ಸಿನಿಮಾ ರಂಗಕ್ಕೆ ಬಂದು ಅತೀ ಕಡಿಮೆ ಅವಧಿಯಲ್ಲೇ ಭಿನ್ನ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳೋದು ಕಷ್ಟದ ಕೆಲಸ. ಸಾಮಾನ್ಯಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದ ದಿನಗಳಲ್ಲಿ ಯಾವ ರೀತಿಯ ಪಾತ್ರಗಳಲ್ಲಿ ನಟಿಸೋದು ಅನ್ನೋ ಗೊಂದಲ ಹೀರೋಗಳದ್ದಾಗಿರುತ್ತದೆ. ಆದರೆ ಪಾತ್ರ ಯಾವುದೇ ಆದರೂ ಸರಿ ಅದನ್ನು ನಿಭಾಯಿಸಬಲ್ಲೆ ಅನ್ನೋದನ್ನು ಋಜುವಾತು ಮಾಡಿ ತೋರಿಸಿಕೊಟ್ಟ ನಟ ನಿಖಿಲ್ ಕುಮಾರ್.
ಮೊದಲ ಸಿನಿಮಾ ಜಾಗ್ವಾರ್’ನಲ್ಲಿ ಆಕ್ಷನ್ ಹೀರೋ ಆಗಿ ಪರದೆ ಮೇಲೆ ಭರ್ಜರಿ ಎಂಟ್ರಿ ಕೊಟ್ಟಿದ್ದ ನಿಖಿಲ್ ಎರಡನೇ ಸಿನಿಮಾ ಸೀತಾರಾಮ ಕಲ್ಯಾಣದಲ್ಲಿ ಪಕ್ಕಾ ಮನೆಮಗನಂಥಾ ಪಾತ್ರದಲ್ಲಿ ಫ್ಯಾಮಿಲಿ ಪ್ರೇಕ್ಷಕರ ಮನಗೆದ್ದಿದ್ದರು. ಹತ್ತಾರು ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡ ನಾಯಕನಟರೂ ಒಮ್ಮೊಮ್ಮೆ ಪೌರಾಣಿಕ ಪೋಷಾಕು ತೊಟ್ಟು ಪಾತ್ರ ನಿಭಾಯಿಸುವಾಗ ತಡಬಡಾಯಿಸಿಬಿಡುತ್ತಾರೆ. ಆದರೆ, ನಿಖಿಲ್ ಕುರುಕ್ಷೇತ್ರ ಚಿತ್ರದ ಅಭಿಮನ್ಯು ಪಾತ್ರದಲ್ಲಿ ಯಾವ ಮಟ್ಟಿಗೆ ತೊಡಗಿಸಿಕೊಂಡು ನಟಿಸಿದ್ದಾರೆ ಅನ್ನೋದನ್ನು ಈಗಾಗಲೇ ಬಿಡುಗಡೆಯಾಗಿರುವ ಅದರ ಟೀಸರ್ ಸಾಕ್ಷೀಕರಿಸುವಂತಿದೆ. ಮೈ ನವಿರೇಳಿಸುವ ಯುದ್ಧದ ದೃಶ್ಯಗಳ ಜೊತೆಗೆ ಅಭಿಮನ್ಯು ಮತ್ತು ಉತ್ತರೆ ನಡುವಿನ ರೊಮ್ಯಾಂಟಿಕ್ ಹಾಡು ನೋಡಿದವರನ್ನೆಲ್ಲಾ ಸೆಳೆಯುವಂತೆ ಮಾಡಿದೆ. ವಿ ನಾಗೇಂದ್ರ ಪ್ರಸಾದ್ ಬರೆದಿರುವ ಒಂದೊಂದು ಅಕ್ಷರಕ್ಕೂ ನಿಖಿಲ್ ಅದ್ಭುತವಾದ ಭಾವನೆಗಳನ್ನು ಹೊಮ್ಮಿಸಿದ್ದಾರೆ. ಒಟ್ಟಾರೆಯಾಗಿ ನೋಡಿದರೆ ನಿಖಿಲ್ ಪರಿಪೂರ್ಣ ನಟನಾಗಿ ಹೊರಹೊಮ್ಮಿರೋದು ಈ ಮೂಲಕ ಜಾಹೀರಾಗಿದೆ.
ತಂದೆ ರಾಜ್ಯ ರಾಜಕಾರಣದ ಮುಂಚೂಣಿ ನಾಯಕರಾದರೂ ಆ ಯಾವ ಭಾರವನ್ನೂ ತಲೆಗಿರಿಸಿಕೊಳ್ಳದೇ, ಒಪ್ಪಿಕೊಂಡ ಕೆಲಸವನ್ನು ನಿಷ್ಟೆಯಿಂದ ಮಾಡುವ ನಿಖಿಲ್ ಅವರ ಕಾಯಕ ಗುಣ, ಚಿತ್ರೀಕರಣ ಸ್ಥಳಗಳಲ್ಲಿ, ತಂತ್ರಜ್ಞರು, ಸಹಪಾಠಿಗಳೊಂದಿಗೆ ಅವರು ಬೆರೆಯುವ ರೀತಿ ನಿಜಕ್ಕೂ ಮೆಚ್ಚುವಂಥದ್ದು.
ಇನ್ನು ಮುಂದಿನ ದಿನಗಳಲ್ಲಿ, ಯಾರೂ ಊಹಿಸಲೂ ಸಾಧ್ಯವಾಗದ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆನ್ನುವುದು ನಿಖಿಲ್ ಅವರ ಹೆಬ್ಬಯಕೆ. ತಾವು ಒಪ್ಪಿಕೊಳ್ಳುವ ಪಾತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ಅದಕ್ಕೆ ಬೇಕಿರುವ ಎಲ್ಲ ತಯಾರಿಯ ಮೂಲಕ ಕ್ಯಾಮೆರಾದ ಮುಂದೆ ನಿಲ್ಲಬೇಕು. ಆಗ ಮಾತ್ರ ನೋಡುಗರನ್ನು ರಂಜಿಸಲು ಸಾಧ್ಯ ಅನ್ನೋದು ನಿಖಿಲ್ ನಂಬಿರುವ ಸಿದ್ಧಾಂತ. ಅವರ ನಂಬಿಕೆಗಳು ಅವರ ಕೈ ಹಿಡಿಯಲಿ. ಜನ ಯಾವತ್ತಿಗೂ ಅವರೊಂದಿಗಿದ್ದೇ ಇದ್ದಾರೆ.
No Comment! Be the first one.