ಒಂದು ಕಾಲಕ್ಕೆ ದಿನೇಶ್ ಬಾಬು ಅನ್ನೋ ಹೆಸರಿಗೆ ಸ್ಟಾರ್ ವರ್ಚಸ್ಸಿತ್ತು. ಅವರ ನಿರ್ದೇಶನದ ಸಿನಿಮಾಗಳು ಬಿಡುಗಡೆಯಾಗುತ್ತವೆಂದರೆ ಪತ್ರಿಕೆಗಳಲ್ಲಿ ಪುಟಗಟ್ಟಲೆ ಸಂದರ್ಶನ, ವರದಿಗಳು ಬರುತ್ತಿದ್ದವು. ಜನ ಆ ಸಿನಿಮಾಗಳಿಗಾಗಿ ಕಾದು ಕೂರುತ್ತಿದ್ದರು. ಚಿತ್ರ ವಿತರಕರು ನನಗೆ ನಿನಗೆ ಎಂದು ದುಂಬಾಲು ಬೀಳುತ್ತಿದ್ದರು. ದಿನೇಶ್ ಬಾಬು ಸಿನಿಮಾ ಬಂದರೆ ತಿಂಗಳುಗಟ್ಟಲೆ ಥಿಯೇಟರು ತುಂಬಿಕೊಳ್ಳುತ್ತಿದ್ದದ್ದೂ ನಿಜ.
ಈಗ ಕಾಲ ಬದಲಾಗಿದೆ. ಯಾರೆಲ್ಲಾ ನಿರ್ದೇಶಕರು ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗಿಲ್ಲವೋ? ಅಂಥವರ ಸಿನಿಮಾಗಳನ್ನು ಜನ ಮೂಸಿಯೂ ನೋಡುತ್ತಿಲ್ಲ. ದಿನೇಶ್ ಬಾಬು ಅವರ ಸಿನಿಮಾಗಳಿಗೂ ಇದೇ ಗತಿ ಬಂದೊದಗಿದೆ.
ಯಾವ ಥಿಯೇಟರಿನವರು, ಪ್ರದರ್ಶಕರು ದಿನೇಶ್ ಬಾಬು ಸಿನಿಮಾ ಬರುವಿಕೆಗಾಗಿ ಕಾಯುತ್ತಿದ್ದರೋ ಅದೇ ಥಿಯೇಟರುಗಳಲ್ಲಿ ಇವತ್ತು ಬಾಬಣ್ಣನ ಸಿನಿಮಾಗೆ ಜಾಗವನ್ನೇ ಕೊಡುತ್ತಿಲ್ಲ.
ಮಾಸ್ಟರ್ ಆನಂದ್ ಅಪರೂಪಕ್ಕೆನ್ನುವಂತೆ ಹೀರೋ ಆಗಿ ನಟಿಸಿರುವ ಸಿನಿಮಾ ‘ಹಗಲು ಕನಸು. ಎಲ್ಲಾ ಅಂದುಕೊಂಡಂತೇ ಆಗಿದ್ದಿದ್ದರೆ ನೆನ್ನೆ ಶುಕ್ರವಾರ ಈ ಪಿಚ್ಚರ್ರು ರಿಲೀಸಾಗಿರಬೇಕಿತ್ತು. ಥಿಯೇಟರುಗಳು ಸಿಗದ ಕಾರಣ ಸಿನಿಮಾ ಬಿಡುಗಡೆಯನ್ನು ಮುಂದೂಡಿದ್ದಾರೆ.
ಬಾಬು. ಸುಪ್ರಭಾತ, ಇದು ಸಾಧ್ಯ, ಇನ್ಸ್ಪೆಕ್ಟರ್ ವಿಕ್ರಂ, ಹೆಂಡ್ತಿಗೇಳ್ಬೇಡಿ, ಅಮೃತವರ್ಷಿಣಿ, ಲಾಲಿ, ನಿಶಬ್ದದಂತಾ ಸಿನಿಮಾಗಳು ಅಚ್ಚುಕಟ್ಟಾಗಿ ಬಂದಿದ್ದವು. ನಿರ್ದೇಶನದ ಜೊತೆಗೆ ಛಾಯಾಗ್ರಹಣವನ್ನೂ ನಿಭಾಯಿಸುತ್ತಿದ್ದ ಬಾಬು ಕ್ರಮೇಣ ಕಳಪೆ ಸಿನಿಮಾಗಳತ್ತ ವಾಲಿದರು. ಸಣ್ಣದೊಂದು ಪತ್ರಿಕಾಗೋಷ್ಟಿ ನಡೆಸುವ ಯೋಗ್ಯತೆಯನ್ನೂ ದಿನೇಶ್ ಬಾಬು ಕಳೆದುಕೊಂಡಿದ್ದಾರೆ. ‘ಯಾರಾದ್ರೂ ನಾಲ್ಕು ಜನ ಪ್ರೆಸ್ನವರನ್ನು ಕರೆಸಿ. ಎಲ್ಲರನ್ನೂ ಕರೆಸಿ ಪ್ರೆಸ್ ಮೀಟ್ ಮಾಡಲು ಕಾಸಿಲ್ಲ ಅಂತಾ ಪ್ರಚಾರಕರ್ತರ ಬಳಿ ಹೇಳಿ, ಅವರು ಬಾಬು ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ ಎನ್ನುವ ಸುದ್ದಿಯೂ ಕೇಳಿಬರುತ್ತಿದೆ. ಪರಿಸ್ಥಿತಿ ಹೀಗಿರೋದರಿಂದ ಈ ಮಲೆಯಾಳಿ ಕುಟ್ಟಿ ನಿರ್ದೇಶಕನ ಸಿನಿಮಾಗಳು ರಿಲೀಸಾದರೂ, ಆಗದೇ ಇದ್ದರೂ ಜನಕ್ಕೆ ಗೊತ್ತೇ ಆಗುತ್ತಿಲ್ಲ.
ಹೇಗೋ ಕಿರುತೆರೆ ನಿರೂಪಣೆ, ಸೀರಿಯಲ್ಲು ಅಂತೆಲ್ಲಾ ಬ್ಯುಸಿಯಾಗಿದ್ದ ಮಾಸ್ಟರ್ ಆನಂದ್ ದಿನೇಶ್ ಬಾಬುವನ್ನು ನಂಬಿದ ಕಾರಣಕ್ಕೆ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
No Comment! Be the first one.