ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್ ಅನ್ನುವ ವಿಚಿತ್ರ ಹೆಸರಿನ ಸಿನಿಮಾದಲ್ಲಿ ಧನಂಜಯ್ ಅವರನ್ನು ಹೀರೋ ಮಾಡಿದ್ದಾರೆ. ಈಗ ರಿಲೀಸಾಗಿರುವ ಟ್ರೇಲರೇ ಹೇಳುತ್ತಿದೆ. ಇದು ಇಡೀ ಇಂಡಿಯಾ ತಿರುಗಿನೋಡುವಂತಾ ಸಿನಿಮಾ ಆಗಲಿದೆ ಅಂತಾ. ಸೂರಿ ಮತ್ತು ಡಾಲಿ ಎಂಬ ಇಬ್ಬರು ಪ್ರತಿಭಾವಂತರ ಸಂಗಮವಾಗಿ ಮಂಕಿ ಟೈಗರ್ ರಿಲೀಸ್ ಆಗುತ್ತಿದೆ.
ಒಂದಾದಮೇಲೊಂದು ಸೋಲುಗಳು ಬಾಚಿ ಬಾಚಿ ತಬ್ಬಿಕೊಳ್ಳುತ್ತಲೇ ಇತ್ತು. “ಈ ಹುಡುಗನ ಫಿಸಿಕ್ಕು, ಆಕ್ಟಿಂಗು ಎಲ್ಲಾ ಚೆನ್ನಾಗೇ ಇದೆ. ಆದರೆ ಯಾಕೋ ಲಕ್ಕು ಕುದುರುತ್ತಲೇ ಇಲ್ಲ” ಎಂದು ಜನ ಮಾತಾಡಿಕೊಳ್ಳಲು ಶುರು ಮಾಡಿದ್ದರು. ಡೈರೆಕ್ಟರ್ಸ್ ಸ್ಪೆಷಲ್, ರಾಟೆ, ಜೆಸ್ಸಿ, ಬಾಕ್ಸರ್, ಅಲ್ಲಮ- ಹೀಗೆ ಧನಂಜಯ್ ಅವರ ಪಾಲಿಗೆ ಸಿಕ್ಕಿದ್ದು ದೊಡ್ಡ ಬ್ಯಾನರುಗಳು, ಹೆಸರಾಂತ ನಿರ್ದೇಶಕರುಗಳೇ. ಪ್ರತೀ ಸಿನಿಮಾದಲ್ಲಿ ಧನು ನಟನೆಗೆ ಹಂಡ್ರೆಡ್ ಪರ್ಸೆಂಟ್ ಮಾರ್ಕ್ಸ್ ಗಿಟ್ಟುತ್ತಿತ್ತು. ಆದರೆ ಯಾವ ಡೈರೆಕ್ಟರುಗಳ ಪ್ರಯತ್ನವೂ ಧನಂಜಯ್ ವೃತ್ತಿ ಬದುಕಿಗೆ ಹೇಳಿಕೊಳ್ಳುವಂತಾ ವರವಾಗಲಿಲ್ಲ. ಈಗ ಗೆಲ್ಲಬಹುದು, ಆಗ ಗೆಲ್ಲಬಹುದು ಅಂಥಾ ಕಾಯುತ್ತಿದ್ದ ಧನಂಜ್ ಕೆರಿಯರನ್ನು ಕೈ ಹಿಡಿದು ಮೇಲೆತ್ತಿದ್ದು ಸೂರಿ!
ಅದು ಸೂರಿಯ ತಾಕತ್ತು. ಯಾರನ್ನು ಹೇಗೆ ತೋರಿಸಬಹುದು ಅನ್ನೋ ಕರಾರುವಕ್ಕಾದ ದೃಷ್ಟಿಯಿರುವ ಡೈರೆಕ್ಟರ್ ಇವರು. ಹೀರೋ ಆಗಿ ಅಲ್ಲೀತನಕ ದೊಡ್ಡ ಗೆಲುವಿಗಾಗಿ ಪರಿತಪಿಸುತ್ತಿದ ಧನಂಜಯ ‘ಟಗರು’ ಅನ್ನೋ ಸಿನಿಮಾ ರಿಲೀಸಾಗಿ ಒಂದು ಶೋ ಮುಗಿಯೋ ಹೊತ್ತಿಗೆಲ್ಲಾ ‘ಡಾಲಿ’ಯಾಗಿ ಮಾರ್ಪಟ್ಟಿದ್ದರು. ಅಲ್ಲೀತನಕದ ನೋವು, ಅಪಮಾನಗಳೆಲ್ಲಾ, ಇನ್ನೂ ಪರಿಪೂರ್ಣವಾಗಿ ಗೆಲ್ಲಲು ಆಗಲಿಲ್ಲವಲ್ಲಾ ಅನ್ನೋ ಕೊರಗೆಲ್ಲಾ ಒಂದೇ ಏಟಿಗೆ ಎಗರಿಬಿದ್ದಿತ್ತು. ಶಿವಣ್ಣನಂಥಾ ಶಿವಣ್ಣನ ಮುಂದೆ ಧನಂಜಯ ಡಾಲಿಯಾಗಿ ಅಬ್ಬರಿಸಿದ್ದರು.
ಅದು ನೆಗೆಟೀವ್ ರೋಲ್ ಆಗಿದ್ದರೂ ಜನ ಇಷ್ಟಪಟ್ಟರು. ಅದಾದ ನಂತರ ಯಜಮಾನ ಸಿನಿಮಾದಲ್ಲಿ ಪಟ್ಟಾಸು ಸಿಡಿಸಿದ ಮಿಠಾಯಿ ಸೂರಿ ಧನಂಜಯ್ ಅವರನ್ನು ಮತ್ತೊಂದು ಎತ್ತರಕ್ಕೆ ಕರೆದುಕೊಂಡು ಹೋಗಿಯಿತು. ಇವತ್ತು ಡಾಲಿಯ ಪಾಲಿಗೆ ಸಾಲು ಸಾಲು ಅವಕಾಶಗಳು ಕಾದು ಕುಂತಿವೆ. ಹಾಗಂತ, ಧನಂಜಯ್’ಗೆ ಸಿಕ್ಕ ಸಿಕ್ಕ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳಲೇಬೇಕೆನ್ನುವ ಉಮೇದೂ ಇಲ್ಲ. ನೆಗೆಟೀವೋ, ಪಾಸಿಟೀವೋ ಒಟ್ಟಿನಲ್ಲಿ ತನಗೊಪ್ಪುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ನಟಿಸುತ್ತಾ ಹೋದರೆ ಡಾಲಿ ಧನಂಜಯ್ ಬರೀ ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲಿ ದೊಡ್ಡ ನಟನಾಗಿ ನಿಲ್ಲುವ ಎಲ್ಲ ಸಾಧ್ಯತೆಗಳೂ ಇವೆ.
ಈ ಮಧ್ಯೆ ಅದೇ ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್ ಅನ್ನುವ ವಿಚಿತ್ರ ಹೆಸರಿನ ಸಿನಿಮಾದಲ್ಲಿ ಧನಂಜಯ್ ಅವರನ್ನು ಹೀರೋ ಮಾಡಿದ್ದಾರೆ. ಈಗ ರಿಲೀಸಾಗಿರುವ ಟ್ರೇಲರೇ ಹೇಳುತ್ತಿದೆ. ಇದು ಇಡೀ ಇಂಡಿಯಾ ತಿರುಗಿನೋಡುವಂತಾ ಸಿನಿಮಾ ಆಗಲಿದೆ ಅಂತಾ. ಸೂರಿ ಮತ್ತು ಡಾಲಿ ಎಂಬ ಇಬ್ಬರು ಪ್ರತಿಭಾವಂತರ ಸಂಗಮವಾಗಿ ಮಂಕಿ ಟೈಗರ್ ರಿಲೀಸ್ ಆಗುತ್ತಿದೆ. ಸ್ಟುಡಿಯೋ ೧೮ ಲಾಂಛನದಲ್ಲಿ ಸುಧೀರ್ ಕೆ.ಎಂ ನಿರ್ಮಿಸಿರುವ, ಸೂರಿ(ದುನಿಯಾ) ನಿರ್ದೇಶನದ ‘ಪಾಪ್ಕಾರ್ನ್ ಮಂಕಿ ಟೈಗರ್‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಚರಣ್ರಾಜ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶೇಖರ್ ಎಸ್ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ, ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ ಹಾಗೂ ಮಲ್ಲ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಅಮೃತ್ ಭಾರ್ಗವ್ ಸಹ ನಿರ್ದೇಶನವಿದೆ.
ಡಾಲಿ ಧನಂಜಯ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ನಿವೇದಿತ, ಸುಧಿ, ನವೀನ್, ಮೋನಿಷ ನಾಡ್ಗಿರ್, ಸಪ್ತಮಿ ಗೌಡ, ಅಮೃತ ಅಯ್ಯಂಗಾರ್, ಪೂರ್ಣಚಂದ್ರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
No Comment! Be the first one.