ಚಿನ್ನದ ಗಣಿ ಕೆಜಿಎಫ್ ಆಧಾರಿತವಾಗಿಯೇ ಸಿನಿಮಾ ಮಾಡಿ ಈಗಾಗಲೇ ಗೆದ್ದಿರುವ ರಾಕಿಂಗ್ ಸ್ಟಾರ್ ಯಶ್ ಅದರ ಮುಂದುವರೆದ ಭಾಗ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಅಂಡ್ ಟೀಮ್ ಮೊದಲಿಗಿಂತ ಮತ್ತಷ್ಟು ಎನರ್ಜಿಟೆಕ್ ಆಗಿಯೇ ಕೆಜಿಎಫ್ 2 ಚಿತ್ರೀಕರಣವನ್ನು ದೊಡ್ಡ ದೊಡ್ಡ ಸೆಟ್ ನಲ್ಲಿಯೇ ಮಾಡುತ್ತಿದೆ.
ಭಾರತದಾದ್ಯಂತ ಚಾಪ್ಟರ್ ಒಂದರ ಮೂಲಕ ಸದ್ದು ಮಾಡಿದ್ದ ಕೆಜಿಎಫ್ ಎರಡನೇ ಚಾಪ್ಟರ್ ಮೂಲಕ ಧೂಳೆಬ್ಬಿಸಬೇಕೆಂಬ ಜವಾಬ್ದಾರಿಯಿಂದಲೇ ಕೆಜಿಎಫ್ 2 ಚಿತ್ರೀಕರಣಕ್ಕೆ ಯಾವುದೇ ವಿಘ್ನಗಳಾಗದಂತೆ ಆರಂಭದಿಂದಲೇ ನೋಡಿಕೊಂಡಿತ್ತು. ಆದರೆ ಅದೇ ಗ್ಯಾಪ್ ನಲ್ಲಿಯೇ ಕೆಜಿಎಫ್ ಟೀಂ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಯೆಸ್… ಹೆಚ್ ಎಂ ಟಿ ಯಲ್ಲಿ ಬೃಹತ್ತಾದ ಕೃತಕ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಣವನ್ನು ಮುಗಿಸಿಕೊಂಡು ಕೆಜಿಎಫ್ ನ ಸೈನೈಡ್ ದಿಬ್ಬದಲ್ಲಿ ಚಿತ್ರೀಕರಣದಲ್ಲಿ ನಿರತವಾಗಿದ್ದ ಕೆಜಿಎಫ್ ಟೀಂ ನ ವಿರುದ್ಧವಾಗಿ ರಾಷ್ಟ್ರೀಯ ಪ್ರಜಾ ಚಕ್ರವ್ಯೂಹ ಪಕ್ಷದ ಅಧ್ಯಕ್ಷ ಎನ್. ಶ್ರೀನಿವಾಸ್ ಎಂಬುವವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಲ್ಲದೇ ಕೆಜಿಎಫ್ ಚಿತ್ರದಲ್ಲಿ ಕೆಜಿಎಫ್ ಪ್ರದೇಶವನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದ್ದು, ಕೆಜಿಎಫ್ ನ ಸಂರಕ್ಷಿತ ಸೈನೈಡ್ ದಿಬ್ಬದ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿ ಪರಿಸರವನ್ನು ಹಾಳುಗೆಡವುತ್ತಿದ್ದಾರೆಂಬ ಆರೋಪವನ್ನು ಮಾಡಿದ್ದಾರೆನ್ನಲಾಗುತ್ತಿದೆ. ಇದರ ಆಧಾರದ ಮೇಲೆ ಚಿತ್ರದ ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಿ ನಿರ್ಮಾಪಕರಿಗೆ ಕೆಜಿಎಫ್ ಜೆಎಂಎಫ್ ಸಿ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.