ಶ್ರೀನಿವಾಸ್ ರಾವ್ ನಿರ್ಮಾಣ ಮಾಡಿರುವ ಖನನ ಚಿತ್ರ ಇದೇ ಶುಕ್ರವಾರ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ತಮಿಳಿನಲ್ಲಿ ಇದಕ್ಕೆ ದಗನಂ ಎಂದು ಹೆಸರಿಟ್ಟರೆ, ತೆಲುಗಿನಲ್ಲಿ ಖನನಂ ಎಂದು ಹೆಸರಿಡಲಾಗಿದೆ. ಇನ್ನು ಕನ್ನಡದಲ್ಲಿ ಖನನ ಎಂದು ಟೈಟಲ್ ನೀಡಲಾಗಿದೆ. ಐದು ಶೇಡ್ ಗಳಿರುವ ಪಾತ್ರಕ್ಕೆ ಬಣ್ಣ ಹಚ್ಚಿರುವ ಆರ್ಯವರ್ಧನ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕನಾಗಿ ಎಂಟ್ರಿ ಪಡೆಯುವ ಸಂತಸದಲ್ಲಿದ್ದಾರೆ. ಪಾಪ ಮಾಡುವಾಗ ಆನಂದ ಇರುತ್ತದೆ. ಆದರೆ ಅದರ ಪರಿಣಾಮ ಭೀಕರವಾಗಿರುತ್ತದೆ. ಪಾಪ ಶಾಪವಾಗಿ ನಮ್ಮನ್ನು ಹಿಂಬಾಲಿಸುತ್ತದೆ ಎನ್ನುವುದೇ ಖನನದ ಒನ್ ಲೈನ್.
ನಿರ್ದೇಶಕ ರಾಧಾ ಅವರು ಖನನ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಎಂಟ್ರಿ ಪಡೆಯುತ್ತಿದ್ದು, ಇದು ಅವರ ಚೊಚ್ಚಲ ಸಿನಿಮಾವಾಗಿದೆ. ಚಿತ್ರದ ಸನ್ನಿವೇಶಗಳು ವಿಭಿನ್ನವಾಗಿದ್ದು, ಅರ್ಧಗಂಟೆ ಕಾಲ ಕ್ಲೈಮ್ಯಾಕ್ಸ್ ಕಟ್ಟಿಕೊಡಲಾಗಿದೆ ಎಂದು ವಿಶ್ವಾಸದ ಮಾತುಗಳಾಡುತ್ತಾರೆ ರಾಧಾ. ಇನ್ನು ಬಣ್ಣದ ಸೆಳೆತಕ್ಕೆ ಒಳಗಾಗಿ ಚೆನೈಗೆ ಹೋಗಿ ಮೋಸ ಹೋಗಿ ತಾನು ಬಣ್ಣದ ಲೋಕಕ್ಕೆ ಎಂಟ್ರಿ ಪಡೆಯದ ಕಾರಣ, ತನ್ನ ಕನಸನ್ನು ಮಗನ ಮೂಲಕ ಸಾಕಾರಗೊಳಿಸುತ್ತಿದ್ದಾರಂತೆ ನಿರ್ಮಾಪಕ ಬಿ. ಶ್ರೀನಿವಾಸ್ ರಾವ್.
ಇಂದಿನ ಕಾಲಘಟ್ಟದಲ್ಲಿ ಹೊಸ ಬರ ಸಿನಿಮಾಗಳು ಅಷ್ಟೇನೂ ಚಿತ್ರಮಂದಿರಗಳಲ್ಲಿ ಬಹು ದಿನಗಳ ಕಾಲ ಉಳಿಯದ ಕಾರಣವಾಗಿ ಮುಂಗಡವಾಗಿಯೇ ಚಿತ್ರಮಂದಿರವನ್ನು ಎರಡು ವಾರದ ಮಟ್ಟಿಗೆ ಬಾಡಿಗೆ ಪಡೆದಿದ್ದಲ್ಲದೇ, ಪ್ರತಿ ಹಳ್ಳಿಗಳಲ್ಲೂ ಪ್ರಚಾರದ ವ್ಯವಸ್ಥೆಯನ್ನು ಮಾಡಲಾಗಿದೆಯಂತೆ. ಹಾಗೆಯೇ ಉಚಿತವಾಗಿ ಐದು ಸಾವಿರ ಟಿಕೆಟ್ ಹಂಚುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಚಿತ್ರದಲ್ಲಿ ಆರ್ಯವರ್ಧನ್ ನಾಯಕನಾಗಿ, ಕರಿಷ್ಮಾ ಬರೋಹ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಯುವ ಕಿಶೋರ್, ಅವಿನಾಶ್, ಓಂ ಪ್ರಕಾಶ್ ರಾವ್, ಬ್ಯಾಂಕ್ ಜನಾರ್ದನ್, ವಿನಯ್ ಪ್ರಸಾದ್ ತಾರಾಗಣದಲ್ಲಿದ್ದಾರೆ. ಕುನ್ನಿ ಗುಡಿಪತಿ ಸಂಗೀತ ಸಂಯೋಜನೆ ಮಾಡಿದ್ದಾರೆ. ರಮೇಶ್ ತಿರುಪತಿ ಛಾಯಾಗ್ರಹಣವನ್ನು ಮಾಡಿದ್ದಾರೆ. ಇದೇ ವಾರ ಖನನ ಸಿನಿಮಾ ರಿಲೀಸ್ ಆಗಲಿದೆ.
No Comment! Be the first one.