ಮೊದಲಿನಿಂದಲೂ ಅಷ್ಟೇ! ತಾನು ಅಂದುಕೊಂಡಿದ್ದನ್ನು ಸಾಧಿಸಿಯೇ ತೀರಬೇಕೆನ್ನು ವ್ಯಕ್ತಿ; ಹಠಕ್ಕೆ ಬಿದ್ದರೆ ಥೇಟು ರಾಕ್ಷಸನಂತೆ ಕೆಲಸ ಮಾಡುವ ಮನುಷ್ಯ ಕೋಮಲ್. ಅಣ್ಣನ ಜೊತೆ ಸಣ್ಣ ಪುಟ್ಟ ಕಾಮಿಡಿ ರೋಲುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೋಮಲ್ ಮನಸ್ಸಿನಲ್ಲಿ ತಾನೊಬ್ಬ ಪರಿಪೂರ್ಣ ಹಾಸ್ಯ ನಟ ಅನ್ನಿಸಿಕೊಳ್ಳಬೇಕು ಅನ್ನೋ ಬಯಕೆ ಹುಟ್ಟಿತ್ತು. ಕೂಡಲೇ ಅದಕ್ಕೆ ಬೇಕಿರುವ ತಯಾರಿಗಳನ್ನು ಮಾಡಿಕೊಂಡರು, ಒಂದರ ಹಿಂದೊಂದು ಅವಕಾಶ ಪಡೆದು ಕನ್ನಡದ ಯಾವ ಸ್ಟಾರ್’ಗಳಿಗೂ ಕಡಿಮೆಯಿಲ್ಲದಷ್ಟು ವರ್ಚಸ್ಸು ಪಡೆದರು. ಅದೇ ಹೊತ್ತಿಗೆ ‘ಇನ್ನೂ ಎಷ್ಟು ದಿನ ಈ ಕಾಮಿಡಿ ರೋಲ್ ಮಾಡೋದು? ನಾನೂ ಹೀರೋ ಆಗ್ಬೇಕು’ ಅಂತಾ ಯೋಚಿಸಿದ್ದರು ಕೋಮಲ್. ತಕ್ಷಣ ಕಾರ್ಯಪ್ರವೃತ್ತರಾಗಿ ಅದಕ್ಕೆ ಬೇಕಿರುವ ಹೋಂ ವರ್ಕ್ ಮಾಡಿಕೊಂಡು ಹೀರೋ ಆಗಿ ಎಂಟ್ರಿ ಕೊಟ್ಟೇ ಬಿಟ್ಟರು. ಅಂದುಕೊಂಡಂತೇ ಗೆದ್ದರು ಕೂಡಾ. ಕರೆಕ್ಟಾಗಿ ಮೇಂಟೇನು ಮಾಡಿದ್ದಿದ್ದರೆ ಈ ಹೊತ್ತಿಗೆ ಕೋಮಲ್ ಸೋಲೇ ಇಲ್ಲದೆ ಬದುಕಬಹುದಿತ್ತು. ನಿರ್ದೇಶಕರು ಬಂದು ಕತೆ ಹೇಳಿದಾಗ ‘ನೀನು ಹೇಳಿದ ಕತೆ ಬ್ಯಾಡ ಗುರೂ.. ಈ ಸೀಡಿ ನೋಡಿ ಸ್ಕ್ರಿಪ್ಟು ರೆಡಿ ಮಾಡು’ ಅಂತಾ ಯಾವ್ಯಾವುದೋ ಭಾಷೆಯ ಸಿನಿಮಾಗಳನ್ನು ನಿರ್ದೇಶಕರ ಮೇಲೆ ಕೋಮಲ್ ಹೇರಿದರೋ ಆವತ್ತಿಂದಲೇ ಅವರ ಡೌನ್ ಫಾಲ್ ಕೂಡಾ ಶುರುವಾಯಿತು. ಕಡ ತಂದ ಸಿನಿಮಾಗಳು ಬರಕತ್ತಾಗಲಿಲ್ಲ. ನಿರ್ದೇಶಕರನ್ನು ಪಕ್ಕಕ್ಕೆ ಕೂರಿಸಿ ತಾವೇ ಎಲ್ಲವನ್ನೂ ನಿಭಾಯಿಸಿಕೊಳ್ಳುತ್ತಾರೆ ಅನ್ನೋ ಆರೋಪ ಕೂಡಾ ಕೋಮಲ್ ವಿರುದ್ಧ ಹೆಚ್ಚಾಗಿತ್ತು. ಈ ಹೊತ್ತಿಗೆ ಕೋಮಲ್ ವರ್ಚಸ್ಸೂ ಕಡಿಮೆಯಾಗಿತ್ತು. ಗಾಂಧಿ ನಗರದ ಜನ ಕೂಡಾ ಕೋಮಲ್ ಅವರನ್ನು ಹುಡುಕಿಕೊಂಡು ಹೋಗೋದನ್ನ ಬಿಟ್ಟರು.
ಅದೇ ವೇಳೆಗಾಗಲೇ ಅದ್ಯಾವುದೋ ಥೈರಾಯ್ಡ್ ಸಮಸ್ಯೆಯಾಗಿ ಕೋಮಲ್ ವಿಪರೀತ ಅನ್ನುವಷ್ಟು ದಪ್ಪವಾಗಿಬಿಟ್ಟಿದ್ದರು. ‘ಸ್ಕ್ರೀನ್ ಮೇಲೆ ನೋಡಕ್ಕಾಗಲ್ಲ ಗುರೂ’ ಅಂತಾ ಅವರ ಅಭಿಮಾನಿಗಳೇ ಮಾತಾಡಲು ಆರಂಭಿಸಿದರು. ಇದನ್ನೆಲ್ಲಾ ಗಮನಿಸುತ್ತಿದ್ದ ಕೋಮಲ್ ಎದೆಯಲ್ಲಿ ಸದ್ದಡಗಿ ಕೂತಿದ್ದ ತ್ರಿವಿಕ್ರಮ ಮತ್ತೆ ಎದ್ದು ನಿಂತ. ‘ಆಗಿದ್ದಾಗಲಿ ಈ ಸಾರಿ ನನ್ನ ಬಾಡಿಯನ್ನು ಫಿಟ್ ಮಾಡಿ ತೋರಿಸ್ತೀನಿ. ಇನ್ಮುಂದೆ ಕಾಮಿಡಿ ಹೀರೋ ಅಲ್ಲ, ನಾನು ಕಮರ್ಷಿಯಲ್ ಹೀರೋ ಕಣೋ’ ಅಂತಾ ಥೇಟು ಕೆಂಪೇಗೌಡ ಸಿನಿಮಾದ ಆರ್ಮುಗಂ ಶೈಲಿಯಲ್ಲಿ ಅಬ್ಬರಿಸಿದರು ಕೋಮಲ್.
ಎಲ್ಲರೂ ‘ಕೋಮಲು ಕಾಮಿಡಿ ಮಾಡ್ತಾ ಐತೆ’ ಅಂತಾ ನಗಾಡಿದ್ದರು. ಆದರೆ, ಯಾವ ಜನ ಲೇವಡಿ ಮಾಡಿದ್ದರೋ ಅದೇ ಮಂದಿ ಬರೀ ಮೂಗು ಮಾತ್ರವಲ್ಲದೆ ಎಲ್ಲೆಂದರಲ್ಲಿ ಬೆರಳಿಟ್ಟುಕೊಳ್ಳುವ ರೇಂಜಿಗೆ ಕೋಮಲ್ ಬದಲಾಗಿದ್ದರು. ಪೊಲೀಸ್ ಅಧಿಕಾರಿಯ ಗೆಟಪ್ಪಿನಲ್ಲಿ ಬಂದು ನಿಂತು ‘ನಾನು ಎರಡನೇ ಕೆಂಪೇಗೌಡ’ ಅಂತಾ ತೊಡೆ ತಟ್ಟಿದರು. ಸಿನಿಮಾ ಒಂಚೂರು ವಿಳಂಬವಾಯಿತು. ಕಡೆಗೂ ಒಂದು ದಿನ ರಿಲೀಸೂ ಆಯ್ತು. ದುರಂತವೆಂದರೆ ಇವರು ಫಿಕ್ಸ್ ಮಾಡಿದ್ದ ಡೇಟಿನಲ್ಲಿ ಮೊದಲು ಬೇರ್ಯಾವುದೂ ಸಿನಿಮಾ ಇರಲಿಲ್ಲ. ಕುರುಕ್ಷೇತ್ರ ಇನ್ನೂ ಒಂದು ವಾರ ಮುಂಚೆಯೇ ಬಿಡುಗಡೆಯಾಗಿರಬೇಕಿತ್ತು. ಕೋಮಲ್ ನಸೀಬು ಕೆಟ್ಟಿತ್ತೋ ಏನೋ ಕುರುಕ್ಷೇತ್ರ ಅಂದುಕೊಂಡಿದ್ದಕ್ಕಿಂತಾ ಒಂದು ವಾರ ಮುಂದೆ ಬಂದುಬಿಟ್ಟಿತು. ಇಡೀ ರಾಜ್ಯ ಭೀಕರ ಮಳೆಯಲ್ಲಿ ಮುಳುಗಿಹೋಗಿತ್ತು. ನೆರೆಯ ನಡುವೆಯೂ ಸಿನಿಮಾ ನೋಡಲು ನಿಂತವರೆಲ್ಲಾ ಹೋಗಿ ಒದ್ದೆ ಸೀಟಿನಲ್ಲಿಯೇ ಕೂತು ಕುರುಕ್ಷೇತ್ರವನ್ನು ನೋಡಿದರು. ಇತ್ತ ಕೋಮಲ್ ಅವರ ಕೆಂಪೇಗೌಡನ ಬಗ್ಗೆ ಒಳ್ಳೇ ಪ್ರತಿಕ್ರಿಯೆಗಳು ಕೇಳಿಬಂದವಾದರೂ ಬಾಕ್ಸಾಫೀಸಿನಲ್ಲಿ ಘೋರ ಸೋಲು ಕಾಣಬೇಕಾಯಿತು. ಆ ಮೂಲಕ ಕುರುಕ್ಷೇತ್ರದ ಕಾವು ಕೆಂಪೇಗೌಡನ ಕನಸನ್ನು ಕಮರುವಂತೆ ಮಾಡಿತು.
ಡೋಂಟ್ ವರಿ ಕೋಮಲ್. ನೀವು ಯಾವತ್ತಿಗೂ ಸೋಲಿಗೆ ಅಂಜಿದವರಲ್ಲ. ನಿಮ್ಮ ಕತೆ ಮುಗಿದೇಹೋಯ್ತು ಅಂತಾ ಜನ ಮಾತಾಡಿಕೊಂಡಾಗಲೆಲ್ಲಾ ಎದ್ದೆದ್ದು ನಿಂತವರು. ಕೆಂಪೇಗೌಡನ ಸೋಲಿನಿಂದ ಕಂಗಾಲಾಗಬೇಡಿ. ಮತ್ತೊಂದು ಛಾಲೆಂಜಿಗೆ ಸಿದ್ದವಾಗಿ; ಎಂದಿನಂತೆ ನಿಮ್ಮ ಸ್ಟೈಲಲ್ಲಿ!
No Comment! Be the first one.