ಇತ್ತೀಚಿನ ಮೈತ್ರಿ ಸರ್ಕಾರದಲ್ಲಾದ ಏರುಪೇರುಗಳು, ನವರಂಗಿ ನಾಟಕಗಳು, ಕಳಚಿದ ಮುಖವಾಡಗಳು, ಹುಸಿಮಾಡಿದ ಜನರ ನಿರೀಕ್ಷೆಗಳು, ಕೊನೆಗೆ ಅಂತಿಮವಾಗಿ ತಮ್ಮವರೇ ತಮಗೆ ಗೂಟವಿಟ್ಟ ಪ್ರಸಂಗಗಳು ಅಷ್ಟಿಷ್ಟಲ್ಲ. ಅಲ್ಲದೇ ಇಂತಹ ಪ್ರಸಂಗ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲಾಗಿತ್ತು. ನೋಡಲು ಅಸಹ್ಯ, ಕೇಳಲು ನಾಚಿಕೆ, ಉಕ್ಕಬಾರದ ಜಾಗದಿಂದೆಲ್ಲಾ ನಗೆ ಉಕ್ಕಿದ್ದನು ನೆನೆಸಿಕೊಂಡರೆ ಮತ್ತೆ ನಗು ಬರುತ್ತದೆ. ರಾಜ್ಯವನ್ನು ಆಳಬೇಕಾದವರ ಮೇಲೆ ಮೂಡಬೇಕಾದ ಗೌರವ, ವಿಶ್ವಾಸ ಮೂಡದೇ ನಗೆಪಾಟಲಿಗೀಡಾದದ್ದು ದುರಂತವೇ ಸರಿ.
ಇಂತಹುದೇ ಎಳೆಯನ್ನಿಟ್ಟುಕೊಂಡು ಕಳೆದ ವರ್ಷವಷ್ಟೇ ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಮುಗಿಸಿರುವ ಮಹೇಶ್ ಅಲಿಯಾಸ್ ಪ್ರಿನ್ಸ್ ಮಹೇಶ್, ಉರುಫ್ ಕಲ್ಪತರು ನಾಡಿನ ಕರುನಾಡ ಕುವರ ಆಲ್ಪಂ ಸಾಂಗೊಂದನ್ನು ರಚಿಸಿದ್ದಾನೆ. ಕರ್ನಾಟಕ ರಾಜಕೀಯ ಪರಿಸ್ಥಿತಿಯನ್ನು ತನ್ನದೇ ಶೈಲಿಯಲ್ಲಿ ರಚಿಸಿರುವ ಈ ಹಾಡು ಈಗಾಗಲೇ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಜನಮೆಚ್ಚುಗೆಯನ್ನು ಗಳಿಸಿದೆ. ರಾಜಕೀಯ ಆಲ್ಬಂ ಹಾಡಿಗೆ ನಾನಿ ಕೃಷ್ಣ ಸಂಕಲನ, ಕೆ ಆರ್ ಸ್ಟುಡಿಯೋ ಹಿನ್ನೆಲೆ ಸಂಗೀತ, ಉಮೇಶ್ ಚಿನಕುರಳಿ ಆರ್ಥಿಕ ಸೌಲಭ್ಯವನ್ನು ಒದಗಿಸಿದ್ದಾರೆ. ವರುಣ್ ದನಿಯಲ್ಲಿ ರೆಸಾರ್ಟ್ ರಾಜಕೀಯ ಸಾಂಗ್ ಮೂಡಿಬಂದಿದೆ
ಮೂಲತಃ ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕ್ಕಿನ ರಾಮನ ಹಳ್ಳಿ ಹುಡುಗನಾದ ಮಹೇಶ್, ವ್ಯವಸಾಯವನ್ನೇ ನಂಬಿ ಬದುಕುತ್ತಿರುವ ಗಂಗಾಧರಯ್ಯ ಹಾಗೂ ಲಕ್ಷ್ಮಿದೇವಮ್ಮನವರ ಸುಪುತ್ರ. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಮಹೇಶ್ ನಿರ್ದೆಶಕನಾಗಬೇಕೆಂಬ ಮಹದಾಸೆಯನ್ನು ಹೊಂದಿರುವಾತ. ಆ ನಿಟ್ಟಿನಲ್ಲಿ ಪತ್ರಿಕೋದ್ಯಮವನ್ನು ಆರಿಸಿಕೊಂಡು ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾನೆ. ಪದವಿಯಲ್ಲಿದ್ದಾಗಲೇ ಮಹೇಶ್ ಇನ್ ಲವ್ ಸ್ಟೋರಿ, ದೇಶಪ್ರೇಮಿ ಎಂಬ ಕಿರುಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದಾನೆ. ಸದ್ಯ ಬಣ್ಣದ ಲೋಕದ ಸೆಳೆತದಿಂದ `ರಾಜಕೀಯ’ ಎಂಬ ಹಾಡಿಗೆ ಗೀತ ಸಾಹಿತ್ಯವನ್ನು ರಚಿಸಿರುವ ಮಹೇಶ್ ಮತ್ತಷ್ಟು ಹೋಮ್ ವರ್ಕ್ ಮಾಡಿಕೊಂಡು ತಕ್ಕ ಶ್ರಮದೊಂದಿಗೆ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಸೃಷ್ಟಿಸಿಕೊಳ್ಳುವಂತಾಗಲಿ ಎಂದು ಸಿನಿಬಜ್ ಹಾರೈಸುತ್ತದೆ.
No Comment! Be the first one.