ಬಣ್ಣದ ಜಗತ್ತು ಯಾರನ್ನು ಯಾವಾಗ ತನ್ನ ತೆಕ್ಕೆಗೆ ಸೆಳೆದುಕೊಂಡು ಮೆರೆಸುತ್ತದೋ ನಿಖರವಾಗಿ ಹೇಳಲಿಕ್ಕಾಗುವುದಿಲ್ಲ. ಕಲಾವಿದರಾಗಬೇಕು ಅಂತಲೇ ಬಯಸಿ ಎಷ್ಟೋ ಜನ ಹಗಲಿರುಳು ಪ್ರಯತ್ನಿಸುತ್ತಿರುತ್ತಾರೆ. ಆದರೆ ಕನಸು ಕೈಗೂಡೋದೇ ಇಲ್ಲ. ಇನ್ನು ಕೆಲವೊಮ್ಮೆ ಅನಿರೀಕ್ಷಿತವಾಗಿ ಈ ಜಗತ್ತಿಗೆ ಕಾಲಿಟ್ಟು ದೊಡ್ಡ ಮಟ್ಟದಲ್ಲಿ ಗೆಲುವು ಕಾಣುತ್ತಾರೆ. ಹಾಗೆ ಯಾವ ನಿರೀಕ್ಷೆಯೂ ಇಲ್ಲದೆ ದಢೀರಂತಾ ಗ್ಲಾಮರ್ ಲೋಕಕ್ಕೆ ಎಂಟ್ರಿ ಕೊಟ್ಟು ಇವತ್ತು ಇಡೀ ದೇಶದಾದ್ಯಂತ ಹೆಸರು ಮಾಡಿರುವ ಕಲಾವಿದೆ ಡಾ. ಪೂಜಾ ರಮೇಶ್.
2007ರ ಸುಮಾರಿಗೆ ಓದುವ ಕಾರಣಕ್ಕೆ ಬೆಂಗಳೂರಿಗೆ ಬಂದವರು ಪೂಜಾ ರಮೇಶ್. ಫ್ಯಾಶನ್ ಡಿಸೈನಿಂಗ್ ಮುಗಿಸಿ ಒಂದೊಳ್ಳೆ ಕೆಲಸಕ್ಕೆ ಸೇರಿ, ದುಡಿಮೆ ಮಾಡಬೇಕು ಅನ್ನೋದು ಈಕೆಯ ಕನಸಾಗಿತ್ತು. ಆದರೆ ಅಚಾನಕ್ಕಾಗಿ 2008ರಲ್ಲಿ ಖಾಸಗಿ ಕೇಬಲ್ ಚಾನೆಲ್ಲೊಂದರಲ್ಲಿ ನಿರೂಪಕಿಯಾಗುವ ಅವಕಾಶ ಒದಗಿಬಂದಿತ್ತು. ಅಲ್ಲಿ ಸತತ ಆರು ತಿಂಗಳುಗಳ ಕಾಲ ಕಾರ್ಯನಿರ್ವಹಿಸಿದ್ದರು. ಆ ಹೊತ್ತಿನಲ್ಲೇ ಸಾಕಷ್ಟು ಸಿನಿಮಾ ಅವಕಾಶಗಳು ಪೂಜಾ ಅವರನ್ನರಸಿ ಬಂದವು. ನಿರುದ್ಯೋಗಿ, ಅರವಿಂದ, ಪೇಪರ್ ದೋಣಿ, ಲಹರಿ, ತಾಂಡವ ಮತ್ತು ಮಹಾಕಾಳಿ – ಹೀಗೆ ಒಂದರ ಹಿಂದೊಂದು ಸಿನಿಮಾದಲ್ಲಿ ಪೂಜಾ ನಟಿಸಿದರು.
ಕಾಮಧೇನು ಎನ್ನುವ ಮೆಗಾ ಸೀರಿಯಲ್ಲಿನಲ್ಲಿ ಪ್ರಧಾನ ಪಾತ್ರ ಕೂಡಾ ಈಕೆಗೆ ದೊರೆಯಿತು. ಆ ನಂತರ ಪೂರ್ಣಪ್ರಮಾಣದಲ್ಲಿ ಧಾರಾವಾಹಿಗಳ ಪಾತ್ರಗಳು ಪೂಜಾರನ್ನು ಆವರಿಸಿಕೊಂಡವು. ಜಾಹ್ನವಿ, ಸಂಭವಾಮಿ ಯುಗೇಯುಗೇ, ಗ್ರಹಣ, ಎಲ್ಲಿ ಜಾರಿತೋ ಮನವು, ಪಾಂಡುರಂಗ ವಿಠಲ, ಪಾರ್ವತಿ, ಎಸೆಸೆಲ್ಸಿ ನನ್ ಮಕ್ಕಳು, ಪರಮೇಶ್ವರ, ಅಶ್ವಿನಿ ನಕ್ಷತ್ರದ ಜೊತೆಗೆ 2 ತೆಲುಗು ಸೀರಿಯಲ್ ಗಳಲ್ಲೂ ಪೂಜಾ ಪಾತ್ರ ನಿರ್ವಹಿಸಿದರು. ಇದರ ಜೊತೆಗೆ ಒಂದಷ್ಟು ಜಾಹೀರಾತುಗಳಿಗೆ ರೂಪದರ್ಶಿಯಾಗಿಯೂ ಕಾಣಿಸಿಕೊಂಡರು. ಹೀಗೆ 2008 ರಿಂದ 2015ರ ತನಕ ನಟನೆಯಲ್ಲಿ ತೊಡಗಿಸಿಕೊಂಡ ಪೂಜಾ ಬರೋಬ್ಬರಿ ಐದಾರು ವರ್ಷ ನಟನೆಯಿಂದ ದೂರವೇ ಉಳಿದರು.
ಇಷ್ಟು ದೀರ್ಘ ಕಾಲದ ಬ್ರೇಕ್ ತೆಗೆದುಕೊಂಡಿದ್ದರಿಂದಲೋ ಏನೋ ದೇಹದ ತೂಕ ಕೂಡಾ ಹೆಚ್ಚಾಗಿತ್ತು. ಆ ಹೊತ್ತಿನಲ್ಲಿ ಪೂಜಾಗೆ ʻನಾನು ಮತ್ತೆ ಮೊದಲಿನಂತೆ ಫಿಟ್ ಆಗಬೇಕು. ಬಣ್ಣದ ಜಗತ್ತಿಗೆ ಮರಳಬೇಕುʼ ಅಂತಾ ಅನ್ನಿಸಲು ಶುರುವಾಗಿತ್ತು. 69 ಕೆಜಿ ತೂಕವಿದ್ದ ಪೂಜಾ ಕಠಿಣ ಶ್ರಮದ ಫಲವಾಗಿ 52 ಕೆಜಿ ಇಳಿದರು. ಮೊದಲಿಗಿಂತಲೂ ಹೆಚ್ಚು ತೆಳ್ಳಗಾದರು. ಈಗ ಕನ್ನಡ, ತಮಿಳು ಮತ್ತು ತೆಲುಗು ಇಂಡಸ್ಟ್ರಿಗಳಿಂದ ಅವಕಾಶಗಳು ಬರಲಾರಂಭಿಸಿವೆ. ಇದರ ಜೊಗೆತೆ miss India title ಕೂಡಾ ಗೆದ್ದಿದ್ದಾರೆ. ಜೊತೆಗೆ ಬೆಸ್ಟ್ ಬ್ಯೂಟಿಫುಲ್ ಹೇರ್ ಅವಾರ್ಡ್ ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಇವೆಲ್ಲದರ ಜೊತೆಗೆ ಪೂಜಾ ಅವರ ಸಾಧನೆಯನ್ನು ಗುರುತಿಸಿ ತಮಿಳುನಾಡಿನ Asia Vedic culture Academy ಗೌರವ ಡಾಕ್ಟರೇಟ್ ಪದವಿ ಕೂಡಾ ನೀಡಿ ಸನ್ಮಾನಿಸಿದೆ.
ಸಿನಿಮಾ, ಧಾರಾವಾಹಿ ನಟನೆಯ ಜೊತೆಗೆ ಸಮಾಜಕ್ಕೆ ತಮ್ಮಿಂದೇನಾದರೂ ಒಳಿತಾಗಲಿ ಎನ್ನುವ ಕಾರಣಕ್ಕೆ ಸಾಮಾಜಿಕ ಕೆಲಸ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಕೊಡಗಿನ ಕಾಫಿ ತೋಟದ ಕೂಲಿ ಕಾರ್ಮಿಕರ ಮಕ್ಕಳಿಗೆ ಶಾಲಾ ಸಮವಸ್ತ್ರವನ್ನು ನೀಡಿದ್ದಾರೆ. ಕೊಡಗಿನ ಜನತೆ ಪ್ರೀತಿಯಿಂದ ಕಾವೇರಿ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಿದ್ದಾರೆ. ಅಖಿಲ ಗೋವಾ ಕನ್ನಡಿಗರ ಮಹಾಸಂಘ ಮತ್ತು ಸ್ನೇಹ ಯುವ ಸಾಂಸ್ಕೃತಿಕ ಸಂಘ ಸೇರಿ ಗೋವಾ ಕಲಾ ಉತ್ಸವದಲ್ಲಿ ಪ್ರೈಡ್ ಆಫ್ ಇಂಡಿಯಾ ಅವಾರ್ಡು ನೀಡಿದ್ದಾರೆ. ಜನ್ಮಭೂಮಿ ಫೌಂಡೇಶನ್ ವರಿಯಿಂದ ಮಹಿಳಾ ಸಾಧಕಿ ಪ್ರಶಸ್ತಿಯನ್ನೂ ನೀಡಿದ್ದಾರೆ. ಇಷ್ಟೆಲ್ಲಾ ಪ್ರಶಸ್ತಿ ಸನ್ಮಾನಗಳು ಡಾ. ಪೂಜಾ ರಮೇಶ್ ಅವರ ಸ್ಫೂರ್ತಿಯನ್ನು ಹೆಚ್ಚಿಸಿವೆ…
Comments