ಟಕ್ಕರ್ ಚಿತ್ರದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ನಟ ಮನೋಜ್. ಛಾಲೆಂಜಿಗ್ ಸ್ಟಾರ್ ದರ್ಶನ್ ಅವರ ಕುಟುಂಬದ ಹುಡುಗ ಅನ್ನೋ ಕಾರಣಕ್ಕೆ ಮನೋಜ್ ಎಂಟ್ರಿ ಇಡೀ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಟಕ್ಕರ್ ಚಿತ್ರದ ಟೀಸರ್ ಮತ್ತು ಲಿರಿಕಲ್ ವಿಡಿಯೋಗಳನ್ನು ನೋಡುತ್ತಿದ್ದರೆ ದಾಸನ ಗರಡಿಯ ಹುಡುನ ಗೆಲುವಿನ ಓಟ ಗ್ಯಾರೆಂಟಿ ಎನ್ನುವಂತಿದೆ. ದರ್ಶನ್ ಸಿನಿಮಾ ರಂಗಕ್ಕೆ ಕಾಲಿಟ್ಟಾಗ ಅವರ ಹೆಸರಿನ ಜೊತೆ ಅವರ ಫಾದರ್ ಹೆಸರಿತ್ತೇ ವಿನಃ ಯಾವ ಗಾಡ್ ಫಾದರ್ ಕೂಡಾ ಇರಲಿಲ್ಲ. ಆದರೆ ಮನೋಜ ಆ ವಿಚಾರದಲ್ಲಿ ನಿಜಕ್ಕೂ ಅದೃಷ್ಟವಂತ. ಹೆಜ್ಜೆ ಹೆಜ್ಜೆಗೂ ಎಚ್ಚರಿಸಿ, ಕೈ ಹಿಡಿದು ನಡೆಸಲು ದರ್ಶನ್’ರಂಥಾ ದೊಡ್ಡ ಶಕ್ತಿಯೇ ಇದೆ. ಮನೋಜ್ ಕೂಡಾ ದರ್ಶನ್ ಅವರನ್ನು ದೇವರಿಗಿಂತಾ ಹೆಚ್ಚು ಅಂತಲೇ ನಂಬಿದ್ದಾರೆ.
ದರ್ಶನ್ ಅವರು ಪ್ರಾಣಿ, ಕಾಡು ರಕ್ಷಣೆಗೆ ಪಣ ತೊಟ್ಟು ನಿಂತಿರೋ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈಗ ಮನೋಜ್ ಕೂಡಾ ಮಾವನಂತೆಯೇ ಸಾಮಾಜಿಕ ಹಿತ ಕಾಯುವ ಕೆಲಸಕ್ಕೆ ಮುಂದಾಗಿದ್ದಾರೆ. ಅದೇನೆಂದರೆ, ಜ್ಞಾನಭಾರತಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ೩೧ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸ್ವಯಂ ಪ್ರೇರಿತ ರಕ್ಷದಾನ ಶಿಬಿರವನ್ನು ಆಯೋಜಿಸಿದೆ. ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತರೂ, ಐ.ಪಿ.ಎಸ್ ಅಧಿಕಾರಿಗಳೂ ಆದ ಎನ್. ಶಿವಕುಮಾರ್ ಅವರು ಈ ಕಾರ್ಯಕ್ರಮವನ್ನು ಜನವರಿ ೧೭ರಂದು ಬೆಳಿಗ್ಗೆ ೯.೦೦ಕ್ಕೆ ಉದ್ಘಾಟಿಸುತ್ತಿದ್ದಾರೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ. ಹೇಮಂತ್ ಕುಮಾರ್ ಸೇರಿದಂತೆ ಸಾಕಷ್ಟು ಜನ ಅಧಿಕಾರಿಗಳು, ಧೀಮಂತರು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಟಕ್ಕರ್ ಹೀರೋ ಮನೋಜ್ ರಸ್ತೆ ಸುರಕ್ಷತೆಯ ಕುರಿತಾದ ಕರಪತ್ರ ಮತ್ತು ಸ್ಟಿಕ್ಕರ್ ಬಿಡುಗಡೆಗೊಳಿಸಲಿದ್ದಾರೆ.
ಕೆ.ಎನ್. ನಾಗೇಶ್ ಕೋಗಿಲು ತಮ್ಮ ಎಸ್.ಎಲ್.ಎನ್. ಕ್ರಿಯೇಷನ್ಸ್ ಬ್ಯಾನರಿನಲ್ಲಿ ಟಕ್ಕರ್ ಚಿತ್ರವನ್ನು ನಿರ್ಮಿಸಿದ್ದು, ಶೀಘ್ರದಲ್ಲೇ ತೆರೆಗೆ ಬರಲು ಯೋಜನೆ ರೂಪಿಸಲಾಗುತ್ತಿದೆ. ಇದೇ ಹೊತ್ತಿಗೆ ಮನೋಜ್ ಅವರಿಗೆ ಇನ್ನೂ ಸಾಕಷ್ಟು ಸಿನಿಮಾಗಳ ಆಫರ್’ಗಳು ಬಂದಿವೆ. ಈ ನಡುವೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಳ್ಳುತ್ತಿರುವ ಮನೋಜ್ ಅವರಿಗೊಂದು ಶುಭಾಶಯ ತಿಳಿಸೋಣ!
No Comment! Be the first one.