ಮೊದಲ ಬಾರಿಗೆ ದುನಿಯಾ ವಿಜಯ್ ನಿರ್ದೇಶಿಸಿ ಜೊತೆಗೆ ನಟಿಸಿರುವ ಸಿನಿಮಾ ಸಲಗ ಇದೇ ತಿಂಗಳ 28ಕ್ಕೆ ಬರೋದು ಪಕ್ಕಾ ಆಗಿದೆ!
ಅದ್ಯಾವ ಘಳಿಗೆಯಲ್ಲಿ ಸಲಗ ಅನ್ನೋ ಶೀರ್ಷಿಕೆ ಅನೌನ್ಸಾಯಿತೋ ಆವತ್ತಿನಿಂದಲೇ ಈ ಸಿನಿಮಾದ ಬಗ್ಗೆ ಟಾಕ್ ಶುರುವಾಗಿಬಿಟ್ಟಿತ್ತು. ಫಸ್ಟ್ ಲುಕ್ ಮತ್ತು ಟೀಸರ್ ಇತ್ಯಾದಿಗಳು ಬಂದಮೇಲಂತೂ ಕ್ರೇಜ಼ು ಮತ್ತಷ್ಟು ಹೆಚ್ಚಿದೆ. ಎಲ್ಲೆಂದರಲ್ಲಿ ಈಗ ಸೂರಿ ಅಣ್ಣಾ ಎನ್ನುವ ಹಾಡೇ ಕೇಳಿಸುತ್ತಿದೆ. ಪಡ್ಡೆ ಹುಡುಗರ ಪಾಲಿಗಂತೂ ಈ ಹಾಡು ಜನಗಣಮನವಾಗಿಬಿಟ್ಟಿದೆ.
ಕೆ.ಪಿ. ಶ್ರೀಕಾಂತ್ ಸದ್ಯ ಕನ್ನಡ ಚಿತ್ರರಂಗದ ಲಕ್ಕಿ ನಿರ್ಮಾಪಕ. ಕೆ.ಪಿ. ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಅಂಥಾ ಗಾಂಧೀನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಅದೃಷ್ಟದಂತೆ ಕಾಣಿಸಿದರೂ ಇದರ ಹಿಂದೆ ಅವರ ಶ್ರಮ, ಕರಾರುವಕ್ಕಾದ ಪ್ಲಾನು, ಯಾವ ಸಿನಿಮಾ ಮಾಡಿದರೆ ಲಾಭ ಮಾಡಬಹುದು ಅನ್ನೋ ವ್ಯಾಪಾರಿ ಮನಸ್ಥಿತಿಗಳೇ ಕಾರಣ.
ವಿಜಯ್ ಕೂಡಾ ಹಸಿದ ಹುಲಿಯಂತಾಗಿದ್ದರು. ಈ ಹಿಂದೆ ಅವರು ನಂಬಿದ ಕೆಲವು ನಿರ್ದೇಶಕರು ನಿರೀಕ್ಷೆಯ ಗಡಿ ಮುಟ್ಟಿಸಿರಲಿಲ್ಲ. ಸಿಕ್ಕಾಪಟ್ಟೆ ಪಬ್ಲಿಸಿಟಿ ಪಡೆದ ಮಾಸ್ತಿ ಗುಡಿಯಂತಾ ಸಿನಿಮಾ ಕೂಡಾ ಅಂದುಕೊಂಡ ಮಟ್ಟಕ್ಕೆ ತಲುಪಲಿಲ್ಲ. ಈ ಎಲ್ಲಾ ಬೇಸರದಿಂದ ಸಿಡಿದೆದ್ದವರಂತೆ ಈ ಸಲ ಸ್ವತಃ ತಾವೇ ನಿರ್ದೇಶಕರಾಗಿ ವಿಜಯ್ ಸಲಗವನ್ನು ರೂಪಿಸಿದ್ದಾರೆ. ತಮ್ಮಿಡೀ ಬದುಕಿನಲ್ಲಿ ಕಲಿತ ವಿದ್ಯೆಗಳನ್ನೆಲ್ಲಾ ಇಲ್ಲಿ ಬಸಿದಿದ್ದಾರೆ. ವಿಜಯ್ ಮೂಲತಃ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಸ್ಲಮ್ಮು, ರೌಡಿಸಮ್ಮು, ಅಲ್ಲಿನ ಬದುಕಿನ ರೀತಿಗಳನ್ನೆಲ್ಲಾ ಹತ್ತಿರದಿಂದ ಬಲ್ಲವರು. ಅವನ್ನೆಲ್ಲಾ ಒಂದು ಕಡೆ ಸೇರಿಸಿ ಅಚ್ಚುಕಟ್ಟಾದ ಸಿನಿಮಾ ರೂಪಿಸಿದ್ದಾರೆ. ವಿಜಯ್ ಮತ್ತು ಶ್ರೀಕಾಂತ್ ಜೋಡಿಯ ಸಲಗ ದೊಡ್ಡ ಮಟ್ಟದಲ್ಲಿ ಸೌಂಡು ಮಾಡೋದು ಗ್ಯಾರೆಂಟಿ ಅನ್ನೋ ಸುದ್ದಿ ಈಗ ಎಲ್ಲೆಡೆ ಹಬ್ಬಿದೆ.
ಅದು ನಿಜವಾಗಲಿ. ಆ ಮೂಲಕ ಕರಿಚಿರತೆಯ ಪ್ರಯತ್ನಕ್ಕೆ ಶುಭವಾಗಲಿ!!
No Comment! Be the first one.