ಸಂಗೀತ ನಿರ್ದೇಶಕ, ಚಿತ್ರಸಾಹಿತಿ, ನಿರ್ದೇಶಕ, ನಟ… ಹೀಗೆ ಸಿನಿಮಾ ರಂಗದ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿ ಹೆಸರು ಮಾಡಿರುವವರು ವಿ. ಮನೋಹರ್. ಸಂಗೀತ ನಿರ್ದೇಶಕರಾಗಿ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿರುವ ಮನೋಹರ್ ರಣಹೇಡಿ ಸಿನಿಮಾದಲ್ಲಿ ಸಂಗೀತ ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿದ್ದಾರೆ. ಈ ಕುರಿತು ಸಿನಿಬಜ಼್ ನಡೆಸಿದ ಸಂದರ್ಶನದಲ್ಲಿ ಮನೋಹರ್ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ…
ನಿರೂಪಣೆ: ಸುಮ .ಜಿ
ಜನುಮದ ಜೋಡಿ ಅಂತಹ ಸಿನಿಮಾಕ್ಕೆ ಸಂಗೀತ ನೀಡಿ ಗೆದ್ದವರು ನೀವು. ಇದಾದ ನಂತರ ಈ ಸಿನಿಮಾಕ್ಕೆ ಸಂಗೀತ ನೀಡಿದ ಅನುಭವದ ಬಗ್ಗೆ ತಿಳಿಸಿ : ಜನುಮದ ಜೋಡಿ ಚಿತ್ರದ ನಂತರ ನನಗೆ ಈ ಹಳ್ಳಿ ಸೊಗಡಿನ ಸಿನಿಮಾಗಳು ಸಿಕ್ಕಿರಲಿಲ್ಲ. ಕೆಲವು ಸಿಕ್ಕಿದರೂ ಸಹ ಪೂರ್ತಿ ಹಳ್ಳಿ ಸೊಗಡಿನಂತಹ ಚಿತ್ರಗಳು ಅವಾಗಿರಲಿಲ್ಲ. ಈ ಚಿತ್ರದಲ್ಲಿ ಮನು ಶೆಟ್ಟಿಹಳ್ಳಿ ರವರು ಕಥೆ ಹೇಳಿದಾಗ, ಇದರಲ್ಲಿ ಒಂದು ಅವಕಾಶ ಇದೆ ಅನ್ನಿಸಿತು. ಅವರ ಸಾಹಿತ್ಯ ನೋಡಿದಾಗ ಇನ್ನೂ ಖುಷಿಯಾಯಿತು. ಈ ಸಾಹಿತ್ಯವನ್ನು ನೋಡಿದ ತಕ್ಷಣ ತಾನಾಗೇ ಟ್ಯೂನ್ ಮೂಡಿಬಂತು. ಕೆಲವೊಮ್ಮ ಈ ಸಾಹಿತ್ಯವೇ ಅದಕ್ಕೆ ಬೇಕಾದ ಟ್ಯೂನ್ ಅನ್ನು ಅದೇ ತೆಗೆದುಕೊಳ್ಳುತ್ತದೆ. ಅದೇ ರೀತಿ ಇಲ್ಲಿ ಮನು ಅವರು ಬರೆದ ಸಾಹಿತ್ಯವೇ ಸ್ಫೂರ್ತಿಯಾಯಿತು.
ಈ ಚಿತ್ರದಲ್ಲಿ ಸಂಗೀತ ನಿರ್ದೇಶಕರಾಗಿಯೂ ಅಲ್ಲದೆ ನಟನೆ ಸಹ ಮಾಡಿದ್ದೀರಿ, ಅದರ ಬಗ್ಗೆ ತಿಳಿಸಿ : ನನಗೆ ಒಳ್ಳೆ ಪಾತ್ರ ತುಂಬ ಇಷ್ಟವಾದ ಪಾತ್ರ ಸಹ ನಿರ್ದೇಶಕ ಮನು ಅವರು ನೀಡಿದ್ದಾರೆ. ಬಹಳ ಇನ್ವಾಲ್ವ್ ಆಗಿ ಪಾತ್ರ ಮಾಡಿದ್ದೇನೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಯಾರು ಯಾವ ರೀತಿ ಇರುತ್ತಾರೆ ಅನ್ನೋದನ್ನ ನಾನು ಅಲ್ಲಿ ತೋರಿಸಿದ್ದೇನೆ.
ನಿರ್ದೇಶಕ ಮನು ಅವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ : ಮನು ಅವರು ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ಒಬ್ಬ ನುರಿತ ತಂತ್ರಜ್ಞನ ರೀತಿ ಕೆಲಸ ಮಾಡಿದ್ದಾರೆ. ಸಿನಿಮಾ ನೋಡಿದ ಮೇಲೆ ಯಾರಿಗೇ ಆದರೂ ಅವರ ಕೆಲಸ ಅವರ ಅನುಭವ ತಿಳಿಯುತ್ತದೆ. ಸಿನಿಮಾಗೋಸ್ಕರ ಅವರನ್ನ ತೊಡಗಿಸಿಕೊಂಡು ಸಿನಿಮಾವನ್ನೇ ಅವರ ಉಸಿರನ್ನಾಗಿ ಮಾಡಿಕೊಂಡಿರುವ ಕೆಲವೇ ಕೆಲವು ನಿರ್ದೇಶಕರಲ್ಲಿ ಮನು ಕೂಡಾ ಒಬ್ಬರು.
ಈ ಚಿತ್ರದಲ್ಲಿ ಸಂಗೀತದ ವಿಶೇಷತೆಗಳೇನು? : ಪ್ರತಿ ಚಿತ್ರಕ್ಕೂ ನಾವು ಆಸಕ್ತಿ ವಹಿಸಿ ಕೆಲಸ ಮಾಡುತ್ತೇವೆ. ಹಿಂದಿನ ಚಿತ್ರಗಳಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳೋಕೆ ಒಂದೊಳ್ಳೆ ಅವಕಾಶ. ಹಾಗಾಗಿ ಇದರಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ವಿಶೇಷತೆ ಅನ್ನೋದಕ್ಕಿಂತ ಈ ಕಥೆಗೆ ಸೂಕ್ತವಾದ ಸಂಗೀತ ಕೊಡೋದಕ್ಕೆ ಪ್ರಯತ್ನ ಮಾಡಿದ್ದೇನೆ.
ಈ ಚಿತ್ರವನ್ನು ಜನ ಯಾವ ಕಾರಣಕ್ಕಾಗಿ ನೋಡಬೇಕು? : ರೈತರ ಆತ್ಮಹತ್ಯೆ, ರೈತರ ಸಂಕಷ್ಟಗಳ ಕುರಿತು ದಿನಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ನಾವು ತಿನ್ನುವ ಪ್ರತಿ ಆಹಾರವೂ ರೈತ ಬೆಳೆದಿರುವಂತಹದ್ದು. ರೈತರ ಸಮಸ್ಯೆಗಳನ್ನ ಮನಮುಟ್ಟುವಂತೆ ಮನು ಅವರು ಈ ಚಿತ್ರದಲ್ಲಿ ತೋರಿಸಿದ್ದಾರೆ. ಅಷ್ಟೇ ಯಾಕೆ ನಾವು ತೊಡುವ ಉಡುಪು ಇವೆಯಲ್ಲಾ ಹತ್ತಿಯಿಂದ ಮಾಡಿರುವಂತದ್ದು, ಈ ಹತ್ತಿಯನ್ನು ಬೆಳೆದಿರುವವರೂ ರೈತರೆ. ನಾವು ಉಪಯೋಗಿಸುವಂತಹ ದಿನೋಪಯೋಗಿ ವಸ್ತುಗಳನ್ನು ಬೆಳೆಯುವುದು ರೈತ. ಹಾಗಾಗಿ ರೈತ ಇಲ್ಲದೆ ಏನೇನೂ ಸಾಧ್ಯವಿಲ್ಲ. ರೈತರ ಬದುಕನ್ನು ಕಣ್ಮುಂದೆ ತಂದುಕೊಳ್ಳುವ ಕಾರಣಕ್ಕಾದರೂ ಈ ಸಿನಿಮಾವನ್ನು ಜನ ನೋಡಲೇಬೇಕು.
ನಿಮಗೆ ಈ ಸಿನಿಮಾದಲ್ಲಿ ಗಮನ ಸೆಳೆದ ಅಂಶಗಳು ಯಾವುವು? : ಮೊದಲನೆಯದಾಗಿ, ಮಂಡ್ಯ ಸೊಗಡಿನ ಭಾಷೆ, ಮತ್ತೊಂದು ಸಹಜತೆ. ಈ ಚಿತ್ರದಲ್ಲಿ ಸಂಪೂರ್ಣವಾಗಿ ಎಷ್ಟು ಸಾಧ್ಯವೋ ಅಷ್ಟು ಸಹಜವಾಗಿ ಜನಜೀವನವನ್ನ ತೆರೆದಿಟ್ಟಿದ್ದಾರೆ. ಕರ್ಣಕುಮಾರ್, ಐಶ್ವರ್ಯ ರಾವ್ಹಾಗೂ ಆ ಊರಿನ ಜನ ಬಹಳ ನ್ಯಾಚುರಲ್ ಆಗಿ ನಟಿಸಿದ್ದಾರೆ. ಇದು ನನಗೆ ಬಹಳ ಗಮನ ಸೆಳೆದ ಅಂಶಗಳು. ಸೃಷ್ಟಿ ಎಂಟರ್ ಪ್ರೈಸಸ್ ಬ್ಯಾನರ್ನಲ್ಲಿ ಸುರೇಶ್ ಅವರು ರಣಹೇಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಾಯಕ ನಟನಾಗಿ ಕರ್ಣಕುಮಾರ್, ನಾಯಕ ನಟಿಯಾಗಿಐಶ್ವರ್ಯ ರಾವ್ ಅಭಿನಯಿಸಿದ್ದಾರೆ. ಈ ಚಿತ್ರ ನಿಮಗೆ ನಿರಾಶೆಗೊಳಿಸುವುದಿಲ್ಲ ಎಂಬ ಭಾವನೆಯಿದೆ. ಇದು ತುಂಬಾ ಒಳ್ಳೆಯ ಚಿತ್ರ ಎಂದು ಸಂಗೀತ ನಿರ್ದೇಶನ ಮಾಡುವ ಸಂದರ್ಭದಲ್ಲಿ ಅನ್ನಿಸಿದೆ, ನಿಮಗೂ ಖಂಡಿತಾ ಇಷ್ಟವಾಗುತ್ತದೆ ಎಲ್ಲರೂ ಸಿನಿಮಾ ನೋಡಿ.
No Comment! Be the first one.