ವಾರಕ್ಕೆ ಮುನ್ನವಷ್ಟೇ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರ ಸಾರ್ವಜನಿಕರಿಗಾಗಿ ಸುವರ್ಣಾವಕಾಶ. ಕನ್ನಡದ ಹುಡುಗಿಯಾಗಿದ್ದರೂ ನೆರೆಯ ರಾಜ್ಯಗಳಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಧನ್ಯಾ ಬಾಲಕೃಷ್ಣ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಅವರ ಅನುಭವದ ಮಾತುಗಳು ಇಲ್ಲಿವೆ…
ಈ ಚಿತ್ರದ ಮೂಲಕ ನಾನು ಲಾಂಛ್ ಆಗಿರೋದು ನನ್ನ ಭಾಗ್ಯ ಅಂದುಕೊಂಡಿದ್ದೇನೆ. ಈ ಚಿತ್ರದ ಮೂಲಕ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯ ಜರ್ನಿ ಶುರುವಾಗುತ್ತಿದೆ. ನಾಯಕಿಯಾಗಿ ಈ ಚಿತ್ರದ ಮೂಲಕ ಒಳ್ಳೆಯ ಪಾತ್ರದಲ್ಲಿ ಕನ್ನಡ ಇಂಡಸ್ಟ್ರಿಗೆ ಕಾಲಿಡುತ್ತಿದ್ದೇನೆ. ಇದು ನನ್ನ ಏಳು ವರ್ಷದ ತಪಸ್ಸು. ಟೆಕ್ನಿಕಲ್ ಟೀಂನಿಂದ ಹಿಡಿದು ಈ ಸಿನಿಮಾದ ಎಲ್ಲ ನಟರೊಂದಿಗೆ ಕೆಲಸ ಮಾಡಿರೋದು ಎಲ್ಲವೂ ಗಿಫ್ಟ್ ಅಂತಾನೇ ಹೇಳಬಹುದು. ಈ ಸಿನಿಮಾ ನನಗೇ ಒಂದು ಸುವರ್ಣಾವಕಾಶ. ಈ ಚಿತ್ರದಲ್ಲಿ ನನ್ನ ಪಾತ್ರ ಬಹಳ ಮುದ್ದಾಗಿರುವಂತಹ ಒಂದು ಪಾತ್ರ. ಅದ್ಭುತವಾದ ಕಥೆ ಹೊಂದಿರುವಂತದ್ದು, ನನ್ನ ಪಾತ್ರ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವಂತಹ ಹುಡುಗಿ. ತಂದೆ, ತಾಯಿ, ಸಂಬಂಧಿಕರು ಹಾಗೂ ಪ್ರೀತ್ಸೋ ಹುಡುಗ ಇವರೇ ಜೀವನ ಅಂದುಕೊಂಡಂತಹ ಹುಡುಗಿ. ಈ ಮಧ್ಯೆ ಮಧ್ಯಮ ಕುಟುಂಬದಲ್ಲಿ ಬರುವಂತಹ ಸಣ್ಣ ಸಣ್ಣ ಸಮಸ್ಯೆಗಳ ಸುತ್ತಲೇ ಹೆಣೆದಂತಹ ಕಥೆ. ನಾನೂ ಸಹ ಮಧ್ಯಮ ವರ್ಗದ ಕುಟುಂಬದಿಂದ ಬಂದವಳಾಗಿರುವುರಿಂದ ನನಗೆ ಈ ಸಿನಿಮಾ ಬಹಳ ಕನೆಕ್ಟ್ ಆಗಿರುವಂತಿದೆ. ಈ ಪಾತ್ರ ಮಾಡೋದು ನನಗೆ ಬಹಳ ಸುಲಭವಾಗಿತ್ತು. ನಾನು ಯಾವತ್ತೂ ಪ್ರಿಪೇರ್ ಆಗಿ ಹೋಗುತ್ತಿರಲಿಲ್ಲ.
ಪ್ರಾಬ್ಲಂ ಮತ್ತು ಸಲ್ಯುಷನ್ಗಳ ಮಧ್ಯೆ ಕೆಲವು ರಿಯಲೈಸೇಷನ್ಗಳಾಗಿ ಸಂಬಂಧಗಳು ಗಟ್ಟಿಯಾಗುತ್ತಾ ಹೋಗುತ್ತವೆ. ನಿಜವಾದ ಸ್ನೇಹಿತರು ಯಾರು, ನಿಜವಾದ ಸಂಬಂಧಿಕರು ಯಾರು ಅನ್ನೋ ಅರಿವು ಆಗುತ್ತದೆ. ಇದು ಈ ಚಿತ್ರದ ಒಂದು ಆತ್ಮ ಅಂತ ಹೇಳಬಹುದು. ಏನು ಕಳಕೊಂಡಿದ್ದಾರೆ, ಏನನ್ನ ಪಡೆದುಕೊಂಡಿದ್ದಾರೆ, ಇದರಿಂದ ಸಂಬಂಧಗಳು ಹೇಗೆ ಬದಲಾಗುತ್ತವೆ ಅನ್ನೋದು ಈ ಚಿತ್ರದ ಒಂದು ಅಂಶ. ಹರಿ ಮತ್ತು ಜನಾರ್ಧನ್ ಅವರು ಬಹಳ ವಿಭಿನ್ನವಾಗಿ ಈ ಚಿತ್ರದ ಕಥೆಯನ್ನ ಬರೆದಿದ್ದಾರೆ. ಡ್ರಾಮಾ, ಹಾಸ್ಯ, ಆಕ್ಯನ್, ಡಾನ್ಸ್, ಕಾಮಿಡಿ, ಸೆಂಟಿಮೆಂಟ್, ಹಲವು ರೀತಿಯ ಮ್ಯೂಸಿಕ್ ಎಲ್ಲ ಕೂಡಿರುವಂತಹ ಹೊಸ ಅಲೆಯ ಚಿತ್ರ. ಹೊಸ ಜಾನರ್ ಕ್ರಿಯೇಟ್ ಮಾಡುವಂತಹ ಕಥೆ ಈ ಚಿತ್ರಕ್ಕಿದೆ. ತುಂಬಾ ಸೀರಿಯಸ್ ವಿಷಯವನ್ನ ಹಾಸ್ಯದ ಮೂಲಕ ಬಹಳ ಸರಳವಾಗಿ ಹೇಳಿದ್ದಾರೆ. ಇದು ಜನರಿಗೆ ಬಹಳ ಬೇಗ ಹತ್ತಿರವಾಗುವಂತದ್ದು, ಇದು ನನಗೆ ಬಹಳ ಹೊಸದು ಅನ್ನಿಸಿತು. ನಮ್ಮ ಜೀವನದ ಕೆಲವು ವಿಷಯಗಳನ್ನು ನಾವು ಯಾಕೆ ಇಷ್ಟು ಸೀರಿಯಸ್ಸಾಗಿ ತಗೋಬೇಕು ಇದನ್ನ ಹಾಸ್ಯವಾಗಿ ತಗೋಬಹುದಲ್ಲ ಎಂಬ ಐಡಿಯಾ ನೀಡುತ್ತೆ ಈ ಸಿನಿಮಾ.
ಕಳೆದ ೫ ವರ್ಷಗಳಿಂದ ಕನ್ನಡದಲ್ಲಿ ಹೊಸ ರೀತಿಯ ಸಿನಿಮಾಗಳು ಬರುತ್ತಿವೆ. ತಿಥಿ, ಉಳಿದವರು ಕಂಡಂತೆ, ಗೋಧಿಬಣ್ಣ ಸಾಧಾರಣ ಮೈಕಟ್ಟು ಈ ಸಿನಿಮಾಗಳನ್ನು ನೋಡಿದಾಗ ನಾನೂ ಈ ರೀತಿಯ ಸಿನಿಮಾಗಳಲ್ಲಿ ನಟಿಸಬೇಕು ಅನ್ನೋ ಆಸೆಯಾಗುತ್ತಿತ್ತು. ಈ ಚಿತ್ರ ನೀಡಿದ ನಿರ್ದೇಶಕರಿಗೆ ನಾನು ಥ್ಯಾಂಕ್ಸ್ ಹೇಳಬಯಸುತ್ತೇನೆ. ಇವರೊಂದಿಗೆ ಕೆಲಸ ಮಾಡಿರುವ ಹೆಮ್ಮೆ ನನಗಿದೆ. ಈ ಚಿತ್ರಕ್ಕೆ ಪೋಣಿಸಿರುವ ರೀತಿಯಲ್ಲಿ ಎಲ್ಲಾ ಹಾಡುಗಳು ಮೂಡಿಬಂದಿವೆ.
ಇನ್ನೂ ರಿಷಿ ಅವರ ಬಗ್ಗೆ ಹೇಳಬೇಕೆಂದರೆ, ಅವರು ಈಗಾಗಲೇ ಆಪರೇಷನ್ ಅಲಮೇಲಮ್ಮ, ಕವಲುದಾರಿ ಚಿತ್ರಗಳಲ್ಲಿ ಸೂಪರ್ ಆಕ್ಟರ್ ಅಂತ ಈಗಾಗಲೇ ಪ್ರೂವ್ ಮಾಡಿಕೊಂಡಿದ್ದಾರೆ. ಅವರು ಸೆಲೆಕ್ಟ್ ಮಾಡುವಂತ ಸ್ಕ್ರಿಪ್ಟ್ಗಳ ಮೂಲಕ ಅವರಿಗೇ ಅಂತಲೇ ಫ್ಯಾನ್ ಬಳಗವನ್ನ ಸೃಷ್ಟಿಸಿಕೊಂಡಿದ್ದಾರೆ. ನಾನೊಬ್ಬ ನಾಯಕನಟ, ನನಗೇ ಫಸ್ಟ್ ಪ್ರಿಫರೆನಸ್ ಕೊಡಬೇಕು ಅನ್ನೋ ಮನೋಭಾವ ಅವರಿಗಿಲ್ಲ. ಎಲ್ಲವೂ ಚೆನ್ನಾಗಿ ಬರಬೇಕು ಅನ್ನೋ ರೀತಿಯಲ್ಲಿ ಕೆಲಸ ಮಾಡ್ತಾರೆ ಇದು ಎಲ್ಲರಿಗೂ ಬಹಳ ಸಹಾಯವಾಗುತ್ತದೆ. ದತ್ತಣ್ಣ ಅವರೊಂದಿಗೆ ನಟಿಸೋ ಒಂದು ಕನಸನ್ನ ಸಾಕಾರಗೊಳಿಸಿದ್ದಾರೆ ನಿರ್ದೇಶಕ ಅನೂಪ್. ಅವರೊಂದಿಗೆ ಹೆಚ್ಚಿನ ಸಮಯವನ್ನ ಕಳೆದಿದ್ದೇನೆ, ಬಹಳ ಕಲಿತಿದ್ದೇನೆ ಅವರಿಂದ. ಶಾಲಿನಿ ಅವರು ನನ್ನ ತಾಯಿಯ ಪಾತ್ರವನ್ನ ನಿರ್ವಹಿಸಿದ್ದಾರೆ. ಬಹಳ ಇಷ್ಟಪಟ್ಟು ಅದ್ಭುವಾಗಿ ನಟಿಸಿದ್ದಾರೆ. ರಂಗಾಯಣ ರಘು, ಮಿತ್ರ, ರೇವಣ್ಣ ಎಲ್ಲರಿಗೂ ನನ್ನ ಥ್ಯಾಂಕ್ಸ್ ಹೇಳುತ್ತೇನೆ. ದಯವಿಟ್ಟು ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡಿ ಬೆಂಬಲ ನೀಡಿ ಎಂದು ಕೋರುತ್ತೇನೆ.
No Comment! Be the first one.