ಈ ಹಿಂದೆ ಒರಟ ಐ ಲವ್ ಯು, ಆರ್ಯ ಅಭಿನಯದ ಈ ಸಂಜೆ ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀ ಬಹಳ ದಿನಗಳ ನಂತರ ಮತ್ತೆ ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದು, ಒಂಟಿ ಎಂಬ ಮಾಸ್ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಉತ್ಸಾಹಿ ಯುವಕನೊಬ್ಬನ ಪ್ರೇಮ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಆರ್ಯ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಆರ್ಯ ಬೇರಾರೂ ಅಲ್ಲ, ಹಿಂದೆ ಸುದೀಪ್ ಅಭಿನಯದ ಮೈ ಆಟೋಗ್ರಾಫ್, ನಂ.73 ಶಾಂತಿನಿವಾಸ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿ ಗುರ್ತಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಈಸಂಜೆ ಎಂಬ ಚಿತ್ರದಲ್ಲೂ ನಟಿಸಿದ್ದ ಆರ್ಯ ನಾಯಕನಾಗಿ ನಟಿಸಿರುವ ಎರಡನೇ ಚಿತ್ರ ಒಂಟಿ.
ಈ ಚಿತ್ರದ ಹಾಡುಗಳ ಧ್ವನಿಸುರುಳಿ ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಎಸ್.ಆರ್.ವಿ. ಥಿಯೇಟರಿನಲ್ಲಿ ನೆರವೇರಿತು. ಇತ್ತೀಚೆಗಷ್ಟೇ ಗೃಹಿಣಿಯಾಗಿರುವ ನಟಿ ಮೇಘನಾರಾಜ್ ಈ ಚಿತ್ರದಲ್ಲಿ ಆರ್ಯ ಎದುರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆರಡಿ ಹೈಟ್, ನಿಂತ್ರೆ ಫೈಟ್ ಎಂಬ ಅಡಿಬರಹ ಹೊಂದಿರುವ ಈ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಬಿಡುಗಡೆಗೆ ರೆಡಿಯಾಗಿದೆ.
ಈ ಸಂದರ್ಭದಲ್ಲಿ ನಿರ್ದೇಶಕ ಶ್ರೀ ಮಾತನಾಡುತ್ತಾ, ಆರ್ಯ ನನಗೆ ೧೫ ವರ್ಷಗಳ ಗೆಳೆಯ. ಅವರ ಹಾಗೂ ನನ್ನ ವೇವ್ಲೆಂಥ್ ಮ್ಯಾಚ್ ಆಗ್ತಿತ್ತು. ಈ ಚಿತ್ರದ ಪೇಪರ್ವರ್ಕ್ನಿಂದ ಹಿಡಿದು ಪ್ರತಿ ಹಂತದಲ್ಲೂ ಎಲ್ಲಾ ವಿಭಾಗದಲ್ಲಿ ಜೊತೆಯಾಗೇ ಕೆಲಸ ಮಾಡಿದ್ದೇವೆ. ಇಬ್ಬರೂ ಸೇರಿ ಈ ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಮೊದಲು ಟೈಟಲ್ ರಿಜಿಸ್ಟರ್ ಮಾಡಿಸಿ, ನಂತರ ನಿರ್ಮಾಪಕರಿಗಾಗಿ ಸಾಕಷ್ಟು ಹುಡುಕಾಟ ನಡೆಸಿದವು. ಯಾರೂ ಮುಂದೆ ಬರೆದಿದ್ದಾಗ ಕೊನೆಗೆ ಆರ್ಯ ಅವರ ಪೋಷಕರೇ ಬಂಡವಾಳ ಹೂಡಲು ಮುಂದಾದರು. ಈ ಕಥೆಯಲ್ಲಿ ನಾಯಕಿ ಪಾತ್ರಕ್ಕೆ ಮೇಘನಾರಾಜ್ ಅವರನ್ನು ಬಿಟ್ಟರೆ ಬೇರೆ ಆಯ್ಕೆಯೇ ನಮಗೆ ಇರಲಿಲ್ಲ. ನಿಜಕ್ಕೂ ಅವರ ಟೈಮ್ಸೆನ್ಸ್ ಮೆಚ್ಚಲೇಬೇಕು. ನೀನಾಸಂ ಅಶ್ವಥ್ ಅವರದು ಸರ್ಪ್ರೈಸ್ ರೋಲ್. ಸಂಗೀತದಲ್ಲಿ ಮನೋಜ್ ತುಂಬಾ ಹಾರ್ಡ್ವರ್ಕ್ ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ಅವರ ಕೆಲಸ ಎದ್ದು ಕಾಣುತ್ತದೆ. ಇದೊಂದು ಅಪ್ಪಟ ಪ್ರೇಮಕಥಾನಕ. ಆಕ್ಷನ್ ಹಿನ್ನೆಲೆಯಲ್ಲಿ ನಡೆಯುವ ಲವ್ ಸ್ಟೋರಿ ಎಂದು ಹೇಳಿದರು.
ಈ ಚಿತ್ರದ ನಾಯಕ ಹಾಗೂ ನಿರ್ಮಾಪಕನೂ ಆಗಿರುವ ಆರ್ಯ ಮಾತನಾಡುತ್ತ ಹಿಂದೆ ಈ ಸಂಜೆ ಚಿತ್ರದಲ್ಲಿ ನಾನು ಹಾಗೂ ಶ್ರೀ ಒಟ್ಟಿಗೇ ಕೆಲಸ ಮಾಡಿದ್ದೆವು. ಆ ಚಿತ್ರ ಏಕೆ ಗೆಲ್ಲಲಿಲ್ಲ ಎಂದು ಅನಲೈಸ್ ಮಾಡಿದೆವು. ಕೂತು ಯೋಚಿಸಿ ಒಂದು ಕಮರ್ಷಿಯಲ್ ಸಬ್ಜೆಕ್ಟ್ ಮಾಡಿಕೊಂಡೆವು. ಎಲ್ಲ ನಿರ್ಮಾಪಕರೂ ರಿಟರ್ನ ಬರೋ ಬಗ್ಗೆ ಯೋಚಿಸುತ್ತಾರೆ. ಅದು ತಪ್ಪಲ್ಲ, ನನಗೆ ಎಲ್ಲಾ ಬಾಗಿಲು ಮುಚ್ಚಿದಾಗ ಒಂದು ಬಾಗಿಲು ತೆರೆಯಿತು. ದೇವರು ನಮಗೆ ದಾರಿ ತೋರಿಸಿದ. ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ ನಾಯಕನಿಗೆ ಜೀವನದಲ್ಲಿ ಯಾವುದೇ ಒಂದು ಸಂದರ್ಭದಲ್ಲಿ ತಾನು ಒಂಟಿ ಎಂಬ ಭಾವನೆ ಕಾಡುತ್ತದೆ. ಆಗ ಆತನಿಗೆ ಯಾವ ರೀತಿಯ ಪರಿಹಾರ ಸಿಕ್ಕಿತು ಎನ್ನುವುದನ್ನು ಒಂದು ಸುಂದರ ಲವ್ಸ್ಟೋರಿಯೊಂದಿಗೆ ಹೇಳುವ ಪ್ರಯತ್ನ ಮಾಡಿದ್ದೇವೆ. ಚಿತ್ರದಲ್ಲಿ ಆಕ್ಷನ್, ಎಮೋಷನ್ಸ್, ಕಾಮಿಡಿ ಜೊತೆಗೆ ಅದ್ಭುತವಾದ ಟ್ವಿಸ್ಟ್ ಕೂಡ ಇದೆ. ಈ ಚಿತ್ರದಲ್ಲಿ 8 ವಿಶೇಷ ಸಾಹಸ ದೃಶ್ಯಗಳಿದ್ದು, ಅದಕ್ಕಾಗಿ 8 ಬೇರೆ ಬೇರೆ ಥರದ ಸೆಟ್ಗಳನ್ನು ಹಾಕಿ ಶೂಟ್ ಮಾಡಿದ್ದೇವೆ. ಜುಲೈ ತಿಂಗಳಲ್ಲಿ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವ ಯೋಜನೆಯಿದೆ. ವಿಜಯ ಫಿಲಂಸ್ನ ವಿಜಯ್ಕುಮಾರ್ ನಮ್ಮ ಚಿತ್ರವನ್ನು ರಿಲೀಸ್ ಮಾಡಿಕೊಡುತ್ತಿದ್ದಾರೆ ಎಂದು ಹೇಳಿದರು.
ನಾಯಕಿ ಮೇಘನಾರಾಜ್ ಮಾತನಾಡಿ, ಆರ್ಯ ಅವರ ಡೆಡಿಕೇಶನ್ ನನಗೆ ತುಂಬಾ ಇಷ್ಟವಾಯಿತು. ದೊಡ್ಡ ಪ್ರಾಜೆಕ್ಟ್ ಮಾಡುವಾಗ ಕಿರಿಕ್ ತೊಂದರೆ ಬರುವುದು ಸಾಮಾನ್ಯ, ಆದರೆ ಇದ್ಯಾವುದಕ್ಕೂ ಅವಕಾಶ ಕೊಡದೆ ನೀಟಾಗಿ ಈ ಸಿನಿಮಾ ಮಾಡಿ ಮುಗಿಸಿದ್ದಾರೆ. ನಾನು ಕಾಲೇಜು ಹುಡುಗಿಯ ಪಾತ್ರ ಮಾಡಿದ್ದು, ಆಕೆಯ ಲೈಫ್ನಲ್ಲಿ ಒಂಟಿ ಎಂಬ ಯುವಕನ ಎಂಟ್ರಿ ಆದಾಗ ಏನೆಲ್ಲ ಬದಲಾವಣೆ ಆಗುತ್ತದೆ, ಇಬ್ಬರದ್ದೂ ಇಲ್ಲಿ ತದ್ವಿರುದ್ದ ಗುಣ, ಆದರೂ ಹೇಗೆ ಮ್ಯಾಚ್ ಆಗುತ್ತೆ ಎಂದು ಈ ಚಿತ್ರದಲ್ಲಿ ನಿರೂಪಿಸಿದ್ದಾರೆ ಎಂದು ಹೇಳಿದರು.
ಹಿರಿಯ ನಟ ದೇವರಾಜ್, ಗಿರಿಜಾ ಲೋಕೇಶ್, ಶರತ್ ಲೋಹಿತಾಶ್ವ, ನೀನಾಸಂ ಅಶ್ವಥ್, ಮಜಾ ಟಾಕೀಸ್ ಪವನ್, ರವಿಶಂಕರ್, ನಿಶಾಂತ್, ರಾಜವರ್ಧನ್ ಸೇರಿದಂತೆ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿzರೆ. ಶ್ರೀಲಂಕಾ ಮೂಲದ ಮನೋಜ್ ಎಸ್. ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಹಾಡುಗಳಿಗೆ ನಾಗೇಂದ್ರ ಪ್ರಸಾದ್, ಕೆ. ಕಲ್ಯಾಣ್ ಅವರ ಸಾಹಿತ್ಯವಿದ್ದು, ಸಿದ್ಧಾರ್ಥ ಬಸ್ರೂರ್, ವಿಜಯಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ನಟ ನೀನಾಸಂ ಅಶ್ವಥ್ ಈವರೆಗೂ ಯಾವುದೇ ಚಿತ್ರದಲ್ಲಿ ಮಾಡದಂತಹ ಪಾತ್ರವನ್ನು ಈ ಚಿತ್ರದಲ್ಲಿ ನಿರ್ವಹಿಸಿದ್ದಾರೆ. ಮಜ ಟಾಕೀಸ್ ಖ್ಯಾತಿಯ ಪವನ್ ನಾಯಕನ ಗೆಳೆಯನಾಗಿ ಅಭಿನಯಿಸಿದ್ದಾರೆ.
No Comment! Be the first one.