಡುತ್ತೇವೆ. ಜಂಟಲ್ ಮನ್ ಸಿನಿಮಾದಲ್ಲಿ ಪ್ರಜ್ಜು ತುಂಬಾ ಶ್ರಮ ವಹಿಸಿ ನಟಿಸಿದ್ದಾನೆ. ಹದಿನೆಂಟು ಗಂಟೆ ಮಲಗುವ ಪಾತ್ರ ಅವನದ್ದು. ಪ್ರತಿಯೊಬ್ಬರೂ ಶ್ರಮ ವಹಿಸಿದ್ದಾರೆ. ಎಲ್ಲದಕ್ಕಿಂತಾ ಮುಖ್ಯವಾಗಿ ತಾವೇ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕನ ಸಿನಿಮಾಗೆ ಬಂಡವಾಳ ಹಾಕಿರುವ ಗುರುದೇಶಪಾಂಡೆ ಅವರನ್ನು ಮೆಚ್ಚಲೇಬೇಕು. ದಯವಿಟ್ಟು ನಮ್ಮ ಕನ್ನಡ ಜನತೆ ಇಂಥಾ ಸಿನಿಮಾವನ್ನು ಕೈ ಹಿಡಿಯಬೇಕು. ಎಷ್ಟೋ ಸಲ ನನ್ನ ಬಳಿ ಬಂದು ಸಾಕಷ್ಟು ಜನ ‘ಏನ್ ದರ್ಶನ್ ಕನ್ನಡಲ್ಲಿ ಇಂಥಾ ಸಿನಿಮಾಮೇ ಮಾಡಲ್ಲ. ತಮಿಳಲ್ಲಿ ಅದು ನೋಡಿದೆ, ತೆಲುಗಲ್ಲಿ ಇದು ನೋಡಿದೆ’ ಅನ್ನುತ್ತಿರುತ್ತಾರೆ. ಅಂಥವರಿಗೆ ನಾನು ಹೇಳೋದು “ಸ್ವಲ್ಪ ಅಂಡು ಬಗ್ಗಿಸಿ ಕುಂತು ಇಂಥಾ ಸಿನಿಮಾ ನೋಡಿ. ಆಗ ಗೊತ್ತಾಗತ್ತೆ ಆಗ ಗೊತ್ತಾಗತ್ತೆ ಕನ್ನಡ ಸಿನಿಮಾ ಎಂಥದ್ದು ಅಂತಾ”.
ಇದು ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಾತುಗಳು… ನಿಜ. ಇತರೆ ಭಾಷೆಯ ಸುಮಾರಾದ ಸಿನಿಮಾಗಳನ್ನು ವಾಂತಿ ಬರುವಷ್ಟು ಹೊಗಳುವ ನಮ್ಮವರು, ಇಲ್ಲಿ ಅತ್ಯುತ್ತಮ ಸಿನಿಮಾಗಳು ಬಂದಾಗಲೂ ಥಿಯೇಟರಿನ ಕಡೆ ಬರೋದಿಲ್ಲ. ದರ್ಶನ್ ಅವರ ಮಾತು ಅಂಥವರ ಕಿವಿಗೆ ಬೀಳಲಿ…
No Comment! Be the first one.