ಕಿರಿಕ್ ಅಂದ ಕೂಡಲೇ ನಮಗೆಲ್ಲ ನೆನಪಾಗೋದು ಕನ್ನಡದ ಸಿನಿಮಾ ಕಿರಿಕ್ ಪಾರ್ಟಿ. ಈಗ ಆ ಟೈಟಲ್ಗೆ ಠಕ್ಕರ್ ಕೊಡುವ ಹಾಗೆ ಕಿರಿಕ್ ಲೈಫ್ ಎಂಬ ಹೆಸರಿನ ಚಿತ್ರವೊಂದು ತಯಾರಾಗುತ್ತಿದೆ. ಇತ್ತೀಚೆಗೆ ಸದ್ದಿಲ್ಲದೆ ಮುಹೂರ್ತ ಆಚರಿಸಿಕೊಂಡಿರುವ ಈ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲೆಂದು ಚಿತ್ರತಂಡ ಮೊನ್ನೆ ಮಾಧ್ಯಮಗಳ ಮುಂದೆ ಹಾಜರಾಗಿತ್ತು. ಎಲ್ಲರ ಲೈಫ್ನಲ್ಲೂ ಒಂದಲ್ಲ ಒಂದು ರೀತಿಯ ಕಿರಿಕ್ ಇದ್ದೇ ಇರುತ್ತದೆ. ಹಾಗೇ ಐವರು ಹುಡುಗರ ಲೈಫ್ನಲ್ಲಿ ಏನೆಲ್ಲಾ ಕಾರಣಕ್ಕೆ ಕಿರಿಕ್ ಉಂಟಾಯ್ತು ಎಂಬುದನ್ನು ಕಿರಿಕ್ಲೈಫ್ ಚಿತ್ರದ ಮೂಲಕ ನಿರ್ದೇಶಕ ಗುರುರಾಜ ಕುಲಕರ್ಣಿ ಹೇಳಹೊರಟಿದ್ದಾರೆ. ಆ ಹುಡುಗರ ಜೀವನದಲ್ಲಿ ಏನೇನು ಕಿರಿಕ್ ಬರುತ್ತವೆ, ಯಾರ್ಯಾರು ಏನೇನು ಕಿರಿಕ್ ಅನುಭವಿಸುತ್ತಾರೆ ಎನ್ನುವಂಥ ಹಲವಾರು ಅಂಶಗಳನ್ನು ಇಟ್ಟುಕೊಂಡು ಈ ಕಿರಿಕ್ ಲೈಫ್ ಚಿತ್ರವನ್ನು ನಿರೂಪಿಸಹೊರಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ನಿರ್ದೇಶಕರ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಗುರುರಾಜ ಕುಲಕರ್ಣಿ ಕಿರಿಕ್ ಲೈಫ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ನವನಟ ಶರತ್ ಬಾಬು, ನಿಖಿಲ್, ಮಹೇಶ್ ಪಾಟೀಲ್, ಪ್ರಕಾಶ್ ತಳಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಹೊಸ ಪ್ರತಿಭೆಗಳು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ನಾಯಕಿಯಾಗಿ ಬೆಳಗಾಂ ಮೂಲದ ಸುವಾರ್ತ ಬಣ್ಣ ಹಚ್ಚುತ್ತಿದ್ದಾರೆ.
ತಮ್ಮ ಚಿತ್ರದಲ್ಲಿರುವ ಕಿರಿಕ್ ವಿಷಯಗಳ ಬಗ್ಗೆ ಮಾತನಾಡಿದ ನಿರ್ದೇಶಕ ಗುರುರಾಜ ಕುಲಕರ್ಣಿ, ಇದು ಐವರು ಸ್ಲಂ ಹುಡುಗರ ಲೈಫ್ ಜರ್ನಿಯ ಕಥೆ. ಸ್ಲಮ್ ಪ್ರದೇಶದಲ್ಲಿ ಬೆಳೆದ ಐವರು ಹುಡುಗರು ತಮ್ಮ ಜೀವನದಲ್ಲಿ ಏನೇನು ಸೋಲು-ಸವಾಲುಗಳನ್ನು ಎದುರಿಸುತ್ತಾರೆ, ಕೊನೆಗೂ ಈ ಹುಡುಗರು ತಮ್ಮ ಲೈಫ್ನಲ್ಲಿ ತಾವಂದುಕೊಂಡ ಸಾಧನೆಯನ್ನು ಮಾಡುತ್ತಾರೋ, ಇಲ್ವೋ ಎನ್ನುವುದೇ ಈ ಚಿತ್ರದ ಕಥೆ. ನಾನು ನನ್ನ ಜೀವನದಲ್ಲಿ ಕಂಡು, ಕೇಳಿದ ಕೆಲವು ನೈಜ ಘಟನೆಗಳನ್ನೇ ಪ್ರೇರಣೆಯಾಗಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆದಿದ್ದೇನೆ. ಮೊದಲು ಈ ಕಥೆಯನ್ನಿಟ್ಟುಕೊಂಡು ಒಂದು ಕಿರುಚಿತ್ರವನ್ನು ಮಾಡಬೇಕೆಂದು ಯೋಚಿಸಿದೆವು. ಆದರೆ ಅದೇ ಸಮಯಕ್ಕೆ ನಿರ್ಮಾಪಕರು ಸಿಕ್ಕಿದ್ದರಿಂದ ಇದೇ ಕಥೆಗೆ ಕಮರ್ಷಿಯಲ್ ಟಚ್ ಕೊಟ್ಟು ಚಲನಚಿತ್ರ ಮಾಡಲು ಮುಂದಾದೆವು. ಈ ಚಿತ್ರದಲ್ಲಿ ಕಾಮಿಡಿ, ಲವ್, ಸೆಂಟಿಮೆಂಟ್, ಎಮೋಷನ್ಸ್ ನಂಥ ಎಲ್ಲಾ ಅಂಶಗಳಿವೆ. ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೊಂದು ಉತ್ತಮ ಸಂದೇಶ ಕೂಡ ಚಿತ್ರದಲ್ಲಿದೆ. ಬಹುತೇಕ ಹೊಸ ಪ್ರತಿಭೆಗಳನ್ನೇ ಇಟ್ಟುಕೊಂಡು ಇಂಥದ್ದೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೇವೆ ಎಂದು ಹೇಳಿದರು.
ಉದ್ಯಮಿ ಸಂದೇಶ್ ಹಾಸನ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಅವರು ಈ ಕಥೆಯನ್ನು ಕೇಳಿದ ಕೂಡಲೇ ನನಗೆ ತುಂಬಾ ಇಷ್ಟವಾಯಿತು. ಸಮಾಜದಲ್ಲಿ ನಡೆಯುವ ಘಟನೆಗಳನ್ನೇ ಇಟ್ಟುಕೊಂಡು ನಿರ್ದೇಶಕರು ಕಥೆ ಮಾಡಿದ್ದಾರೆ. ಹಾಗಾಗಿ ಈ ಚಿತ್ರವನ್ನು ನಿರ್ಮಿಸಲು ಮುಂದಾದೆ. ಇಂದಿನ ಪ್ರೇಕ್ಷಕರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ನೋಡುಗರಿಗೆ ಚಿತ್ರ ಇಷ್ಟವಾಗುವುದೆಂಬ ಭರವಸೆಯಿದೆ. ಆದಷ್ಟು ಬೇಗ ಚಿತ್ರವನ್ನು ಪೂರ್ಣಗೊಳಿಸಿ ಪ್ರೇಕ್ಷಕರ ಮುಂದೆ ತರುವ ಯೋಜನೆಯಿದೆ ಎಂದು ಹೇಳಿದರು.
ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ಶಿವು ಜಮಖಂಡಿ ಸಾಹಿತ್ಯ ರಚಿಸುವುದರೊಂದಿಗೆ ಸಂಗೀತ ಸಂಯೋಜನೆ ಮಾಡುತ್ತಿzರೆ. ಇನ್ನು ಕಿರಿಕ್ ಲೈಫ್ ಚಿತ್ರಕ್ಕೆ ಮುಂಜನೆ ಮಂಜು ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ಹಾಸನ, ಸಕಲೇಶಪುರದ ಸುತ್ತಮುತ್ತಲಿನ ತಾಣಗಳಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡಡೆಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಸುನಿಲ್ ಈ ಚಿತ್ರದ ಸಹನಿರ್ದೇಶಕರಾಗಿದ್ದು, ಸಿದ್ದು ಪೋಸ್ಟರ್ ಡಿಸೈನ್ ಮಾಡುತ್ತಿದ್ದಾರೆ. ಎ ಅಂದುಕೊಂಡಂತೆ ನಡೆದರೆ ಈ ವರ್ಷಾಂತ್ಯಕ್ಕೆ ಕಿರಿಕ್ ಲೈಫ್ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.
No Comment! Be the first one.