ಈ ಬಣ್ಣದ ಲೋಕವೇ ಹಾಗೆ! ಇಲ್ಲೇನಿದ್ದರೂ ಚಾಲ್ತಿಯಲ್ಲಿದ್ದಾಗ, ಜೀವಂತ ಇದ್ದಾಗ ಮಾತ್ರ ಎಲ್ಲಿಲ್ಲದ ಬೆಲೆ. ಮೆರುಗು ಕಳೆದುಕೊಂಡ ನಟರು, ಪ್ರಾಣಬಿಟ್ಟ ಕಲಾವಿದರನ್ನು ನೆನಪಿಸಿಕೊಳ್ಳುವ ಗೋಜಿಗೂ ಯಾರೂ ಹೋಗುವುದಿಲ್ಲ. ಬದುಕಿದ್ದ ಅಲ್ಪಕಾಲವನ್ನೂ ಸಿನೆಮಾಕ್ಕಾಗಿಯೇ ಮೀಸಲಿಟ್ಟ, ಇಡೀ ಭಾರತ ಚಿತ್ರೋದ್ಯಮವನ್ನೇ ತನ್ನತ್ತ ಆಕರ್ಷಿಸಿದ ನೈಜ ಪ್ರತಿಭೆಗೆ ಆಕೆಯ ಮರಣಾನಂತರ ದೊರೆತ ಗೌರವದ ವಿವರ ಇಲ್ಲಿದೆ….
ಅದು ಏಪ್ರಿಲ್ ೧೭, ೨೦೦೪. ಆಗ ರಾಜ್ಯದ ಎಲ್ಲೆಡೆ ಚುನಾವಣೆಯ ಕಾವು ರಂಗೇರಿತ್ತು. ಪ್ರಚಾರದ ಆರ್ಭಟಗಳು ಮುಗಿಲು ಮುಟ್ಟಿದ್ದವು. ಆ ದಿನ ಮಟಮಟ ಮಧ್ಯಾಹ್ನ ನಡೆದ ವಿಮಾನ ಅಪಘಾತದಲ್ಲಿ ದಕ್ಷಿಣ ಭಾರತದ ಮಹೋನ್ನತ ಪ್ರತಿಭೆಯೊಂದು ಸುಟ್ಟು ಭಸ್ಮವಾಗಿತ್ತು. ಯಾವುದೋ ರಾಜಕೀಯ ಪಕ್ಷದ ಸ್ವಾರ್ಥಕ್ಕಾಗಿ, ಚುನಾವಣೆಯೆಂಬ ನೆಪಕ್ಕೆ ಬಲಿಯಾಗಿದ್ದು ಮುದ್ದುಮುಖದ ನಟಿ ಸೌಂದರ್ಯ. ಸೌಂದರ್ಯಾಳೊಂದಿಗೆ ಅಂದು ಆಕೆಯ ಆಣ್ಣ ಅಮರ್ನಾಥ್ ಕೂಡಾ ಜೀವ ಬಿಟ್ಟಿದ್ದರು. ಕೆಲಸಕ್ಕೆ ಬಾರದ, ಗುಜುರಿ ಸೇರಬೇಕಿದ್ದ ವಿಮಾನಕ್ಕೆ ಅವರಿಬ್ಬರು ಏರಿದ್ದೇ ಅವರ ಸಾವಿಗೆ ಕಾರಣವಾಗಿತ್ತು.
ಇದೇ ಏಪ್ರಿಲ್ ೧೭ನೇ ತಾರೀಖಿಗೆ ಸೌಂದರ್ಯಾ ಸತ್ತು ಭರ್ತಿ ೧7 ವರ್ಷ ತುಂಬುತ್ತದೆ. ಆಕೆ ಸತ್ತ ಬಳಿಕ ಮೊದಲ ಕೆಲವು ದಿನ ರಾಜಕೀಯ ನಾಯಕರು, ಸಿನೆಮಾ ಮಂದಿ ಆಕೆಯ ಮನೆಗೆ ಮುತ್ತಿಗೆ ಇಟ್ಟಿದ್ದರು. ಅದಾದ ನಂತರ ಯಾವೊಬ್ಬರೂ ಆಕಡೆ ತಲೆ ಹಾಕಲಿಲ್ಲ. ಜೀವನದಲ್ಲಿ ಬಹಳ ಕಷ್ಟಪಟ್ಟು ತನ್ನ ಮಗಳನ್ನು ಬೆಳೆಸಿ ಮೇರು ನಟಿಯಾಗಿಸಿದ ಆಕೆಯ ತಾಯಿ ಮಂಜುಳಾ ಮಕ್ಕಳ ಸಾವಿನ ನಂತರ ಪ್ರತಿ ಕ್ಷಣ ಕಣ್ಣೀರಿನಲ್ಲೇ ಕಳೆದರು. “ನನ್ನ ಮಕ್ಕಳು ಅನ್ಯಾಯವಾಗಿ ಪ್ರಾಣಬಿಟ್ಟರು’’ ಎಂದು ರೋಧಿಸುತ್ತಿಲೇ ಪ್ರಾಣ ಬಿಟ್ಟರು. ಆದರೆ ಈ ಹಿರಿಯ ಜೀವಕ್ಕೆ ಸಹಾಯ ಮಾಡುವುದಿರಲಿ, ಕಡೇಪಕ್ಷ ಒಂದು ಸಾಂತ್ವನದ ಮಾತನ್ನು ಕೂಡಾ ಯಾರೂ ಆಡಿರಲಿಲ್ಲ…
ಸೌಂದರ್ಯಳ ಅಣ್ಣ ಅಮರ್ನ ಪತ್ನಿ ಇಂದು ಡಾಲರ್ಸ್ ಕಾಲನಿಯ ತಮ್ಮ ಮನೆಯ ಕೆಳಮಹಡಿಯಲ್ಲಿ `ಅಮರ್ ಸಂದರ್ಯ ಶಾಲೆ’ ಎಂಬ ಸ್ಕೂಲನ್ನು ನಡೆಸುತ್ತಿದ್ದಾರೆ. ಪ್ರಾಥಮಿಕ ತರಗತಿಗಳನ್ನು ನಡೆಸುತ್ತಿರುವ ನಿರ್ಮಲಾ ಸಮಾಜದಲ್ಲಿನ ಎಲ್ಲ ವರ್ಗದವರಿಗೆ ಸಮಾನವಾದ ಶಿಕ್ಷಣವನ್ನು ನೀಡುವಂಥ ಶಾಲೆಯನ್ನು ನಿರ್ಮಿಸಬೇಕೆಂಬ ಕನಸಿನಲ್ಲಿದ್ದಾರೆ.
“ನಮ್ಮ ಮನೆಯವರು ಮತ್ತು ಸೌಂದರ್ಯ ತೀರಿಕೊಂಡ ಮೊದಮೊದಲು ರಾಜಕೀಯ ಪಕ್ಷಗಳ ಕೆಲವು ನಾಯಕರು ಮನೆಗೆ ಬಂದು ಭಾರೀ ಭಾರೀ ಭರವಸೆ ನೀಡಿಹೋದರು. ಆದರೆ ಇಂದಿನವರೆಗೂ ಅರ್ಯಾರೂ ನಮ್ಮ ಯೋಗಕ್ಷೇಮ ವಿಚಾರಿಸಿಲ್ಲ. ಕಡೇ ಪಕ್ಷ ನಾವು ಬದುಕಿದ್ದೇವೋ, ಸತ್ತಿದ್ದೇವೋ ಎಂಬುದನ್ನೂ ನೋಡಿಲ್ಲ. ಕಷ್ಟಪಟ್ಟು ಶಾಲೆ ನಡೆಸುತ್ತಿದ್ದೇವೆ. ಆದರೆ ನಮ್ಮನ್ನು ಕೇಳುವವರೇ ಇಲ್ಲ. ನಮ್ಮ ಶಾಲೆಗಾದರೂ ಸರ್ಕಾರದವರು ಒಂದಿಷ್ಟು ಸಹಾಯ ಮಾಡಬಹುದಿತ್ತು. ಅದನ್ನೂ ಮಾಡಿಲ್ಲ. ಶಾಲೆಯ ಕಟ್ಟದವನ್ನು ಕಟ್ಟಲೂ ಕಾಸಿಲ್ಲದೆ ಪರದಾಡುತ್ತಿದ್ದೇನೆ’’ ಎಂದು ಹೇಳುವಾಗ ಆಕೆಯ ಕಣ್ಣು ತೇವಗೊಳ್ಳುತ್ತದೆ. ಇನ್ನು ಸೌಂದರ್ಯಳ ಕೈಹಿಡಿದ ಕೆಲವೇ ತಿಂಗಳಲ್ಲಿ ಆಕೆಯನ್ನು ಕಳೆದುಕೊಂಡ ಪತಿ ಜಿಎಸ್. ರಘು ಬೇರೊಂದು ಮದುವೆಯಾಗಿ ಜೀವನ ನಡೆಸುತ್ತಿದ್ದಾನೆ.
ದಕ್ಷಿಣಭಾರತದ ಚಿತ್ರೋದ್ಯಮದಲ್ಲಿ ತನ್ನದೇ ಆದ ಕ್ರೇಜ್ ಸೃಷ್ಟಿಸಿದ್ದ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ, ಅಮಿತಾಭ್, ಕಮಲ್ಹಾಸನ್, ರಜನಿಕಾಂತ್, ರವಿಚಂದ್ರನ್… ಹೀಗೆ ಭಾರತದ ಸಿನೆಮಾ ಲೋಕದ ದಿಗ್ಗಜರೊಂದಿಗೆ ನಟಿಸಿದ್ದ, ಬಹುಭಾಷಾ ತಾರೆ ಸೌಂದರ್ಯಾ ಎಂಬ ಪ್ರಖ್ಯಾತ ನಟಿಯನ್ನು ಈ ಪ್ರಪಂಚ ಮರೆತುಬಿಟ್ಟಿದೆ.. ಪಬ್ಲಿಕ್ ಮೆಮರಿ ಇಸ್ ವೆರಿ ಶಾರ್ಟ್ ಅನ್ನೋದು ಇದಕ್ಕೇ…!
Comments