ಪದ್ಮರಾಜ್ ಫಿಲಂಸ್ ನಿರ್ಮಿಸಿರುವ ‘ಕಲಾವಿದ’ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡಗಡೆ ಇತ್ತೀಚೆಗೆ ಎಸ್ ಆರ್ ವಿ ಸಭಾಂಗಣದಲ್ಲಿ ನಡೆಯಿತು. ವ್ಯಂಗ್ಯಚಿತ್ರಕಾರನ ಸುತ್ತ ನಡೆಯುವ ಕಥೆ ಆಧರಿಸಿರುವ ಈ ಚಿತ್ರವನ್ನು ಶಿವಾನಂದ್ ಹೆಚ್ ಡಿ ನಿರ್ದೇಶಿಸಿದ್ದಾರೆ.
ನಾನು ಈ ಮೈಕ್ ಹಿಡಿಯಬೇಕೆಂದು ತುಂಬಾ ದಿನಗಳ ಹಿಂದೆ ಕನಸು ಕಂಡವನು. ಆ ಕನಸು ಈಗ ನನಸಾಗಿದೆ. ನನ್ನ ಕನಸಿಗೆ ಜೀವ ತುಂಬಿದ್ದ, ನಿರ್ಮಾಪಕ – ನಾಯಕ ಪ್ರದೀಪ್ ಕುಮಾರ್ ಅವರಿಗೆ ನಾನು ಆಭಾರಿ. ಯಾವುದಾದರೂ ವಿಭಿನ್ನಕಥೆಯ ಮೂಲಕ ನಾನು ಜನರನ್ನು ತಲುಪಬೇಕು ಅಂದುಕೊಂಡೆ. ವ್ಯಂಗ್ಯಚಿತ್ರಕಾರ (ಕಾರ್ಟೂನಿಸ್ಟ್) ಕುರಿತ ಕಥೆ ಸಿದ್ದಮಾಡಿಕೊಂಡೆ. ಆ ಕಥೆ ಸಿನಿಮಾ ರೂಪದಲ್ಲಿ ನಿಮ್ಮ ಮುಂದೆ ಮೂಡಿ ಬರುತ್ತಿದೆ.ನನಗೆ ಸಹಕಾರ ನೀಡಿದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ ಧನ್ಯವಾದ ಎನ್ನುತ್ತಾರೆ ನಿರ್ದೇಶಕ ಶಿವಾನಂದ್ ಹೆಚ್ ಡಿ.
ನಾನು ಮೂಲತಃ ಇಂಜಿನಿಯರ್. ನಂತರ ರಂಗ್ ದೇ ಬಸಂತಿ ಎಂಬ ಹೋಟೆಲ್ ತೆಗೆದು ಹೋಟೆಲ್ ಉದ್ಯಮಕ್ಕೂ ಬಂದೆ. ಈಗ ನಿರ್ಮಾಪಕ – ನಟನಾಗಿ ನಿಮ್ಮ ಮುಂದೆ ಬಂದಿದ್ದೇನೆ. ‘ನಿರ್ಮಾಪಕ ಆಗಬೇಕೆಂದುಕೊಂಡಾಗ ನನ್ನ ಬಳಿ ನೂರು ರೂಪಾಯಿ ಇರಲಿಲ್ಲ.
ನಂತರ ಹೋಟೆಲ್ ಉದ್ಯಮದಿಂದ ಬಂದ ದುಡ್ಡಿನಿಂದ ಚಿತ್ರ ನಿರ್ಮಿಸಲು ಮುಂದಾದೆ. ನಾವೇ ಒಂದು ತಂಡಕಟ್ಟಿಕೊಂಡು ಸಿನಿಮಾ ನಿರ್ಮಾಣ ಕಾರ್ಯ ಆರಂಭಿಸಿದ್ದೆವು. ನಂತರ ನಿರ್ದೇಶಕರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ಎಲ್ಲರ ಸಹಕಾರದಿಂದ ಚಿತ್ರ ಇದೇ 12 ರಂದು ತೆರೆಗೆ ಬರಲಿದೆ ಎಂದರು ನಿರ್ಮಾಪಕ ಹಾಗೂ ನಾಯಕ ಪ್ರದೀಪ್ ಕುಮಾರ್.
ಈ ಹಿಂದೆ “ರಣರಣಕ” ಚಿತ್ರದಲ್ಲಿ ಹಾಗೂ ಕೆಲವು ಪ್ರಸಿದ್ದ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಸಂಭ್ರಮ ಈ ಚಿತ್ರದ ನಾಯಕಿ. ನನ್ನ ಪಾತ್ರ ಕೂಡ ಈ ಚಿತ್ರದಲ್ಲಿ ಚೆನ್ನಾಗಿದೆ ಎನ್ನುತ್ತಾರೆ ಸಂಭ್ರಮ. ಮಂಜುನಾಥ್ ಹೆಗ್ಡೆ, ಅರುಣಾ ಬಾಲರಾಜ್, ಮೂ ಗು ಸುರೇಶ್, ವರ್ಷ ಮಲ್ಲೇಶ್, ಗೀತ( ಗುಂಡಮ್ಮ) ಶ್ರೀಧರ್, ಜಗದೀಶ್, ಲೋಕೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ವಿವೇಕ್ ಚಕ್ರವರ್ತಿ – ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಮೂರು ಹಾಡುಗಳಿಗೆ ಸಂಗೀತ ನೀಡಿರುವ ವಿವೇಕ್ ಚಕ್ರವರ್ತಿ ಅವರು ಸಹ ಸಂಗೀತದ ಬಗ್ಗೆ ತಮ್ಮ ಮಾತುಗಳನಾಡಿದರು. ರುಮಿತ್ ಅವರು ಹಾಡಿರುವ ಹಾಡಿನ ಲಿರಿಕಲ್ ವಿಡಿಯೋ ಪ್ರದರ್ಶಿಸಲಾಯಿತು. ದಿನಪತ್ರಿಕೆಯೊಂದರಲ್ಲಿ ವ್ಯಂಗ್ಯಚಿತ್ರಕಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಾಂತೇಶ್ ಬಡಿಗೇರ್ ಈ ಚಿತ್ರಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಸಹ ನಿರ್ಮಾಪಕ ಸುರೇಶ್, ಕಾರ್ಟುನಿಸ್ಟ್ ಪ್ರಪುಲ್(ಒಡಿಶಾ),
ನಟರಾದ ಮೈತ್ರಿ ಜಗ್ಗಿ ಹಾಗೂ ಲೋಕೇಶ್ ಸಹ ಮಾಧ್ಯಮದ ಮುಂದೆ ತಮ್ಮ ಅನುಭವ ಹಂಚಿಕೊಂಡರು. ಚಿದಾನಂದ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವೆಂಕಿ ಯು ಡಿ ವಿ ಸಂಕಲನ ಹಾಗೂ ಆರ್ಯ ರೋಷನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
Comments