ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ರಾಜು ತಾಳೀಕೋಟೆ ಬಗ್ಗೆ ಕನ್ನಡ ಪುಸ್ತಕ ಪ್ರಕಾಶಕ ಸೃಷ್ಟಿ ನಾಗೇಶ್ ತಮಗನ್ನಿಸಿದ ಅಭಿಪ್ರಾಯಗಳನ್ನು ಇಲ್ಲಿ ಬರೆದಿದ್ದಾರೆ. ಓದಿ…
ಖಾಸಗಿ ವಾಹಿನಿಯೊಂದರಲ್ಲಿ ಬಂದ ಒಂದು ಸಂದರ್ಶನ ನೋಡುತ್ತಿದ್ದೆ. ಅದು ಈಗಿನದಲ್ಲ. ಪ್ರಸಾರವಾಗಿ ಬಹುಶಃ ಮೂರ್ನಾಲ್ಕು ವರ್ಷ ಆಗಿರಬೇಕು. ರಂಗ ಕಲಾವಿದ ರಾಜು ತಾಳಿಕೋಟಿ ಆಗಷ್ಟೇ ಸಿನಿಮಾ ರಂಗಕ್ಕೆ ಕಾಲಿಟ್ಟ ಸಂದರ್ಭ. ಯೋಗರಾಜ್ ಭಟ್ಟರ ’ಮನಸಾರೆ ’ ಸಿನಿಮಾಕ್ಕೆ ಬಣ್ಣ ಹಚ್ಚಿ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿದ್ದರು. ಅಷ್ಟು ದಿನ, ವರ್ಷ ಅವರು ಬಣ್ಣ ಹಚ್ಚಿ ನಾಟಕ ಮಾಡಿದವರು. ನಟನೆ ಜತೆಗೆ ವಿಶಿಷ್ಟ ಕಂಠ, ಉತ್ತರ ಕರ್ನಾಟಕದ ಜವಾರಿ ಮಾತು ಅವರನ್ನು ರಂಗಭೂಮಿಯಲ್ಲಿ ಒಬ್ಬ ಅಪರೂಪದ ಕಲಾವಿದನನ್ನಾಗಿ ಮಾಡಿತ್ತು. ಉತ್ತರ ಕರ್ನಾಟಕಕ್ಕೆ ಅವರು ಚಿರಪರಿಚಿತ.ಅದರೆ ಉಳಿದ ಭಾಗಕ್ಕೆ ಅವರ ಧ್ವನಿಯಷ್ಟೇ ಜನಪ್ರಿಯತೆ ಪಡೆದಿತ್ತು. ‘ಕಲಿಯುಗದ ಕುಡುಕ’ ಎನ್ನುವ ನಾಟಕದ ಆಡಿಯೋ ಸೀಡಿ ಮನೆಮಾತಾಗಿತ್ತು. ಒಟ್ಟಾರೆ ಅವರೊಬ್ಬ ಪಾಪ್ಯುಲರ್ ವ್ಯಕ್ತಿ ಆಗಿದ್ದರು. ಅದು ಹೇಗೋ ಯೋಗರಾಜ್ ಭಟ್ಟರಿಗೆ ಗೊತ್ತಾಗಿ ಸಿನಿಮಾಕ್ಕೆ ಕರೆದುಕೊಂಡು ಬಂದಿದ್ದು ರಾಜು ತಾಳಿಕೋಟೆ ಅವರ ಬದುಕಿನ ಇನ್ನೊಂದು ಮಹತ್ವದ ತಿರುವು. ಹಾಗಾಗಿಯೇ ರಾಜು ತಾಳಿಕೋಟೆ ಸಿನಿಮನೆಯ ಜಗುಲಿಯಲ್ಲಿ ನಿಂತು ಮಾಧ್ಯಮದವರನ್ನು ಆಕರ್ಷಿಸಿದ್ದರು. ಅದೇ ಕಾರಣಕ್ಕೆ ಬಂದ ಸಂದರ್ಶನವದು. ರಾಜು ತಾಳಿಕೋಟೆ ಮಾತನಾಡುತ್ತಿದ್ದರು. ಬರೀ ಮಾತಲ್ಲ ಅದು, ಮನದಾಳದ ಮಾತು. ಮಾತು ಎನ್ನುವುದಕ್ಕಿಂತ ಕಲ್ಲುಮುಳ್ಳಿನ ಹಾದಿಯ ನೆನಪು ಅದು. ‘ಬಿಜಾಪುರ ತಾಲೂಕು ಸಿಂದಗಿ ತಾಲೂಕಿನಚಿಕ್ಕ ಸಿಂದಗಿ ಗ್ರಾಮ. ಬಾಳ ಕಮ್ಮಿ ವಯಸ್ಸಿನಲ್ಲಿ ಅಮ್ಮನನ್ನು ಕಳೆದುಕೊಂಡೆ. ನಾಲ್ಕನೇ ಕ್ಲಾಸಿಗೇ ಶಾಲೆ ಬಿಟ್ಟೆ. ರೋಡಿನಲ್ಲಿ ಚಕ್ಕಲಿ ಮಾರಿದೆ. ಹೊಟೇಲ್ನಲ್ಲಿ ಕ್ಲಿನರ್ ಆದೆ. ನಾಟಕ ಕಂಪನಿಯಲ್ಲಿ ಗೇಟ್ ಕೀಪರ್ ಆದೆ. ಬದುಕಿಗೆ ಇನ್ನೇನೋಕೆಲಸ ಮಾಡಿದೆ. ಕೊನೆಗೆ ಬಣ್ಣ ಹಚ್ಚಿ ನಟನಾದೆ….:’ ಮಾತು ಮುಂದುವರೆದಿತ್ತು.
ಕೇಳುಗರ ಮುಂದೆ ಅವರ ಘೋರ ಬದುಕಿನ ಒಂದು ಕತೆ ಸುಮ್ಮನೆ ತೆರೆದುಕೊಂಡು ಕಾಡಿಸುತ್ತಾ ಬಂತು. ಅವರ ಮಾತು ಕೇಳುತ್ತಾ ನಾನೂ ಭಾವುಕನಾದೆ. ಅಲ್ಲಿಂದ ರಾಜು ತಾಳಿಕೋಟೆ ನನಗೂ ಗೊತ್ತು ಗೊತ್ತಿಲ್ಲದೆ ಕುತೂಹಲದ ವ್ಯಕ್ತಿ ಆಗಿದ್ದರು. ಆಗಾಗ ಯುಟ್ಯೂಬ್ ನಲ್ಲಿ ಅವರು ಅಭಿನಯಿಸಿದ ಸಿನಿಮಾ, ಇಲ್ಲವೇ ನಾಟಕದ ಹಾಸ್ಯ ಪ್ರಸಂಗಗಳ ವಿಡಿಯೋ ತುಣುಕು ನೋಡಿ ಖುಷಿ ಪಡುತ್ತಿದ್ದೆ. ಜತೆಗೆ ಅವರ ‘ಸಾಂಸಾರಿಕ’ ಕಥನ ಕೇಳಿ ಅಚ್ಚರಿ ಪಟ್ಟಿದ್ದು ಇತ್ತು. ಇಂತಹ ವ್ಯಕ್ತಿ ಬಿಗ್ ಬಾಸ್ ಸೀಜನ್ ೭ ಕ್ಕೆ ಸ್ಪರ್ಧಿ ಆಗಿ ಆ ಮನ ಪವ್ರೇಶಿಸಿದಾಗ ಶಹಬ್ಬಾಸ್… ಎಂದು ಖುಷಿಪಟ್ಟವನು ನಾನು. ಅವರ ಹಿನ್ನೆಲೆ ನೋಡಿ, ವಯಸ್ಸು ಲೆಕ್ಕಹಾಕಿ, ಇದೆಲ್ಲ ಅಷ್ಟು ವಯಸ್ಸಿನ ಹುಡುಗರ ನಡುವೆ ಸ್ಪರ್ಧಿ ಆಗಲು ಸಾಧ್ಯವೇ ಎಂದುಕೊಂಡವರಿಗೇನು ಕಮ್ಮಿ ಇರಲಿಲ್ಲ. ಬಿಗ್ ಬಾಸ್ ಆಯ್ಕೆ ಸಮಿತಿ ಅವರನ್ನಾಕೆ ಆಯ್ಕೆ ಮಾಡಿಕೊಂಡಿತು ಅಂತಲೂ ಕೆಲವರು ಮಾತನಾಡಿಕೊಂಡಿದ್ದರು. ಆದರೆ ಅವರ ಆಯ್ಕೆಗೂ ಹಲವು ಕಾರಣಗಳಿದ್ದವು. ಅವರನ್ನೇನು ಸುಮನ್ನೆ ಅಲ್ಲಿಗೆ ಕರೆದುಕೊಂಡು ಬಂದಿರಲಿಲ್ಲ. ಮೊದಲಿಗೆ ಅವರ ಪ್ರತಿಭೆ, ಬುದ್ದಿವಂತಿಕೆ, ಜತೆಗೆ ಜನಪ್ರಿಯತೆ ಅದೆಲ್ಲದ್ದಕ್ಕೂ ಕಾರಣವಾಗಿತ್ತು. ವಾಸ್ತವ ಹಾಗಿದ್ದರೂ, ಇಲ್ಲೇಕೆ ಅವರು ಅಂತ ಮಾತನಾಡಿಕೊಂಡವರು ತಮ್ಮೊಳಗೆ ತಾವು ಒಮ್ಮೆ ಆತ್ಮವಲೋಕನ ಮಾಡಿಕೊಳ್ಳುವ ಹಾಗೆ ಅವರು ಬಿಗ್ ಬಾಸ್ ಮನೆಯಲ್ಲಿ ಆಟ ಶುರು ಮಾಡಿದ್ದರು. ಅವರನ್ನಲ್ಲಿ ನೋಡಿದಾಗೆಲ್ಲ ಸೋಜಿಗ. ಕಿರಿಯರು ನಾಚುವಷ್ಟು ಚೈತನ್ಯ ಶೀಲರಾಗಿದ್ದರು.
ಎಲ್ಲಾ ಟಾಸ್ಕ್ ಗಳನ್ನು ಸಮರ್ಥವಾಗಿಯೇ ನಿಭಾಯಿಸುತ್ತಾ ವೀಕ್ಷಕರ ಪ್ರೀತಿ ಗಳಿಸಿಕೊಂಡಿದ್ದರು. ಅದೆಲ್ಕಕ್ಕಿಂತ ಮುಖ್ಯವಾಗಿ ಆ ಮನೆಯ ಹಿರಿಯ ಅವರೇ. ಅಲ್ಲಿದ್ದವರೆಲ್ಲ ಅವರನ್ನು ಎಷ್ಟು ಹಚ್ಚಿಕೊಡಿದ್ದರು ಎನ್ನುವುದಕ್ಕೆ ಅವರು ಆ ಮನೆಯಿಂದ ಹೊರ ಬರುವಾಗ ಕಂಡ ದೃಶ್ಯವೇ ಸಾಕ್ಷಿ. ರಾಜುತಾಳಿಕೋಟೆ ಒಬ್ಬ ಕಲಾವಿದ. ಅದರಲ್ಲೂ ರಂಗಭೂಮಿ ಅವರ ಕರ್ಮಭೂಮಿ. ಜತೆಗೆ ಗಾಢವಾದ ಬಡತನದ. ಬೇಗೆಯಲ್ಲಿಬೆಂದುಬಂದವರು. ಕಷ್ಟಗಳನ್ನು ಹೆಗಲೇರಿಸಿಕೊಂಡು ಸವಾಲು ಗೆದ್ದವರು. ಅವರೀಗ ಬಿಗ್ ಬಾಸ್ ನಂತಹ ಒಂದು ರಿಯಾಲಿಟಿ ಶೋ ಸವಾಲಾಗಿದ್ದರು, ಅವರ ಒಳ್ಳೆತನ ಇಲ್ಲಿ ತನಕ ಕೈ ಹಿಡಿದತ್ತು. ಸಾತ್ವಿಕ ಸಿಟ್ಟು, ಕೋಪ ಸ್ಟೋಟಗೊಂಡರೂ ಅವುಗಳನ್ನು ಅದುಮಿಟ್ಟು ಆಟ ವಾಡುತ್ತಾ ಬಂದಿದ್ದರು. ಅವರಲ್ಲಿ ಇರಬೇಕಿತ್ತು ಎನ್ನುವ ಆಸೆ ಹಲವರಿಗಿದ್ದರೂ ಅವರೀಗ ಅಲ್ಲಿಂದ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಗೆಲ್ಲುವ ಅವರ ಕನಸು ಕನಸಾಗಿ ಉಳಿದಿದೆ. ಆದರೆ ಆ ಕಾರ್ಯಕ್ರಮದ ಮೂಲಕ ಅವರು ಇಡೀ ರಾಜ್ಯದ ಜನರ ಮನ ಗೆದಿದ್ದಾರೆನ್ನುವ ಆತ್ಮ ತೃಪ್ತಿಯಲ್ಲಿ ಬಿಗ್ ಬಾಸ್ ವೇದಿಕೆಯಿಂದ ಕೆಳಗಿಳಿದ ಸನ್ನಿವೇಶ ನೋಡಿದಾಗ ಬಿಗ್ ಬಾಸ್ ನಲ್ಲಿ ಇಂತಹ ಸಭ್ಯ ವ್ಯಕ್ತಿಗೂ ಒಂದು ಗೆಲುವು ಸಿಗಬೇಕಿತ್ತು ಎನಿಸಿದ್ದು ಸುಳ್ಳಲ್ಲ…
No Comment! Be the first one.