‘ಕಪಟನಾಟಕ ಪಾತ್ರಧಾರಿಯ ವತಿಯಿಂದ ಕೆಲ ದಿನಗಳ ಹಿಂದಷ್ಟೇ ಒಂದು ಲಿರಿಕಲ್ ವಿಡಿಯೋ ರಿಲೀಸಾಗಿತ್ತು. ‘ಯಾಕೆ ಅಂತಾ ಗೊತ್ತಿಲ್ಲಾ ಕಣ್ರೀ ಅನ್ನೋ ಹಾಡನ್ನು ಫೇಸ್ ಬುಕ್ ವಾಲ್ ಕಾನ್ಸೆಪ್ಟಿನಲ್ಲಿ ಡಿಫರೆಂಟಾದ ಲಿರಿಕಲ್ ವಿಡಿಯೋ ಮಾಡಿದ್ದರು. ಈಗ ‘ಹಸಿದಾ ಶಿಖನೂ ಬೇಟೆಯಾಡಿದೆ… ಒಡಲಾ ಕಸಿದು ಸೂರೆ ಮಾಡಿದೆ ಎನ್ನುವ ಮತ್ತೊಂದು ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಚಾಣುಕ್ಯ ರಚಿಸಿರುವ ವಿಕ್ಷಿಪ್ತ ಸಾಲುಗಳು ಮತ್ತು ಅದಕ್ಕೆ ಹೊಂದುವ ಹಿನ್ನೆಲೆ, ಆದಿಲ್ ನದಾಫ್ ಅವರ ಸಂಗೀತ, ಈಶ ಸುಚಿ ಅವರ ದನಿ ಎಲ್ಲವೂ ಕಾಡುವಂತಿದೆ.
https://www.youtube.com/watch?v=sOQMEYZ2tho
ಅಪ್ಪಟ ಪ್ರತಿಭೆಗಳೆಲ್ಲಾ ಒಂದೆಡೆ ಸೇರಿದರೆ ಅಲ್ಲಿ ಗುಣಮಟ್ಟದ ಸಿನಿಮಾ ಹೊರಬರುತ್ತದೆ ಅನ್ನೋದು ಚಿತ್ರರಂಗದಲ್ಲಿ ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಸದ್ಯ ‘ಕಪಟನಾಟಕ ಪಾತ್ರಧಾರಿ ಚಿತ್ರತಂಡ ರಿಲೀಸು ಮಾಡಿರುವ ಎರಡು ಹಾಡುಗಳನ್ನು ಕೇಳಿದ ಯಾರಿಗೇ ಆದರೂ ಅದು ನಿಜ ಅನ್ನಿಸದೇ ಇರಲಾರದು. ಯುವ ನಿರ್ದೇಶಕ ಕ್ರಿಶ್ ಕನಸಿಟ್ಟು ನಿರ್ದೇಶಿಸಿರುವ ಚಿತ್ರ ‘ಕಪಟನಾಟಕ ಪಾತ್ರಧಾರಿ. ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ಮತ್ತು ಹುಲಿರಾಯ ಎನ್ನುವ ಅಪರೂಪದ ಸಿನಿಮಾದ ಮುಖಾಂತರ ನಾಯಕನಟನಾಗಿಯೂ ಪರಿಚಯಗೊಂಡಿದ್ದ ನಟ ಬಾಲು ನಾಗೇಂದ್ರ ಈ ಚಿತ್ರಕ್ಕೂ ಹೀರೋ. ನಟಿ ಸಂಗೀತಾ ಭಟ್ ಬಾಲುಗೆ ಜೋಡಿಯಾಗಿ ನಟಿಸಿದ್ದಾರೆ. ಆಟೋ ಡ್ರೈವರ್ ಒಬ್ಬನ ಬದುಕಿನ ಹಾದಿಯನ್ನು ತೆರೆದಿಡುವ ಅಪರೂಪದ ಕಥಾಹಂದರ ಹೊಂದಿರುವ ಚಿತ್ರ ‘ಕಪಟನಾಟಕ ಪಾತ್ರಧಾರಿ.
‘ಕಪಟನಾಟಕ ಪಾತ್ರಧಾರಿ ಬೆಂಗಳೂರಿನ ಸುತ್ತಮುತ್ತ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ಕ್ರಿಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಆದಿಲ್ ನದಾಫ಼್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದು, ಕ್ರಿಶ್, ವೇಣು ಹಸ್ರಾಳಿ, ಚಾಣಕ್ಯ, ಅನಿರುದ್ಧ್ ಶಾಸ್ತ್ರಿ ಹಾಡುಗಳನ್ನು ರಚಿಸಿದ್ದಾರೆ. ಹರಿಚರಣ್, ಸಿದ್ಧಾರ್ಥ್, ಮಾಧುರಿ ಶೇಷಾದ್ರಿ, ಇಶಾ ಸುಚಿ, ಪವನ್ ಪಾರ್ಥ ಹಾಗೂ ಅನಿರುದ್ದ್ ಶಾಸ್ತ್ರಿ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.
ಕಿರಣ್ ಚಂದ್ರ ಹಾಗೂ ವೇಣು ಹಸ್ರಾಳಿ ಸಂಭಾಷಣೆ ಬರೆದಿದ್ದಾರೆ. ಪರಮೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಅವರ ಸಂಕಲನವಿದೆ. ಸಂಗೀತ ಭಟ್, ಬಾಲು ನಾಗೇಂದ್ರ, ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮಿನಾಡು, ಉಗ್ರಂ ಮಂಜು, ಜಯದೇವ್, ನವೀನ್ ವಾಸುದೇವ್, ಸುನೀಲ್ ಕುಲಕರ್ಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಚಿತ್ರತಂಡ ಒಂದೊಂದೇ ಲಿರಿಕಲ್ ವಿಡಯೋವನ್ನು ಯೂ ಟ್ಯೂಬಿನಲ್ಲಿ ರಿಲೀಸ್ ಮಾಡುವ ಮುಖಾಂತರ ಚಿತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಇಷ್ಟಿಷ್ಟೇ ಕುತೂಹಲ ಬಿತ್ತುತ್ತಿದೆ. ಬಹುಶಃ ಇದು ಸಿನಿಮಾ ಬಿಡುಗಡೆಯ ಹೊತ್ತಿಗೆ ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ನೋಡಲೇಬೇಕು ಅನ್ನೋ ಬಯಕೆಯ ಹೆಮ್ಮರವಾಗಿ ಬೆಳೆಯಬಹುದು!
No Comment! Be the first one.