ಈ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರ ಒಡೆಯ. ಇದೇ ತಿಂಗಳ ಹನ್ನೆರಡನೇ ತಾರೀಖಿಗೆ ಸಿನಿಮಾ ತರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖುದ್ದು ಮಾತಿಗೆ ಸಿಕ್ಕಿದ್ದರು.
ಈ ವರ್ಷ ಒಂದರ ಹಿಂದೆ ಒಂದು ಸಿನಿಮಾ ಬಿಡುಗಡೆಯಾಗುತ್ತಿದೆಯಲ್ಲಾ?
ಹೌದು. ಯಜಮಾನ, ಕುರುಕ್ಷೇತ್ರ ಮತ್ತು ಈಗ ಒಡೆಯ ರಿಲೀಸಾಗುತ್ತಿದೆ. ಎಲ್ಲ ಅಂದುಕೊಂಡಂತೇ ಕೆಲಸ ಕಾರ್ಯಗಳು ನಡೆದಾಗ ಬಿಡುಗಡೆ ಕೂಡಾ ಕರೆಕ್ಟಾಗಿ ಆಗುತ್ತದೆ. ಸಿನಿಮಾ ಶುರುವಾದ ದಿನದಿಂದ ಹಿಡಿದು ಇವತ್ತಿನ ತನಕ ಒಡೆಯ ಚಿತ್ರಕ್ಕೆ ಪ್ಲಾನಿಂಗ್ ಪ್ರಕಾರವೇ ಕೆಲಸ ಮಾಡಿದ್ದೇವೆ. ನಿರ್ಮಾಪಕ ಸಂದೇಶ್ ಕೂಡಾ ತಮ್ಮ ಬೇರೆಲ್ಲಾ ಕೆಲಸಗಳನ್ನು ಬಿಟ್ಟು ನಿಂತಿದ್ದರಿಂದ ಬೇಗ ಸಿನಿಮಾ ಮುಗಿದಿದೆ. ಸಿನಿಮಾ ಶುರುವಾಗಿದ್ದು ಮುಗಿದಿದ್ದು ನಿಜಕ್ಕೂ ಗೊತ್ತಾಗಿಲ್ಲ. ಯಾವುದೇ ಸಿನಿಮಾ ಇರಲಿ, ಏಕಾಗ್ರತೆ ಮತ್ತು ಪ್ಲಾನಿಂಗ್ ಇದ್ದಾಗ ಮಾತ್ರ ಒಳ್ಳೆ ಸಿನಿಮಾ ಮಾಡಲು ಸಾಧ್ಯ…
ಸಿನಿಮಾಗಳು ಯಾಕೆ ಕೆಲವೊಮ್ಮೆ ತಡವಾಗುತ್ತದೆ?
ನಿಮ್ಮ ಮಾಧ್ಯಮ ಇರಬಹುದು, ಬೇರೆ ಯಾವುದೇ ಐಟಿ, ಬಿಟಿ, ಇನ್ನೊಂದು ಮತ್ತೊಂದು ಕ್ಷೇತ್ರವಿರಬಹುದು. ಬಹಳಷ್ಟು ಕಡೆ ಕೆಲಸದ ಅಭದ್ರತೆ ಇರುತ್ತದೆ. ಯಾವಾಗ ಯಾರ ಕೆಲಸ ಹೋಗುತ್ತದೆ ಅನ್ನೋ ಭಯವಿರುತ್ತದೆ. ಆದರೆ ನಾನು ಗಮನಿಸಿದಂತೆ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರ ಕೊಡೋ ದುಡ್ಡು ಕೊಟ್ಟು, ಕೈ ಕಾಲು ಹಿಡಿದು ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ಉದ್ಭವಿಸುತ್ತದೆ. ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳಲು ನಿರ್ಮಾಪಕರೇ ಛೀ, ಥೂ ಅನ್ನಿಸಿಕೊಳ್ಳುಬ ಸಂದರ್ಭವೂ ಎದುರಾಗುತ್ತದೆ. ಈ ಎಲ್ಲ ಕಾರಣದಿಂದ ಹಣ ಹಾಗಿದ ನಿರ್ಮಾಪಕ ಒದ್ದಾಡಬೇಕಾಗುತ್ತದೆ. ಒಬ್ಬಿಬ್ಬರು ಮಾಡುವ ತಪ್ಪಿನಿಂದಾಗಿ, ಎಲ್ಲರೂ ಕಷ್ಟ ಅನುಭವಿಸಬೇಕಾಗುತ್ತದೆ. ಸಿನಿಮಾ ಕೂಡಾ ತಡವಾಗುತ್ತದೆ.
ಈ ಸಿನಿಮಾ ಗೆದ್ದರೆ ಹ್ಯಾಟ್ರಿಕ್ ಆದಂತಾಗುತ್ತದಲ್ಲವಾ?
ಕನ್ನಡ ಚಿತ್ರರಂಗಕ್ಕೆ ಶಿವಣ್ಣ ಒಬ್ಬರೇ ಹ್ಯಾಟ್ರಿಕ್ ಹೀರೋ. ಅವರ ಮುಂದೆ ನನ್ಯಾಕೆ ಹ್ಯಾಟ್ರಿಕ್ ಹೀರೋ ಅಂತ ಕಂಪೇರ್ ಮಾಡ್ತೀರಾ… ನನಗೆ ಗೊತ್ತಿರುವಂತೆ ಕನ್ನಡ ಚಿತ್ರರಂಗಕ್ಕೆ ಶಿವಣ್ಣ ಒಬ್ಬರೇ ಹ್ಯಾಟ್ರಿಕ್ ಹೀರೋ. ಅವರಿಗೆ ನನ್ನ ಕಂಪೇರ್ ಮಾಡಬೇಡಿ. ಸಿನಿಮಾದ ಬಗ್ಗೆ ನನಗೂ ಕುತೂಹಲವಿದೆ. ಹ್ಯಾಟ್ರಿಕ್ ಗೀಟ್ರಿಕ್ ಎಲ್ಲವೂ ಪ್ರೇಕ್ಷಕರಿಗೆ ಬಿಟ್ಟಿದ್ದು. ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾ ಕೊಡಬೇಕೆನ್ನುವುದಷ್ಟೇ ನನ್ನ ಜವಾಬ್ದಾರಿ
ಸಂದೇಶ್ ಕಂಬೈನ್ಸ್ ಮೂಲಕ ದರ್ಶನ್ ಅಭಿನಯಿಸಿದ ಸಿನಿಮಾ ಒಡೆಯ. ಇದು ರಿಲೀಸ್ ಆಗುವ ಹೊತ್ತಿಗೆ ಸಂದೇಶ್ ಕಂಬೈನ್ಸ್ ನಲ್ಲೇ ಮತ್ತೊಂದು ಸಿನಿಮಾ ಮಾಡಲಿದ್ದೀರಾ?
ನೋಡೋಣ ಅದಿನ್ನು ಮಾತುಕತೆಯಲ್ಲಿದೆ. ಫೈನಲ್ ಆಗದೆ ಏನನ್ನು ಹೇಳಲಾಗದು. ಒಂದು ಸಿನಿಮಾ ಜಗದಲ್ಲಿ ಕೂತು ಮತ್ತೊಂದು ಸಿನಿಮಾ ಬಗ್ಗೆ ಮಾತಾಡಬಾರದು!
No Comment! Be the first one.