ಒಂದು ಸಿನಿಮಾ ನಿರ್ಮಾಣ/ನಿರ್ದೇಶನ ಮಾಡಬೇಕೆಂದರೆ ಅದಕ್ಕೆ ತಕ್ಕಂತೆ ಸಿದ್ದತೆಗಳನ್ನು ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಕಿರುಚಿತ್ರಗಳನ್ನು ಮಾಡುವುದು ವೆಬ್ ಸಿರೀಸ್ ಮಾಡುವುದು ಇದರಲ್ಲಿ ಯಶಸ್ವಿಯಾದ ಮೇಲೆ ಸಿನಿಮಾ ಮಾಡಲು ಕೈಹಾಕಿದರೆ ಆ ಚಿತ್ರ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಭವಿಷ್ಯದಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸುವ ಉದ್ದೇಶ ಹೊಂದಿರುವ ಡಾ. ಸಂಜಯಗೌಡ ಅದಕ್ಕೆ ಪೂರ್ವಭಾವಿಯಾಗಿ ಕ್ರಾಂತಿಪುರ ಎಂಬ ವೆಬ್ ಸಿರೀಸ್ ಒಂದನ್ನು ನಿರ್ಮಿಸಿದ್ದಾರೆ. ಆ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಸಿನಿಮಾಗಿಂತ ಯಾವುದರಲ್ಲಿ ಕಮ್ಮಿಯಿಲ್ಲದಂತೆ ಅದ್ಧೂರಿಯಾಗಿ ನಿರ್ಮಾಣವಾಗಿರುವ ಈ ವೆಬ್ಸಿರೀಸ್ಗೆ ಗಿರೀಶ್ ಆಕ್ಷನ್ ಕಟ್ ಹೇಳಿದ್ದಾರೆ. ಗೌತಮ್ಚಂದ್ರ ಹಾಗೂ ಹರೀಶ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಚಿತ್ರರಂಗ ಹಾಗೂ ರಾಜಕೀಯ ಹೀಗೆ ಎರಡು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಸಂಜಯಗೌಡ ಅವರು ಅಪಾರ ಸ್ನೇಹಿತರ ಬಳಗ ಹೊಂದಿದ್ದಾರೆ. ಮಾಜಿ ಸಚಿವ ರಾಮಲಿಂಗಾರೆಡ್ಡಿ, ಎಂ.ಕೃಷ್ಣಪ್ಪ ಅವರು ಕ್ರಾಂತಿಪುರ ಟ್ರೈಲರ್ ಚಾಲನೆ ನೀಡಿ ಶುಭ ಹಾರೈಸಿದರು. ನಟ ಪ್ರಥಮ್, ನರ್ಸ್ ಜಯಲಕ್ಷ್ಮಿ, ಪವನ್, ಸುಮನ್ನಗರ್ಕರ್, ದೀಪಕ್, ಹೆಚ್.ಎಂ.ಕೃಷ್ಣಮೂರ್ತಿ, ರವಿಗೌಡ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ನಿರ್ಮಾಪಕರ ಬರ್ತ್ಡೇ ಕೂಡ ಇದ್ದಿದ್ದರಿಂದ ವಿಶ್ ಮಾಡುವವರ ಸಂಖ್ಯೆಯೂ ಅಧಿಕವಾಗಿತ್ತು.
ಹಳ್ಳಿ ಪರಿಸರದಲ್ಲಿ ನಡೆಯುವ ಕ್ರಾಂತಿಕಾರಿ ಘಟನೆಗಳ ಸುತ್ತ ನಡೆಯುವ ಕಥೆ, ಈ ವೆಬ್ಸಿರೀಸ್ನಲ್ಲಿದ್ದು ಇದರ ಜೊತೆ ಒಂದು ಲವ್ ಸ್ಟೋರಿ ಕೂಡ ಸಾಗಲಿದೆ. ಕ್ರಾಂತಿಪುರ ಎಂಬ ಗ್ರಾಮದಲ್ಲಿ ನಡೆಯುವ ಸಂಘರ್ಷ, ಪ್ರೀತಿ ಪ್ರೇಮದ ಎಳೆಯನ್ನು ಈ ವೆಬ್ಸಿರೀಸ್ ಹೊಂದಿದೆ. ನವೆಂಬರ್ನಲ್ಲಿ ರಾಜ್ಯೋತ್ಸವ ಪ್ರಯುಕ್ತ ಈ ಸಿರೀಸ್ ಬಿಡುಗಡೆಯಾಗಲಿದೆ. ಸ್ಕಂದ ಕಷ್ಯಪ್ ಅವರ ಸಂಗೀತ ಸಂಯೋಜನೆ, ರಾಜು ಅವರ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ಗೌತಮ್ ಚಂದ್ರ, ಹರೀಶ್, ರಶ್ಮಿ, ವರುಣ್, ಪುನೀತ್, ಪ್ರಮುಖ ತಾರಾಗಣದಲ್ಲಿದ್ದಾರೆ. ಒಂದೇ ಹಳ್ಳಿಯಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
No Comment! Be the first one.