ರಾವಣ ಎನ್ನುವ ವಂಚಕನ ಬಗ್ಗೆ ಇತ್ತೀಚೆಗೆ ತಾನೆ ಸಿನಿಬಜ್ ಸವಿವರವಾದ ಮಾಹಿತಿಯನ್ನು ಪ್ರಕಟಿಸಿತ್ತು. ಈ ವರದಿಗೆ ಸಂಬಂಧಪಟ್ಟಂತೆ ಸಾಕಷ್ಟು ಪ್ರತಿಕ್ರಿಯೆಗಳೂ ಬರುತ್ತಿವೆ. ಸಿನಿಮಾ ನಿರ್ಮಾಪಕ, ನಿರ್ದೇಶಕರು ಕರೆ ಮಾಡಿ `ನಮಗೂ ವಂಚಿಸಿದ್ದಾನೆ, `ನಾವೂ ರಾವಣನಿಂದ ವಂಚನೆಗೊಳಗಾದವರು’ ಎಂಬಿತ್ಯಾದಿಯಾಗಿ ಹೇಳಿಕೊಳ್ಳುತ್ತಿದ್ದಾರೆ. ವಿಚಿತ್ರವೆಂದರೆ ಖುದ್ದು ರಾವಣ ಕೂಡಾ ಕರೆ ಮಾಡಿ `ನನ್ನ ಬಗ್ಗೆ ಏನೇನೋ ಬರೆದುಬಿಟ್ಟಿದ್ದೀರ. ಎಲ್ಲಿದ್ದೀರಾ ಹೇಳಿ ನಮ್ಮವರನ್ನೆಲ್ಲಾ ಕರೆದುಕೊಂಡು ಬರ್ತೀನಿ…’ ಎಂದು ಬೆದರಿಸೋ ರೇಂಜಿನಲ್ಲಿ ಮಾತಾಡಿದ್ದಾನೆ. ಸತ್ಯವಂತನ ತಲೆಮೇಲೆ ಹೊಡೆದಂತೆ ಮಾತಾಡುವ ರಾವಣನಂಥವರಿಗೆ ಮಾತೇ ಬಂಡವಾಳ. ನಾಲಗೆಯನ್ನು ಎಕ್ಕಡದಂತೆ ಬಳಸುವ ರಾವಣ ತನ್ನ ಅಡ್ಡಕಸುಬಿ ಕೆಲಸಗಳನ್ನೆಲ್ಲಾ ಮಾತಲ್ಲೇ ಮರೆಮಾಚುವ ಪ್ರಳಯಾಂತಕ. ಅದು ಈ ವರೆಗೂ ಅವನನ್ನು ಸೇಫು ಮಾಡಿರಬಹುದು. ಆದರೆ ಈತನ ಪಾಪದ ಕೊಡ ತುಂಬಿದೆ. ಇನ್ನು ಈತ ಯಾವ ಸೋಗಿನಲ್ಲಿ ಹೋದರೂ ಕನ್ನಡ ಚಿತ್ರರಂಗದವರು ಯಾಮಾರಲಾರರು.
ಇಷ್ಟಕ್ಕೂ ರಾವಣನ ಬಗ್ಗೆ ಬರೆಯಲು ದಂಡಿ ದಂಡಿ ಮಾಹಿತಿಗಳಿವೆ. ನಿರ್ಮಾಪಕ, ಸಿನಿಮಾಗಳ ವ್ಯಾಪಾರ ವಹಿವಾಟು ನಡೆಸುವ ಮಹೇಶ್ ಕೊಠಾರಿಯಂಥಾ ಘಟಾನುಘಟಿಗೇ ಈತ ಯಾವೆಲ್ಲಾ ರೀತಿ ವಂಚಿಸಿದ್ದಾನೆ ಅನ್ನೋದರಿಂದ ಹಿಡಿದು ಉತ್ತರಹಳ್ಳಿಯ ಪ್ರಾಪರ್ಟಿಯೊಂದಕ್ಕೆ ಅನಧಿಕೃತ ನಕ್ಷೆ, ಡಾಕ್ಯುಮೆಂಟು ತಯಾರಿಸಿ ಸಿಗೇಬಿದ್ದ ಕತೆಗಳೂ ಸೇರಿದಂತೆ ಲಾಟುಲಾಟು ಸರಕಿವೆ. ಹೀಗೆ ಮಾಡೋದನ್ನೆಲ್ಲಾ ಮಾಡಿ ಮರ್ಯಾದಾ ಪುರುಷೋತ್ತಮನಂತೆ ಮಾತಾಡೋದು ಪಕ್ಕಾ ಪ್ರೊಫೆಷನಲ್ ಫ್ರಾಡುಗಳಿಂದ ಮಾತ್ರ ಸಾಧ್ಯ. ರಾವಣ ಅದನ್ನು ಸಾಧಿಸಿದ್ದಾನೆ!
ತನ್ನ ದುಷ್ಟಪ್ರವರವನ್ನು ಬರೆದ ಪತ್ರಕರ್ತರಿಗೇ ಫೋನು ಮಾಡಿ `ನಮ್ಮವರನ್ನೆಲ್ಲಾ ಕರ್ಕೊಂಡು ಬರ್ತೀನಿ’ ಅನ್ನುತ್ತಾನೆಂದರೆ ಈ ರಂಕಲು ರಾವಣನ ತಿಮಿರು ಎಷ್ಟಿರಬೇಡ? ಅಷ್ಟಿದ್ದರೆ ಚಲನಚಿತ್ರ ವಾಣಿಜ್ಯಮಂಡಳಿಗೆ ಬರಲಿ ಅಲ್ಲಿರುವ ಹಿರಿಯರ ಮುಂದೆಯೇ ತನ್ನ ನೋವನ್ನು ತೋಡಿಕೊಳ್ಳಲಿ, ಅಥವಾ ಸಿನಿಮಾ ಪತ್ರಕರ್ತರು, ಪ್ರಚಾರಕರ್ತರು ಒಟ್ಟಿಗೇ ಇದ್ದ ಸಂದರ್ಭದಲ್ಲೊಮ್ಮೆ ತನ್ನೊಟ್ಟಿಗೆ ಇರೋರನ್ನೆಲ್ಲಾ ಕರೆದುಕೊಂಡುಬಂದು ಬಲ ಪ್ರದರ್ಶನಕ್ಕೆ ಮುಂದಾಗಲಿ. ಆಗ ಗೊತ್ತಾಗುತ್ತದೆ ಮಾಧ್ಯಮದ ಶಕ್ತಿ ಏನೆಂಬುದು. ಅದನ್ನೆಲ್ಲಾ ಬಿಟ್ಟು, ಸುಮ್ಮನೇ ಹೇಡಿಯಂತೆ ಫೋನು ಮಾಡಿ ಬಿಲ್ಡಪ್ ಕೊಡೋ ಕಸುಬು ಬೇಡ. ಇವೆಲ್ಲದರ ನಡುವೆಯೂ ರಾವಣ ಇನ್ನೂ ಆಟ ಕಟ್ಟೋದನ್ನೇ ಮುಂದುವರೆಸಿದರೆ ಗಾಂಧೀನಗರದಲ್ಲಿ ಈತನಿಂದ ಮೋಸಹೋದವರೆಲ್ಲಾ ಸೇರಿ ಗೂಸಾ ಕೊಡೋದು ಗ್ಯಾರೆಂಟಿ!
No Comment! Be the first one.