ಕಾಮಿಡಿ ನಟ, ಸಂಗೀತ ನಿರ್ದೇಶಕ ಸಾಧುಕೋಕಿಲ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿದೆ. ತಮ್ಮ ವಿರುದ್ಧ ಹೊರಡಿಸಿರುವ ಸಮನ್ಸ್ ರದ್ದು ಮಾಡುವಂತೆ ಸಾಧು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಅವರು ನೋಟಿಸ್ ಜಾರಿಗೊಳಿಸಲು ಆದೇಶಿಸಿದರು. ಒಂದು ವಾರದ ಒಳಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ನೀಡಿ, ಸಾಧು ಕೋಕಿಲ ವಿರುದ್ಧ ಸಂಗ್ರಹಿಸಿರರುವ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರಿಪರಿಸುವಂತೆ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.
೨೦೧೭ರಲ್ಲಿ ಸಾಧು ಕೋಕಿಲ ವಿರುದ್ಧ ಮೈಸೂರಿನ ಸರಸ್ವತಿ ಪುರ ಪೊಲೀಸ್ ಠಾಣೆಯಲ್ಲಿ ಯುವತಿಯೊಬ್ಬರು ದೂರು ನೀಡಿದ್ದರು. ಮಸಾಜ್ ಪಾರ್ಲರ್ ಗೆ ಬಂದು ಬಲವಂತವಾಗಿ ಅತ್ಯಾಚಾರ ಮಡಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಹೈಕೋರ್ಟ್ ಸಾಧು ಅವರಿಗೆ ಸಮನ್ಸ್ ನೀಡಿತ್ತು.
ಏನಿದು ಪ್ರಕರಣ : ಎರಡು ವರ್ಷಗಳ ಹಿಂದೆ ಹೇಳಿಬಂದ ಈ ಸುದ್ದಿ ಎಂಥವರೂ ಒಂದರೆ ಕ್ಷಣ ಗಾಬರಿ ಬೀಳುವಂಥಾ ಶಾಕಿಂಗ್ ನ್ಯೂಸ್ ಆಗಿತ್ತು. ಬಹುಶಃ ಮೈಸೂರಿನ ದಿಕ್ಕಿನಿಂದ ಕೇಳಿ ಬಂದಿರೋ ಅಮಾಯಕ ಹೆಣ್ಣುಮಗಳೊಬ್ಬಳ ಆರ್ತನಾದ ಕೇವಲ ಮಸಾಜ್ ಸೆಂಟರ್ ಒಂದರ ಸೆಕ್ಸ್ ದಂಧೆಯ ಸುತ್ತಾ ಗಿರಕಿ ಹೊಡೆದಿದ್ದರೆ ಅದು ಅಲ್ಲಿಯೇ ಅಂತರ್ಧಾನ ಹೊಂದಿ ಹೋಗುತ್ತಿತ್ತೇನೋ. ಆದರೆ ಬ್ಯೂಟಿಷಿಯನ್ ಕೆಲಸ ಮಾಡಲು ಹೋಗಿ ಕಾಮ ಕೂಪಕ್ಕೆ ಬಿದ್ದ ಆ ಹೆಣ್ಣುಮಗಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದವರ ಹೆಸರು ಹೇಳಿದ್ದಾಳಲ್ಲ? ಅದರಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಕಮೇಡಿಯನ್ ಕಂ ಸಂಗೀತ ನಿರ್ದೇಶಕ ಸಾಧು ಕೋಕಿಲಾ ಹೆಸರು ಪ್ರಮುಖವಾಗಿತ್ತು!
ಮೈಸೂರಿನ ಬೋಗಾದಿ ಸರ್ಕಲ್ಲಿನಲ್ಲಿ ಮಸಾಜ್ ಪಾರ್ಲರ್ ಎಂಬ ಬೋರ್ಡು ಹಾಕಿಕೊಂಡಿರೋ ಅಡ್ಡೆಯಿಂದ ಅದು ಹೇಗೋ ತಪ್ಪಿಸಿಕೊಂಡು ಹೊರ ಬಂದಿರುವಾಕೆ ಪಾಂಡವಪುರ ಮೂಲದ ಹುಡುಗಿ. ಚಿಕ್ಕ ಪ್ರಾಯದಲ್ಲೇ ಮದುವೆಯಾಗಿ ಗಂಡನ ಕಾಟ ತಡೆಯಲಾರದೆ ಅದೂ ಇದು ಕೆಲಸ ಮಾಡಿಕೊಂಡಿದ್ದ ಆಕೆ ಕಳೆದ ತಿಂಗಳು ಈ ಕಾಮ ಕೂಪಕ್ಕೆ ಬಂದು ಬಿದ್ದಿದ್ದಳಂತೆ. ಅದು ಹೇಗೋ ನೆನ್ನೆ ಗೆಳತಿಯ ಸಹಾಯದಿಂದ ಅಲ್ಲಿಂದ ತಪ್ಪಿಸಿಕೊಂಡಿದ್ದ ಆಕೆ ತನಗಾದ ಭೀಕರ ದೌರ್ಜನ್ಯಗಳ ಬಗ್ಗೆ ಮೈಸೂರಿನ ಖ್ಯಾತ ಸಮಾಜಸೇವಾ ಸಂಸ್ಥೆಯಾದ ಒಡನಾಡಿಗೆ ದೂರು ನೀಡಿದ್ದಳು. ಆ ದೂರಿನಲ್ಲಿ ಆಕೆ ದಾಖಲಿಸಿರೋ ವಿಚಾರಗಳು ಮೈಸೂರಿನಲ್ಲಿ ಪ್ರತಿಷ್ಠಿತರ ಸೋಗಿನಲ್ಲಿರೋ ರಾಜೇಶ್ ಮತ್ತು ಇಂದ್ರಾ ದಂಪತಿಗಳ ಸೆಕ್ಸ್ ದಂಧೆಯ ಜೊತೆಗೇ ಸಾಧು ಕೋಕಿಲಾ ಅವರುಗಳ ಅಸಲಿ ಮುಖವನ್ನೂ ಅನಾವರಣಗೊಳಿಸಿತ್ತು.
ಗಂಡನ ಮನೆಯ ಕ್ವಾಟಲೆ ತಾಳಲಾರದೆ ಅಜ್ಜಿಯೊಂದಿಗೆ ಬದುಕುತ್ತಾ ಬ್ಯೂಟಿಷಿಯನ್ ವಿಭಾಗದಲ್ಲಿ ಒಂದಷ್ಟು ಪಳಗಿಕೊಂಡಿದ್ದಾಕೆ ಈ ನೊಂದ ಹುಡುಗಿ. ಆದರೆ ಆಸರೆಗೆ ಅಂತಿದ್ದ ಅಜ್ಜಿಯೂ ಮರಣ ಹೊಂದಿದ ಬಳಿಕ ಬನಿರಾಶ್ರಿತೆಯಾಗಿದ್ದ ಈಕೆಯನ್ನು ಹೇಗೋ ನಂಬರು ಪಡೆದು ಸಂಪರ್ಕಿಸಿದಾಕೆ ಮೈಸೂರಿನ ದಂಧಾ ಕೇಂದ್ರದ ಒಡತಿ ಇಂದ್ರಾ. ತನ್ನ ಮಸಾಜ್ ಸೆಂಟರಲ್ಲಿ ಬ್ಯೂಟಿಷಿಯನ್ ಕೆಲಸದ ಆಸೆ ತೋರಿಸಿದ ಇಂದ್ರಾ ಕಳೆದ ತಿಂಗಳ ೫ನೇ ತಾರೀಕಿನಂದು ಆಕೆಯನ್ನು ಮೈಸೂರಿಗೆ ಕರೆಸಿಕೊಂಡಿದ್ದಳು. ಆವತ್ತು ಮೈಸೂರ್ ಬಸ್ ಸ್ಟಾಪಿಂದ ಆಕೆಯನ್ನು ಕರೆದುಕೊಂಡು ಹೋಗಿ ಬೋಗಾದಿ ಸರ್ಕಲ್ಲಿನ ದಂಧೆಯ ಕೇಂದ್ರಕ್ಕೆ ಕರೆದುಕೊಂಡು ಹೋದವನು ಇಂದ್ರಾಳ ಗಂಡ ರಾಜೇಶ.
ಈ ಹುಡುಗಿಯೇ ಹೇಳಿಕೊಂಡಿರೋ ಪ್ರಕಾರ ಅಲ್ಲಿಗೆ ಹೋದ ಕ್ಷಣದಿಂದ ನರಕ ದರ್ಶನವಾಗಿದೆ. ರಾಜೇಶ್ ಮತ್ತೆ ಇಂದ್ರಾ ಈ ಹುಡುಗಿಯನ್ನು ಯಾರ್ಯಾರೋ ಗಂಡಸರ ದೇಹಕ್ಕೆ ಮಸಾಜು ಮಾಡಲು ಬಿಟ್ಟಿದ್ದರು. ಅವರು ಲೈಂಗಿಕ ವಿಕೃತಿ ಶುರುವಿಟ್ಟಾಗ ಗಾಬರಿಯಾಗಿ ಇಂದ್ರಾ ಬಳಿ ಹೇಳಿದರೂ ಅವರಿಗೆ ಸಹಕರಿಸುವಂತೆ ಒತ್ತಾಯ ಮಾಡುತ್ತಿದ್ದಳು. ಹೀಗೆ ಅದೆಷ್ಟೋ ಗಂಡಸರು ಮಸಾಜ್ ನೆಪದಲ್ಲಿ ಈ ಹುಡುಗಿಯನ್ನು ಬಳಸಿಕೊಂಡಿದ್ದರಂತೆ. ಇಂಥಾ ಸವಿವರ ಮಾಹಿತಿಯನ್ನು ಒಡನಾಡಿ ಸಂಸ್ಥೆಗೆ ಬರೆದ ಪತ್ರದಲ್ಲಿ ತಿಳಿಸಿರೋ ಈ ಹುಡುಗಿ ಚಿತ್ರ ನಟ ಸಾಧು ಕೋಕಿಲಾ ಕೂಡಾ ತನ್ನಿಂದ ಮಸಾಜ್ ಮಾಡಿಸಿಕೊಂಡಿದ್ದಾರೆ ಅನ್ನೋ ಮೂಲಕ ಭಯಾನಕ ಬಾಂಬು ಸಿಡಿಸಿದ್ದಳು. ಜೊತೆಗೆ ಆ ಕೇಂದ್ರದಲ್ಲಿ ಸ್ಪಾ ನಡೆಯುತ್ತಿರಲಿಲ್ಲ ಬದಲಾಗಿ ವೇಶ್ಯಾ ದಂಧೆ ನಡೆಯುತ್ತಿತ್ತೆಂದು ಒತ್ತಿ ಹೇಳಿದ್ದಳು!
ಈ ಬಗ್ಗೆ ದೂರು ಬಂದಾಗ ಒಡನಾಡಿ ಸಂಸ್ಥೆ ಸರಸ್ವತೀ ಪುರಂ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದಾಯ ಪೊಲೀಸರೂ ಕೂಡಾ ಈ ಪ್ರಕರಣವನ್ನು ಮುಚ್ಚಿ ಹಾಕಲು ನೋಡಿದ್ದರೆಂಬ ಆರೋಪಗಳಿವೆ. ಈ ವಿಚಾರದಲ್ಲಿ ಇಲ್ಲಿನ ಎಎಸ್ಐ ಧನಪಾಲ್ ಕೂಡಾ ಅನುಚಿತವಾಗಿ ನಡೆದುಕೊಂಡ ಆರೋಪ ಹೊತ್ತಿದ್ದಾರೆ. ಆದರೆ ಕಡೆಗೂ ಈ ಪ್ರಕರಣ ಬಲಗೊಂಡಿತ್ತು. ನಂತರ ಆ ಹುಡುಗಿ ಮ್ಯಾಜಿಸ್ಟ್ರೇಟರ್ ಮುಂದೆ ಎಲ್ಲ ವಿಚಾರ ಹೇಳಿದ್ದಳು. ಸ್ಪಾಗಳ ಹೆಸರಲ್ಲಿ ಇಂಥಾ ದಂಧೆ ನಡೆಯೋದು ಮತ್ತು ಅಮಾಯಕ ಹುಡುಗೀರು ಅದಕ್ಕೆ ಬಲಿಯಾಗೋದು ನಡೆಯುತ್ತಲೇ ಬಂದಿದೆ. ಆದರೆ ಜನ ಪ್ರೀತಿ ಗಳಿಸಿಕೊಂಡಿರೋ ಸಾಧು ಕೋಕಿಲಾ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದಿರೋದು ನಿಜಕ್ಕೂ ಶಾಕಿಂಗ್ ವಿಚಾರ. ಸಾಧೂ ಕೋಕಿಲಾರ ಬೇಲಿ ಹಾರೋ ಖಯಾಲಿ ಚಿತ್ರರಂಗದ ಮಟ್ಟಿಗೆ ಅವರ ಪ್ರತಿಭೆಯಷ್ಟೇ ಫೇಮಸ್ಸು.
ಒಂದು ಮೂಲದ ಪ್ರಕಾರ ಇಂದ್ರಾ ಮತ್ತು ರಾಜೇಶ್ ದಂಪತಿ ಈ ಸ್ಪಾ ಹೆಸರಿನ ಅಡ್ಡೆ ತೆರೆದಾಗ ಸಾಧು ಕೋಕಿಲಾ ಟೇಪು ಕಟ್ ಮಾಡಿ ಉದ್ಘಾಟನೆ ಮಾಡಿದ್ದರು. ಆ ನಿಟ್ಟಿನಲ್ಲಿ ನೋಡ ಹೋದರೆ ಈ ದಂಧೆಯ ದಂಪತಿಗೂ ಇವರಿಗೂ ಕಾಲಾಂತರಗಳಿಂದ ಸಂಪರ್ಕ ಇದ್ದಂತಿದೆ. ಈ ಅಡ್ಡೆಗೆ ಕಿರುತೆರೆ ಮತ್ತು ಚಿತ್ರ ರಂಗದ ಕೆಲ ಚೂಲಿನ ಮಂದಿ ಬಂದು ಅಂಗಾಂಗಕ್ಕೆ ಮಸಾಜು ಮಾಡಿಸಿಕೊಳ್ಳುತ್ತಾರಂತೆ. ಅದು ಸಾಧು ಗ್ರಹಚಾರವೋ ಗೊತ್ತಿಲ್ಲ, ಈತ ಚಿರಪರಿಚಿತರಾದ್ದರಿಂದ ಈ ಹುಡುಗಿ ಗುರುತಿಟ್ಟುಕೊಂಡಿದ್ದಳು!
ಬೋಗಾದಿ ಸರ್ಕಲ್ಲಿನ ಆ ಸ್ಪಾದಲ್ಲಿ ಸೆಕ್ಸ್ ದಂಧೆಯೇ ನಡೆಯುತ್ತಿದೆ ಅಂತ ನಿಖರವಾಗಿ ಹೇಳಿರೋ ಆ ಹುಡುಗಿ ಹೆಸರು ಹೇಳಿದ್ದರಿಂದ ಸಾಧು ವಿರುದ್ಧವೂ ಕೇಸು ಜಡಿದುಕೊಂಡಿತ್ಇತು. ಆದರೆ ತುಂಬಾ ಜನ ಆರಾಧಿಸೋ ಈ ನಟನನ್ನು ಇಂಥಾ ಕೊಳಕು ವಿಚಾರವೊಂದರಲ್ಲಿ ಆರೋಪಿಗಳಾಗಿ ನೋಡಬೇಕಾಗಿ ಬಂದಿರೋದು ಕನ್ನಡಿಗರ ದೌರ್ಭಾಗ್ಯ!
No Comment! Be the first one.