ಕನ್ನಡದ ಖ್ಯಾತ ಸಾಹಿತಿ ಸಿನಿಮಾ ನಿರ್ದೇಶಕ ಬರಗೂರು ರಾಮಚಂದ್ರಪ್ಪನವರು, ಡಾ. ರಾಜ್ ಕುಮಾರ್ ಅವರನ್ನು ತೀರ ಹತ್ತಿರದಿಂದ ಬಲ್ಲವರು. ಬರಗೂರು ಅವರು ಬರೆದಿರುವ ಜನಪದ ನಾಯಕ ಡಾ. ರಾಜ್ ಕುಮಾರ್ ಎಂಬ ಅಮೂಲ್ಯ ಕೃತಿಯನ್ನು ಜನ ಪ್ರಕಾಶನ ಹೊರತಂದಿದೆ. ಈ ಕೃತಿಯ ಆಯ್ದ ಭಾಗವನ್ನಿಲ್ಲಿ ಪ್ರಕಟಿಸಿದ್ದೇವೆ. ಈ ಲೇಖನಗಳನ್ನು ಪ್ರಕಟಿಸಲು ಅನುಮತಿ ನೀಡಿದ ಜನ ಪ್ರಕಾಶನದ ಬಿ. ರಾಜಶೇಖರ್ ಮೂರ್ತಿ ಮತ್ತು ಬರಗೂರು ರಾಮಚಂದ್ರಪ್ಪನವರಿಗೆ ಕೃತಜ್ಞತೆಗಳು. ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅವರನ್ನು ಸ್ಮರಿಸಲು ಈ ಲೇಖನಗಳು ಅರ್ಥಪೂರ್ಣವಾದಂತಹವುಗಳು.
ಡಾ. ರಾಜಕುಮಾರ್ ಇನ್ನಿಲ್ಲ ಎಂಬ ಸುದ್ದಿ ಗೊತ್ತಾದಾಗ ನನ್ನ ಮನಸ್ಸಿನ ಒರತೆ ಉಕ್ಕಿ ಕಣ್ಣಲ್ಲಿ ತುಂಬಿ ಕೆನ್ನೆ ಮೇಲೆ ಹರಿದಿತ್ತು. ಅದು ನನ್ನ – ಅವರ ವೈಯಕ್ತಿಕ ಸಂಬಂಧದ ಅಭಿವ್ಯಕ್ತಿಯಷ್ಟೇ ಆಗಿರಲಿಲ್ಲ. ಅದರ ಜೊತೆಗೆ ಸಾಮಾಜಿಕ ಆಯಾಮವೂ ಇತ್ತು.
ಡಾ. ರಾಜಕುಮಾರ್ ಅವರ ನಿಧನದಿಂದ ಸದಭಿರುಚಿಯ ಒಂದು ಯುಗದ ಅಂತ್ಯವಾಗಿದೆಯೆಂದರೆ ಅದು ಅತಿಶಯೋಕ್ತಿಯಲ್ಲ. ಯಾರಾದರೂ ಸತ್ತಾಗ ಸಾಮಾನ್ಯವಾಗಿ ಸಂತಾಪ ಸೂಚನೆಗಳೂ ಕ್ಲೀಷೆಯಾಗಿ ಬಿಡುವುದುಂಟು. ಆದರೆ ರಾಜಕುಮಾರ್ ಅವರ ಸಜ್ಜನಿಕೆ, ಸರಳತೆ, ಸದಭಿರುಚಿ ನಿರ್ಮಾಣದ ಸಂಕಲ್ಪಗಳ ಬಗ್ಗೆ ಮಾಡುವ ಪ್ರಶಂಸೆಯ ಯಾವ ಮಾತುಗಳೂ ಕ್ಲೀಷೆಯಾಗುವುದಿಲ್ಲ. ಅವರು ಅಭಿನಯಿಸಿದ ಚಿತ್ರಗಳು ಮತ್ತು ನಿಜ ನಡವಳಿಕೆಯ ಗುರುತುಗಳು ತಮಗೆ ತಾನೇ ಸ್ಪಷ್ಟ ಸಾಕ್ಷಿಯಾಗಿ – ಸಾಕ್ಷಿಪ್ರಜ್ಞೆಯಾಗಿ ನಿಲ್ಲುತ್ತವೆ.
ಡಾ. ರಾಜಕುಮಾರ್ ಅವರು ಕೇವಲ ಸಿನಿಮಾ ಕಲಾವಿದರಾಗಿದ್ದರೆ ಇಷ್ಟೆಲ್ಲ ಜನ ಪ್ರೀತಿಗೆ ಪಾತ್ರರಾಗುತ್ತಿದ್ದರೊ ಇಲ್ಲವೊ ಹೇಳಲಾಗದು. ಅಥವಾ ಅದು ಸಿನಿಮಾ ಪ್ರೇಮಿಗಳ ಪ್ರೀತಿ ಮಾತ್ರವಾಗಿರುತ್ತಿತ್ತು. ರಾಜಕುಮಾರ್ ಚಿತ್ರರಂಗದೊಳಗಿದ್ದು, ಅದನ್ನು ಮೀರಿ ಬೆಳೆದು ಸಾಂಸ್ಕೃತಿಕವಾಗಿ ಮಹತ್ವಪೂರ್ಣ ವ್ಯಕ್ತಿತ್ವವಾದರು; ಜನಪ್ರಿಯ ಸಂಸ್ಕೃತಿಯೊಳಗೆ ಸಾರ್ಥಕ ರೂಪಕವಾಗಿ ಅರ್ಥಪೂರ್ಣವಾದರು; ಜನಪ್ರಿಯ ಸಂಸ್ಕೃತಿಯನ್ನು ನಕಾರಾತ್ಮಕ ನೆಲೆಯಲ್ಲಿ ನೋಡುವವರಿಗೆ ಸಕಾರಾತ್ಮಕ ಉತ್ತರವಾದರು. ಅಪಾರ ಪ್ರಭಾವ ಬೀರುವ ಚಲನಚಿತ್ರದಂತಹ ಜನಪ್ರಿಯ ಮಾಧ್ಯಮವನ್ನು ಸರಿದಾರಿಯಲ್ಲಿ ನಡೆಸುವ ಸಾರ್ಥಕ ಸಾಧನವಾದದ್ದು ರಾಜಕುಮಾರ್ ಅವರ ಒಂದು ಸಾಧನೆ. ಚಲನಚಿತ್ರ ಸೃಷ್ಟಿಯಲ್ಲಿ ನಿರ್ದೇಶಕನೇ ನಾಯಕ ಎನ್ನುವುದು ನಿಜವಾದರೂ ಮುಖ್ಯವಾಹಿನಿಯ ಚಲನಚಿತ್ರಗಳಲ್ಲಿ ನಾಯಕನಟನ ಪಾತ್ರ ತನಗೆ ತಾನೇ ಮುಖ್ಯವಾಗುವುದು ಒಂದು ವಾಸ್ತವವಾಗಿದೆ. ಯಾಕೆಂದರೆ ನಾಯಕ ನಟನ ಜನಪ್ರಿಯತೆಯ ಮೇಲೆ ಬಂಡವಾಳ ಹೂಡುವವರೇ ಹೆಚ್ಚು.
ತಾರಾ ಮೌಲ್ಯದ ನಾಯಕ ನಟ ತಾನು ಪಾತ್ರವಹಿಸುವ ಚಿತ್ರದ ವಸ್ತು ಹೇಗಿರಬೇಕೆಂಬ ಬಗ್ಗೆ ನಿರ್ಧರಿಸುವ ಪರಿಪಾಠ ನಮ್ಮಲ್ಲಿದೆ. ತನಗೆ ಒಪ್ಪಿಗೆಯಾದ ಕಥಾವಸ್ತುವುಳ್ಳ ಚಿತ್ರದಲ್ಲಿ ನಟಿಸಲು ಪ್ರಸಿದ್ಧ ಜನಪ್ರಿಯ ನಾಯಕ ನಟರು ಒಪ್ಪುವುದರಿಂದ ಜನಪ್ರಿಯ ಸಿನಿಮಾ ನಿರ್ಮಾಣದಲ್ಲಿ ಅವರ ಅಭಿಪ್ರಾಯ-ಆಯ್ಕೆಗಳಿಗೆ ಮಹತ್ವ ಇದ್ದೇ ಇದೆ. ರಾಜಕುಮಾರ್ ಅವರು ಆಯ್ಕೆ ಮಾಡಿದ ಕಥಾವಸ್ತುಗಳು ಯಾವತ್ತೂ ಸಮಾಜವಿರೋಧಿ ಆಶಯ ಹೊಂದಿರಲಿಲ್ಲ. ನಿರೂಪಣೆಯ ವಿಧಾನವು ಯಾವತ್ತೂ ಅಭಿರುಚಿಗೆ ಧಕ್ಕೆ ತರಲಿಲ್ಲ. ಅವರ ಮುಖ್ಯಚಿತ್ರಗಳು ಯಥಾಸ್ಥಿತಿವಾದವನ್ನು ಪೋಷಿಸಲಿಲ್ಲ. ಮುಖ್ಯವಾಹಿನಿಯ ಇತಿಮಿತಿಯಲ್ಲೇ ಚಲನಶೀಲ ಆಶಯಗಳನ್ನು ಅಭಿವ್ಯಕ್ತಿಸಿದವು. ಅವರು ಆಯ್ಕೆ ಮಾಡಿ ಅಭಿನಯಿಸಿದ ಭಕ್ತಿಪ್ರಧಾನ ಚಿತ್ರಗಳು ಸಾಂಸ್ಥಿಕ ಧರ್ಮವನ್ನು ಪೋಷಿಸಲಿಲ್ಲ ಎಂಬುದನ್ನಿಲ್ಲಿ ಗಮನಿಸಬೇಕು. ಅಲ್ಲದೆ, ಅವರು ನಾಯಕನಟರಾಗಿ ಅಭಿನಯಿಸಿದ ಮೊದಲ ಚಿತ್ರ ಬೇಡರ ಕಣ್ಣಪ್ಪದಲ್ಲಿದ್ದ ಮುಗ್ಧಭಕ್ತಿಯು ಅವರ ವ್ಯಕ್ತಿತ್ವದಲ್ಲೂ ಬೆಳೆಯುತ್ತ ಬಂತು. ಮುಂದಿನ ಚಿತ್ರಗಳಲ್ಲೂ ಮೂಡಿಬಂತು. (ಬೇಡರ ಕಣ್ಣಪ್ಪ-ಚಿತ್ರಕ್ಕೆ ಮುಂಚೆ 1942ರಲ್ಲಿ ಪ್ರಹ್ಲಾದ ಚಿತ್ರದಲ್ಲಿ ಬಾಲನಟನಾಗಿ 1952ರಲ್ಲಿ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಸಹನಟರಾಗಿ ಅತಿ ಚಿಕ್ಕ ಪಾತ್ರದಲ್ಲಿ ರಾಜಕುಮಾರ್ ಅವರು ನಟಿಸಿದ್ದರು. ಆದ್ದರಿಂದ, ನಾಯಕನಟರಾಗಿ ಅಭಿನಯಿಸಿದ ಮೊದಲ ಚಿತ್ರ ಬೇಡರ ಕಣ್ಣಪ್ಪ ಎಂದಿದ್ದೇನೆ).
ಕನ್ನಡ ಸಾಹಿತ್ಯಕ್ಷೇತ್ರದ ಶಿಖರ ಪ್ರಾಯ ಚೇತನವಾದ ಕುವೆಂಪು ಅವರು ನಿಸರ್ಗದಲ್ಲಿ ದೇವರನ್ನು ಕಂಡರೆ, ಕನ್ನಡ ಚಲನಚಿತ್ರ ಕ್ಷೇತ್ರದ ಶಿಖರಪ್ರಾಯ ಪ್ರತಿಭೆಯಾದ ರಾಜಕುಮಾರ್ ಅವರು, ಅಭಿಮಾನಿ ಜನರಲ್ಲಿ ದೇವರನ್ನು ಕಂಡರು. ಕುವೆಂಪು ಸಾಹಿತ್ಯಕ್ಷೇತ್ರವನ್ನು ಮೀರಿ ಸಾಂಸ್ಕೃತಿಕ ನಾಯಕರಾದರಂತೆ ರಾಜಕುಮಾರ್ ಸಿನಿಮಾ ಕ್ಷೇತ್ರವನ್ನು ಮೀರಿದ ಸಾಂಸ್ಕೃತಿಕ ನಾಯಕರಾಗಿ ಬೆಳೆದು. ಜನರು ಇವರನ್ನು ಕೇವಲ ಸಿನಿಮಾ ನಟರೆಂದು ಗೌರವಿಸಲಿಲ್ಲ. ಇವರೂ ಕೇವಲ ಸಿನಿಮಾನಟರಾಗಿ ಉಳಿಯಲಿಲ್ಲ. ಗೋಕಾಕ್ ಚಳುವಳಿಯನ್ನು ಒಳಗೊಂಡಂತೆ ಕನ್ನಡನಾಡು-ನುಡಿಗೆ ಧಕ್ಕೆ ಬಂದಾಗ ಬೀದಿಗೆ ಬಂದು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೆಂಬಲವಾಗುತ್ತಲೇ ಕೇಂದ್ರಶಕ್ತಿಯಾದರು. ಭೂಕಂಪ ಪೀಡಿತರಿಗೆ ಸ್ವಂತ ಹಣಕೊಟ್ಟುದ್ದಲ್ಲದೆ ಬೀದಿಗೆ ಬಂದು ಹಣ ಸಂಗ್ರಹ ಮಾಡಿದರು. ಜೊತೆಯ ಕಲಾವಿದರು ಸಂಕಷ್ಟದಲ್ಲಿದ್ದಾಗ ಹಣ ಸಹಾಯ ಮಾಡಿ ಪ್ರಚಾರ ಮಾಡಿಕೊಳ್ಳದೆ ಮನದಲ್ಲೇ ಮಿಡಿದರು. ಸಹಾಯ ಮಾಡಿದ್ದು ಸ್ವಪ್ರಚಾರದ ಸಾಧನ ಆಗಬಾರದೆಂದು ಅವರು ಭಾವಿಸಿದ್ದರು. ಅರವತ್ತರ ದಶಕದಲ್ಲಿ ಕರ್ನಾಟಕದ ಜನರು ಪ್ರವಾಹ ಪೀಡಿತರಾದಾಗ ಕನ್ನಡ ಚಿತ್ರಂಗದ ಕಲಾವಿದರೆಲ್ಲ ಸೇರಿ ನಾಡಿನುದ್ದಕ್ಕೂ ಪ್ರವಾಸ ಮಾಡಿದರು; ಹಣ ಸಂಗ್ರಹ ಮಾಡಿ ಪ್ರವಾಹ ಪರಿಹಾರ ನಿಧಿಗೆ ಅರ್ಪಿಸಿದರು. ಈ ಸಾಮಾಜಿಕ ಕಾಳಜಿಯ ಕ್ರಿಯೆಯಲ್ಲಿ ನಾಯಕತ್ವ ನೀಡಿದವರು ಡಾ. ರಾಜಕುಮಾರ್. ಈ ಪ್ರವಾಸದ ಸಂಯೋಜನೆ ಮಾಡಿದ್ದು ಪ್ರಜಾವಾಣಿ ಪತ್ರಿಕೆ.
ಡಾ. ರಾಜಕುಮಾರ್ ಅವರು ಚಿತ್ರಗಳಿಗೆ ಹಾಡಿದಾಗ ಬಂದ ಸಂಭಾವನೆಯ ಹಣವನ್ನು ಬೀದಿ ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ ನೀಡಿದರು. ರಸಮಂಜರಿ ಕಾರ್ಯಕ್ರಮ ನೀಡಿದಾಗ ಬಂದ ಸಂಭಾವನೆಯನ್ನು ಇದೇ ಕಾರ್ಯಕ್ಕೆ ನೀಡುತ್ತ ಬಂದರು. ಚಿತ್ರನಟನೆಗೆ ಹೊರತಾಗಿ ಬಂದ ಯಾವುದೇ ಹಣವನ್ನು ಸಾಮಾಜಿಕ ಕೆಲಸಗಳಿಗೆ ಕೊಡಬೇಕೆಂದು ಅವರು ಬಯಸಿದ್ದರು. ಅದರಂತೆ ಮನೆಯವರಲ್ಲಿ ಹೇಳಿದ್ದರು. ದಾದಾಪಾಲ್ಕೆ ಪ್ರಶಸ್ತಿಯಿಂದ ಬಂದ ಒಂದು ಲಕ್ಷ ರೂಪಾಯಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಕೊಟ್ಟರು. ಸಾಹಿತಿಗಳಾದಿಯಾಗಿ ಸಾಂಸ್ಕೃತಿಕ ಕ್ಷೇತ್ರದ ಎಲ್ಲರಿಗೂ ವಿಶೇಷ ಗೌರವ ತೋರುತ್ತ ಬಂದರು. ಎನಗಿಂತ ಕಿರಿಯರಿಲ್ಲ ಎಂಬ ಭಾವದಿಂದಲೇ ಹಿರಿಯರಾದರು.
ಮತ್ತೆ ಭಕ್ತಿಭಾವದ ವಿಷಯಕ್ಕೆ ಬರುತ್ತೇನೆ. ಅವರು ಹಾಡಿದ ಭಕ್ತಿಗೀತೆಗಳ ಧ್ವನಿಸುರುಳಿಗಳು ಜನರ ಮನೆ-ಮನ ತಲುಪಿದವು. ನನ್ನಂಥವರು ದೇವರು-ಧರ್ಮಗಳ ದುರುಪಯೋಗಕ್ಕೆ ವಿರುದ್ಧ. ಆದರೆ ರಾಜಕುಮಾರ್ ಅವರು ಸಾಂಸ್ಥಿಕ ಧರ್ಮಕ್ಕೆ ನೆರವಾಗಲಿಲ್ಲವೆಂಬುದನ್ನು ಅಷ್ಟರ ಮಟ್ಟಿಗೆ ಮೆಚ್ಚಬೇಕಾಗುತ್ತದೆ. ಇವತ್ತು ಧರ್ಮವು ಸಂಸ್ಥೆಯಾಗಿ ಜಡವಾಗಿದೆ. ಸಾಂಸ್ಥಿಕ ಧರ್ಮದ ಜಡಸೂತ್ರಗಳನ್ನು ಮೀರಿದ ಧಾರ್ಮಿಕತೆಯು ಒಂದು ಮನೋಧರ್ಮವಾಗಿದೆ. ಧಾರ್ಮಿಕವಾದ ಜನಸಾಮಾನ್ಯರನೇಕರಿಗೆ ಸಾಂಸ್ಥಿಕ ಧರ್ಮದ ಸೂತ್ರಗಳು ಗೊತ್ತಿಲ್ಲ. ಅವರಲ್ಲಿರುವುದು ಭಕ್ತಿ ಮಾತ್ರ. ರಾಜಕುಮಾರ್ ಅವರಲ್ಲಿ ಇದ್ದದ್ದು ಜನಸಾಮಾನ್ಯರಲ್ಲಿದ್ದ ಭಕ್ತಿ; ಇನ್ನೂ ಬಿಡಿಸಿ ಹೇಳಬೇಕೆಂದರೆ ಬೇಡರಕಣ್ಣಪ್ಪನ ಭಕ್ತಿ. ಧರ್ಮ, ಧಾರ್ಮಿಕತೆ, ಭಕ್ತಿ ಇವುಗಳನ್ನು ಕುರಿತ ವಿಭಿನ್ನ ಚರ್ಚೆಗಳು ಸಾಧ್ಯವಿದ್ದರೂ ರಾಜಕುಮಾರ್ ಅವರ ಭಕ್ತಿ ಜನರನ್ನು ಒಡೆಯುವ ಸಾಧನವಾಗಲಿಲ್ಲ ಎಂಬುದು ಇಲ್ಲಿ ಮುಖ್ಯ. ಅವರಲ್ಲಿದ್ದ ಧಾರ್ಮಿಕತೆ ಕೋಮುವಾದಕ್ಕೆ ಕುಮ್ಮಕ್ಕು ಕೊಡಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಅಂತರಂಗಕ್ಕೆ ಸಂಬಂಧಿಸಿದ ಭಕ್ತಿಭಾವದಲ್ಲಿ ಮಾತ್ರ ಡಾ.ರಾಜ್ ಅವರಿಗೆ ನಂಬಿಕೆಯಿತ್ತು. ಜನಪದ ದೇವರುಗಳ ಬಗ್ಗೆ ವಿಶೇಷ ಆಸಕ್ತಿಯಿತ್ತು. ಅವರ ಗಾಯನದಲ್ಲಿ ಮೂಡಿದ ಮಲೆಮಹದೇಶ್ವರನನ್ನು ಕುರಿತ ಹಾಡುಗಳನ್ನು ಇಲ್ಲಿ ನೆನೆಯಬಹುದು.
ಬಹು ಮುಖ್ಯವಾದ ಸಂಗತಿಯೆಂದರೆ, ತಮ್ಮ ದುಡಿಮೆಯ ಹಣವನ್ನು ರಾಜಕುಮಾರ್ ಅವರು ಸಾಮಾಜಿಕ ಕಾಳಜಿಯ ಕೆಲಸಗಳಿಗೆ, ಸಾಂಸ್ಕೃತಿಕ ಸಂಸ್ಥೆಗಳಿಗೆ ಕೊಟ್ಟಂತೆ, ದೇವಾಲಯಗಳಿಗೆ ಕೊಡಲಿಲ್ಲ ಎಂಬುದನ್ನಿಲ್ಲಿ ಗಮನಿಸಬೇಕು. ದೇವಸ್ಥಾನ ಕಟ್ಟಿಸಲು, ದೇವರಿಗೆ ಕಿರೀಟ ಮಾಡಿಸಲು ಅವರ ಹಣದ ಬಳಕೆಯಾಗಲಿಲ್ಲ. ಅವರಿಗೆ ಭಕ್ತಿ ಭಾವವಷ್ಟೇ ಮುಖ್ಯವಾಗಿತ್ತು. ದೇಗುಲೀಕರಣದ ಮೂಲಕ ಕೋಮುವಾದವನ್ನು ಬೆಳೆಸುತ್ತಿರುವ ಇಂದಿನ ದಿನಗಳಲ್ಲಿ ಈ ಅಂಶ ಅಷ್ಟರ ಮಟ್ಟಿಗೆ ನನಗೆ ಮುಖ್ಯವೆನಿಸುತ್ತದೆ.
ಡಾ. ರಾಜಕುಮಾರ್ ಅವರನ್ನು ಎಲ್ಲ ಜಾತಿಯ ಮತ್ತು ಎಲ್ಲ ಧರ್ಮದ ಜನರೂ ಗೌರವಿಸುತ್ತ ಬಂದಿದ್ದಾರೆ. ಆದರೆ ಇದಕ್ಕೆ ಸಣ್ಣ ಪ್ರಮಾಣದ ಅಪವಾದಗಳೂ ಇವೆ. ಯಾವೊಂದು ಜಾತಿಯವರೂ ಇಡಿಯಾಗಿ ಜಾತಿವಾದಿಗಳಾಗಿರುವುದಿಲ್ಲವಾದರೂ ಇವರಲ್ಲೇ ಕೆಲವು ಸಂಕುಚಿತ ಜಾತಿವಾದಿಗಳೂ ಇರುತ್ತಾರೆ. ಇಲ್ಲಿ ಒಂದು ಪ್ರಸಂಗವನ್ನು ಉಲ್ಲೇಖಿಸಬೇಕು. ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ರಾಘವೇಂದ್ರಸ್ವಾಮಿಯ ಪಾತ್ರ ಮಾಡಲು ರಾಜಕುಮಾರ್ ಅವರನ್ನು ಆಯ್ಕೆ ಮಾಡಿದಾಗ ಕೆಲವು ಜಾತಿವಾದಿಗಳು ಬಹಿರಂಗವಾಗಿಯೇ ವಿರೋಧಿಸಿದರು. ಜಾತಿವ್ಯವಸ್ಥೆಯ ಬಿಸಿಗೆ ಆಗಾಗ್ಗೆ ತುತ್ತಾಗುತ್ತಲೇ ಅದನ್ನು ಅನಿವಾರ್ಯ ತುತ್ತು ಎಂದು ನುಂಗಿಕೊಂಡು ನಗುತ್ತ ವೃತ್ತಿ ಬದುಕನ್ನು ಸಾಗಿಸುತ್ತಿದ್ದ ರಾಜಕುಮಾರ್ ಅವರಿಗೆ ಬಹಿರಂಗವಾಗಿ ಎದುರಾದ ಜಾತಿವಾದಿಗಳ ಬಿರುನುಡಿಗಳು ಸಾಕಷ್ಟು ನೋಯಿಸಿದವು. ಹಿಂದುಳಿದ ಜಾತಿಗೆ ಸೇರಿದ ಇವರಿಗೆ ರಾಘವೇಂದ್ರಸ್ವಾಮಿಯ ಪಾತ್ರ ಮಾಡಲು ಯಾವ ಅರ್ಹತೆಯಿದೆ ಎಂಬಂಥ ಟೀಕೆ ಎದುರಾದಾಗ, ಯಾವತ್ತೂ ಜಾತಿಯ ಬಗ್ಗೆ ಯೋಚಿಸದೆ ಇದ್ದ ಮತ್ತು ಹಿಂದುಳಿದ ಜಾತಿ-ವರ್ಗಗಳನ್ನು ಸ್ವಹಿತಕ್ಕೆ ಬಳಸದೇ ಇದ್ದ ರಾಜಕುಮಾರ್ ಪ್ರತಿಭೆಯಿಂದಲೇ ಉತ್ತರ ಕೊಡಲು ಮುಂದಾದರು. ಮಂತ್ರಾಲಯ ಮಹಾತ್ಮೆ ಚಿತ್ರ ಮುಗಿಯುವವರೆಗೆ ತಮಗೆ ತುಂಬ ಪ್ರಿಯವಾದ ಮಾಂಸಾಹಾರ ಬಿಟ್ಟರು. ಕಾಲಿಗೆ ಚಪ್ಪಲಿ ಹಾಕಲಿಲ್ಲ. ಕಾಲಕಾಲಕ್ಕೆ ಉಪವಾಸ ವ್ರತ ಕೈಗೊಂಡರು. ಈ ಮಡಿವಂತಿಕೆಯ ಕ್ರಮ ನಮ್ಮಂಥವರಿಗೆ ಇಷ್ಟವಾಗದಿರಬಹುದು, ಸರಿಯೆನ್ನಿಸದೆ ಇರಬಹುದು. ಆದರೆ ಮಡಿವಂತಿಕೆಯ ಕ್ರಮಗಳಿಂದಲೇ ಮಂಡಿವಂತಿಕೆಯನ್ನು ಹತ್ತಿಕ್ಕುವ ಆಸ್ತಿಕರ ಉತ್ತರಗಳಾಗಿ ಇವಕ್ಕೆ ಸಾಮಾಜಿಕ ಮಹತ್ವವಿದೆ. ನಮ್ಮಂಥವರಾದರೆ ಆ ಜಾತಿವಾದಿಗಳನ್ನು ನೇರವಾಗಿ ವಿರೋಧಿಸುತ್ತಿದ್ದೆವು. ರಾಜಕುಮಾರ್ ಅವರು ಜಾತಿವಾದದ ನಿಲುವುಗಳನ್ನು ನಿರರ್ಥಕಗೊಳಿಸಲು ಅವರದೇ ವಿಧಾನ ಮತ್ತು ತಮ್ಮ ಅನನ್ಯ ಪ್ರತಿಭೆಯನ್ನು ಬಳಸಕೊಂಡರು; ಗೆದ್ದರು. ಆದರೆ ರಾಜಕುಮಾರ್ ಅವರು ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ಗೆದ್ದನಂತರ ಮಂತ್ರಾಲಯದ ಮಹತ್ವವೂ ಹೆಚ್ಚಾದದ್ದು. ಇದಕ್ಕೆ ರಾಜಕುಮಾರ್ ಅವರ ಪಾತ್ರ ನಿರ್ವಹಣೆಯೂ ಪ್ರೇರಣೆಯಾದದ್ದು ನಮ್ಮ ಕಾಲದ ಒಂದು ವಾಸ್ತವಿಕ ವಿಪರ್ಯಾಸ.
ಡಾ. ರಾಜಕುಮಾರ್ ಅವರು ರಾಘವೇಂದ್ರ ಸ್ವಾಮಿಯ ಪಾತ್ರ ಮಾಡಬಾರದೆಂದು ಹೇಳಿದ್ದವರು ಆಮೇಲೆ ಬಾಯಿಮುಚ್ಚಿಕೊಂಡದ್ದು ನಿಜವಾದರೂ ಇನ್ನೊಬ್ಬರು ಮತ್ತೆ ರಾಘವೇಂದ್ರ ವೈಭವ ಎಂಬ ಚಿತ್ರ ಮಾಡಿದರು. ಶ್ರೀನಾಥ್ ಅವರು ಮುಖ್ಯ ಪಾತ್ರ ವಹಿಸಿದ್ದರು. ರಾಜಕುಮಾರ್ ಅವರ ಅಭಿನಯದ ಭಕ್ತಿ ಪುರಂದರ ದಾಸ ಚಿತ್ರ ತೆರೆಕಂಡ ಮೇಲೆ ಮತ್ತೊಬ್ಬರು ಕೆ.ಎಸ್.ಅಶ್ವತ್ಥ್ ಅವರನ್ನು ಹಾಕಿಕೊಂಡು ಶ್ರೀ ಪುರಂದರದಾಸರು ಚಿತ್ರ ತೆಗೆದರು. ಈ ಎರಡೂ ಚಿತ್ರಗಳು ಯಶಸ್ವಿಯಾಗಲಿಲ್ಲ. ಯಶಸ್ವಿಯಾದದ್ದು ಜಾತಿಯನ್ನು ಮೀರಿ ಬೆಳೆದ ರಾಜಕುಮಾರ್ ಅವರ ಅಭಿನಯದ ಚಿತ್ರಗಳು. ಇದು ರಾಜಕುಮಾರ್ ಮತ್ತು ಎಲ್ಲ ಜಾತಿವರ್ಗಗಳ ಸಾಮಾನ್ಯ ಕನ್ನಡಿಗರು ನಮ್ಮ ನಾಡಿಗೆ ನೀಡಿದ ಜಾತ್ಯತೀತ ಮೌನ ಸಂದೇಶವೆಂದೇ ನನ್ನ ತಿಳುವಳಿಕೆ.
ಚಿತ್ರರಂಗಕ್ಕೆ ಪ್ರವೇಶ ಮಾಡುವುದಕ್ಕೆ ಮುಂಚೆ ನಾಟಕರಂಗದಲ್ಲೂ ಜಾತಿಪ್ರೇರಿತ ಅವಮಾನವನ್ನು ರಾಜಕುಮಾರ್ ಅವರು ಅನುಭವಿಸಿದ್ದರು. ಚಿತ್ರದುರ್ಗ, ದಾವಣಗೆರೆ ಕ್ಯಾಂಪ್ನಲ್ಲಿ ಇವರು ನಾಟಕದಲ್ಲಿ ಬಸವಣ್ಣನವರ ಪಾತ್ರ ಮಾಡುವುದನ್ನು ಕೆಲವು ಜಡ ಸಂಪ್ರದಾಯಸ್ಥ ಜಾತಿವಾದಿಗಳು ವಿರೋಧಿಸಿದರು. ಹಿರಿಯ ಮುರುಘರಾಜೇಂದ್ರ ಸ್ವಾಮಿಗಳಿಗೆ ದೂರುಕೊಟ್ಟರು. ಸ್ವಾಮಿಗಳು ಸ್ವತಃ ನಾಟಕವನ್ನು ನೋಡಿದರು. ಮುತ್ತುರಾಜ್ (ರಾಜ್ಕುಮಾರ್) ಅವರ ಅಭಿನಯವನ್ನು ಮೆಚ್ಚಿ ದೂರಿತ್ತವರಿಗೆ ಬುದ್ಧಿ ಹೇಳಿ ಕಳಿಸಿದರು. ಸ್ವಾಮೀಜಿಗಳ ಮಧ್ಯಪ್ರವೇಶಕ್ಕೆ ಮುಂಚೆ ನೇರವಾಗಿ ಕೆಲವರು ಅವಮಾನದ ಮಾತಾಡಿದ್ದರು. ಆದರೆ ಸ್ವಾಮಿಗಳ ಸಮಯೋಚಿತ ಹಾಗೂ ಮೌಲ್ಯಬದ್ಧ ಮಧ್ಯಪ್ರವೇಶದಿಂದ ಮುತ್ತುರಾಜ್ ಬಸವಣ್ಣನವರ ಪಾತ್ರದಲ್ಲಿ ಮುಂದುವರೆದರು. ಈ ಪ್ರಸಂಗವನ್ನು ನಾನು ಡಾ.ರಾಜಕುಮಾರ್ ಅವರಿಂದಲೇ ಕೇಳಿ ತಿಳಿದಿದ್ದೆ.
ಈ ಹಿನ್ನೆಲೆಯಲ್ಲೇ ರಾಜಕುಮಾರ್ ಅವರನ್ನು ಮೆಚ್ಚಿಕೊಳ್ಳಲು ಇನ್ನಷ್ಟು ಕಾರಣಗಳಿವೆ. ರಾಜಕುಮಾರ್ ಅವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದ ವಲಯದಿಂದ ಬಂದವರು. ಶೈಕ್ಷಣಿಕವಾಗಿಯೂ ಹಿಂದುಳಿದವರು. ಮೂರನೇ ತರಗತಿಯನ್ನೂ ಪೂರೈಸದ ಇವರು ಕಲಿತದ್ದು ಕಲೆಯ ಮೂಲಕ ಬದುಕಿನ ಮೂಲಕ. ಜಾತಿ ಮತ್ತು ವರ್ಗ ವ್ಯವಸ್ಥೆಯ ಕರಾಳತೆ ಪ್ರಖರವಾಗಿರುವ ನಮ್ಮ ಸಾಮಾಜಿಕ ಸಂದರ್ಭದಲ್ಲಿ ನಿರ್ಲಕ್ಷಿತ ಸಾಮಾಜಿಕ-ಆರ್ಥಿಕ ವಲಯದಿಂದ ಬಂದವರೂ ಮೂರನೇ ತರಗತಿಯನ್ನು ಮುಗಿಸದೆ ಇರುವವರೂ ಆದ ರಾಜಕುಮಾರ್ ದೇಶದ ದೊಡ್ಡ ಪ್ರತಿಭೆಯಾಗಿ ಬೆಳೆದದ್ದೇ ಒಂದು ಅನನ್ಯ ಸಾಧನೆ. ದೊಡ್ಡ ಜಾತಿಯ ಹಿನ್ನೆಲೆಯಿಲ್ಲ; ಶ್ರೀಮಂತಿಕೆಯ ಬೆಂಬಲವಿಲ್ಲ, ಶಿಕ್ಷಣದ ಒತ್ತಾಸೆಯಿಲ್ಲ, ಪ್ರತಿಭೆ; ಕೇವಲ ಪ್ರತಿಭೆ. ಅದಕ್ಕೆ ತಕ್ಕುದಾದ ಶ್ರದ್ಧೆ, ಶ್ರಮ; ಸಂಕಲ್ಪ; ಇವುಗಳಿಂದ ಸಾಮಾಜಿಕ ಆರ್ಥಿಕ ವ್ಯವಸ್ಥೆಯ ಕರಾಳ ಕಟ್ಟಳೆಗಳನ್ನು ಮೀರಿ ಬೆಳೆದದ್ದು ರಾಜಕುಮಾರ್ ಅವರ ಅಸಾಧಾರಣ ಸಾಧನೆ. ರಾಜಕುಮಾರ್ ಕಲೆಯನ್ನು ಕಸುಬು ಎಂದುಕೊಂಡರು. ಕಲಾ ಸೇವೆ ಮಾಡ್ತೇನೆ ಅನ್ನೋದೆಲ್ಲ ಬರೀ ಮಾತು, ಹೊಟ್ಟೆಪಾಡಿಗಾಗಿ ಅಭಿನಯ ಮಾಡ್ತಾ ಬಂದೆ. ಅಭಿನಯ ಕಲೆ ನನ್ನ ಕಸುಬು. ಆಮೇಲೆ ಹಾಡಿದೆ. ಅದೂ ನನ್ನ ಕಸುಬು. ಹೀಗಾಗಿ ಕಲೆ ಅನ್ನೋದು ನನ್ನ ಪಾಲಿಗೆ ಕಸುಬು. ನನಗೆ ಗೊತ್ತಿರೋದು ಅದೊಂದೇ. ಅದನ್ನ ಮಾಡ್ತಾ ಬಂದೆ. ಮೊದಲು ರಂಗಭೂಮೀಲಿ, ಆಮೇಲೆ ಚಿತ್ರರಂಗದಲ್ಲಿ – ಇದು ಡಾ.ರಾಜಕುಮಾರ್ ಅವರ ಅಂತರಾಳದ ಮಾತು. ಕಲೆಯನ್ನು ಕಸುಬು ಎಂದುಕೊಂಡು ಬಾಳಿದವರು ಶ್ರಮಜೀವಿ ವಲಯದಿಂದ ಬಂದ ಜನಪದ ಕಲಾವಿದರು. ರಾಜಕುಮಾರ್ ಅವರು ಸಹ ಶ್ರಮಜೀವಿ ವಲಯದಿಂದ ಬಂದವರು; ಒಪ್ಪೊತ್ತಿನ ಊಟಕ್ಕಾಗಿ ಕಡುಕಷ್ಟಗಳನ್ನು ಅನುಭವಿಸಿದವರು; ಕಲೆಯನ್ನು ನಂಬಿ ಹಸಿವಿಗೆ ಉತ್ತರ ಹುಡುಕಿದವರು. ಕಲೆಯನ್ನು ಕಸುಬು ಎಂದು ಭಾವಿಸಿದವರು. ಕಸುಬು ಎನ್ನುವುದು ಶ್ರಮಜೀವಿಗಳ ಪರಿಭಾಷೆ. ಈ ಎಲ್ಲ ಕಾರಣಗಳಿಂದ ಅವರನ್ನು ನಾನು ಬಂಗಾರದ ಮನುಷ್ಯ ಎನ್ನುವ ಬದಲು ಬೆವರಿನ ಮನುಷ್ಯ ಎಂದು ಕರೆಯುತ್ತಾ ಬಂದಿದ್ದೇನೆ. ಅವರಿಗೆ ಬೆವರಿನ ಬೆಲೆ ಗೊತ್ತಿತ್ತು. ಬಡತನದ ಬೇಗೆಯು ಅವರ ಭಾವನೆಗಳ ಭಾಗವಾಗಿತ್ತು. ಹೀಗಾಗಿ ಅವರಲ್ಲಿದ್ದ ಭಕ್ತಿಗೂ ಬೆವರಿನ ಆಯಾಮ ಲಭ್ಯವಾಗಿತ್ತು.
ಹಾಗಾದರೆ ಚಿತ್ರರಂಗದಿಂದ ಗಳಿಸಿದ ಶ್ರೀಮಂತಿಕೆಯ ಬಗ್ಗೆ ಏನು ಹೇಳುತ್ತೀರಿ? ಎಂದು ಕೇಳಬಹುದು. ಈ ಪ್ರಶ್ನೆ ಸಹಜವೂ ಹೌದು. ವಿಶೇಷವೆಂದರೆ ರಾಜಕುಮಾರ್ ಅವರು ಸ್ವಲ್ಪ ಸಂಪತ್ತನ್ನು ಗಳಿಸಿದ ಮೇಲೆಯೂ ಅದಕ್ಕೆ ಸವಾಲಾಗುವಂತೆ ಸರಳತೆಯನ್ನು ರೂಢಿಸಿಕೊಂಡರು. ಜೇಬಲ್ಲಿ ಹಣ ಇಡಲಿಲ್ಲ. ತಮಗೆ ಬಂದ ಸಂಭಾವನೆಯನ್ನು ಎಣಿಸಲಿಲ್ಲ. ಐದು ನೂರು, ಸಾವಿರ ನೋಟುಗಳು ಹೇಗಿವೆಯೆಂದು ನೋಡಲಿಲ್ಲ. ಆರಂಭದ ದಿನಗಳಲ್ಲಿ ಇವರಷ್ಟೇ ಸರಳವಾದ ಕಿರಿಯ ಸೋದರ ವರದರಾಜು ಅವರು ವ್ಯವಹಾರಗಳನ್ನು ನೋಡಿಕೊಂಡರು. ಆನಂತರ ಪತ್ನಿ ಪಾರ್ವತಮ್ಮನವರೇ ವ್ಯವಹಾರದ ಚುಕ್ಕಾಣಿ ಹಿಡಿದರು. ರಾಜಕುಮಾರ್ ಕಲೆಯ ಕಸುಬುದಾರರಾಗಿ ಪೂರ್ಣ ತೊಡಗಿಸಿಕೊಂಡರು. ತಾನು ಕೇವಲ ಕಲೆಯ ಕಸುಬುದಾರ ಎಂದು ಭಾವಿಸಿದರು. ಶ್ರೀಮಂತಿಕೆಯ ಸೋಂಕು ತಗುಲದಂತೆ ವೈಯಕ್ತಿಕ ಎಚ್ಚರ ವಹಿಸಿದರು. ಸರಳ ಉಡುಪು, ಸೌಜನ್ಯದ ನಡವಳಿಕೆ, ಸಜ್ಜನಿಕೆಯ ದಾರಿ, ನೈತಿಕ ಮಾದರಿ – ಇವೇ ಅವರ ದಾರಿ. ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ಅವರು ಅಹಂಕಾರ ಪಡಲಿಲ್ಲ. ಚಿತ್ರೀಕರಣ ಸಂದರ್ಭದಲ್ಲಿ ಸಾಮಾನ್ಯ ಶ್ರಮಜೀವಿಗಳೊಂದಿಗೆ ಒಟ್ಟಿಗೇ ಕೂತು ಊಟ ಮಾಡುತ್ತಿದ್ದ ಏಕೈಕ ನಾಯಕ ನಟ ಎಂದರೆ ರಾಜಕುಮಾರ್. ಸಹಪಂಕ್ತಿ ಭೋಜನದ ಮೂಲಕ ಚಿತ್ರೀಕರಣದ ವೇಳೆಯಲ್ಲಿ ಸಮಭಾವದ ವಾತಾವರಣ ನಿರ್ಮಾಣ ಮಾಡುತ್ತ ಬಂದದ್ದು ಒಂದು ಕಡೆ; ಯಾವತ್ತೂ ಹಣದ ಕಾರಣಕ್ಕೆ ನಿರ್ಮಾಪಕರಿಗೆ ತೊಂದರೆ ಕೊಡದ ಕಲಾವಿದ ಮನಸ್ಸು ಇನ್ನೊಂದು ಕಡೆ. ಸಮಯಕ್ಕೆ ಸರಿಯಾಗಿ ಚಿತ್ರೀಕರಣಕ್ಕೆ ಹಾಜರಾಗುವ ಕರ್ತವ್ಯನಿಷ್ಠೆ ಮತ್ತೊಂದು ಕಡೆ; ಜೊತೆಗೆ ಕಿಂಚಿತ್ತು ಕಳಂಕವಿಲ್ಲದ ಕಲೆಯ ಕಸುಬು. ಯಶಸ್ಸಿಗೆ ಇನ್ನೇನು ಬೇಕು?
ಡಾ.ರಾಜಕುಮಾರ್ ಅವರು ನೆಲದ ಮೇಲೆ ಹಾಸಿಗೆ ಹಾಸಿ ಮಲಗುತ್ತಿದ್ದರೆಂದರೆ ಆಶ್ಚರ್ಯವಾಗಬಹುದು. ಆದರೆ ಇದು ನಿಜ. ಮದ್ರಾಸಿನಲ್ಲಿದ್ದಾಗ ಬೆಲೆ ಬಾಳುವ ಮಂಚವೊಂದನ್ನು ಖರೀದಿಸಿ ಮನೆಗೆ ತಂದರಂತೆ. ಅದರ ಮೇಲೆ ಮಲಗಿದಾಗ ನಿದ್ದೆಯೇ ಬರಲಿಲ್ಲವಂತೆ. ಹೊಸಮಂಚ, ಮುಂದೆ ಅಭ್ಯಾಸವಾಗುತ್ತದೆ ಎಂದುಕೊಂಡರು. ಮಾರನೇ ದಿನವೂ ಅದೇ ಅನುಭವ. ಎಷ್ಟು ಕಷ್ಟ ಪಟ್ಟರೂ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಎದ್ದರು; ಕೂತರು; ಮತ್ತೆ ಮಲಗಿದರು; ಇಲ್ಲ, ಸರಿಯಾಗಿ ನಿದ್ದೆ ಬರಲೇ ಇಲ್ಲ. ಮರುದಿನವೂ ಇದೇ ರೀತಿಯಾಯಿತು. ಆಗ ಅವರಿಗೆ ಅರಿವಾಯಿತು: ಅವರ ಮನಸ್ಸು ಒಣ ಶ್ರೀಮಂತಿಕೆಯ ಜೊತೆ ಹೊಂದಿಕೊಳ್ಳಲು ಸಿದ್ಧವಾಗಿರಲಿಲ್ಲ – ಎಂದು: ಈ ಶ್ರೀಮಂತ ಮಂಚ ನನ್ನದಲ್ಲ ಎಂದು ನಿರ್ಧರಿಸಿದರು. ಮೂರು ದಿನ ಮಂಚದ ಮೇಲೆ ತಳಮಳಿಸಿ ಅನಂತರ ನೆಲವೇ ತನ್ನ ನೆಲೆಯೆಂದು ಭಾವಿಸಿ ಮಂಚದ ಮೇಲೆ ಮಲಗುವುದನ್ನು ಬಿಟ್ಟರು. ಹೊರಗೆ ಹೋದಾಗ ಮಾತ್ರ ಮಂಚ. ಮನೆಯಲ್ಲಿ ನೆಲ. ಆಗ ಸುಖವಾದ ನಿದ್ದೆ. ಇದು ಕೇವಲ ಸರಳತೆಯಲ್ಲ. ಶ್ರೀಮಂತಿಕೆಯ ಸವಲತ್ತುಗಳಿಗೆ ದಾಸನಾಗದೆ ಇರಲು ನಡೆಸಿದ ಆಂತರಿಕ ಹೋರಾಟದ ಫಲ. ಇತ್ತೀಚಿನ ವರ್ಷಗಳಲ್ಲಂತೂ ಅವರು ಸದಾ ಬಸವಣ್ಣ, ಅಲ್ಲಮ, ದೇವರದಾಸಿಮಯ್ಯ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ ಮುಂತಾದವರ ವಚನಗಳನ್ನು ಮಾತಿನ ಮಧ್ಯೆ ಸಾಕಷ್ಟು ಹೇಳುತ್ತಿದ್ದರು. ಕನಕದಾಸ, ಸರ್ವಜ್ಞರೂ ಬಂದು ಹೋಗುತ್ತಿದ್ದರು. ಅನೇಕ ತತ್ವಪದಗಳನ್ನು ಉಲ್ಲೇಖಿಸುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಅವರ ಸರಳತೆ, ಸಜ್ಜನಿಕೆಗಳು ಸಂತನ ರೂಪಾಂತರವನ್ನು ಪಡೆಯುತ್ತ ಬಂದವು. ರಾಜಕುಮಾರ್ ಸಂತ ಮನಸ್ಸಿನ ಮನುಷ್ಯರಾಗುತ್ತ ಬಂದರು.
ಡಾ.ರಾಜಕುಮಾರ್ ಅವರೊಳಗೆ ಮೂಲದ ಮುತ್ತುರಾಜ್ ಸದಾ ಜೀವಂತವಾಗಿದ್ದುದು ಅವರ ವ್ಯಕ್ತಿತ್ವದ ಬಹುಮುಖ್ಯ ವಿಶಿಷ್ಟತೆ (ಮುತ್ತುರಾಜ್ – ರಾಜಕುಮಾರ್ ಅವರ ಮೂಲ ಹೆಸರು). ಬದುಕಿನ ಬೆಂಕಿಯಲ್ಲಿ ಹಾದು ಬಂದವರು – ಮುತ್ತುರಾಜ್; ಕಲಾವಿದನಾಗಿದ್ದರ ಜೊತೆಗೆ ಸಾಮಾಜಿಕ ಆರ್ಥಿಕ ಅನುಭವಗಳ ಮೂಸೆಯಲ್ಲಿ ಆಕಾರಗೊಂಡವರು – ಮುತ್ತುರಾಜ್. ಆನಂತರ ಪ್ರಸಿದ್ಧ ಕಲಾವಿದರಾಗಿ ಡಾ.ರಾಜಕುಮಾರ್ ಆದರು. ಆದರೆ ಡಾ. ರಾಜಕುಮಾರ್ ಅಂತರಂಗದಲ್ಲಿ ಮುತ್ತುರಾಜ್ ಎಂಬ ಮನುಷ್ಯ ಬದುಕಿದ್ದ; ಸಾಕ್ಷಿಪ್ರಜ್ಞೆಯಾಗಿದ್ದ; ಅನುಭವ ಮಂಟಪವಾಗಿದ್ದ. ಡಾ.ರಾಜಕುಮಾರ್ ಅವರ ನಡೆ-ನುಡಿಗಳನ್ನು ನಿಯಂತ್ರಿಸುತ್ತಿದ್ದ; ಬೆಳೆಸುತ್ತಿದ್ದ. ಬಹಿರಂಗದ ಕಾಂತಿಗೆ ಅಂತರಂಗದ ಬೆಳಕಾಗಿದ್ದ.
ಅಂತರಂಗದಲ್ಲಿ ಮುತ್ತುರಾಜ್ ಇದ್ದಂತೆ ಬಹಿರಂಗದಲ್ಲಿ ಕಿರಿಯ ಸೋದರ ವರದರಾಜ್ ಇದ್ದರು. ಉತ್ತಮ ಹಾಸ್ಯ ನಟರಾಗಿದ್ದ ಇವರು ಅಣ್ಣ ರಾಜಕುಮಾರ್ ಅವರ ಕಲಾ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅನೇಕ ನಾಟಕಗಳು ಮತ್ತು ಮೂರ್ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ ವರದರಾಜ್ ಅವರು ಅಭಿನಯವನ್ನು ಬಿಟ್ಟು ಅಣ್ಣ ರಾಜಕುಮಾರ್ ಅವರಿಗೆ ಬೆಂಬಲವಾಗಿ ನಿಂತು ಆತ್ಮೀಯ ಮಾರ್ಗದರ್ಶಿಯಾದರು. ಅಣ್ಣನ ಅಭ್ಯುದಯದಲ್ಲಿ ಆನಂದ ಕಂಡರು. ಒಳಗಿನ ಮುತ್ತುರಾಜ್ ಮತ್ತು ಹೊರಗಿನ ವರದರಾಜ್ – ಇಬ್ಬರು ಡಾ.ರಾಜಕುಮಾರ್ ಅವರ ವ್ಯಕ್ತಿತ್ವ ವಿಕಾಸದ ಪ್ರಮುಖ ಪ್ರೇರಕರು. ಮುಂದೆ ಆರ್ಥಿಕ ಭದ್ರತೆಯಲ್ಲಿ ಪಾರ್ವತಮ್ಮನವರ ಪಾತ್ರ ಹಿರಿದು.
ಬಹು ದೊಡ್ಡದಾಗಿ ಬೆಳೆದ ವ್ಯಕ್ತಿತ್ವಕ್ಕೆ ಗೌರವ ಕೊಡಲು ಒಬ್ಬೊಬ್ಬರು ಒಂದೊಂದು ವಿಧಾನ ಅನುಸರಿಸುತ್ತಾರೆ. ಜನಪ್ರಿಯ ಸಂಸ್ಕೃತಿಯ ಭಾಗವಾದ ಸಿನಿಮಾ ಜಗತ್ತಿನಲ್ಲಿ ಅಣ್ಣ ಎಂದು ಕರೆಯುವುದೂ ಕಾಲಿಗೆ ಬಿದ್ದು ಗೌರವ ಸೂಚಿಸುವುದೂ ಒಂದು ರೂಢಿ. ಇದು ರಾಜಕುಮಾರ್ ಅವರ ವಿಷಯದಲ್ಲೂ ಇದು ನಿಜ. ಆದರೆ ತನ್ನನ್ನು ಅಣ್ಣ ಎನ್ನಬೇಕೆಂದೂ ಕಾಲಿಗೆ ಬೀಳಬೇಕೆಂದೂ ಅವರೆಂದೂ ಅಪೇಕ್ಷಿಸಿರಲಿಲ್ಲ. ಸ್ಟಾರ್ ವ್ಯಾಲ್ಯು ಎಂಬ ಪ್ರತಿಷ್ಠೆಯ ಪರಿಭಾಷೆಯೊಳಗೆ ಇವೆಲ್ಲ ಸಾಮಾನ್ಯವೆಂಬಂತೆ ನಡೆದು ಬಿಡತ್ತದೆ; ಆರಂಭದಲ್ಲಿ ಗೌರವ ಸೂಚಕವಾಗುತ್ತ ಅನಂತರ ಸಂಪ್ರದಾಯವಾಗುತ್ತದೆ. ಆಚರಣೆಯಾಗುತ್ತವೆ. ಕೆಲವೊಮ್ಮೆ ಅಭಿನಯವೂ ಆಗುತ್ತದೆ. ಇದೆಲ್ಲ ರಾಜಕುಮಾರ್ ಅವರಿಗೆ ಗೊತ್ತಿಲ್ಲವೆಂದೇನೂ ಅಲ್ಲ. ಕೆಲವು ವರ್ಷಗಳ ಹಿಂದೆ, ನನ್ನ ಮತ್ತು ಅವರ ಪರಿಚಯದ ಆರಂಭದಲ್ಲಿ ನಾನು ಹೇಳಿದೆ : ಸರ್, ನನಗೆ ಕಾಲಿಗೆ ಬಿದ್ದು ಅಭ್ಯಾಸವಿಲ್ಲ, ಹಾಗಂತ ಗೌರವ ಇಲ್ಲ ಅಂತ ಅಲ್ಲ, ನೀವು ತಪ್ಪು ತಿಳೀಬಾರ್ದು, ಅಲ್ಲದೆ ನಿಮ್ಮನ್ನ ಅಣ್ಣಾವ್ರೆ ಅಂತ ಕರೆಯೋ ರೂಢಿಯೂ ನನಗಿಲ್ಲ. ಆದರೆ ನಿಮ್ಮ ಬಗ್ಗೆ ಅಪಾರ ಗೌರವ ಇದೆ. ಮೊದ್ಲೇ ಹೇಳ್ತಿದ್ದೀನಿ ಎಂದೆ. ಆಗ ಅವರು ನಕ್ಕು ನುಡಿದರು: ನಿಮ್ ಮುಖ ನೋಡಿದ್ರೆ ಗೊತ್ತಾಗಲ್ವ ಸಾರ್, ಬಂಡಾಯದ ಕಳೆ ಇದೆ ಅಲ್ಲಿ, ಪ್ರೀತಿ – ಗೌರವ ಅನ್ನೋದು ಕಾಲಿಗ್ ಬೀಳೊದ್ರಲ್ಲಿಲ್ಲ. ಜೊತೆಗೆ ಕಾಲಿಗ್ ಬಿದ್ದೋರೆಲ್ಲ ಗೌರವ ತೋರುಸ್ತಾರೆ ಅಂತ ನಾನ್ಯಾಕೆ ಅಹಂಕಾರ ಪಡ್ಲಿ! ಎಲ್ಲಾ ಒಳಗಿರ್ಬೇಕು. ಎದೆ ಒಳಗೆ ಎನ್ನುತ್ತ ನನ್ನನ್ನು ಗಟ್ಟಿಯಾಗಿ ಅಪ್ಪಿಕೊಂಡರು. ಹೀಗೆ ಆರಂಭವಾದ ಪರಿಚಯ ಮುಂದೆ ಮನಬಿಚ್ಚಿ ಮಾತಾಡುವ ಆತ್ಮೀಯತೆಯಾಯಿತು. ನನ್ನ ನೇರ ಸ್ವಭಾವವನ್ನು ಅಪಾರ್ಥ ಮಾಡಿ, ವಿಘ್ನ ಸಂತೋಷ ಪಟ್ಟ ಸಿನಿಕರು ನಮ್ಮಲ್ಲಿದ್ದಾರೆ. ಇಂಥವರು ಕುವೆಂಪು ಅವರಂಥ ಮಹಾಕವಿಯನ್ನೂ ಬಿಡಲಿಲ್ಲ. ರಾಜಕುಮಾರ್ ಅವರಂಥ ಮಹಾನ್ ಕಲಾವಿದರನ್ನೂ ಬಿಡಲಿಲ್ಲ. ಆದರೆ ರಾಜಕುಮಾರ್ ಅವರು ನನ್ನ ನೇರ ಮಾತನ್ನು ಮೆಚ್ಚಿ ನನ್ನನ್ನು ಮನತುಂಬಿಕೊಂಡರು. ಮನೆಯನ್ನೂ ತುಂಬಿಕೊಂಡರು.
ವೈಯಕ್ತಿಕ ಮತ್ತು ಸಾಮಾಜಿಕ ಅಸಹನೆಗಳನ್ನು ಎದುರಿಸಿಯೇ ಅನೇಕರು ಬೆಳೆಯಬೇಕಾದ ಸನ್ನಿವೇಶ ನಮ್ಮದು. ಆದರೆ ಅಪಕ್ವ, ಅತಾರ್ಕಿಕ, ಅಪ್ರಬುದ್ಧ ಅಂಶಗಳು ತಾನಾಗಿಯೇ ಮೂಲೆ ಸೇರುವಂತೆ ಮಾಡಿದ ಮೌನಶಕ್ತಿಯ ಮಹಾನ್ ಪ್ರತಿಭೆಗಳು ನಮ್ಮಲ್ಲಿವೆ. ಅಂಥ ಪ್ರಮುಖ ಪ್ರತಿಭೆಗಳಲ್ಲಿ ರಾಜಕುಮಾರ್ ಅವರೂ ಒಬ್ಬರು. ರಾಜಕುಮಾರ್ ಅವರು ಅದ್ಭುತ ಕಲಾವಿದರು. ನಿಜ, ಆದರೆ ಚಿತ್ರರಂಗಕ್ಕೆ ಏನು ಮಾಡಿದರು? ಎಂದು ಕೆಲವರು ಕೇಳುವುದುಂಟು. ನನ್ನದೊಂದು ಪ್ರಶ್ನೆಯಿದೆ. ಪುಸ್ತಕ ಬರೆಯುವವರೆಲ್ಲ ಪ್ರಿಂಟಿಂಗ್ ಪ್ರೆಸ್ ಇಡಬೇಕೆ? ಪುಸ್ತಕ ಬರೆಯುವುದೇ ಪುಸ್ತಕೋದ್ಯಮಕ್ಕೆ, ಪುಸ್ತಕ ಸಂಸ್ಕೃತಿಗೆ ಪೂರಕವಲ್ಲವೆ? ಅದೇ ರೀತಿ ಕಲಾವಿದರೆಲ್ಲ ಸ್ಟುಡಿಯೋ ಕಟ್ಟಿಸಬೇಕೆ? ಅಭಿನಯದ ಮೂಲಕ ಚಿತ್ರಮಂದಿರಕ್ಕೆ ಜನರು ಬರುವಂತೆ ಮಾಡುವುದೇ ಚಿತ್ರೋದ್ಯಮಕ್ಕೆ ಪೂರಕವಲ್ಲವೆ? ಸದಭಿರುಚಿ ಬೆಳೆಸುವುದೂ ಒಂದು ಸಂಸ್ಕೃತಿಯಲ್ಲವೆ? ಖ್ಯಾತ ಕಾದಂಬರಿಕಾರರಾದ ಅ.ನ.ಕೃಷ್ಣರಾಯರು ಬರೆದ ಕಾದಂಬರಿಗಳಿಂದ ಕನ್ನಡದಲ್ಲಿ ಓದುವ ಅಭಿರುಚಿ ವಿಸ್ತಾರವಾಯಿತು. ರಾಜಕುಮಾರ್ ಅವರಿಂದ ಕನ್ನಡ ಚಲನಚಿತ್ರ ಪ್ರೇಕ್ಷಕ ವಲಯ ವಿಸ್ತಾರವಾಯಿತು. ಅಷ್ಟೇ ಅಲ್ಲ ಸದಭಿರುಚಿಯ ವಿಕಾಸವಾಯಿತು. ಅನೇಕರಿಗೆ ಗೊತ್ತಿಲ್ಲದ ಒಂದು ವಿಷಯವನ್ನು ತಿಳಿಸಬಯಸುತ್ತೇನೆ. ಹಿರಿಯನಟ ಟಿ.ಎನ್.ಬಾಲಕೃಷ್ಣ ಅವರು ನಿರ್ಮಿಸಿದ್ದ ಅಭಿಮಾನ್ ಸ್ಟುಡಿಯೋಗೆ ಆರಂಭದಲ್ಲಿ ರಾಜಕುಮಾರ್ ಅವರೂ ಒಬ್ಬ ಪಾಲುದಾರರಾಗಿದ್ದರು. ಆದರೆ ವ್ಯವಹಾರ ವಲಯವು ತಮಗೆ ಒಗ್ಗದು ಎಂಬ ನೈತಿಕ ಅಳುಕಿನಿಂದ ಆರಂಭದ ದಿನಗಳಲ್ಲೇ ಪಾಲುದಾರಿಕೆಯಿಂದ ಹಿಂದಕ್ಕೆ ಬಂದರು. ಆದರೆ ತಮ್ಮ ಪಾಲಿನ ಹಣವನ್ನು ಹಿಂದಕ್ಕೆ ಪಡೆಯಲಿಲ್ಲ. ಹೆಸರನ್ನು ಮಾತ್ರ ಹಿಂದಕ್ಕೆ ಪಡೆದರು. ಕೆಲವರ ಸ್ವಭಾವಕ್ಕೆ ಒಗ್ಗದ ವಿಷಯಗಳಿರುತ್ತವೆ. ಅವುಗಳನ್ನು ಮಾಡಬೇಕೆಂದು ಒತ್ತಾಯಿಸುವ ಬದಲು ಸಾಮಾಜಿಕ ಜವಾಬ್ದಾರಿಯ ನಡವಳಿಕೆಯನ್ನು ನಿರೀಕ್ಷಿಸುವುದು ಸರಿ. ಎನ್.ಟಿ.ಆರ್. ಮತ್ತು ಎಂ.ಜಿ.ಆರ್. ಅವರು ರಾಜಕೀಯಕ್ಕೆ ಬಂದರೆಂದು ರಾಜಕುಮಾರ್ ಅವರಿಂದಲೂ ಅದನ್ನು ನಿರೀಕ್ಷಿಸಲಾದೀತೆ? ರಾಜಕೀಯ ಇವರಿಗೆ ಒಗ್ಗದ ವಿಷಯ. ಯಾರು ಎಷ್ಟೇ ಹೇಳಿದರೂ ಇವರು ರಾಜಕೀಯಕ್ಕೆ ಬರಲಿಲ್ಲ. ಆದರೆ ಎನ್.ಟಿ.ಆರ್, ಮತ್ತು ಎಂ.ಜಿ.ಆರ್ ರಾಜಕೀಯ ಕ್ಷೇತ್ರಕ್ಕೆ ಬಂದರು. ಯಾರನ್ನೂ ಆಕ್ಷೇಪಿಸುವಂತಿಲ್ಲ. ಅದು ಅವರವರ ಆಲೋಚನೆ ಮತ್ತು ಸ್ವಭಾವಕೆ ಸಂಬಂಧಪಟ್ಟ ಸಂಗತಿ. ಡಾ.ರಾಜಕುಮಾರ್ ಅವರು ಡಬ್ಬಿಂಗ್ ಚಿತ್ರಗಳಿಗೆ ಪ್ರತಿರೋಧ ಒಡ್ಡಿದ್ದು, ಗೋಕಾಕ್ ಚಳುವಳಿಯ ಮುಂಚೂಣಿಗೆ ಬಂದು ಶಕ್ತಿ ತುಂಬಿದ್ದು, ಕನ್ನಡಕ್ಕೆ ಧಕ್ಕೆಯಾದಾಗಲೆಲ್ಲ ಬೀದಿಗಿಳಿದದ್ದು – ಸಾಮಾನ್ಯ ಸಂಗತಿಗಳಲ್ಲ. ಅ.ನ.ಕೃ ಅವರು ಒಂದು ಮಾತು ಹೇಳಿದ್ದರು: ಡಾ.ರಾಜಕುಮಾರ್ ಅವರು ಕನ್ನಡ ಚಿತ್ರಗಳಲ್ಲಿ ಮಾತ್ರ ಅಭಿನಯಿಸುತ್ತೇನೆಂದು ನಿರ್ಧಾರ ಮಾಡದಿದ್ದರೆ ಕನ್ನಡ ಚಿತ್ರರಂಗವೆಂಬ ಪ್ರತ್ಯೇಕ ಅಸ್ತಿತ್ವವೇ ಇರುತ್ತಿರಲಿಲ್ಲ, ಕಾದಂಬರಿ ಸಾರ್ವಭೌಮ ಎನ್ನಿಸಿಕೊಂಡ ಡಾ.ಅ.ನ.ಕೃ ಅವರು ನಟ ಸಾರ್ವಭೌಮ ಎನ್ನಿಸಿಕೊಂಡ ಡಾ. ರಾಜಕುಮಾರ್ ಅವರ ಬಗ್ಗೆ ಹೇಳಿದ ಈ ಮಾತು ರಾಜಕುಮಾರ್ ಅವರ ಕೊಡುಗೆಯನ್ನು ಸಮರ್ಥವಾಗಿ ಪ್ರತಿನಿಧಿಸುತ್ತದೆ. ರಾಜಕುಮಾರ್ ಅವರು ತಮ್ಮ ಸಿನಿಮಾ ಪ್ರವೇಶದ ಆರಂಭದಲ್ಲಿ ಕನ್ನಡದ ಬೇಡರ ಕಣ್ಣಪ್ಪ ಚಿತ್ರದ ತೆಲುಗು ಅವತರಣಿಕೆಯಲ್ಲಿ ಒಮ್ಮೆ ಅಭಿನಯಿಸಿದ್ದಾರೆ. ಅನಂತರ ಕನ್ನಡ ಚಿತ್ರಗಳಲ್ಲಿ ಮಾತ್ರವೇ ಅಭಿನಯಿಸುವುದಾಗಿ ನಿರ್ಧಾರ ತೆಗೆದುಕೊಂಡರು. ಉಸಿರು ಇರುವವರೆಗೂ ಈ ನಿರ್ಧಾರಕ್ಕೆ ಬದ್ಧರಾಗಿ ಬದುಕಿದರು.
ಡಾ.ರಾಜಕುಮಾರ್ ಅವರನ್ನು ಅರ್ಥಮಾಡಿಕೊಳ್ಳಲು ಪೂರಕವಾಗುವಂತಹ ಆಯ್ದ ಕೆಲವು ಘಟನೆಗಳನ್ನು ಹೇಳಬಯಸುತ್ತೇನೆ.
೧. ನಾನು ರಾಜಕುಮಾರ್ ಅವರ ಸಂಸ್ಥೆಗಾಗಿ ಕೆಲಸ ಮಾಡಿದ ಒಂದೇ ಒಂದು ಚಿತ್ರ ಜನುಮದ ಜೋಡಿ, ಇದಕ್ಕಾಗಿ ನಾನು ಮೂರು ಹಾಡು ಬರೆದೆ. ಚಿತ್ರಕತೆ ರಚನೆಯಲ್ಲಿ ಭಾಗವಹಿಸಿದೆ. ಪೂರ್ಣವಾಗಿ ಸಂಭಾಷಣೆ ಬರೆದೆ. ಶ್ರೀಮತಿ ಪಾರ್ವತಮ್ಮನವರು ತಮ್ಮ ಸಂಸ್ಥೆಯ ಚಿತ್ರಗಳಿಗೆಲ್ಲ ಬರೆಯುವಂತೆ ಕೇಳಿದರು. ನನಗೆ ಇಷ್ಟವಾಗುವ ಕಥಾ ವಸ್ತುವಿದ್ದರೆ ಮಾತ್ರ ಬರೆಯುತ್ತೇನೆ ಎಂದು ನಾನು ಹೇಳಿದಾಗ ಅವರು ತಪ್ಪು ತಿಳಿಯಲಿಲ್ಲ. ಒಂದು ದಿನ ಮಾತನಾಡುತ್ತಾ ಕೂತಿದ್ದಾಗ ನಾನು ಕಾಲ ಮೇಲೆ ಕಾಲು ಹಾಕಿಕೊಂಡಿದ್ದೆ. ಎದುರಿಗೆ ರಾಜಕುಮಾರ್ ಅವರಿದ್ದರು. ಅವರ ಎದುರು ನಾನು ಹಾಗೆ ಕೂತದ್ದು ಸರಿಯಲ್ಲ ಎನ್ನಿಸಿ ಮಾತಾಡುತ್ತಲೇ ಅರಿವಾಗದಂತೆ ಕಾಲನ್ನು ತೆಗೆದು ಸರಿಯಾಗಿ ಕೂತೆ. ಇದನ್ನು ಹೇಗೋ ಗಮನಿಸಿದ ರಾಜಕುಮಾರ್ ಅವರಿಗೆ ನಾನು ಕಾಲು ತೆಗೆದದ್ದು ಸರಿಯೆನಿಸಲಿಲ್ಲ. ಯಾಕ್ ಹಾಗ್ ಮಾಡಿದ್ರಿ? ಕಾಲ್ ಮೇಲೆ ಕಾಲ್ ಹಾಕ್ಕೊಂಡೇ ಕೂತ್ಕೊಳ್ಳಿ, ನಿಮಗೆ ಅದೇ ಸಹಜ ಅಂತ ಕಾಣ್ಸುತ್ತೆ. ನನ್ನ ನೋಡಿ ಇವ್ನ್ ಎದುರಿಗೆ ಕಾಲ್ ಮೇಲೆ ಕಾಲ್ ಹಾಕ್ಕೊಂಡ್ ಕೂತ್ರೆ ಹೆಂಗೊ ಏನೊ ಅಂತ ತೆಗೆದಿದ್ದೀರಿ ಅನ್ಸುತ್ತೆ. ದಯವಿಟ್ಟು ಮೊದಲ್ನಂಗೇ ಕೂತ್ಕೊಳ್ಳಿ. ನಾನ್ ಖಂಡಿತ ತಪ್ತಿಳ್ಯಲ್ಲ ಎಂದು ಒತ್ತಾಯಿಸಿದರು. ನನಗೆ ಸಹಜವೆಂಬಂತೆ ಇರಲು ಹೇಳಿದರು.
೨. ಡಾ.ರಾಜಕುಮಾರ್ ಅವರು ತಮ್ಮ ಬೆಂಗಾವಲಾಗಿರುವ ಚನ್ನ ಎಂಬ ವ್ಯಕ್ತಿಯ ಜೊತೆ ವಾಕಿಂಗ್ ಹೋಗುತ್ತಿದ್ದರು. ರಾತ್ರಿ ಹೊತ್ತು ಮುಖಕ್ಕೆ ಮಫ್ಲರ್ ಸುತ್ತಿಕೊಂಡು ಹೋಗುತ್ತಿದ್ದಾರೆ. ಸದಾಶಿವನಗರದ ಒಂದು ಬೀದಿ, ಹೊಸ ಮನೆ ಕಟ್ಟುತ್ತಿದ್ದಾರೆ. ಮನೆ ಕಟ್ಟುವ ಕಾರ್ಮಿಕರ ಗುಡಿಸಲು ಅಲ್ಲೇ ಇದೆ. ಗುಡಿಸಲಿಂದ ಕೋಳಿಸಾರಿನ ಸುವಾಸನೆ ಬರುತ್ತಿದೆ. ಡಾ.ರಾಜಕುಮಾರ್ ಅವರು ಕ್ಷಣಕಾಲ ನಿಂತರು. ಚನ್ನ, ಕೋಳಿಸಾರು ತುಂಬಾ ಚೆನ್ನಾಗಿ ಮಾಡಿದಾರೆ ಅನ್ಸುತ್ತೆ, ಸ್ವಲ್ಪ ಊಟ ಹಾಕ್ತಾರೇನೋ ಕೇಳ್ತೀಯಾ ಎಂದರು. ಆತ ಎಷ್ಟು ಬೇಡವೆಂದರೂ ಕೇಳಲಿಲ್ಲ. ಕೆಲಸಗಾರರ ಗುಡಿಸಲಾದ್ರೇನು? ನಾವು ಹಂಗೇ ಇದ್ದೋರಲ್ವ? ಹೋಗಿ ಸುಮ್ನೆ ಕೇಳು ಎಂದರು. ಆತ ಗುಡಿಸಲಿಗೆ ಹೋಗಿ ವಿಷಯ ತಿಳಿಸಿದ. ಅವರು ಬಡವರ ಊಟ ಎಂದು ಹಿಂಜರಿದರು. ರಾಜಕುಮಾರ್ ನೆಲದ ಮೇಲೆ ಕೂತು ಊಟ ಮಾಡಿದರು. ಆನಂತರ ಅವರಿಗೆ ನಮಸ್ಕರಿಸಿ ಹಿಂತಿರುಗಿದರು. ಡಾ.ರಾಜಕುಮಾರ್ ಮುತ್ತುರಾಜ್ ಆಗಿದ್ದರು. ಮನೆಗೆ ಬಂದು ಗುಡಿಸಲು ವಾಸಿಗಳ ಊಟಕ್ಕೆ ಹಣ ಕಳಿಸಿದರು.
೩. ಡಾ.ರಾಜಕುಮಾರ್ ಅವರು ಒಮ್ಮೆ ನನಗೊಂದು ಘಟನೆಯನ್ನು ಹೇಳಿದರು. ನನಗೆ ಇವತ್ತು ನಿರೀಕ್ಷೆ ಮಾಡದೆ ಇರೋದೆಲ್ಲ ಸಿಕ್ಕಿದೆ. ಆದರೆ ನಮ್ಮ ಊರಿಗೆ ಹೋದಾಗೆಲ್ಲ ಹೊಲ,ತೋಪು ಅಂತ ತಿರುಗಾಡ್ತೇನೆ. ಆಗ ಎಲ್ಲ ನೆನಪುಗಳೂ ಒತ್ತರಿಸಿ ಬರುತ್ವೆ. ಈಗ ಅವರಲ್ಲಿ ಅನೇಕರು ಬದುಕಿಲ್ಲ. ಅವರ ನೆನಪು ಕಾಡ್ಸುತ್ತೆ. ಒಬ್ನೇ ಅಲ್ಲಿ ಓಡಾಡ್ತ ಇದ್ರೆ ಮರಗಿಡಗಳಲ್ಲಿ ಎಲೆ ಅಲುಗಾಡೋ ಸದ್ದು, ಹಕ್ಕಿಗಳ ಚಿಲಿಪಿಲಿ, ಜೊತೆಗೆ ನನ್ ಕಿವೀಲಿ ಯಾರೊ ಪಿಸುಗುಟ್ಟಿದ ಅನುಭವ. ಗಾಳಿ ಮೂಲಕ ಮಾತಾಡಿದ ಹಾಗೆ; ಹಕ್ಕಿಗಳ ಮೂಲಕ ಮಿಡಿದ ಹಾಗೆ. ದೂರ್ದಲ್ಲಿ ನೋಡಿದ್ರೆ ಸಮಾಧಿಗಳು ಆಗ ನಾನು ಒಬ್ನೇ ಅಂದ್ಕೊತೀನಿ – ಅಯ್ಯೋ ನಿಮ್ ಮನೆ ಕಾಯ್ ಹೋಗ, ಸುಮ್ನೆ ಯಾಕ್ ಪಿಸುಗುಡ್ತೀರಿ? ಗಾಳೀಲ್ ಯಾಕೆ ತೇಲ್ತೀರಿ? ರೂಪುಗಳಾಗ್ ಬನ್ರಪ್ಪ ರೂಪುಗಳಾಗ್ ಬನ್ರಿ ಅಂದರೆ ಒಂದ್ ರೂಪಾನೂ ಇಲ್ಲ; ಬರೀ ಪಿಸುಗೊಡೊ ಸದ್ದು! ಸಮಾಧಿ! ಆಗ ನಂಗೆ ಸಂಕಟ ತಡ್ಕಳಾಕಾಗಲ್ಲ ಒಬ್ನೇ ಕೂತ್ ಅತ್ಬಿಡ್ತೇನೆ.
ರಾಜಕುಮಾರ್ ಅವರ ಈ ಮಾತುಗಳಲ್ಲಿ ಕವಿತೆಯೊಂದರ ರೂಪಕ ಶಕ್ತಿಯಿದೆ. ಇಲ್ಲಿ ಕಾಡಿಸುವ, ತಳಮಳಿಸುವ ಮನಸ್ಸು ಬೇರಾವುದೂ ಅಲ್ಲ – ಮುತ್ತುರಾಜ್! ಮಹಾ ಮಾನವ ಮುತ್ತುರಾಜ್!
೪. ವೀರಪ್ಪನ್ ವಶದಲ್ಲಿದ್ದಾಗ ರಾಜಕುಮಾರ್ ಅವರು ಹಾಗಿರಬೇಕಿತ್ತು, ಹೀಗಿರಬೇಕಿತ್ತು, ವೀರಾವೇಶದ ಮಾತಾಡಬೇಕಿತ್ತು – ಎಂದೆಲ್ಲ ಮಾತಾಡಿ ಕೊಂಡವರುಂಟು. ಸುತ್ತ ನಿಂತ ಬಂದೂಕು ಧಾರಿಗಳ ನಡುವೆ ಟೇಪ್ ಮಾಡಿಕೊಂಡ ಮಾತುಗಳಷ್ಟೇ ರಾಜಕುಮಾರ್ ಅವರ ಮಾತುಗಳಾಗಿರಲಿಲ್ಲ. ಅವರೇ ಹೇಳಿದಂತೆ ತಮ್ಮನ್ನು ಹೊರತಾಗಿ ಎಲ್ಲರನ್ನು ಬಿಡಬೇಕೆಂದು ವೀರಪ್ಪನ್ ಬಳಿ ಒತ್ತಾಯಿಸಿದ್ದರು. ನನ್ನ ಬೇಕಾದ್ರೆ ಇಲ್ಲೇ ಇಟ್ಕೊ, ನನ್ನನ್ನು ಏನಾದ್ರೂ ಮಾಡು. ಆದರೆ ನನ್ನನ್ನು ನಂಬಿದ ಇವರನ್ ಬಿಟ್ಟು ಬಿಡು. ಹಾಗೇ ಕನ್ನಡಿಗರಿಗೆ ಧಕ್ಕೆ ಉಂಟುಮಾಡೋ ಷರತ್ತು ಹಾಕ್ಬೇಡ. ಅದರ ಬದಲು ನನ್ನನ್ನು ಏನಾದ್ರು ಮಾಡು. ಕರ್ನಾಟಕದಲ್ಲಿ ಕನ್ನಡಿಗರು ತಮಿಳರು ಘರ್ಷಣೆಗೆ ಇಳ್ಯೊ ಹಾಗ್ ಮಾಡ್ ಬೇಡ. ನನ್ನ ಪ್ರಾಣ ಹೋದ್ರು ಜನಗಳ ಪ್ರಾಣ ಹೋಗ್ಬಾರ್ದು ಅನ್ನೋದು ನನ್ನ ನೀತಿ – ಡಾ. ರಾಜ್ ವೀರಪ್ಪನ್ಗೆ ಹೇಳಿದ ಮಾತುಗಳಿವು. ನನ್ನಂಥ ಕೆಲವರಲ್ಲಿ ಈ ವಿಷಯವನ್ನು ಅವರು ಹಂಚಿಕೊಂಡಿದ್ದರು. ಅವರ ಈ ಮಾತುಗಳು ಮನುಷ್ಯ ಪ್ರೀತಿಯ ಪ್ರತೀಕ.
೫. ವೀರಪ್ಪನ್ ಅಪಹರಣ ಮಾಡಿದಾಗ ೧೦೮ ದಿನಗಳ ಕಾಲ ಕಾಡುವಾಸ. ದಿನವೂ ಕಾಲ್ನಡಿಗೆ. ಮೊದಲೇ ಇದ್ದ ಮಂಡಿನೋವು ಹೆಚ್ಚಾಯಿತು. ಕಾಡಿನಿಂದ ಬಂದ ಮೇಲೆ ಕೆಲ ಕಾಲಾನಂತರ ಮಂಡಿ ಮತ್ತು ಸೊಂಟದ ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಆದರೂ ಪೂರ್ಣಗೊಂಡಿರಲಿಲ್ಲ. ಒಂದು ಸಾರಿ ರಾಜಕುಮಾರ್ ಅವರು ನನ್ನೊಂದಿಗೆ ಮಾತನಾಡುತ್ತ ಹೇಳಿದರು ಆಪರೇಷನ್ ಮಾಡಿಸ್ದೆ ಇದ್ದಿದ್ರೆ ಏನಾಗ್ತಿತ್ತು ಸಾರ್. ನೋವು ಇರ್ತಾ ಇತ್ತು, ನಾವು, ಮನುಷ್ಯರು, ನೋವಿನ ಜೊತೆ ಬದುಕೋದ್ ಕಲೀಬೇಕು. ನೋವಿನ ಜೊತೆ ಸ್ನೇಹ ಬೆಳೆಸಬೇಕು; ವಿಶ್ವಾಸ ಬೆಳೆಸಬೇಕು, ಇಬ್ಬರೂ ವಿಶ್ವಾಸದಿಂದ ಜೊತೇಲ್ ಬಾಳಬೇಕು. ಅಷ್ಟೆ.
ದೈಹಿಕ ನೋವುಗಳನ್ನು ಕುರಿತ ಈ ಮಾತುಗಳಲ್ಲಿ ಎಂಥ ರೂಪಕ ಶಕ್ತಿಯಿದೆ! ಇಂತಹ ನೂರಾರು ಪ್ರಸಂಗಗಳ ಮೂಲಕ ರಾಜಕುಮಾರ್ ಅವರ ವ್ಯಕ್ತಿತ್ವವನ್ನು ನಿರೂಪಿಸುತ್ತ ಹೋಗಬಹುದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ – ನನಗೆ ತುಂಬಾ ಮಹತ್ವಪೂರ್ಣವೆನಿಸಿದ್ದು – ರಾಜಕುಮಾರ್ ಎಂಬ ರೂಪದೊಳಗಿನ ರೂಪಕ ಮತ್ತು ಮೈಯ್ಯೊಳಗಿನ ಮನಸ್ಸು – ಮುತ್ತುರಾಜ್!
ಮುತ್ತುರಾಜ್ ಮಣ್ಣಾಗಿದ್ದಾರೆ; ಆದರೆ ರೂಪಕಗಳ ಮೂಲಕ ಮಾತಾಡುತ್ತಲೇ ಇರುತ್ತಾರೆ.