ಮಠ ಗುರುಪ್ರಸಾದ್ ಅನ್ನೋ ವಿಚಿತ್ರ ಕ್ಯಾರೆಕ್ಟರಿನ ವ್ಯಕ್ತಿಯ ಪ್ರತಿಭೆಗಿಂತಾ ತಲೆಹರಟೆಯೇ ಜಾಸ್ತಿ ಅನ್ನೋದು ಸಾಬೀತಾಗಿ ವರ್ಷಾಂತರಗಳೇ ಆಗಿವೆ. ಆರಂಭದ ಮಠ ಮತ್ತು ಎದ್ದೇಳು ಮಂಜುನಾಥ ಅನ್ನೋ ಎರಡು ಸಿನಿಮಾಗಳನ್ನು ಬಿಟ್ಟರೆ ಮಿಕ್ಕಂತೆ ಈತ ಮಾಡಿಕೊಂಡಿದ್ದೆಲ್ಲಾ ಬರೀ ರಂಕಲು ಕೇಸುಗಳೇ.
ಈಗ ತನ್ನ ಕುಷ್ಕ ಸಿನಿಮಾದಲ್ಲಿ ಗೌಡ ಎನ್ನುವ ಪದಕ್ಕೆ ಪ್ರತಿಯಾಗಿ ‘ಅಯ್ಯೋ ನನ್ ಲೌಡ’ ಎನ್ನುವ ಡೈಲಾಗು ಬಳಸಿದ್ದಾರೆ. ಈಗ ರಿಲೀಸಾಗಿರುವ ಟೀಸರ್ ಬಗ್ಗೆ ವ್ಯಾಪಕ ಪ್ರತಿರೋಧ ವ್ಯಕ್ತವಾಗುತ್ತಿದೆ. ಮೇಲ್ನೋಟಕ್ಕೇ ಇದು ವಿವಾದ ಸೃಷ್ಟಿಸಿಕೊಂಡು ಅದರಿಂದ ಪ್ರಚಾರ ಪಡೆಯೋ ಪ್ಲಾನು ಅನ್ನೋದು ಯಾರಿಗಾದರೂ ಗೊತ್ತಾಗುತ್ತದೆ. ಮಿದುಳಿನಲ್ಲಿ ಕ್ರಿಯಾಶೀಲತೆಯೆಲ್ಲಾ ಬತ್ತಿಹೋದಾಗ ಮಾತ್ರ ಇಂತಾ ಹಸೀ ಹೇಲಿನ ಐಡಿಯಾಗಳು ಹುಟ್ಟಿಕೊಳ್ಳೋದು. ಆದರೆ, ಗಡ್ಡದ ಗುರುವಿನ ಪಾಲಿಗೆ ಅದು ತನ್ನದೇ ನೆತ್ತಿಮೇಲೆ ಒಣಗುವ ಪರಿಸ್ಥಿತಿ ಎದುರಾಗಿದೆ!
ಗುರುಪ್ರಸಾದ್ ವಿದ್ಯಾವಂತ. ಸಿನಿಮಾರಂಗಕ್ಕೆ ಬರೋದಕ್ಕೆ ಮುಂಚೆ ಹಿಂದೂಸ್ಥಾನ್ ಲೀವರ್’ನಂಥ ಸಂಸ್ಥೆಯಲ್ಲಿ ಸೈಟಿಂಸ್ಟಾಗಿದ್ದವರು. ಅದಕ್ಕೂ ಮುಂಚೆ ಕನಕಪುರದಲ್ಲಿ ಲಾಟರಿ ಟಿಕೇಟು, ಕಾಫಿ ಪುಡಿ ಮಾರಿಕೊಂಡು, ಮದುವೆ ಮುಂಜಿಗಳಲ್ಲಿ ಪೂಜೆ ಮಾಡಿಕೊಂಡು ಓದಿ ಬೆಳೆದವರು. ನಂತರ ಟಿ.ಎನ್ ಸೀತಾರಾಮ್ ಅವರ ಮನ್ವಂತರ ಸೀರಿಯಲ್ಲಿಗೆ ಡೈಲಾಗ್ ರೈಟರ್ ಆಗಿ ಸೇರಿಕೊಂಡು, ಸುನೀಲ್ ಕುಮಾರ್ ದೇಸಾಯಿಯ ಮರ್ಮ ಟೀಮನ್ನು ಸೇರಿ ಕ್ರಮೇಣ ಚಿತ್ರರಂಗದ ನಂಟಿಗೆ ಬಂದವರು.
ಎಲ್ಲಾ ಅಂದುಕೊಂಡಂತೇ ಆಗಿದ್ದಿದ್ದರೆ ಗುರುಪ್ರಸಾದ್ ಉಪೇಂದ್ರ ಅವರ ಸಿಎಂ ಎನ್ನುವ ಸಿನಿಮಾದ ಮೂಲಕ ಡೈರೆಕ್ಟರ್ ಆಗಬೇಕಿತ್ತು. ಮೊದಲ ಸಿನಿಮಾದಲ್ಲೇ ಕಿರಿಕ್ಕು ಮಾಡಿಕೊಂಡು ಆಚೆ ಬಂದಿದ್ದರು. ಆನಂತರ ಮಠ ಸಿನಿಮಾ ಮಾಡಿದ್ದು. ಮಠ ರಿಲೀಸಾಗುತ್ತಿದ್ದಂತೇ ಗುರುಪ್ರಸಾದ್’ಗೆ ಸ್ಟಾರ್ ವರ್ಚಸ್ಸು ಬಂದಿದ್ದೇನೋ ನಿಜ. ಆದರೆ ಆ ನಂತರ ಈ ವ್ಯಕ್ತಿಯ ಕೆನ್ನೆಮೇಲಿನ ಗಡ್ಡದ ಜೊತೆಜೊತೆಗೇ ಬುಡದಲ್ಲಿ ಫ್ಯಾಟು ಕೂಡಾ ಹೆಚ್ಚುತ್ತಾ ಹೋಯಿತು. ಎದ್ದೇಳು ಮಂಜುನಾಥ ಸಿನಿಮಾ ಹಿಟ್ ಅನಿಸಿಕೊಂಡರೂ ಲಾಭವಾಗಲಿಲ್ಲ. ವರ್ಷಗಟ್ಟಲೆ ಸಿನಿಮಾ ಮಾಡಿದ್ದರ ಫಲವಾಗಿ ಅಸಲಿಗಿಂತಾ ಬಡ್ಡಿಯೇ ಹೆಚ್ಚಾಗಿತ್ತು. ಈ ಸಿನಿಮಾಗೆ ನಿರ್ಮಾಪಕರಾಗಿ ಕೈಯಿಟ್ಟ ಪತ್ರಕರ್ತ ಸನತ್ ಕುಮಾರ್ ಕಾಯಿಲೆಬಿದ್ದು ಸತ್ತೇ ಹೋದರು.
ಡೈರೆಕ್ಟರ್ ಸ್ಪೆಷಲ್ ಅನ್ನೋ ಸಿನಿಮಾ ಮಾಡ್ತೀನಿ ಅಂತಾ ಕೋಮಲ್ ಜೊತೆ ಒಪ್ಪಂದ ಮಾಡಿಕೊಂಡು ನಂತರ ಕಿತ್ತಾಡಿಕೊಂಡು ಆ ಜಾಗಕ್ಕೆ ಧನಂಜಯನನ್ನು ತಂದರು. ಹೋಗಲಿ, ಅದಾದರೂ ನೇರ್ಪಾಗಿ ಮಾಡಿದರಾ? ಪರಮದರಿದ್ರ ಸಿನಿಮಾ ಮಾಡಿ ಧನಂಜಯನ ಬದುಕನ್ನು ಆರಂಭದಲ್ಲೇ ಹೊಸಕಿಬಿಟ್ಟರು. ಸಾಲದ್ದಕ್ಕೆ ಎರಡನೇ ಸಲ ಅನ್ನೋ ಸಿನಿಮಾ ಮಾಡಿ ಮತ್ತೊಮ್ಮೆ ಧನಂಜಯನ ಲೈಫು ಕೆಡಿಸಿದರು. ಪುಣ್ಯಕ್ಕೆ ಸೂರಿ ಅನ್ನೋ ವ್ಯಕ್ತಿ ಕೈಗೆ ಸಿಕ್ಕು ಡಾಲಿ ಕ್ಯಾರೆಕ್ಟರು ಸಿಗದಿದ್ದರೆ ಧನಂಜಯನನ್ನು ಇಷ್ಟೊತ್ತಿಗೆ ಜನ ಮರೆತೇಬಿಡಬೇಕಿತ್ತು. ಈ ನಡುವೆ ಜಗ್ಗೇಶ್ ಜೊತೆ ಈ ಗುರು ಮಾಡಿಕೊಂಡ ನಖರಾಗಳು ಒಂದಾ ಎರಡಾ? ಇನ್ನು ಗುರುಪ್ರಸಾದ್ ಕತೆ ಮುಗೀತು ಅನ್ನೋವಷ್ಟರಲ್ಲಿ ಈತ ಪ್ರತ್ಯಕ್ಷವಾಗಿದ್ದು ಟೀವಿ ಪರದೆಯ ರಿಯಾಲಿಟಿ ಶೋಗಳಲ್ಲಿ. ಬಿಗ್ ಬಾಸು ಅನ್ನೋ ಪ್ರೋಗ್ರಾಮಲ್ಲಿ ಸ್ಪರ್ಧಿಸಿಬಂಮೇಲಾದರೂ ಗುರು ಒಂಚೂರು ಸರಿಹೋಗಬಹುದು ಅನ್ನೋ ಅಂದಾಜು ಸುತ್ತ ಇದ್ದವರದ್ದಾಗಿತ್ತು. ಅದೂ ಆಗಲಿಲ್ಲ. ಮತ್ತೆ ಯಥಾ ಪ್ರಕಾರವಾಗಿ ಸಿನಿಮಾ ಅನೌನ್ಸ್ ಮಾಡೋದು, ಮನೆಯಲ್ಲಿ ಮಧ್ಯಾನ ಮೂರು ಗಂಟೆಯ ತನಕ ಮಲಗೋದು. ಊರ್ ಸುತ್ತಾ ಸಾಲ, ಸುಳ್ಳು, ತಿರ್ಕೆ ಶೋಕಿಗಳಿಂದ ಪರ್ಸನಲ್ ಲೈಫೂ ಬರ್ಬಾದು. ‘ಪ್ರತಿಭೆ ಇದ್ದೂ ಹಾಳಾಗಬೇಡಯ್ಯಾ’ ಅಂಥಾ ತಿದ್ದಲು ಹೋದವರ ಮೇಲೂ ತಿರುಗಿಬೀಳುವ ಗುರುಪ್ರಸಾದು ಸೃಷ್ಟಿಸಿಕೊಂಡು ಬಂದಿರುವ ಯಡವಟ್ಟುಗಳು ಅಷ್ಟಿಷ್ಟಲ್ಲ. ಈಗ ಇಡೀ ಗೌಡ ಕುಲದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಲೌಡ ಅನ್ನೋ ಮಾತು ಬಳಸಿ ಗೌಡರಿಂದ ಗುಮ್ಮಿಸಿಕೊಳ್ಳುತ್ತಿದ್ದಾರೆ.
ಬೇಕಿತ್ತಾ ಗುರುವೇ ಇದೆಲ್ಲಾ?
No Comment! Be the first one.