ಎರಡು ವರ್ಷಗಳ ಹಿಂದಷ್ಟೇ ಇವರ ಐದು ವರ್ಷದ ಮಗ ಸಿದ್ದಾರ್ಥ್ ತೀರಿಕೊಂಡಿದ್ದ. ಆ ನೋವಿನಲ್ಲಿದ್ದ ಜಯೇಶ್ ಬದುಕಲ್ಲಿ ಮತ್ತೊಂದು ಕಂಟಕ ಎದುರಾಯಿತು. ಈ ನಟನಿಗೆ ಕ್ಯಾನ್ಸರ್ ತಗುಲಿದೆ ಎನ್ನುವ ರಿಪೋರ್ಟು ಹೊರಬಿದ್ದಿತ್ತು.
ಆ ವ್ಯಕ್ತಿ ಸ್ಟೇಜ್ ಮೇಲೆ ನಿಂತು ಸೂಪರ್ ಸ್ಟಾರ್ಗಳನ್ನು ಅನುಕರಿಸಿ ಮಿಮಿಕ್ರಿ ಮಾಡುತ್ತಿದ್ದರೆ, ಜನ ಉಳ್ಳಾಡಿಕೊಂಡು ನಗುತ್ತಿದ್ದರು. ತೆರೆ ಮೇಲೆ ಬಂದರಂತೂ ಥೇಟರಿಗೆ ಥೇಟರೇ ಗೊಳ್ ಎನ್ನುತ್ತಿತ್ತು. ಆತ ಮಲಯಾಳಂನಲ್ಲಿ ಹೆಸರು ಮಾಡುತ್ತಿದ್ದ ಅದ್ಭುತ ಕಾಮಿಡಿ ನಟ ಮತ್ತು ಮಿಮಿಕ್ರಿ ಕಲಾವಿದ ಕಲಾಭವನ್ ಜಯೇಶ್.
ಕನ್ನಡ, ತಮಿಳು, ಮಲಯಾಳಂ ಸಿನಿಮಾರಂಗದ ಬಹುತೇಕ ಕಾಮಿಡಿ ದಿಗ್ಗಜರು ಪುತ್ರ ಶೋಕದಿಂದ ನರಳಿದವರು. ಜಯೇಶ್ ಲೈಫು ಕೂಡಾ ಅದಕ್ಕೆ ಹೊರತಾಗಿರಲಿಲ್ಲ. ಎರಡು ವರ್ಷಗಳ ಹಿಂದಷ್ಟೇ ಇವರ ಐದು ವರ್ಷದ ಮಗ ಸಿದ್ದಾರ್ಥ್ ತೀರಿಕೊಂಡಿದ್ದ. ಆ ನೋವಿನಲ್ಲಿದ್ದ ಜಯೇಶ್ ಬದುಕಲ್ಲಿ ಮತ್ತೊಂದು ಕಂಟಕ ಎದುರಾಯಿತು. ಈ ನಟನಿಗೆ ಕ್ಯಾನ್ಸರ್ ತಗುಲಿದೆ ಎನ್ನುವ ರಿಪೋರ್ಟು ಹೊರಬಿದ್ದಿತ್ತು. ಅದಾಗಿ ಒಂದು ವರ್ಷವೇ ಆಯಿತು. ಹೇಗೋ ಜಯೇಶ್ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿಯಿತ್ತು. ಜನ ಅದನ್ನು ನಂಬುವ ಹೊತ್ತಿಗೇ ನಂಬಲಸಾಧ್ಯ ಸುದ್ದಿಯೂ ಅಪ್ಪಳಿಸಿದೆ; ಜಯೇಶ್ ಇನ್ನಿಲ್ಲ!
ರಂಗಭೂಮಿ, ವೇದಿಕೆ ಕಾರ್ಯಕ್ರಮಗಳಲ್ಲಿ ಹೆಸರು ಮಾಡುತ್ತಿದ್ದಂತೇ ಮುಲ್ಲಾ ಚಿತ್ರದಿಂದ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಜಯೇಶ್ ನಂತರ ಪ್ರೀತಮ್-೨, ಕ್ರೇಜ಼ಿ ಗೋಪಾಲಮ್, ಸುಸು ಸುಧಿ ವಾಲ್ಮೀಕಮ್, ಇತ್ತೀಚೆಗೆ ಬಂದು ಸದ್ದು ಮಾಡಿದ್ದ ಜಲ್ಲೀಕಟ್ಟು ತನಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಸಾಯುವ ವಯಸ್ಸೂ ಅಲ್ಲ. ಇನ್ನೂ ನಲವತ್ನಾಲ್ಕು. ಆದರೆ, ಕ್ಯಾನ್ಸರ್ ಯಾರನ್ನು ತಾನೆ ಬಿಡುತ್ತಿದೆ. ಕ್ರೂರಿ ಕಾಯಿಲೆಗೆ ವಯಸ್ಸು, ವ್ಯಕ್ತಿ, ಸಾಧನೆ, ಯಾವುದೂ ಲೆಕ್ಕಕ್ಕಿಲ್ಲ. ಇನ್ನು ಜಯೇಶ್ ಮಿಮಿಕ್ರಿ ದನಿ ಕೇಳಿಸಲು ಸಾಧ್ಯವಿಲ್ಲ. ಲವಲವಿಕೆಯ ನಡನಟಯನ್ನು ನೋಡಲು ಸಾಧ್ಯವಿಲ್ಲ. ಇಷ್ಟು ದಿನ ಎಲ್ಲರನ್ನೂ ನಗಿಸಿದ್ದ ಜಯೇಶ್ ದುಃಖವನ್ನು ಉಳಿಸಿ ಹೊರಟಿದ್ದಾರೆ. ಹೋಗಿಬನ್ನಿ..