ಮದುವೆ ಮಾಡ್ರಿ ಸರಿ ಹೋಗ್ತಾನೆ ಸಿನಿಮಾದ ‘ಗುಳೇದಗುಡ್ಡದ ಹುಡುಗಿ’ ಎಂದು ಶುರುವಾಗುವ ಹಾಡು ರಿಲೀಸಾಗಿದೆ. ಬಾಲಿವುಡ್ ಸಿಂಗರ್ ಶಾನ್ ಮತ್ತು ಅನನ್ಯಾ ಭಟ್ ಮಜಬೂತಾಗಿ ಹಾಡಿರುವ ಹಾಡು ಯೂ ಟ್ಯೂಬಲ್ಲಿ ಸಂಚಲನ ಸೃಷ್ಟಿಸುವ ಎಲ್ಲ ಸಾಧ್ಯತೆಯೂ ಇದೆ. ನೀವೂ ಒಮ್ಮೆ ಹಾಡು ಕೇಳಿ. ಈ ಚಿತ್ರದ ಕುರಿತಾದ ಮತ್ತಷ್ಟು ವಿವರ, ಚಿತ್ರತಂಡದವರ ಅಭಿಪ್ರಾಯ ಇಲ್ಲಿದೆ…
ಈ ಹಿಂದೆ ‘ರಂಕಲ್ ರಾಟೆ’ ಎನ್ನುವ ಚಿತ್ರ ನಿರ್ದೇಶಿಸಿದ್ದ ಗೋಪಿ ಕೆರೂರ್ ಮತ್ತೊಂದು ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾಗೆ ‘ಮದುವೆ ಮಾಡ್ರಿ ಸರಿಹೋಗ್ತಾನೆ’ ಎನ್ನುವ ಬಲು ವಿಶೇಷವಾದ ಟೈಟಲ್ಲು ಇಟ್ಟಿದ್ದಾರೆ. ಪ್ರೇಮಲೋಕ ಸಿನಿಮಾದಂತೆ ಈ ಚಿತ್ರದಲ್ಲಿ ಹನ್ನೊಂದು ಹಾಡುಗಳಿರುವುದು ವಿಶೇಷ. ‘ಒಬ್ಬ ವ್ಯಕ್ತಿ ಪ್ರೀತಿಯ ಬಲೆಯಲ್ಲಿ ಬಿದ್ದಮೇಲೂ ಅದು ಹೇಗೆ ಆತನ ಬದುಕನ್ನು ಕಂಫರ್ಟ್ ಜೋನಿಗೆ ತಲುಪಿಸುತ್ತದೆ ಅನ್ನೋದು ಈ ಚಿತ್ರದ ಕಥಾಹಂದರ. ಇವತ್ತಿನ ದಿನಗಳಲ್ಲಿ ಸಂಬಂಧಗಳು ಹೇಗಾಗುತ್ತಿವೆ, ಹಬ್ಬಗಳು ಹೇಗೆ ನಡೆಯುತ್ತವೆ ಎನ್ನುವುದನ್ನು ಉತ್ತರ ಕರ್ನಾಟಕದ ಜವಾರಿ ಶೈಲಿಯಲ್ಲಿ ಈ ಚಿತ್ರದಲ್ಲಿ ರೂಪಿಸಲಾಗಿದೆ. ಸಾಮನ್ಯವಾಗಿ ಸಂಭಾಷಣೆ ಮೂಲಕ ಚಿತ್ರದ ಕಥೆ ಹೇಳಿದರೆ, ಇದರಲ್ಲಿ ಹಾಡಿನ ಮೂಲಕವೇ ಕಥೆ ಹೇಳಲಾಗುತ್ತದೆ. ಸಂಭಾಷಣೆ ಕಡಿಮೆ ಇಟ್ಟು, ಸಂಗೀತಕ್ಕೆ ಹೆಚ್ಚು ಆದ್ಯತೆ ಕೊಟಿದ್ದೇವೆ. ಇದೊಂದು ಪಕ್ಕಾ ಸಂಗೀತಮಯ ಸಿನಿಮಾ’ ಅನ್ನೋದು ನಿರ್ದೇಶಕ ಗೋಪಿ ಕೆರೂರ್ ವಿವರಣೆ.
‘ಮದುವೆ ಮಾಡ್ರಿ ಸರಿಹೋಗ್ತಾನೆ’ ಸಿನಿಮಾದಲ್ಲಿ ಪ್ರಧಾನ ಪಾತ್ರವೊಂದರಲ್ಲಿ ನಟಿಸಿರುವ ಹಿರಿಯ ನಟ ರಮೇಶ್ ಭಟ್, ‘ನನಗೆ ಸಂಗೀತ ಗೊತ್ತಿಲ್ಲದಿದ್ದರೂ, ಹಾಡಲು ಬರದೇ ಇದ್ದರೂ ಸಾಕಷ್ಟು ಸಿನಿಮಾಗಳಲ್ಲಿ ಸಂಗೀತ ನಿರ್ದೇಶಕ, ಸಂಗೀತ ಪಾಠ ಮಾಡುವ ಮೇಷ್ಟ್ರ ಪಾತ್ರಗಳಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲೂ ನಾನು ಸುಖ್ವಿಂದರ್ ಸಿಂಗ್ ಹಾಡಿರುವ ಹಾಡನ್ನು ಆಲಾಪ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ಮತ್ತು ನಿಜ ಜೀವನಕ್ಕೂ ನಡುವೆ ಇರುವ ವಿಚಿತ್ರವಿದು’ ಎಂದರು. ಚಿತ್ರದ ನಾಯಕ ಶಿವಚಂದ್ರಕುಮಾರ್ಗೆ ಇದು ಮೊದಲ ಚಿತ್ರ. ಎಂಬಿಎ ಪದವೀಧರನಾಗಿದ್ದು, ಐಸಿಐಸಿಐ ಬ್ಯಾಂಕಿನಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ನಟನಾಗಬೇಕೆಂಬ ಕನಸು ಕಟ್ಟಿಕೊಂಡು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಆರಂಭದಲ್ಲಿ ತಂದೆ ವಿರೋಧಿಸಿದರೂ ತಾಯಿಯ ಬೆಂಬಲ, ಪ್ರೋತ್ಸಾಹದಿಂದ ನಟನಾಗುವ ಕನಸು ಕೈಗೂಡಿದೆಯಂತೆ. ಈ ಸಿನಿಮಾದಲ್ಲಿ ಶಿವಚಂದ್ರ ಉಂಡಾಡಿ ಗುಂಡನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ನಾಯಕಿ ಆರಾಧ್ಯಗೂ ಇದು ಚೊಚ್ಚಲ ಚಿತ್ರ. ‘ಮೊದಲ ಚಿತ್ರದಲ್ಲೇ ನಾಯಕಿಯಾಗಿರುವುದಕ್ಕೆ ತುಂಬಾ ಖುಷಿಯಾಗಿದೆ. ಪಾತ್ರಕ್ಕೆ ನ್ಯಾಯ ಒದಗಿಸಿರುವ ತೃಪ್ತಿ ಇದೆ. ಪ್ರೇಕ್ಷಕರು ಆಶೀರ್ವದಿಸಿ, ಪ್ರೋತ್ಸಾಹಿಸಬೇಕು’ ಅನ್ನೋದು ಆರಾಧ್ಯ ವಿನಂತಿ!
ನಾಯಕನ ತಾಯಿ ಪಾತ್ರ ನಿಭಾಯಿಸಿರುವ ಅರುಣಾ ಬಾಲರಾಜ್, ಈ ಪಾತ್ರ ನಿಭಾಯಿಸಲು ನನ್ನಿಂದ ಸಾಧ್ಯವೇ ಎನ್ನುವ ಅನುಮಾನ ಕಾಡಿತ್ತು. ಪಾತ್ರ ಸಹಜವಾಗಿ ಮೂಡಿ ಬಂದಿದ್ದು, ನ್ಯಾಯ ದಕ್ಕಿಸಿಕೊಟ್ಟಿರುವ ತೃಪ್ತಿ ಇದೆ ಎಂದರು. ಸಂಗೀತ ನಿರ್ದೇಶಕ ಅವಿನಾಶ್ ಬಾಸೂತ್ಕರ್, ‘ಹನ್ನೊಂದು ಹಾಡುಗಳನ್ನು ಪ್ರೇಕ್ಷಕ ಅರಗಿಸಿಕೊಳ್ಳಲು ಸಾಧ್ಯವೇ ಎನ್ನುವ ಅನುಮಾನ, ಗೊಂದಲ ಆರಂಭದಲ್ಲಿ ಕಾಡಿದ್ದು ಸಹಜ. ಆದರೆ, ನಿರ್ದೇಶಕರು ನಮ್ಮ ಅನುಮಾನ, ಗೊಂದಲ ನಿವಾರಿಸಿದರು. ಜಾನಪದ ಸೊಗಡು ಹೆಚ್ಚಿರುವ ಈ ಹಾಡುಗಳಿಗೆ ಒಳ್ಳೆಯ ಸಂಗೀತ ಸಂಯೋಜಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ. ಈ ಹಾಡುಗಳು ಜನರಿಗೆ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ’ ಅನ್ನೋ ಆಶಾಭಾವನೆ ಹೊಂದಿದ್ದಾರೆ. ಶಿವರಾಜ್ ಲಕ್ಷ್ಮಣರಾವ್ ದೇಸಾಯಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣ ಅವರದ್ದು. ಚಿತ್ಕಲಾ ಬಿರಾದಾರ್, ಕೃಷ್ಣಮೂರ್ತಿ ಕವತ್ತಾರ್, ಸದಾನಂದ ಕಾಳೆ ಈ ಸಿನಿಮಾದಲ್ಲಿ ಪಾತ್ರ ನಿರ್ವಹಸಿದ್ದಾರೆ.
ಮದುವೆ ಮಾಡ್ರಿ ಸರಿ ಹೋಗ್ತಾನೆ ಸಿನಿಮಾದ ‘ಗುಳೇದಗುಡ್ಡದ ಹುಡುಗಿ’ ಎಂದು ಶುರುವಾಗುವ ಹಾಡು ರಿಲೀಸಾಗಿದೆ. ಬಾಲಿವುಡ್ ಸಿಂಗರ್ ಶಾನ್ ಮತ್ತು ಅನನ್ಯಾ ಭಟ್ ಮಜಬೂತಾಗಿ ಹಾಡಿರುವಹಾಡು ಯೂ ಟ್ಯೂಬಲ್ಲಿ ಸಂಚಲನ ಸೃಷ್ಟಿಸುವ ಎಲ್ಲ ಸಾಧ್ಯತೆಯೂ ಇದೆ. ನೀವೂ ಒಮ್ಮೆ ಹಾಡು ಕೇಳಿ. ಈ ಚಿತ್ರದ ಕುರಿತಾದ ಮತ್ತಷ್ಟು ವಿವರ, ಚಿತ್ರತಂಡದವರ ಅಭಿಪ್ರಾಯ ಇಲ್ಲಿದೆ…
No Comment! Be the first one.