ರಾಷ್ಟ್ರಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವಾದರೆ ಸ್ಯಾಂಡಲ್ ವುಡ್ ಗೆ ರಾಘವೇಂದ್ರ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮವಿಂದು. ಆದರೆ 54ನೇ ವಸಂತಕ್ಕೆ ಕಾಲಿಟ್ಟಿರುವ ರಾಘಣ್ಣ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಯೆಸ್.. ಕರ್ನಾಟಕದ ವಿವಿದೆಡೆ ತಲೆದೋರಿರುವ ಪ್ರವಾಹದಿಂದ ಲಕ್ಷಾಂತರ ಜನರ ಬದುಕು ತೊಂದರೆಗೆ ಸಿಲುಕಿರುವ ಪರಿಣಾಮವಾಗಿ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಸ್ವತಃ ನಟ ರಾಘವೇಂದ್ರ ರಾಜ್ಕುಮಾರ್ ತಿಳಿಸಿದ್ದಾರೆ.
ಮಳೆಯಿಂದ ನೆರೆ ಹಾವಳಿ ಸಂಭವಿಸಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಜನ- ಜಾನುವಾರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ, ಅವರ ನೋವಿಗೆ ಮಿಡಿಯುವುದು ಎಲ್ಲರ ಹೊಣೆ. ಮಾಧ್ಯಮಗಳಲ್ಲಿ ಬಿತ್ತರವಾಗುವ ಅಲ್ಲಿನ ದೃಶ್ಯಾವಳಿ ನೋಡಿ ನನಗೆ ನೋವಾಗಿದೆ. ಹಾಗಾಗಿ, ಜನ್ಮದಿನವನ್ನು ಆಚರಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಅಲ್ಲದೇ ಇಂದು ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ಬೇರೆ ಊರಿನ ದೇವಸ್ಥಾನಕ್ಕೆ ತೆರಳಿ ಸಂತ್ರಸ್ತರ ಪರವಾಗಿ ಪ್ರಾರ್ಥನೆ ಸಲ್ಲಿಸುತ್ತೇನೆ. ಯಾವುದೇ, ಕಾರಣಕ್ಕೂ ನನ್ನ ಮನೆಯ ಹತ್ತಿರ ಕೇಕ್, ಹೂವಿನ ಹಾರಗಳನ್ನು ತರಬಾರದು. ಅದೇ ಹಣವನ್ನು ಸಂತ್ರಸ್ತರ ಪರಿಹಾರಕ್ಕೆ ವಿನಿಯೋಗಿಸಬೇಕು. ಅವರ ಪರವಾಗಿ ದೇವರಲ್ಲಿ ಪ್ರಾರ್ಥಿಸಿದರೆ ಅದು ನನಗೆ ಸಂತೋಷ ನೀಡುತ್ತದೆ ಎಂದು ಮನವಿ ಮಾಡಿದ್ದಾರೆ.