ಇಷ್ಟು ದಿನ ಕೆಲವು ಸಿನಿಮಾಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ, ಇನ್ನು ಸಾಕಷ್ಟು ಸಿನಿಮಾಗಳಲ್ಲಿ ಹೊಟ್ಟೆ ಪ್ರದರ್ಶಿಸುತ್ತಾ, ಅಬ್ಬರಿಸಿ, ಬೊಬ್ಬಿರಿದ ನಟ ರಂಗಾಯಣ ರಘು. ಈಗ ಅವರು ಮತ್ತೊಂದು ಹಂತಕ್ಕೆ ತಲುಪಿದ್ದಾರೆ. ರಂಗಭೂಮಿ ಹಿನ್ನೆಲೆಯ ರಘು ಈಗ ಗಾಯಕರಾಗಿದ್ದಾರೆ! ’ಭಾನು ವೆಡ್ಸ್ ಭೂಮಿ’ ಚಿತ್ರಕ್ಕೆ ಗೌಸ್ ಪೀಸ್ ಸಾಹಿತ್ಯದ ’ಕಲರ್ ಕಲರ್ ಕನಸುಗಳು’ ಗೀತೆಯನ್ನು ಹಾಡುವುದರೊಂದಿಗೆ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಶುಕ್ರವಾರ ಕಲಾವಿದರ ಸಂಘದಲ್ಲಿ ಈ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ನಡೆಯಿತು. ಚಿತ್ರದ ಕತೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಜಿ.ಕೆ. ಆದಿ ಮಾತನಾಡಿ ಚಿತ್ರದ ಪಾತ್ರಗಳಿಗೆ ಯಾವುದೇ ಅಡಿಪಾಯವಿಲ್ಲ. ನಾವುಗಳು ಹೊರಗಡೆ ಬಂದಾಗ ಏನೇನು ಸಮಸ್ಯೆ ಎದುರಿಸುತ್ತೇವೆ. ಹುಡುಗ-ಹುಡುಗಿ, ಯುವ ಜನಾಂಗ, ವಿದ್ಯಾರ್ಥಿ, ಮದುವೆ ಆಗದವರು, ಮದುವೆ ವಯಸ್ಸಿಗೆ ಬಂದವರು. ಒಂದು ಹುಡುಗಿ ಅವನ ವ್ಯಕ್ತಿತ್ವವನ್ನು ಪಕ್ಕಕ್ಕೆ ಇಟ್ಟು, ಇಷ್ಟಪಟ್ಟಾಗ ಇಬ್ಬರ ಮನಸ್ಸು ಹೇಗಾಗುತ್ತದೆ. ತಂದೆ-ತಾಯಿಯಿಂದ ದೂರಾಗಿ ಪ್ರೀತಿಸಿದವನೊಂದಿಗೆ ಬಂದಾಗ ನಕರಾತ್ಮಕ ಅಂಶಗಳು ಯಾವ ರೀತಿಯಲ್ಲಿ ಬರುತ್ತದೆ. ಕೊನೆಗೆ ಭಾನು, ಭೂಮಿ ಒಂದಾಗುತ್ತಾರಾ ಎಂಬುದನ್ನು ಚಿತ್ರಮಂದಿರದಲ್ಲಿ ಹೇಳಿದ್ದೇವೆ. ರಂಗಾಯಣ ರಘು-ಶೋಭರಾಜ್ ಅವರ ಸಹಕಾರವನ್ನು ಎಂದಿಗೂ ಮರೆಯಲಾಗದು ಎಂದರು.
ಭಾನು ಒಳ್ಳೆ ಮನೆತನದ ಹುಡುಗ, ಮದುವೆಯ ಬಗ್ಗೆ ಆಸಕ್ತಿ ಇರದ ಆತನಿಗೆ ಭೂಮಿಯ ಪರಿಚಯವಾಗುತ್ತದೆ. ಮುಂದೆ ಅವಳು ದಕ್ಕತ್ತಾಳಾ ಇಲ್ವಾ ಎನ್ನುವುದೇ ಚಿತ್ರದ ಒನ್ ಲೈನ್ ಸ್ಟೋರಿ ಎಂದು ನಾಯಕ ಸೂರ್ಯಪ್ರಭು ಪಾತ್ರವನ್ನು ಪರಿಚಯಿಸಿಕೊಂಡರು. ತನ್ನ ಊರನ್ನು ಬಿಟ್ಟು ಇನ್ನೊಂದು ಸ್ಥಳಕ್ಕೆ ತನ್ನ ಪ್ರೀತಿಯನ್ನು ಹುಡುಕಿಕೊಂಡು ಬಂದಾಗ ಆಕೆಗೆ ಅದು ಸಿಗುತ್ತಾ ಇಲ್ವಾ ಎನ್ನುವುದು ನನ್ನ ಪಾತ್ರದ ತಿರುಳಿ ಎಂದು ನಾಯಕಿ ರಶ್ಮಿಕಾ ಮಲ್ನಾಡ್ ಹೇಳಿಕೊಂಡರು.
ನನ್ನ ಗೆಳಯ ಶೋಭರಾಜ್ ಒತ್ತಾಯದ ಮೇರೆಗೆ ಎರಡು ಗಂಟೆಗಳಲ್ಲಿ ಈ ಹಾಡನ್ನು ಹಾಡಿದ್ದೇನೆ. ನೀವು ಮೆಚ್ಚಬೇಕು ಎಂದು ರಂಗಾಯಣ ರಘು ಹೇಳಿದರು. ಬೆಳಗಾಂ ಮೂಲದ ಕಿಶೋರ್ ಶೆಟ್ಟಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಐದು ಹಾಡುಗಳಿಗೆ ಎ.ಎಂ. ನೀಲ್ ಸಂಗೀತ ಒದಗಿಸಿದ್ದಾರೆ. ಛಾಯಾಗ್ರಹಣ ಗಣೇಶ್ ಹೆಗಡೆ, ಸಂಕಲನ ಶ್ರೀನಿವಾಸ್.ಎಂ.ಬಾಬು, ಸಾಹಸ ರಾಕೆಟ್ ವಿಕ್ರಂ, ನೃತ್ಯ ರಾಮು ಅವರದಾಗಿದೆ. ನಿರ್ದೇಶಕರ ಬಯಕೆಯಂತೆ ಮಾದ್ಯಮ ಸ್ನೇಹಿರೆಲ್ಲ ಸೇರಿ ಚಿತ್ರದ ಆಡಿಯೋ ಸಿಡಿಯನ್ನು ಲೋಕಾರ್ಪಣೆ ಮಾಡಿದರು. ಈ ಚಿತ್ರವು ಮುಂದಿನ ತಿಂಗಳು ತೆರೆಕಾಣುವ ಸಾಧ್ಯತೆ ಇದೆ.
No Comment! Be the first one.