ಮಹಿಳೆಯರಿಗೆ ಕಷ್ಟ ಬಂದರೆ ಮಹಿಳೆಯರೇ ಟೊಂಕ ಕಟ್ಟಿ ನಿಂತು ತಮಗಾದ ಶೋಷಣೆಯನ್ನು ದಿಟ್ಟತನದಿಂದ ಕೇಳ್ತಾರೆ. ಪುರುಷರೂ ಸಹ ತಮಗಾದ ತೊಂದರೆಗಳ ಬೆನ್ನತ್ತಿ ಪರಿಹಾರದ ಕಡೆ ಗಮನಹರಿಸುತ್ತಾರೆ. ಹೀಗೆ ಅವರವರ ಕಷ್ಟ ಕೋಟಲೆಗಳ ಕಡೆ ಅವರು ಫೋಕಸ್ ಮಾಡುವಂತಿದ್ದರೆ, ಮಕ್ಕಳ ಪಾಡೇನು… ಅವರಿಗೂ ಸಮಸ್ಯೆಗಳಿಲ್ಲವೇ.. ಶೋಷಣೆಗಳಿಲ್ಲವೇ… ಹಿಂಸೆಗಳಿಲ್ಲವೇ… ಹಾಗಾದ್ರೆ ಅವರ ಬೆನ್ನಿಗೆ ನಿಲ್ಲುವವರಾರು…? ಎಂಬ ಆಲೋಚನೆ ಮಂದ ಬುದ್ದಿಯ ಮಾನವರಿಗೆ ಎಲ್ಲಿ ತಾನೆ ಬರಲು ಸಾಧ್ಯ.
ಕೇವಲ ಯಾವುದಾದರೂ ದುರ್ಘಟನೆ ಸಂಭವಿಸಿದೆ ಅಂದ ಮಾತ್ರಕ್ಕೆ ತಮ್ಮ ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳಲು ವಿ ವಾಂಟ್ ಜಸ್ಟೀಸ್, ದಾನಮ್ಮನ ಸಾವಿಗೆ ನ್ಯಾಯ ಕೊಡಿ, ಇತ್ಯಾದಿ ಇತ್ಯಾದಿಗಳ ಹೋರಾಟಗಳು ಮಾಡಿದರೆ ಏನು ಬಂತು. ಆ ಹೋರಾಟಕ್ಕೆ ಶಾಶ್ವತ ಪರಿಹಾರಗಳ ಅಗತ್ಯವಿದೆಯಲ್ಲವೇ..ಅಂತಹ ಸಾಕಷ್ಟು ಆಲೋಚನೆಗಳೂ ಹುಟ್ಟಿದರೂ ಸಹ ಬಲಿಯದೇ, ಟಿಸಿಲೊಡೆಯದೇ ಹುಟ್ಟಿದ ಜಾಗದಲ್ಲಿಯೇ ಅಂತ್ಯ ಕಾಣುತ್ತದೆ.
ಆದರೆ ಅದಕ್ಕೊಂದು ಸ್ಪಷ್ಟ ರೂಪ ಕೊಡುವುದಕ್ಕೆ ಸ್ಯಾಂಡಲ್ ವುಡ್ ನಲ್ಲಿ ಮಕ್ಕಳೇ ಮುಂದಾಗಿದ್ದಾರೆ. ನಿಮ್ಮ ನಿಮ್ಮ ತೀಟೆಯನ್ನು ನೀವು ತೀರಿಸಿಕೊಳ್ಳಿ.. ನಮಗಾದ ಅನ್ಯಾಯಕ್ಕೆ ನಾವೇ.. ತೊಡೆ ತಟ್ಟಿ ನಿಲ್ಲುತ್ತೇವೆಂಬ ದಿಟ್ಟತನದಲ್ಲಿ ಮಕ್ಕಳೇ ಸಮರ ಸಾರಲು ಹೊರಟಿದ್ದಾರೆ. ಹೌದು.. ಸುವ್ವಾಲಿ ಎಂಬ ಟೈಟಲ್ ನಲ್ಲಿ ನಿರ್ಮಾಣ ವಾಗಿರುವ ಮಕ್ಕಳ ಚಿತ್ರ ಮೇಲ್ಕಾಣಿಸಿದ ಎಲ್ಲ ಗೊಂದಲಗಳಿಗೆ ಉತ್ತರ ನೀಡುವಲ್ಲಿ ದಾಪುಗಾಲನಿಟ್ಟಿದೆ.
ಮಕ್ಕಳಿಗಾಗುವ ಸಮಸ್ಯೆಗಳಿಗೆ ಮಕ್ಕಳೇ ಪರಿಹಾರವನ್ನು ಕಂಡುಕೊಳ್ಳಲು ಹೊರಟರೇ ಅವರಿಗೆ ಸಾಥ್ ನೀಡುವವರು ಯಾರು? ಆ ಸಮಸ್ಯೆಗಳಿಂದ ಅವರಿಗೊದಗುವ ಸಂಕಷ್ಟಗಳೇನು? ಅವರ ಕೂಗಿಗೆ ದನಿಗೂಡುವವರಾರು? ಎಂಬಿತ್ಯಾದಿ ಅಂಶಗಳನ್ನೇ ಎಳೆಯಾಗಿಟ್ಟುಕೊಂಡು ಸುವ್ವಾಲಿ ರೆಡಿಯಾಗಿದೆ. ಈ ಸಿನಿಮಾವನ್ನು ಸತತ 17 ವರ್ಷಗಳಿಂದಲೂ ಚಂದನವನದ ಒಳಹೊರಗನ್ನು ತಿಳಿದ ಶ್ರೀರಾಮ್ ಬಾಬು ಹೆಣೆದಿದ್ದಾರೆ. ಮೇಲಾಗಿ ಅವರೇ ತಮ್ಮ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣವನ್ನು ಮಾಡಿದ್ದಾರೆ. ಅನಾಥ ಮಕ್ಕಳ ಕೂಗನ್ನು ಸಮಾಜಕ್ಕೆ ಸಾರುವ ಉದ್ದೇಶದಲ್ಲಿರುವ ಶ್ರೀರಾಮ್ ಬಾಬು ತಮ್ಮ ಮಗಳನ್ನು ಈ ಚಿತ್ರದ ಮೂಲಕ ನಿರ್ದೇಶಕಿಯಾಗಿಯೂ ಲಾಂಚ್ ಮಾಡಿದ್ದಾರೆ. ಹಾರ್ದಿಕ ಸುವ್ವಾಲಿಗೆ ಆ್ಯಕ್ಷನ್ ಕಟ್ ಹೇಳುವ ಜತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವುದು ಸುವ್ವಾಲಿಗೆ ಹೈಲೈಟ್. ಮಗಳಿಗೆ ಸಾಕಷ್ಟು ಹೋಮ್ ವರ್ಕ್ ಮಾಡಿಸಿ, ಎಲ್ಲ ಪಟ್ಟುಗಳನ್ನು ಸ್ಪೆಷಲ್ ಕ್ಲಾಸ್ ನಲ್ಲಿಯೇ ಕಲಿಸಿ, ಚಂದನವನದ ಅಖಾಡಕ್ಕೆ ಶ್ರೀರಾಮ್ ಬಾಬು ಇಳಿಸಿದ್ದಾರೆ. ಹಾರ್ದಿಕ ಭವಿಷ್ಯದಲ್ಲಿ ಉತ್ತಮ ನಿರ್ದೆಶಕಿಯಾಗಿಯೋ ಭರವಸೆಯ ನಾಯಕಿಯಾಗಿಯೋ ಬೆಳೆಯುವುದರಲ್ಲಿ ಸಂಶಯವಿಲ್ಲವೆನ್ನುವುದು ಸುವ್ವಾಲಿಯ ಮೂಲಕ ಈಗಾಗಲೇ ಫ್ರೂವ್ ಆಗಿದೆ.
ಸದ್ಯ ಸುವ್ವಾಲಿಯ ಲಿರಿಕಲ್ ಸಾಂಗ್ ಗಳು ರಿಲೀಸ್ ಆಗುತ್ತಿದ್ದು, ಮಕ್ಕಳಿಗೆ ಒಂದು ರೀತಿಯ ಆತ್ಮವಿಶ್ವಾಸವನ್ನು ಮೂಡಿಸುವಂತಹ ಸಾಲುಗಳಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಅದರಲ್ಲೂ ನವೀನ್ ಸಜ್ಜು ಹಾಡಿರುವ “ಕನಸೇ ಅರಿಯದ ವಯಸೇ ಹೊರಟಿದೆ ನೋಡೋ ತೊಡೆತಟ್ಟಿ ಶುರುವಾಗಿದೆ ಸಮರ ಗುರಿಮುಟ್ಟುವ ಕಡೆ ಗೆಲುವಿನ ಬೆನ್ನಟ್ಟಿ” ಎಂಬ ಸಾಲುಗಳಂತೂ ಪ್ರತಿಯೊಬ್ಬ ಅಸಹಾಯಕ ಮಗುವಿಗೂ ಇಂಬುಕೊಡುವಂತಿದೆ. ಸುವ್ವಾಲಿಯ ತಾರಾಂಗಣದಲ್ಲಿ ಹಾರ್ದಿಕ, ಯಶ ಸೋನು ಗೌಡ, ಐಶ್ವರ್ಯ, ಚಿರಾಗ್ ಅಭಯ್, ಇತರರಿದ್ದಾರೆ. ಇನ್ನು ಲೋಕಿ ಸಂಗೀತ ಸಂಯೋಜನೆ, ಶ್ರೀರಾಮ್ ಬಾಬು ಸಂಕಲನ, ಮಂಜೇಶ್ ಮತ್ತು ರಾಜ್ ಛಾಯಾಗ್ರಹಣ, ಈ ಚಿತ್ರಕ್ಕಿದೆ. ಸದ್ಯದಲ್ಲೇ ಸುವ್ವಾಲಿ ರಿಲೀಸ್ ಸಹ ಆಗಲಿದೆ.
No Comment! Be the first one.