ಒಡೆಯ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಕನ್ನಡ ನಾಡಿನಾದ್ಯಂತ ಎಲ್ಲೆಲ್ಲೂ ಒಡೆಯನದ್ದೇ ಅಬ್ಬರ. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಸಂದೇಶ್ ಒಡೆಯನ ವಿಶೇಷತೆಗಳ ಕುರಿತು cinibuzz ಜೊತೆಗೆ ಮಾತಾಡಿದ್ದಾರೆ. ಏನದು ಅನ್ನೋದರ ವಿವರ ಇಲ್ಲಿದೆ…
ನಾನು ನನ್ನ ತಂದೆಯವರ ಸಂದೇಶ್ ಕಂಬೈನ್ಸ್ ನಿರ್ಮಾಣದ ಚಿತ್ರಗಳಲ್ಲಿ ಸಹಾಯಕನಾಗಿ ಅವರ ಬಳಿ ಕೆಲಸ ಮಾಡುತ್ತಿದ್ದೆ. ದರ್ಶನ್ ಅವರ ಅಭಿಲಾಷೆಯಂತೆ ಅವರೇ ಅಭಿನಯಿಸಿದ ಪ್ರಿನ್ಸ್ ಸಿನಿಮಾ ಮೂಲಕ ಸಂದೇಶ್ ಪ್ರೊಡಕ್ಷನ್ ಪ್ರಾರಂಭಿಸಿ ಚಿತ್ರ ನಿರ್ಮಾಣವನ್ನು ಪ್ರಾರಂಭಿಸಿದೆ. ಸಂದೇಶ್ ಪ್ರೊಡಕ್ಷನ್ ಮೂಲಕ ತೆರೆಕಾಣಲಿರುವ ೪ನೇ ಚಿತ್ರ ಒಡೆಯ.
ನಮ್ಮ ಪ್ರೊಡಕ್ಷನ್ನಲ್ಲಿ ಯುನಿಟ್ ಆಗಿರಬಹುದು, ಆರ್ಟಿಸ್ಟ್ ಆಗಿರಬಹುದು, ಎಲ್ಲರೂ ಒಂದೇ. ಚಿತ್ರತಂಡ ಅಂತ ಹೇಳುವ ಬದಲು ಒಂದು ಕುಟುಂಬ ಅಂತ ಹೇಳ ಬಯಸುತ್ತೇನೆ. ಸುಮಾರು ೩೦೦ರಿಂದ ೪೦೦ ಜನ ೧೪ ತಿಂಗಳು ಒಟ್ಟಿಗೆ ಕೆಲಸ ಮಾಡಿದ್ದೇವೆ. ಹೇಗೆ ಸಿನಿಮಾ ಶೂಟಿಂಗ್ ಶುರುವಾಯಿತು ಹೇಗೆ ಮುಗಿಯಿತು ಅನ್ನೋದೇ ತಿಳಿಯದ ಹಾಗೆ ಎಲ್ಲರೂ ಸಹಕಾರ ನೀಡಿದರು. ಈ ಕುಟುಂಬದ ಎಲ್ಲ ಸದಸ್ಯರಿಗೂ ನನ್ನ ಧನ್ಯವಾದಗಳು. ಸಾಧುಕೋಕಿಲ, ಶರತ್ ಲೋಹಿತಾಶ್ವ, ರವಿಶಂಕರ್, ಚಿಕ್ಕಣ್ಣ, ರವಿಂಶಕರ್ಗೌಡ, ದೇವರಾಜ್, ಚಿತ್ರ ಶೆಣೈ, ಯಶಸ್, ಪಂಕಜ್, ಸಮರ್ಥ್, ನಿರಂಜನ್ ಎಲ್ಲರೂ ಸೇರಿದಂತೆ ಬಹಳ ಚೆನ್ನಾಗಿ ನಟಿಸಿದ್ದಾರೆ. ಕೃಷ್ಣಕುಮಾರ್ ಅವರು ಕ್ಯಾಮೆರಮನ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ, ಜಯಂತ್ ಕಾಯ್ಕಿಣಿ ಹಾಗೂ ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ.
ಕಾಕತಾಳೀಯ ಎಂದರೆ ಎಂ ಡಿ ಶ್ರೀಧರ್ ಅವರ ನಿರ್ದೇಶನದ ೩ನೇ ಸಿನಿಮಾ ಇದು. ನನ್ನ ನಿರ್ಮಾಣದಲ್ಲಿ ತೆರೆಕಾಣುತ್ತಿರುವ ೩ನೇ ಸಿನಿಮಾ, ದರ್ಶನ್ ಹಾಗೂ ಶ್ರೀಧರ್ ಅವರ ಕಾಂಬಿನೇಷನ್’ನ ೩ನೇ ಸಿನಿಮಾ, ಹಾಗೂ ದರ್ಶನ್’ರೊಟ್ಟಿಗೆ ನನ್ನ ೩ನೇ ಸಿನಿಮಾ ಇದು. ಮತ್ತೆ ದರ್ಶನ್ ಅವರನ್ನೂ ಸಹ ಸೇರಿಸ್ಕೊಬಹುದು ಹೇಗೆಂದರೆ ಯಜಮಾನ, ಕುರುಕ್ಷೇತ್ರ ಈಗ ಒಡೆಯಚಿತ್ರ ೧೦೦ ದಿನಗಳು ಯಶಸ್ವಿಯಾದರೆ ಹ್ಯಾಟ್ರಿಕ್ ಹಿಟ್ ನೀಡಿದಂತಾಗುತ್ತದೆ.
ಸ್ವಿಜರ್ ಲ್ಯಾಂಡ್, ಮೈಸೂರು ಹಾಗೂ ಕರ್ನಾಟಕದ ಸುತ್ತಮುತ್ತ ಶೂಟಿಂಗ್ ಮಾಡಿದ್ದೇವೆ. ಫ್ಯಾಮಿಲಿ ಸಬ್ಜೆಕ್ಟ್, ಸಿಟಿ ಸಬ್ಜೆಕ್ಟ್, ಹಳಿ ಸಬ್ಜೆಕ್ಟ್, ಕಾಮಿಡಿ, ಆಕ್ಷನ್ ಹೀಗೆ ಹಲವು ಆಯಾಮಗಳಿವೆ. ಅಭಿಮಾನಿಗಳು ದರ್ಶನ್ ಅವರಿಂದ ಏನೆಲ್ಲಾ ಬಯಸುತ್ತಾರೋ ಎಲ್ಲವೂ ಈ ಚಿತ್ರದಲ್ಲಿದೆ. ಬಹಳ ಒಳ್ಳೆಯ ಪ್ರಯತ್ನ ಮಾಡಿದ್ದೇವೆ. ಡಿಸೆಂಬರ್ ೧೨ರಂದು ರಾಜ್ಯದ ಸುಮಾರು ೪೦೦ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.